ವರಮಹಾಲಕ್ಷ್ಮಿ ಹಬ್ಬದಂದೇ ಸೂತಕ: ಬಾವಿಯಲ್ಲಿ ಇಬ್ಬರು ಹೆಣ್ಣುಮಕ್ಕಳ ಶವ ಪತ್ತೆ, ತಂದೆ ನಿಗೂಢ ನಾಪತ್ತೆ
Vijayapura News: ಇಬ್ಬರು ಹೆಣ್ಣುಮಕ್ಕಳು ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ತಂದೆ ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಬಳಬಟ್ಟಿ ಗ್ರಾಮದಲ್ಲಿ ನಡೆದಿದೆ. ವರಮಹಾಲಕ್ಷ್ಮಿ ಹಬ್ಬದಂದೇ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಸದ್ಯ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.

ವಿಜಯಪುರ, ಆಗಸ್ಟ್ 22: ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಲಕ್ಷ್ಮಿ ಪೂಜೆಗೆಂದು ಇಬ್ಬರು ಮಕ್ಕಳೊಂದಿಗೆ ತಾಯಿ ಸಂಬಂಧಿಕರ ಮನೆಗೆ ಹೋಗಿದ್ದರು. ಪೂಜೆ ಮುಗಿಸಿ ಮನೆಗೆ ಬಂದು ನೋಡಿದರೆ ದೊಡ್ಡ ಆಘಾತವೇ ಎದುರಾಗಿದೆ. ಮನೆಯಲ್ಲಿದ್ದ ಇನ್ನೂ ಇಬ್ಬರು ಹೆಣ್ಣುಮಕ್ಕಳ ಶವ (death) ಬಾವಿಯಲ್ಲಿ ಪತ್ತೆ ಆಗಿದೆ. ಅಷ್ಟೇ ಅಲ್ಲದೆ ಮಕ್ಕಳೊಂದಿಗೆ ಮನೆಯಲ್ಲಿದ್ದ ತಂದೆ ಇದೀಗ ನಾಪತ್ತೆ ಆಗಿದ್ದಾರೆ. ವಿಜಯಪುರ (vijayapura) ಜಿಲ್ಲೆಯ ನಿಡಗುಂದಿ ತಾಲೂಕಿನ ಬಳಬಟ್ಟಿ ಗ್ರಾಮದ ತೋಟದಲ್ಲಿ ಘಟನೆ ನಡೆದಿದೆ.
ನಡೆದಿದ್ದೇನು?
15 ವರ್ಷದ ಸಾಕ್ಷಿ ಬರಗಿ, 10 ವರ್ಷದ ರಕ್ಷಿತಾ ಬರಗಿ ಮೃತರು. ತಂದೆ ಸಾಬಣ್ಣ ಬರಗಿ ನಾಪತ್ತೆ ಆಗಿದ್ದಾರೆ. ಸಾಬಣ್ಣ ಮತ್ತು ಲಕ್ಷ್ಮೀಬಾಯಿ ದಂಪತಿಗೆ ಒಟ್ಟು ಐವರು ಮಕ್ಕಳಿದ್ದು, ನಾಲ್ವರು ಹೆಣ್ಣು ಹಾಗೂ ಓರ್ವ ಮಗನಿದ್ದಾನೆ. ವರ ಮಹಾಲಕ್ಷ್ಮಿ ಹಬ್ಬ ಹಿನ್ನೆಲೆ ಸಂಬಂಧಿಕರ ಮನೆಗೆ ಪೂಜೆಗೆಂದು ಲಕ್ಷ್ಮೀಬಾಯಿ ಇಬ್ಬರು ಹೆಣ್ಣುಮಕ್ಕಳೊಂದಿಗೆ ಹೋಗಿದ್ದರು. ಈ ವೇಳೆ ಸಾಕ್ಷಿ, ರಕ್ಷಿತಾ ಹಾಗೂ ಪತಿ ಸಾಬಣ್ಣ ಮನೆಯಲ್ಲಿದ್ದರು.
ಇದನ್ನೂ ಓದಿ: ರಾತ್ರಿ ಮಲಗಿದ್ದಾಗ ಗಂಡ, ಮಗುವಿನ ಕೊಲೆ: ಪತ್ನಿ ಸೇರಿದಂತೆ ಪ್ರಿಯಕರ ಅರೆಸ್ಟ್
ಸಂಜೆ ತಾಯಿ ಮನೆಗೆ ಬಂದಾಗ ಗಂಡನೂ ಇಲ್ಲ, ಇಬ್ಬರು ಮಕ್ಕಳು ಇರಲಿಲ್ಲ. ಹೀಗಾಗಿ ಗಾಬರಿಗೊಂಡ ಲಕ್ಷ್ಮೀಬಾಯಿ ತೋಟದಲ್ಲಿ, ಗ್ರಾಮದಲ್ಲಿ ಹಾಗೂ ಸಂಬಂಧಿಕರ ಬಳಿ ವಿಚಾರಿಸಿದ್ದಾರೆ. ಆದರೂ ಎಲ್ಲಿಯು ಪತ್ತೆ ಆಗಿಲ್ಲ. ಸಂಜೆ ವೇಳೆ ಬಾವಿ ಬಳಿ ಹೋಗಿ ನೋಡಿದಾಗ ಸಾಬಣ್ಣನ ಬಟ್ಟೆಗಳು ಕಂಡಿವೆ. ಅನುಮಾನ ಬಂದು ಬಾವಿಯಲ್ಲಿ ಹುಡುಕಿದಾಗ ಇಬ್ಬರು ಹೆಣ್ಣುಮಕ್ಕಳ ಮೃತದೇಹ ಪತ್ತೆ ಆಗಿದ್ದು, ತಾಯಿಯ ಆಕ್ರಂದನ ಮುಗಿಲು ಮುಟ್ಟಿತ್ತು.
ಸಾಬಣ್ಣನಿಗಾಗಿ ಹುಡುಕಾಟ
ಇನ್ನು ನಾಪತ್ತೆ ಆಗಿರುವ ಸಾಬಣ್ಣನಿಗಾಗಿ ಹುಡುಕಾಟ ನಡೆದಿದೆ. ನಿನ್ನೆ ಸಂಜೆಯಿಂದಲೇ ಪೊಲೀಸರು ಹಾಗೂ ಗ್ರಾಮಸ್ಥರು ಬಾವಿಯಲ್ಲಿನ ನೀರು ಖಾಲಿ ಮಾಡಿ ಸಾಬಣ್ಣನನ್ನು ಹುಡುಕಿದ್ದಾರೆ. ಆದರೆ ಈವರೆಗೂ ಆತ ಪತ್ತೆಯಾಗಿಲ್ಲ. ಮಕ್ಕಳು ಹೇಗೆ ಸಾವನಪ್ಪಿದರು ಎನ್ನುವುದು ಕೂಡ ಅನುಮಾನ ಮೂಡುತ್ತಿದೆ. ಸಾಬಣ್ಣನೇ ಕೊಂದನಾ ಅಥವಾ ಮಕ್ಕಳೇ ಆತ್ಮಹತ್ಯೆ ಮಾಡಿಕೊಂಡರಾ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಸಾಬಣ್ಣ ಪತ್ತೆ ಬಳಿಕವೇ ಘಟನೆಗೆ ನಿಜವಾದ ಕಾರಣ ಏನು ಎನ್ನುವುದು ತಿಳಿಯಲಿದೆ.
ಮಕ್ಕಳ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ ತಾಯಿ
ಸದ್ಯ ಮೃತಪಟ್ಟಿರುವ ಮಕ್ಕಳ ತಾಯಿ ಲಕ್ಷ್ಮೀಬಾಯಿ ಇಬ್ಬರು ಹೆಣ್ಣು ಮಕ್ಕಳ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದು, ದೂರು ನೀಡಿದ್ದಾರೆ. ಸದ್ಯ ಪೊಲೀಸರು ತನಿಖೆ ನಡೆಸಿದ್ದಾರೆ. ಕಾನೂನು ಪ್ರಕಾರ ನಿಡಗುಂದಿ ಸಮುದಾಯ ಕೇಂದ್ರದಲ್ಲಿ ಇಬ್ಬರು ಅಪ್ರಾಪ್ತ ಬಾಲಕಿಯರ ಶವಗಳ ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ನಂತರ ಶವಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಬಳಬಟ್ಟಿಯಲ್ಲಿ ಅಗ್ನಿಸ್ಪರ್ಶ ಮಾಡುವ ಮೂಲಕ ಸಹೋದರಿಯರ ಅಂತ್ಯಕ್ರಿಯೆ ಮಾಡಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:50 pm, Sat, 22 August 26




