AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

TV9 Kannada News Highlights: ಮಳೆ ಮುನ್ಸೂಚನೆ, ಶಿರಸಿ-ಸಿದ್ದಾಪುರ ತಾಲೂಕುಗಳ ಶಾಲೆಗಳಿಗೆ ನಾಳೆ ರಜೆ ಘೋಷಣೆ

Karnataka News Today Highlights:ನೀಟ್ ಅಕ್ರಮದ ವಿರುದ್ಧ ಪ್ರಧಾನಿ ಮೋದಿ ವಾರ್ನಿಂಗ್, ಶಾಸಕ ಹರೀಶ್ ಮೇಲೆ ಮೊಟ್ಟೆ ಎಸೆದ ಆರೋಪಿ ಬಂಧನ, ರಾಜ್ಯದಲ್ಲಿ ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ಚರ್ಚೆ ಹಾಗೂ ಸಂಸತ್ತಿನಲ್ಲಿ ಎನ್‌ಡಿಎ ಪ್ರತಿಭಟನೆಯ ಇಂದಿನ ಪ್ರಮುಖ ಸುದ್ದಿಗಳು ಇಲ್ಲಿದೆ ನೋಡಿ.

TV9 Kannada News Highlights: ಮಳೆ ಮುನ್ಸೂಚನೆ, ಶಿರಸಿ-ಸಿದ್ದಾಪುರ ತಾಲೂಕುಗಳ ಶಾಲೆಗಳಿಗೆ ನಾಳೆ ರಜೆ ಘೋಷಣೆ
School Holiday
ಅಕ್ಷಯ್​ ಪಲ್ಲಮಜಲು​​
| Edited By: |

Updated on:Jul 24, 2026 | 11:07 AM

Share

Breaking News Today Highlights in Kannada:

ದೇಶದ ಯುವಜನತೆಯ ಭವಿಷ್ಯಕ್ಕಿಂತ ಪ್ರಮುಖವಾದದ್ದು ಯಾವುದೂ ಇಲ್ಲ. ನೀಟ್ ಪರೀಕ್ಷೆ ಅಕ್ರಮ ಎಸಗಿದ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಭಾಗಿಯಾದ ಕ್ರಿಮಿಗಳನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ (PM MODI) ಟ್ವೀಟ್ ಮೂಲಕ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ದಾವಣಗೆರೆ ಮೂಲದ ಬಿಜೆಪಿ (BJP) ಶಾಸಕ ಬಿ.ಪಿ. ಹರೀಶ್ ಅವರ ಮೇಲೆ ಬಾಕ್ಸ್‌ನಲ್ಲಿ ತಂದಿದ್ದ ಮೊಟ್ಟೆಗಳನ್ನು ಎಸೆದಿದ್ದ ಆರೋಪಿ ಪುಣ್ಯೇಶ್‌ನನ್ನು ಶಿವಾಜಿನಗರ ಪೊಲೀಸರು ತಡರಾತ್ರಿ ಬಂಧಿಸಿ ಸುದೀರ್ಘ ವಿಚಾರಣೆ ನಡೆಸಿದ್ದಾರೆ. ರಾಜ್ಯ ಸಚಿವ ಸಂಪುಟ ವಿಸ್ತರಣೆ ಚರ್ಚೆಯ ಬೆನ್ನಲ್ಲೇ ಹೆಚ್ಚುವರಿ ಉಪಮುಖ್ಯಮಂತ್ರಿ (DCM) ಹುದ್ದೆಗಳ ಸೃಷ್ಟಿ ಮತ್ತೆ ಸದ್ದು ಮಾಡುತ್ತಿದೆ. ಲಿಂಗಾಯತ ಸಮುದಾಯದ ಎಂ.ಬಿ. ಪಾಟೀಲ್ ಹಾಗೂ ಎಸ್‌ಟಿ ಸಮುದಾಯದ ಸತೀಶ್ ಜಾರಕಿಹೊಳಿ ಅವರಿಗೆ ಡಿಸಿಎಂ ಸ್ಥಾನ ನೀಡುವ ಕುರಿತು ಹೈಕಮಾಂಡ್ ಮಟ್ಟದಲ್ಲಿ ಪ್ರಸ್ತಾಪವಾಗಿದೆ. ಸಂಸತ್ತಿನ ಉಭಯ ಸದನಗಳಲ್ಲಿ ವಿಪಕ್ಷಗಳು ನಡೆಸುತ್ತಿರುವ ಸತತ ಗದ್ದಲ ಹಾಗೂ ಪ್ರತಿಭಟನೆಯನ್ನು ಖಂಡಿಸಿ ಇಂದು ಬೆಳಿಗ್ಗೆ ೧೦:೩೦ಕ್ಕೆ ಸಂಸತ್‌ನ ಮಕರ ದ್ವಾರದ ಬಳಿ ಎನ್‌ಡಿಎ ಸಂಸದರು ಪ್ರತಿಭಟನೆ ನಡೆಸಲಿದ್ದಾರೆ. ಹೀಗೆ ಇಂದಿನ ಪ್ರಮುಖ ಸುದ್ದಿಗಳ ಸಂಪೂರ್ಣ ವರದಿ ಇಲ್ಲಿದೆ.

TV9 Kannada Live TV ಇಲ್ಲಿ ವಿಕ್ಷಿಸಿ:

LIVE NEWS & UPDATES

The liveblog has ended.
  • 23 Jul 2026 10:05 PM (IST)

    ಶಿರಸಿ, ಸಿದ್ದಾಪುರ ತಾಲೂಕುಗಳ ಶಾಲೆಗಳಿಗೆ ನಾಳೆ ರಜೆ ಘೋಷಣೆ

    ಉತ್ತರಕನ್ನಡ ಜಿಲ್ಲೆಯಲ್ಲಿ ಗಾಳಿಯೊಂದಿಗೆ ಭಾರಿ ಮಳೆಯಾಗುವ ಮುನ್ಸೂಚನೆ  ನೀಡಲಾಗಿದ್ದು, ಆರೆಂಜ್ ಅಲರ್ಟ್ ಎಚ್ಚರಿಕೆ ನೀಡಲಾಗಿದೆ.  ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ನಾಳೆ(ಶುಕ್ರವಾರ) ಜಿಲ್ಲೆಯ ಶಿರಸಿ, ಸಿದ್ದಾಪುರ ತಾಲೂಕುಗಳ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಶಿರಸಿ, ಸಿದ್ದಾಪುರ ತಾಲೂಕಿನ ಎಲ್ಲಾ ಅಂಗನವಾಡಿ,ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆ ಘೋಷಣೆ ಮಾಡಿ ಉತ್ತರಕನ್ನಡ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಆದೇಶ ಹೊರಡಿಸಿದ್ದಾರೆ.

  • 23 Jul 2026 03:57 PM (IST)

    ಜುಲೈ 25 ಮತ್ತು 26ರಂದು ಸಿಎಂ ಡಿಕೆಶಿ ಚಿತ್ರದುರ್ಗ ಪ್ರವಾಸ

    ಜುಲೈ 25 ಮತ್ತು 26ರಂದು ಸಿಎಂ ಡಿಕೆ ಶಿವಕುಮಾರ್ ಅವರು ಚಿತ್ರದುರ್ಗ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಬಗ್ಗೆ ಚಿತ್ರದುರ್ಗದಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾಹಿತಿ ನೀಡಿದ್ದು, ಜುಲೈ 25ರಂದು ಬೆಳಗ್ಗೆ ಹಿರಿಯೂರಿಗೆ ಭೇಟಿ ನೀಡಲಿರುವ ಸಿಎಂ, ಬರಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ. ಬಳಿಕ ಅನುಭವ ಮಂಟಪದಲ್ಲಿ ಸಭೆ ನಡೆಸಲಿದ್ದಾರೆ. ಜೊತೆಗೆ ಬೆಂಗಳೂರು ವಿಭಾಗ ಮಟ್ಟದ ಪ್ರಗತಿ ಪರಿಶೀಲನಾ ಸಭೆ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.

  • 23 Jul 2026 03:50 PM (IST)

    ತಮಿಳುನಾಡಿನೊಂದಿಗೆ ಸಂಧಾನದ ಹೆಜ್ಜೆ ಮುಂದಿಟ್ಟ ಕರ್ನಾಟಕ

    ಕಾವೇರಿ ಸಮಸ್ಯೆ ಮತ್ತು ಮೇಕೇದಾಟು ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ, ತಮಿಳುನಾಡಿನೊಂದಿಗೆ ಸಂಧಾನದ ಹೆಜ್ಜೆ ಮುಂದಿಟ್ಟಿದೆ. ಹೌದು…ಕಾವೇರಿ ನೀರು ಬಿಡುಗಡೆಗೆ ಇರುವ ಮಳೆಯ ಕೊರತೆ ಹಾಗೂ ಮೇಕೇದಾಟು ಯೋಜನೆಯ ಅಗತ್ಯತೆ ಬಗ್ಗೆ ಚರ್ಚೆಗೆ ಆಗಸ್ಟ್ 3 ರಂದು ಚರ್ಚೆಗೆ ತಮಿಳುನಾಡು ಮುಖ್ಯಮಂತ್ರಿ ವಿಜಯ್​​ಗೆ ಆಹ್ವಾನ ನೀಡಲಾಗಿದೆ. ಆದ್ರೆ, ತಮಿಳುನಾಡು ಸಿಎಂ ವಿಜಯ್, ಆಹ್ವಾನಕ್ಕೆ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ತಮಿಳುನಾಡಿನ ಮುಂದಿನ ನಿರ್ಧಾರ ಕುತೂಹಲ ಕೆರಳಿಸಿದೆ. ಮತ್ತಷ್ಟು ಓದಿ

  • 23 Jul 2026 03:12 PM (IST)

    ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ಮಾಡುತ್ತಿರುವ ಬಿಜೆಪಿಗೆ ಪ್ರಿಯಾಂಕ್ ಖರ್ಗೆ ಟಾಂಗ್

    ಬಿಜೆಪಿ ಶಾಸಕ ಬಿ.ಪಿ.ಹರೀಶ್ ಮೇಲೆ ಮೊಟ್ಟೆ ಎಸೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದು, ತಪ್ಪಿತಸ್ಥರು ಯಾರೇ ಆಗಿರಲಿ, ಯಾವುದೇ ಪಕ್ಷದವರಾಗಿರಲಿ ಅವರನ್ನು ರಕ್ಷಿಸುವ ಮತ್ತು ಬೆಂಬಲಿಸುವ ಕೆಲಸ ಕಾಂಗ್ರೆಸ್ ಮಾಡಿಲ್ಲ. ಬಿಜೆಪಿ ನಾಯಕರ ಮೇಲೆ ಮೊಟ್ಟೆ ಎಸೆದ ಪ್ರಕರಣ ಒಪ್ಪುವುದಿಲ್ಲ. ಆ ವ್ಯಕ್ತಿಯನ್ನು ಬಂಧಿಸಿ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೆ ಚರ್ಚಿಸಬೇಕಾದ ಮುಖ್ಯ ವಿಷಯ ಬೇರೆಯೇ ಇದೆ. ವಿದ್ಯಾರ್ಥಿಗಳ ಭವಿಷ್ಯದ ಹಿತರಕ್ಷಣೆ ಕುರಿತು ಕಾಂಗ್ರೆಸ್ ಪ್ರತಿಭಟನೆ ಮಾಡುತ್ತಿದೆ. ಆದ್ರೆ, ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ಹಾಸ್ಯಾಸ್ಪದ ಮಾತ್ರವಲ್ಲ, ಬಾಲಿಶತನದ್ದು. ಬಿಜೆಪಿ ನಾಯಕರು ಮೋದಿ ಮೆಚ್ಚಿಸಲು ಪ್ರತಿಭಟನೆ ಮಾಡುತ್ತಿದ್ದಾರೆ. ಕೇಂದ್ರದ ಅಸಮರ್ಥ ಶಿಕ್ಷಣ ಸಚಿವರ ರಾಜಿನಾಮೆಗಾಗಿ ಪ್ರತಿಭಟಿಸಿ. NEET ಅವ್ಯವಸ್ಥೆಯನ್ನು ಸರಿಪಡಿಸಲು ಬಿಜೆಪಿ ಪ್ರತಿಭಟನೆ ಮಾಡಲಿ. ಉದ್ಯೋಗ ಭದ್ರತೆ, ಉತ್ತಮ ಶಿಕ್ಷಣ ವ್ಯವಸ್ಥೆಗಾಗಿ ಪ್ರತಿಭಟಿಸಿ. ಹೀಗೆ ಮಾಡಿದಲ್ಲಿ ಜನರ ವಿಶ್ವಾಸವನ್ನು ಸ್ವಲ್ಪವಾದರೂ ಗಳಿಸಬಹುದು ಎಂದು ಎಕ್ಸ್ ಖಾತೆ ಮೂಲಕ ಬಿಜೆಪಿಗೆ ಟಾಂಗ್​ ಕೊಟ್ಟಿದ್ದಾರೆ.

  • 23 Jul 2026 02:58 PM (IST)

    ಶಿರಾ-ಬಡವನಹಳ್ಳಿ ಚತುಷ್ಪಥ ರಸ್ತೆ ಗ್ರೀನ್ ಸಿಗ್ನಲ್

    ರಾಷ್ಟ್ರೀಯ ಹೆದ್ದಾರಿ 69ರ ಶಿರಾ-ಬಡವನಹಳ್ಳಿ ಭಾಗದ ರಸ್ತೆ ಕಾಮಗಾರಿಗೆ ಕೇಂದ್ರ ಸರ್ಕಾಟ ಅನುಮೋದನೆ ನೀಡಿದೆ. 584.98 ಕೋಟಿ ವೆಚ್ಚದ ಚತುಷ್ಪಥ ರಸ್ತೆ ಕಾಮಗಾರಿಗೆ ಕೇಂದ್ರ ಹೆದ್ದಾರಿ ಮತ್ತು ಭೂ ಸಾರಿಗೆ ಸಚಿವಾಲಯ ಅನುಮೋದನೆ ನೀಡಿದ್ದು, ಈ ಬಗ್ಗೆ ಸಚಿವ ವಿ. ಸೋಮಣ್ಣ ಮಾಹಿತಿ ನೀಡಿದ್ದಾರೆ.

  • 23 Jul 2026 02:27 PM (IST)

    ರಾಜ್ಯದಲ್ಲಿ ಅತಿವೃಷ್ಟಿ ಮತ್ತು ಅನಾವೃಷ್ಟಿ: ಬಿಜೆಪಿಯಿಂದ ಅಧ್ಯಯನ ತಂಡ ರಚನೆ

    ರಾಜ್ಯದಲ್ಲಿ ಅತಿವೃಷ್ಟಿ ಮತ್ತು ಅನಾವೃಷ್ಟಿ ಇರುವ ಕಾರಣ ಬಿಜೆಪಿಯಿಂದ ಅಧ್ಯಯನ ತಂಡ ರಚನೆ ಮಾಡಲಾಗಿದೆ. ಆರು ಅಧ್ಯಯನ ತಂಡ ರಚನೆ ಮಾಡಲಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಶಾಸಕ ಅರಗ ಜ್ಞಾನೇಂದ್ರ, ವಿಧಾನ ಪರಿಷತ್ ಸದಸ್ಯ ಸಿ‌.ಟಿ. ರವಿ ಮತ್ತು ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದೆ., ಜುಲೈ 31 ರೊಳಗೆ ಪಕ್ಷಕ್ಕೆ ಅಧ್ಯಯನ ವರದಿ ಸಲ್ಲಿಕೆಗೆ ಸೂಚನೆ ನೀಡಲಾಗಿದೆ.

  • 23 Jul 2026 01:11 PM (IST)

    ಪ್ರಶ್ನೆಪತ್ರಿಕೆ ಸೋರಿಕೆಗೆ ಬ್ರೇಕ್: 4 ರಾಜ್ಯಗಳಲ್ಲಿ ತಕ್ಷಣವೇ ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗಳ ಸ್ಥಾಪನೆ

    ದೇಶಾದ್ಯಂತ ಸ್ಪರ್ಧಾತ್ಮಕ ಮತ್ತು ನೇಮಕಾತಿ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ (Paper Leak) ಪ್ರಕರಣಗಳ ವಿಚಾರಣೆಯನ್ನು ವೇಗಗೊಳಿಸಲು ಮತ್ತು ದೋಷಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಭರವಸೆಯ ಬೆನ್ನಲ್ಲೇ, ಪ್ರಕರಣಗಳ ತ್ವರಿತ ನಿವಾರಣೆಗಾಗಿ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳನ್ನು (Fast-Track ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ. ಪರೀಕ್ಷಾ ಅಕ್ರಮಗಳು ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ಜಾಲವನ್ನು ಬೇರುಸಹಿತ ಕಿತ್ತೊಗೆಯುವ ಉದ್ದೇಶದಿಂದ, ಮೊದಲ ಹಂತವಾಗಿ 4 ಪ್ರಮುಖ ರಾಜ್ಯಗಳಲ್ಲಿ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳನ್ನು ಸ್ಥಾಪಿಸಲಾಗುತ್ತಿದೆ. ಇದರಿಂದಾಗಿ ವರ್ಷಾನುಗಟ್ಟಲೆ ಎಳೆಯುವ ಪ್ರಕರಣಗಳ ವಿಚಾರಣೆ ಕೆಲವೇ ತಿಂಗಳುಗಳಲ್ಲಿ ಪೂರ್ಣಗೊಂಡು, ತಪ್ಪಿತಸ್ಥರಿಗೆ ಶೀಘ್ರ ಶಿಕ್ಷೆಯಾಗಲಿದೆ.

  • 23 Jul 2026 01:08 PM (IST)

    ಹನಿಮೂನ್​ಗೆ ಕರೆದೊಯ್ದು ಪತಿ ಹತ್ಯೆ ಪ್ರಕರಣ: ಆರೋಪಿ ಸೋನಮ್ ರಘುವಂಶಿ ಜಾಮೀನು ರದ್ದು

    ಮೇಘಾಲಯಕ್ಕೆ ಹನಿಮೂನ್‌ಗೆಂದು ತೆರಳಿದ್ದಾಗ ಪತಿ ರಾಜಾ ರಘುವಂಶಿ ಅವರನ್ನು ಹತ್ಯೆಗೈದ ಭೀಕರ ಪ್ರಕರಣದ ಪ್ರಮುಖ ಆರೋಪಿ ಸೋನಮ್ ರಘುವಂಶಿಗೆ ದೊರೆತಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ಗುರುವಾರ (ಜು.23) ರದ್ದುಗೊಳಿಸಿದೆ. ನ್ಯಾಯಮೂರ್ತಿಗಳಾದ ಎಂ.ಎಂ. ಸುಂದ್ರೇಶ್ ಮತ್ತು ಪಿ.ಬಿ. ವರಾಳೆ ಅವರಿದ್ದ ದ್ವಿಸದಸ್ಯ ಪೀಠವು ಈ ಪ್ರಮುಖ ಆದೇಶವನ್ನು ಹೊರಡಿಸಿದೆ.

  • 23 Jul 2026 11:36 AM (IST)

    ಮಧ್ಯಾಹ್ನದೊಳಗೆ ಸುಪ್ರೀಂಕೋರ್ಟ್​ ಮೆಟ್ರೋ ನಿಲ್ದಾಣ ತೆರೆಯದಿದ್ದರೆ, ತಾವೇ ಮಧ್ಯೆ ಪ್ರವೇಶಿಸಬೇಕಾಗಬಹುದು: ಸಿಜೆಐ ಸೂರ್ಯಕಾಂತ್

    ದೆಹಲಿಯಲ್ಲಿ ನಡೆಯುತ್ತಿರುವ ವಿದ್ಯಾರ್ಥಿ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಮೆಟ್ರೋ ನಿಲ್ದಾಣವನ್ನು ಬಂದ್ ಮಾಡಿರುವುದನ್ನು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ (SCBA) ಅಧ್ಯಕ್ಷ ವಿಕಾಸ್ ಸಿಂಗ್ ಅವರು ಗುರುವಾರ ಸುಪ್ರೀಂ ಕೋರ್ಟ್ ಗಮನಕ್ಕೆ ತಂದರು. ನ್ಯಾಯಾಲಯಕ್ಕೆ ಬರಲು ಸೂಕ್ತ ಪ್ರವೇಶ ಪತ್ರ (Access Pass) ಹೊಂದಿರುವ ವಕೀಲರು, ವಾದಿಗಳು ಮತ್ತು ನ್ಯಾಯಾಲಯದ ಸಿಬ್ಬಂದಿಗೆ ಕನಿಷ್ಠ ಈ ಮೆಟ್ರೋ ನಿಲ್ದಾಣವನ್ನು ಬಳಸಲು ಅನುಮತಿ ನೀಡಬೇಕು ಎಂದು ಅವರು ಕೋರಿದರು.

  • 23 Jul 2026 11:06 AM (IST)

    ಸಂಸತ್‌ ಭವನದ ಮಕರ ದ್ವಾರದಲ್ಲಿ NDA ಸಂಸದರಿಂದ ಪ್ರತಿಭಟನೆ

    ಸಂಸತ್‌ನ ಉಭಯ ಸದನಗಳಲ್ಲಿ ವಿಪಕ್ಷಗಳ ಪ್ರತಿಭಟನೆ ಹಿನ್ನೆಲೆ ಸಂಸತ್‌ ಭವನದ ಮಕರ ದ್ವಾರದಲ್ಲಿ NDA ಸಂಸದರಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ವಿಪಕ್ಷಗಳ ಧೋರಣೆ ಖಂಡಿಸಿ ಎನ್‌ಡಿಎ ಸಂಸದರಿಂದ ಪ್ರತಿಭಟನೆ. ಮತ್ತೊಂದೆಡೆ ವಿಪಕ್ಷಗಳ ಸಂಸದರಿಂದಲೂ ಪ್ರತಿಭಟನೆ ನಡೆಯುತ್ತಿದ್ದಾರೆ. ಸಂಸತ್‌ ಭವನದ ಮಕರ ದ್ವಾರದ ಬಳಿಯೇ ವಿಪಕ್ಷಗಳಿಂದ ಪ್ರತಿಭಟನೆ ಮಾಡುತ್ತಿದೆ.

  • 23 Jul 2026 10:09 AM (IST)

    ಸಂಪುಟ ವಿಸ್ತರಣೆ ಬೆನ್ನಲ್ಲೇ ಡಿಸಿಎಂ ರೇಸ್ ಶುರು

    ರಾಜ್ಯ ಸಚಿವ ಸಂಪುಟ ವಿಸ್ತರಣೆ ಚರ್ಚೆಯ ಬೆನ್ನಲ್ಲೇ ಹೆಚ್ಚುವರಿ ಉಪಮುಖ್ಯಮಂತ್ರಿ (DCM) ಹುದ್ದೆಗಳ ಸೃಷ್ಟಿ ಮತ್ತೆ ಸದ್ದು ಮಾಡುತ್ತಿದೆ. ಲಿಂಗಾಯತ ಸಮುದಾಯದ ಎಂ.ಬಿ. ಪಾಟೀಲ್ ಹಾಗೂ ಎಸ್‌ಟಿ ಸಮುದಾಯದ ಸತೀಶ್ ಜಾರಕಿಹೊಳಿ ಅವರಿಗೆ ಡಿಸಿಎಂ ಸ್ಥಾನ ನೀಡುವ ಕುರಿತು ಹೈಕಮಾಂಡ್ ಮಟ್ಟದಲ್ಲಿ ಪ್ರಸ್ತಾಪವಾಗಿದೆ.

  • 23 Jul 2026 10:08 AM (IST)

    ಶಾಸಕ ಬಿ.ಪಿ. ಹರೀಶ್‌ಗೆ ಮೊಟ್ಟೆ ಹೊಡೆದಿದ್ದ ಆರೋಪಿ ಬಂಧನ

    ದಾವಣಗೆರೆ ಮೂಲದ ಬಿಜೆಪಿ ಶಾಸಕ ಬಿ.ಪಿ. ಹರೀಶ್ ಅವರ ಮೇಲೆ ಬಾಕ್ಸ್‌ನಲ್ಲಿ ತಂದಿದ್ದ ಮೊಟ್ಟೆಗಳನ್ನು ಎಸೆದಿದ್ದ ಆರೋಪಿ ಪುಣ್ಯೇಶ್‌ನನ್ನು ಶಿವಾಜಿನಗರ ಪೊಲೀಸರು ತಡರಾತ್ರಿ ಬಂಧಿಸಿ ಸುದೀರ್ಘ ವಿಚಾರಣೆ ನಡೆಸಿದ್ದಾರೆ.

  • 23 Jul 2026 09:50 AM (IST)

    ‘ವಿದ್ಯಾರ್ಥಿಗಳ ರಕ್ಷಣೆಯೇ ನಮಗೆ ಮುಖ್ಯ’: ನೀಟ್ ಅಕ್ರಮದ ಕ್ರಿಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಅಧಿಕಾರಿಗಳಿಗೆ ಮೋದಿ ಸೂಚನೆ

    ದೇಶದ ಯುವಜನತೆಯ ಭವಿಷ್ಯಕ್ಕಿಂತ ಪ್ರಮುಖವಾದದ್ದು ಯಾವುದೂ ಇಲ್ಲ. ನೀಟ್ ಪರೀಕ್ಷೆ ಅಕ್ರಮ ಎಸಗಿದ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಭಾಗಿಯಾದ ಕ್ರಿಮಿಗಳನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದಾರೆ. ಪ್ರಮುಖ ಪ್ರಕರಣದ ಶೀಘ್ರ ವಿಚಾರಣೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲು ಫಾಸ್ಟ್ ಟ್ರ್ಯಾಕ್ ಕೋರ್ಟ್ ಸ್ಥಾಪಿಸಲಾಗುವುದು ಹಾಗೂ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ. ಸುದ್ದಿ ಇಲ್ಲಿದೆ ನೋಡಿ

Published On - Jul 23,2026 9:49 AM

Follow Us