ಮೋಸ್ಟ್ ವಾಂಟೆಡ್ ಕ್ರಿಮಿನಲ್ನ ಕೊಂದು ಕಾರಿನಲ್ಲೇ ಸುಟ್ಟ ಆರೋಪಿಗಳು!
ಅರಬೈಲ್ ಘಾಟ್ನಲ್ಲಿ ಕಾರಿಗೆ ಬೆಂಕಿ ತಗುಲಿ ವ್ಯಕ್ತಿಯೋರ್ವನ ಸಾವಿನ ಪ್ರಕರಣವನ್ನು ಮೊದಲಿಗೆ ಅಪಘಾತವೆಂದು ತಿಳಿಯಲಾಗಿತ್ತು. ಆದರೆ ಪೊಲೀಸರ ತನಿಖೆಯಲ್ಲಿ ಇದೊಂದು ಕೊಲೆ ಎಂದು ದೃಢಪಟ್ಟಿದೆ. ಬೆಳಗಾವಿಯ ಮೋಸ್ಟ್ ವಾಂಟೆಡ್ ಕ್ರಿಮಿನಲ್ ನಿತೀಶ್ ಡಾಪಳೆಯನ್ನು ಆತನ ಸಹಚರರೇ ಹುಬ್ಬಳ್ಳಿಯಲ್ಲಿ ಕೊಂದು, ಸಾಕ್ಷ್ಯ ನಾಶಕ್ಕೆ ಕಾರನ್ನು ಸುಟ್ಟಿದ್ದರು ಎಂದು ತಿಳಿದು ಬಂದಿದೆ. ಈಗಾಗಲೇ ಮೂವರನ್ನು ಬಂಧಿಸಲಾಗಿದ್ದು, ಉಳಿದ ಆರೋಪಿಗಳಿಗಾಗಿ ತೀವ್ರ ಶೋಧ ನಡೆದಿದೆ.

ಉತ್ತರ ಕನ್ನಡ, ಏಪ್ರಿಲ್ 18: ಏಪ್ರಿಲ್ 8ರಂದು ಅರಬೈಲ್ ಘಟ್ಟದ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಕಾರು ಬೆಂಕಿಗಾಹುತಿಯಾದ ಘಟನೆ ಸಂಭವಿಸಿತ್ತು. ಆರಂಭದಲ್ಲಿ ಇದನ್ನು ಅಪಘಾತ (Accident) ಎಂದು ಹೇಳಲಾಗಿತ್ತು. ಆದರೆ ಪ್ರಕರಣಕ್ಕೆ ಈಗ ಭಾರೀ ಟ್ವಿಸ್ಟ್ ಸಿಕ್ಕಿದ್ದು, ಇದು ಅಪಘಾತವಲ್ಲ ಕೊಲೆ ಎಂಬುದು ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ.
50ಕ್ಕೂ ಹೆಚ್ಚು ಪ್ರಕರಣದ ಆರೋಪಿಯಾಗಿದ್ದ ನಿತೀಶ್!
ಮೃತನು ಬೆಳಗಾವಿ ಮೂಲದ ನಿತೀಶ್ ಡಾಪಳೆ ಎಂದು ಗುರುತಿಸಲಾಗಿದ್ದು, ಅವನು 50ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಲ್ಲಿ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಆರೋಪಿಯಾಗಿದ್ದ ಎಂಬುದು ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ. ಅವನನ್ನು ಹುಬ್ಬಳ್ಳಿಯಲ್ಲಿ ತನ್ನ ಸಹಚರರೇ ಕೊಲೆ ಮಾಡಿರುವುದು ಗೊತ್ತಾಗಿದೆ. ಕೊಲೆ ಮಾಡಿದ ಬಳಿಕ ನಿತೀಶ್ ಶವವನ್ನು ಕಾರಿನಲ್ಲಿ ಹಾಕಿ ಅರಬೈಲ್ ಘಟ್ಟಕ್ಕೆ ತಂದು, ಸಾಕ್ಷ್ಯ ನಾಶ ಮಾಡಲು ಕಾರಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿರುವುದು ತನಿಖೆಯಲ್ಲಿ ತಿಳಿದುಬಂದಿದೆ.
ಆರು ಆರೋಪಿಗಳಲ್ಲಿ ಮೂವರ ಬಂಧನ
ಈ ಪ್ರಕರಣದಲ್ಲಿ ಒಟ್ಟು ಆರು ಮಂದಿಯ ಹೆಸರು ಕೇಳಿಬಂದಿದ್ದು, ಈಗಾಗಲೇ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ನಯೀಮ್ ಮೌಲಾ, ದಾದಾ ಪೀರ್ ಮತ್ತು ಸೋಯಬ್ ಎಂದು ಗುರುತಿಸಲಾಗಿದ್ದು, ಇವರು ಹುಬ್ಬಳ್ಳಿ ಮೂಲದವರು. ಉಳಿದ ಶಾನು, ಜಮೀರ್ ಹಾಗೂ ಆಯುಬ್ ಎಂಬ ಆರೋಪಿಗಳಿಗಾಗಿ ಪೊಲೀಸರು ತೀವ್ರ ಹುಡುಕಾಟ ಮುಂದುವರೆಸಿದ್ದಾರೆ. ಈ ಪ್ರಕರಣ ಯಲ್ಲಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



