ಅಂಕೋಲಾದಲ್ಲಿ ನಕಲಿ ದಾಖಲೆ ಸೃಷ್ಟಿಸಿ 2 ಕೋಟಿ ರೂ. ಬೆಲೆಬಾಳುವ ಜಮೀನು ಮಾರಾಟ: ಸಬ್ ರಿಜಿಸ್ಟ್ರಾರ್ ಸಿಬ್ಬಂದಿ ಸೇರಿ ಐವರ ಬಂಧನ
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ನಕಲಿ ಆಧಾರ್ ಕಾರ್ಡ್ ಹಾಗೂ ಸುಳ್ಳು ದಾಖಲೆ ಸೃಷ್ಟಿಸಿ 2 ಕೋಟಿ ರೂ. ಬೆಲೆಬಾಳುವ ಜಮೀನನ್ನು ಅಕ್ರಮವಾಗಿ ಮಾರಾಟ ಮಾಡಿದ್ದ ಬೃಹತ್ ಭೂಮಾಫಿಯಾ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಸಬ್ ರಿಜಿಸ್ಟ್ರಾರ್ ಕಚೇರಿಯ ಸಿಬ್ಬಂದಿ ಸೇರಿ ಐವರನ್ನು ಬಂಧಿಸಲಾಗಿದೆ.

ಮುಖ್ಯಾಂಶಗಳು
- ನಕಲಿ ದಾಖಲೆ ಸೃಷ್ಟಿಸಿ 2 ಕೋಟಿ ಜಮೀನು ಮಾರಾಟ
- ಸಬ್ ರಿಜಿಸ್ಟ್ರಾರ್ ಕಚೇರಿ ಸಿಬ್ಬಂದಿ ಸೇರಿ ಐವರ ಬಂಧನ
- ಕಾರವಾರ ಡಿವೈಎಸ್ಪಿ ಗಿರೀಶ್ ನೇತೃತ್ವದಲ್ಲಿ ತನಿಖೆ ಚುರುಕು
ಕಾರವಾರ, ಸೆಪ್ಟೆಂಬರ್ 10: ನಕಲಿ ಆಧಾರ್ ಕಾರ್ಡ್ ಹಾಗೂ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ 2 ಕೋಟಿ ರೂಪಾಯಿಗೂ ಹೆಚ್ಚು ಬೆಲೆಬಾಳುವ ಜಮೀನನ್ನು ಅಕ್ರಮವಾಗಿ ಮಾರಾಟ ಮಾಡಿದ್ದ ಬೃಹತ್ ಭೂಮಾಫಿಯಾ ಜಾಲವನ್ನು ಉತ್ತರ ಕನ್ನಡ ಜಿಲ್ಲೆಯ ಅಂಕೋಲ ಪೊಲೀಸರು ಪತ್ತೆ ಹಚ್ಚಿದ್ದಾರೆ. ಅಂಕೋಲಾ ತಾಲೂಕಿನ ಬೊಗ್ರಿಬೈಲ್ನಲ್ಲಿ, ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತಿರುವ ಇಮ್ತಿಯಾಜ್ ಮತ್ತು ಯಾಕೂಬ್ ಎಂಬ ಸಹೋದರರಿಗೆ ಸೇರಿದ 1.14 ಎಕರೆ ಜಮೀನನ್ನು ಭೂಮಾಫಿಯಾ ಕಬಳಿಸಿತ್ತು. ಸಂತ್ರಸ್ತ ಸಹೋದರರು ಜಮೀನಿನ ಅಭಿವೃದ್ಧಿಗಾಗಿ ಸರ್ವೆ ನಡೆಸಲು ಅರ್ಜಿ ಸಲ್ಲಿಸಿದಾಗ, ಆರ್ಟಿಸಿ (RTC) ಯಲ್ಲಿ ಅವರ ಹೆಸರುಗಳ ಬದಲಿಗೆ ದೇವಿದಾಸ ನಾಗೇಶ ಗುನಗಾ ಎಂಬ ವ್ಯಕ್ತಿಯ ಹೆಸರು ಸೇರ್ಪಡೆಯಾಗಿರುವುದು ಕಂಡುಬಂದಿದೆ. ಪ್ರಕರಣದ ಪರಿಶೀಲನೆ ನಡೆಸಿದಾಗ, ಫೆಬ್ರವರಿ 16, 2026ರಂದು ಅಂಕೋಲಾ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಈ ಜಮೀನನ್ನು ಈರಣ್ಣ ಎಂಬಾತನಿಗೆ ಮಾರಾಟ ಮಾಡಲಾಗಿತ್ತು ಎಂಬುದು ತಿಳಿದುಬಂದಿದೆ. ತದನಂತರ ಏಪ್ರಿಲ್ 7, 2026ರಂದು ಕುಮಟಾ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ದೇವಿದಾಸ ಗುನಗಾ ಎಂಬಾತನಿಗೆ ಮರುಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ.
ನಕಲಿ ಭೂಮಾಫಿಯಾ: 11 ಜನರ ವಿರುದ್ಧ ಎಫ್ಐಆರ್: ಐವರ ಬಂಧನ
ಮೂಲ ಮಾಲೀಕರಾದ ಇಮ್ತಿಯಾಜ್ ಮತ್ತು ಯಾಕೂಬ್ ಹೆಸರಿನಲ್ಲಿ ನಕಲಿ ಆಧಾರ್ ಕಾರ್ಡ್, ನಕಲಿ ಸಹಿ, ಬಯೋಮೆಟ್ರಿಕ್ ಹಾಗೂ ಮೊಬೈಲ್ ಸಂಖ್ಯೆಗಳನ್ನು ಸೃಷ್ಟಿಸಿ, ಬೇರೊಬ್ಬ ವ್ಯಕ್ತಿಗಳನ್ನು ನೋಂದಣಾಧಿಕಾರಿಗಳ ಕಚೇರಿಯಲ್ಲಿ ಹಾಜರುಪಡಿಸಿ ಈ ಅಕ್ರಮ ಎಸಗಲಾಗಿತ್ತು. ಸಂತ್ರಸ್ತ ಮಾಲೀಕರು ಅಂಕೋಲಾ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ 11 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಕಾರವಾರ ಡಿವೈಎಸ್ಪಿ ಗಿರೀಶ ಎಸ್.ವಿ. ಅವರ ನೇತೃತ್ವದಲ್ಲಿ ದಾಳಿ ನಡೆಸಿದ ಪೊಲೀಸರು, ಸಬ್ ರಿಜಿಸ್ಟ್ರಾರ್ ಕಚೇರಿಯ ಡೇಟಾ ಎಂಟ್ರಿ ಆಪರೇಟರ್ ಶಂಕರ ರಾಮದಾಸ ಅಣ್ವೇಕರ್, ಮಂಜುನಾಥ ಆನಂದು ಗೌಡ, ರವಿ ಜಟ್ಟಿ ನಾಯ್ಕ, ದರ್ಶನ ನಾರಾಯಣ ಗೌಡ ಹಾಗೂ ವೆಂಕು ಹುಲಿಯಾ ಗೌಡ ಸೇರಿದಂತೆ ಐವರು ಸಿಬ್ಬಂದಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಉತ್ತರ ಕನ್ನಡ: ಭಾರಿ ಪ್ರಮಾಣದ ವನ್ಯಜೀವಿ ಉತ್ಪನ್ನಗಳ ಅಕ್ರಮ ಸಾಗಾಟ
ಮೃತರ ಮತ್ತು ಊರಿನಲ್ಲಿ ಇಲ್ಲದವರ ಹೆಸರುಗಳಲ್ಲಿಯೂ ನಕಲಿ ದಾಖಲೆ ಸೃಷ್ಟಿಸಿ ಜಮೀನು ಎಗರಿಸುತ್ತಿದ್ದ ಈ ಜಾಲದ ವಿರುದ್ಧ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:16 am, Thu, 10 September 26




