ಸಿಎಂ ಸಿದ್ದರಾಮಯ್ಯ ವಿರಾಟ್ ಕೊಹ್ಲಿ ಅಭಿಮಾನಿಗಳ ಕ್ಷಮೆ ಕೇಳಬೇಕೆಂದ ಮಾಜಿ ಡಿವೈಎಸ್​​ಪಿ: ಕಾರಣ ಇಲ್ಲಿದೆ

ಆರ್​ಸಿಬಿ ಐಪಿಎಲ್ ವಿಜಯೋತ್ಸವದ ಸಂದರ್ಭ ಬೆಂಗಳೂರಿನಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ ಪೊಲೀಸ್ ಇಲಾಖೆಯ ರಾಜಕೀಯವೇ ಕಾರಣ ಎಂದು ಮಾಜಿ ಡಿವೈಎಸ್​​ಪಿ ಅನುಪಮಾ ಶೆಣೈ ಆರೋಪಿಸಿದ್ದು, ಕೆಜೆ ಹಳ್ಳಿ ಮತ್ತು ಡಿಜೆ ಹಳ್ಳಿ ಗುಂಪುಗಳ ನೆರವಿನಿಂದ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಗೊಂದಲ ಸೃಷ್ಟಿಸಲಾಗಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಇದೀಗ ವಿರಾಟ್ ಕೊಹ್ಲಿಯನ್ನು ಜೈಲಿಗೆ ಕಳುಹಿಸಲು ಹುನ್ನಾರ ಮಾಡಲಾಗಿದೆ ಎಂದು ಆರೋಪಿಸಿದ್ದು, ಅವರಾಡಿರುವ ಮಾತಿನ ವಿವರಗಳು ಇಲ್ಲಿವೆ.

ಸಿಎಂ ಸಿದ್ದರಾಮಯ್ಯ ವಿರಾಟ್ ಕೊಹ್ಲಿ ಅಭಿಮಾನಿಗಳ ಕ್ಷಮೆ ಕೇಳಬೇಕೆಂದ ಮಾಜಿ ಡಿವೈಎಸ್​​ಪಿ: ಕಾರಣ ಇಲ್ಲಿದೆ
ವಿರಾಟ್ ಕೊಹ್ಲಿ
Updated By: Ganapathi Sharma

Updated on: Jul 19, 2025 | 5:42 PM

ಉಡುಪಿ, ಜುಲೈ 19: ‘ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಆರ್​ಸಿಬಿ ವಿಜಯೋತ್ಸವ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ (Bengaluru Stampede) ಪೊಲೀಸ್ ಇಲಾಖೆಯಲ್ಲಿನ ರಾಜಕೀಯವೇ ಕಾರಣ. ಆದರೆ, ಸರ್ಕಾರ ಹೈಕೋರ್ಟ್​​ಗೆ ಸಲ್ಲಿಸಿರುವ ವರದಿಯಲ್ಲಿ ವಿರಾಟ್ ಕೊಹ್ಲಿ (Virat Kohli) ಅವರನ್ನು ಆರೋಪಿ ಸ್ಥಾನದಲ್ಲಿ ಉಲ್ಲೇಖಿಸಲಾಗಿದೆ. ಕೊಹ್ಲಿಯನ್ನು ಜೈಲಿಗೆ ಕಳುಹಿಸಲು ಸಂಚು ರೂಪಿಸಲಾಗಿದೆ. ಇದಕ್ಕಾಗಿ ಸಿಎಂ ಸಿದ್ದರಾಮಯ್ಯ (Siddaramaiah) ಕೊಹ್ಲಿ ಅಭಿಮಾನಿಗಳ ಕ್ಷಮೆಯಾಚಿಸಬೇಕು’ ಎಂದು ಮಾಜಿ ಡಿವೈಎಸ್​​ಪಿ ಅನುಪಮಾ ಶೆಣೈ ಆಗ್ರಹಿಸಿದ್ದಾರೆ. ಅಷ್ಟೇ ಅಲ್ಲದೆ, ಕೆಜೆ ಹಳ್ಳಿ ಮತ್ತು ಡಿಜೆ ಹಳ್ಳಿ ಗುಂಪುಗಳ ನೆರವು ಪಡೆದು ಸ್ಟೇಡಿಯಂ ಬಳಿ ಉದ್ದೇಶಪೂರ್ವಕ ಗೊಂದಲ ಸೃಷ್ಟಿಸಲಾಗಿತ್ತು ಎಂದು ಗಂಭೀರ ಆರೋಪ ಮಾಡಿದ್ದಾರೆ.

ಅನುಪಮಾ ಶೆಣೈ ಹೇಳಿದ್ದೇನು?

ಕಾಲ್ತುಳಿತ ಪ್ರಕರಣ ಸಂಬಂಧ ಸರ್ಕಾರ ಹೈಕೋರ್ಟ್​ಗೆ ಸಲ್ಲಿಸಿರುವ ವರದಿಯಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿಯನ್ನು ಆರೋಪಿಯನ್ನಾಗಿ ಮಾಡಲಾಗಿದೆ. ಸರಕಾರದ ಈ ವರದಿಯನ್ನು ನಾನು ವಿರೋಧಿಸುತ್ತೇನೆ. ಬೆಂಗಳೂರಿನಲ್ಲಿ ಸಕ್ರಿಯವಾಗಿರುವ ಸ್ಮಗ್ಲಿಂಗ್ ಮಾಫಿಯಾ ಇದರ ಹಿಂದಿದೆ. ಕೆಜೆ ಹಳ್ಳಿ ಮತ್ತು ಡಿಜೆ ಹಳ್ಳಿ ಗುಂಪುಗಳ ಸಹಾಯ ಪಡೆದು ಕಾಲ್ತುಳಿತ ನಡೆದ ಸ್ಥಳದಲ್ಲಿ ಗೊಂದಲ ಸೃಷ್ಟಿಸಲಾಗಿತ್ತು ಎಂದು ಆರೋಪಿಸಿರುವ ಅನುಪಮಾ ಶೆಣೈ, ಈ ಬಗ್ಗೆ ಮ್ಯಾಜಿಸ್ಟ್ರಿಯಲ್ ತನಿಖೆ ನಡೆಸುತ್ತಿರುವ ಬೆಂಗಳೂರು ಜಿಲ್ಲಾಧಿಕಾರಿ ಜಗದೀಶ್ ಅವರಿಗೂ ಪತ್ರ ಬರೆದಿದ್ದೇನೆ ಎಂದರು.

ಬಿ. ದಯಾನಂದ್ ಅವರು ಮುಂದೆ ಡಿಜಿಪಿ ಮತ್ತು ಐಜಿಪಿ ಆಗಿ ನೇಮಕವಾಗುವುದನ್ನು ತಡೆಯುವ ಉದ್ದೇಶ ಈ ಕೃತ್ಯದ ಹಿಂದಿದೆ. ರನ್ಯಾ ರಾವ್ ಸ್ಮಗ್ಲಿಂಗ್ ಪ್ರಕರಣ ಮೂಲಕ ರಾಮಚಂದ್ರ ರಾವ್ ಅವರಿಗೆ ಹಿನ್ನಡೆಯಾಗುವಂತೆ ಮಾಡಲಾಯಿತು ಎಂದು ಶೆಣೈ ಹೇಳಿದರು. ಅಲ್ಲದೆ, ಸಲೀಂ ಅವರ ನೇಮಕಾತಿಯನ್ನು ಪ್ರಶ್ನಿಸಿದರು.

ಇದನ್ನೂ ಓದಿ
3 ನಿಮಿಷಗಳ ವಿಡಿಯೋದಲ್ಲಿ ಕೊಹ್ಲಿ ಏನು ಹೇಳಿದ್ದಾರೆ? ನೀವೇ ನೋಡಿ
ಕಾಲ್ತುಳಿತಕ್ಕೆ RCB ನೇರ ಹೊಣೆ ಎಂದ ಸರ್ಕಾರ: ಕೊಹ್ಲಿ ವಿಡಿಯೋ ಬಗ್ಗೆಯೂ ವರದಿ
ಕೊಹ್ಲಿಗಾಗಿ ತರಾತುರಿ: ಸಿಐಡಿ ತನಿಖೆಯಲ್ಲಿ ಬಯಲಾಯ್ತು ಕಾಲ್ತುಳಿತಕ್ಕೆ ಕಾರಣ!
ಕಾಲ್ತುಳಿತ: ದೂರು ನೀಡಿದ ಅಬ್ರಹಾಂ, ಆರ್‌ಸಿಬಿ ವಿರುದ್ಧ ಫಿಕ್ಸಿಂಗ್ ಆರೋಪ!

ಮಾಜಿ ಡಿವೈಎಸ್​​ಪಿ ಅನುಪಮಾ ಶೆಣೈ

ಒಳಸಂಚುಗಳನ್ನು ರೂಪಿಸಿ ಸಲೀಂ ಅವರನ್ನು ನೇಮಕ ಮಾಡಲಾಗಿದೆ. ಅಲೋಕ್ ಕುಮಾರ್ ಅವರ ಮೇಲೆ ಈಗಾಗಲೇ ಆರೋಪ ಹೊರಿಸಿ ದೂರ ಇರಿಸಲಾಗಿದೆ. ದಯಾನಂದ್ ಅವರನ್ನು ಅಮಾನತು ಮಾಡಿದ್ದು ಸಲೀಂ ಎಂದು ಆರೋಪಿಸುವ ಮೂಲಕ ಪೊಲೀಸ್ ಇಲಾಖೆಯ ರಾಜಕೀಯವನ್ನು ಅನುಪಮಾ ಶೆಣೈ ಬಹಿರಂಗಪಡಿಸಿದರು.

ವಿರಾಟ್ ಕೊಹ್ಲಿಯ ಆರೋಪಿಯನ್ನಾಗಿ ಮಾಡಿ ಹುನ್ನಾರ: ಶೆಣೈ

ಮೇಲ್ನೋಟಕ್ಕೆ ವಿರಾಟ್ ಕೊಹ್ಲಿಯನ್ನು ಆರೋಪಿಯನ್ನಾಗಿ ಮಾಡುವ ಹುನ್ನಾರ ಕಂಡುಬರುತ್ತದೆ. ವಿರಾಟ್ ಕೊಹ್ಲಿ ಅವರ ಸಾಮಾಜಿಕ ಜಾಲತಾಣ ವಿಡಿಯೋ ನೋಡಿ ಜನ ಬಂದಿದ್ದಾರೆ ಎನ್ನಲಾಗುತ್ತಿದೆ. ವರದಿಯಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದೆ. ಸಾಮಾಜಿಕ ಜಾಲತಾಣದ ವಿಡಿಯೋವನ್ನು ದೇಶ ವಿದೇಶಗಳಲ್ಲಿಯೂ ಲಕ್ಷಾಂತರ ಜನ ನೋಡುತ್ತಾರೆ. ಒಂದೇ ದಿನದಲ್ಲಿ ಜನ ವಿಮಾನ ಹತ್ತಿ ಬಂದು ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದಾರಾ ಎಂದು ಶೆಣೈ ಪ್ರಶ್ನಿಸಿದರು.

ಕೊಹ್ಲಿ ವಿಡಿಯೋ ನೋಡಿ ಜನ ಬಂದರೆಂಬುದಕ್ಕೆ ದಾಖಲೆ ಇದೆಯೇ: ಅನುಪಮಾ ಶೆಣೈ ಪ್ರಶ್ನೆ

ವಿರಾಟ್ ಕೊಹ್ಲಿ ವಿಡಿಯೋ ನೋಡಿದವರೆಲ್ಲಾ ಕಾರ್ಯಕ್ರಮದ ಸ್ಥಳಕ್ಕೆ ಬಂದ ಬಗ್ಗೆ ಸಿಎಂ ಸಿದ್ದರಾಮಯ್ಯನವರಲ್ಲಿ ದಾಖಲೆ ಇದೆಯಾ? ಕಾಲ್ತುಳಿತ ಸಂಭವಿಸಿದ ಸ್ಥಳದಲ್ಲಿ ಸಿಕ್ಕಿದ ಚಪ್ಪಲಿಗಳು ಹಾಗೂ ಇತರ ಕುರುಹುಗಳನ್ನು ನೋಡಿದರೆ ಅವರಲ್ಲಿ ಹೆಚ್ಚಿವರು ಸಾಮಾನ್ಯ ಜನರು ಎಂಬುದು ಗೊತ್ತಾಗುತ್ತದೆ. ಅವರೆಲ್ಲರೂ ಸಾಮಾಜಿಕ ಮಾಧ್ಯಮ ಪೋಸ್ಟ್ ನೋಡಿ ಅಲ್ಲಿಗೆ ಬಂದವರಲ್ಲ. ಕೂಡಲೇ ಸಿಎಂ ಸಿದ್ದರಾಮಯ್ಯ ವಿರಾಟ್ ಕೊಹ್ಲಿ ಅಭಿಮಾನಿಗಳ ಕ್ಷಮೆ ಕೇಳಬೇಕು. ಆರ್​ಸಿಬಿ ಪರ ವಕೀಲರು ನಾನು ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ಬರೆದ ಪತ್ರವನ್ನು ಪರಿಶೀಲಿಸಬೇಕು. ವಿರಾಟ್ ಕೊಹ್ಲಿಯನ್ನು ರಕ್ಷಿಸಬೇಕು ಎಂದು ಅನುಪಮಾ ಶೆಣೈ ಹೇಳಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ