Explainer; ಕಾವೇರಿ ವಿವಾದದ ಕಿಡಿ ಹೊತ್ತಿಕೊಂಡಿದ್ದು ಯಾವಾಗ? ಇಲ್ಲಿದೆ ನದಿ ನೀರು ಹಂಚಿಕೆ ಕಲಹದ ಸುದೀರ್ಘ ಇತಿಹಾಸ

Cauvery river water dispute; ಹಿಂದೆ 1990ರಲ್ಲಿ ಒಮ್ಮೆ ಬರಗಾಲ ಎದರುರಾಗಿ ಸಮಸ್ಯೆ ಉಲ್ಬಣವಾಗಿತ್ತು. ತಮಿಳುನಾಡು ಕರ್ನಾಟಕದ ನಡುವೆ ಸಂಘರ್ಷ ತಾರಕಕ್ಕೇರಿತ್ತು. ತದನಂತರ 2002ರಲ್ಲಿ ಮತ್ತೆ ಭೀಕರ ಬರಗಾಲ ಬಂದು ಮತ್ತೆ ಹೋರಾಟಗಳು ನಡೆದವು. ಎಲ್ಲಾ ಸಂದರ್ಭದಲ್ಲೂ ಕರ್ನಾಟಕದ ಹಿತಾಸಕ್ತಿಯನ್ನು ಮರೆತು ತಮಿಳುನಾಡಿಗೆ ನೀರು ಹರಿಸಲಾಗಿದೆ. ಕರ್ನಾಟಕ, ತಮಿಳುನಾಡು ನಡುವಣ ಕಾವೇರಿ ವಿವಾದದ ಸುದೀರ್ಘ ಇತಿಹಾಸದ ಇಣುಕುನೋಟ ಇಲ್ಲಿದೆ.

Explainer; ಕಾವೇರಿ ವಿವಾದದ ಕಿಡಿ ಹೊತ್ತಿಕೊಂಡಿದ್ದು ಯಾವಾಗ? ಇಲ್ಲಿದೆ ನದಿ ನೀರು ಹಂಚಿಕೆ ಕಲಹದ ಸುದೀರ್ಘ ಇತಿಹಾಸ
ಕೆಆರ್​ಎಸ್​ ಡ್ಯಾಂ (ಸಂಗ್ರಹ ಚಿತ್ರ)
Follow us
| Updated By: ಗಣಪತಿ ಶರ್ಮ

Updated on:Sep 20, 2023 | 2:53 PM

ಕಾವೇರಿ (Cauvery) ಕನ್ನಡ ನಾಡಿನ ಜೀವನದಿ. ಕೋಟ್ಯಾಂತರ ಜನರ ಪಾಲಿನ ಕಾಮಧೇನು. ಎಲ್ಲರ ಪಾಲಿನ ಜೀವ ಜಲ. ಕರ್ನಾಟಕದ ಕಾಶ್ಮೀರ ಕೊಡಗು (Kodagu) ಜಿಲ್ಲೆಯ ಭಾಗಮಂಡಲದ ತಲಕಾವೇರಿ ಜೀವನದಿಯ ಉಗಮ ಸ್ಥಾನ. ಅಲ್ಲಿ ಹುಟ್ಟಿ ದೂರದ ಬಂಗಾಳ ಕೊಲ್ಲಿ ಸಮುದ್ರ ಸೇರುವವರೆಗೂ ಸಕಲ ಜೀವರಾಶಿಗಳ ಪಾಲಿಗೆ ಕಾವೇರಿ ಜೀವದಾತೆ. ಕಾವೇರಿಗೆ ನದಿಗಳಲ್ಲೂ (Cauvery River) ತಾಯಿ ಸ್ಥಾನ ನೀಡಲಾಗಿದೆ. ಕಾರಣ ಕಾವೇರಿಗೆ ಅನೇಕ ಉಪನದಿಗಳು ಸೇರುತ್ತವೆ. ಅದರಲ್ಲಿ ಪ್ರಮುಖವಾದವು ಕಬಿನಿ, ಹಾರಂಗಿ, ಸುವರ್ಣವತಿ, ಹೇಮಾವತಿ, ಲಕ್ಷ್ಮಣತೀರ್ಥ ಅರ್ಕಾವತಿ. ಇನ್ನು ಕಾವೇರಿ ಕೇವಲ ಕರ್ನಾಟಕದ ಪಾಲಿನ ಜೀವನದಿಯಲ್ಲ. ಪಕ್ಕದ ರಾಜ್ಯಗಳಾದ ತಮಿಳುನಾಡು, ಕೇರಳ ರಾಜ್ಯಗಳಿಗೂ ಕಾವೇರಿಯೇ ಜೀವಧಾತೆ. ಇದೇ ಕಾರಣಕ್ಕೆ ಈಕೆಯನ್ನು ಕಾವೇರಿ ಮಾತೆ ಅಂತಾ ಪೂಜಿಸುತ್ತಾರೆ.

ಹುಟ್ಟಿದ ಮನೆ, ಸಾಗಿದ ಮನೆ ಹಾಗೂ ಸೇರಿದ ಮನೆಗೆ ಬೆಳಕಾದ ಕಾವೇರಿ…

ಕಾವೇರಿ ಹುಟ್ಟಿದ ಮನೆ ಅಂದರೆ ಕರ್ನಾಟಕ. ಸಾಗುವ ಮನೆ ಕೇರಳ. ಸೇರುವ ಮನೆ ತಮಿಳುನಾಡು. ಈ ರಾಜ್ಯಗಳ ಸಕಲ ಜೀವರಾಶಿಗಳಿಗೂ ನೀರುಣಿಸಿ ಬಾಳು ಬೆಳಕಾಗಿಸಿದ್ದಾಳೆ. ಕಾವೇರಿ ನದಿ ಸರಿ ಸುಮಾರು 800 ಕಿಲೋ ಮೀಟರ್ ಹರಿಯುತ್ತಾಳೆ. ಇದರಲ್ಲಿ ಕರ್ನಾಟಕದಲ್ಲಿ ಸುಮಾರು 325 ಕಿಲೋ ಮೀಟರ್ ಹಾಗೂ ತಮಿಳುನಾಡಿನಲ್ಲಿ 415 ಕಿಲೋ ಮೀಟರ್ ಹರಿದರೆ ಗಡಿ ಭಾಗದಲ್ಲಿ 63 ಕಿಲೋ ಮೀಟರ್ ಹರಿಯುತ್ತಾಳೆ.

ಸ್ವಾತಂತ್ರ್ಯಪೂರ್ವದಲ್ಲಿ ಕಾವೇರಿ ವಿವಾದ

ಕಾವೇರಿ ನೀರು ಹಂಚಿಕೆ ವಿವಾದ ಇಂದು ನೆನ್ನೆಯದಲ್ಲ ಇದು ಬ್ರಿಟಿಷರ ಕಾಲದಲ್ಲಿ ಆರಂಭವಾಗಿದ್ದು. ಸ್ವಾತಂತ್ರ್ಯಪೂರ್ವದಲ್ಲಿ ಮದ್ರಾಸ್ ಹಾಗೂ ಮೈಸೂರು ರಾಜ್ಯ ನಡುವೆ ಇದ್ದ ವಿವಾದ ಇಂದು‌ ಕರ್ನಾಟಕ ತಮಿಳುನಾಡು ರಾಜ್ಯಗಳ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ. 1892ರಲ್ಲಿ ಮೊದಲ ಬಾರಿಗೆ ಈ ವಿವಾದದ ಕಿಡಿ ಹೊತ್ತಿಕೊಂಡಿತು ಅಂದರೂ ತಪ್ಪಾಗಲಾರದು. ಕಾವೇರಿ ನದಿ ಅಂದಿನ ಮೈಸೂರು ರಾಜ್ಯ ಹಾಗೂ ಮದ್ರಾಸ್ ರಾಜ್ಯದ ನಡುವೆ ಹರಿಯುತಿತ್ತು. ಇದೇ ಕಾರಣಕ್ಕೆ ಕಾವೇರಿ ನದಿ ಭಾಗದಲ್ಲಿ ಯಾವುದೇ ಜಲಾಶಯ ನಿರ್ಮಾಣ ಅಥವಾ ಬೇರೆ ಏನೇ ಮಾಡುವುದಿದ್ದರೂ ಅದರ ಸಂಪೂರ್ಣ ಮಾಹಿತಿಯನ್ನು ಮದ್ರಾಸ್ ಸರ್ಕಾರಕ್ಕೆ ನೀಡಬೇಕು ಹಾಗೂ ಮದ್ರಾಸ್ ಸರ್ಕಾರದ ಅನುಮತಿ ಪಡೆಯಬೇಕೆಂಬ ಒಪ್ಪಂದ ಮಾಡಿಕೊಳ್ಳಲಾಯಿತು. ಇನ್ನು ಆಗ ಮದ್ರಾಸ್ ನೇರವಾಗಿ ಬ್ರಿಟಿಷ್ ಆಳ್ವಿಕೆಯಲ್ಲಿತ್ತು. ಮೈಸೂರು ರಾಜ್ಯ ಬ್ರಿಟಿಷ್ ಸರ್ಕಾರದ ಅಧೀನದಲ್ಲಿತ್ತು. ಹೀಗಾಗಿ ಮೈಸೂರು ರಾಜ್ಯ ಒಪ್ಪಂದ ವಿರೋಧಿಸುವ ಸ್ಥಿತಿಯಲ್ಲಿ ಇರಲಿಲ್ಲ.

1910 ರಲ್ಲಿ ಮೊದಲ ಬಾರಿಗೆ ಶುರುವಾದ ವಿವಾದ

1910ರಲ್ಲಿ ಮೈಸೂರು ರಾಜ್ಯದ ಸರ್ಕಾರವು ಕಾವೇರಿ ನದಿಗೆ ಅಡ್ಡಲಾಗಿ ಕನ್ನಂಬಾಡಿ ಕಟ್ಟೆ ಕಟ್ಟುವ ಯೋಜನೆ ರೂಪಿಸಿತು‌. 1892ರ ಒಪ್ಪಂದಕ್ಕೆ ಬದ್ದವಾಗಿ ಮದ್ರಾಸ್ ಸರ್ಕಾರಕ್ಕೆ ಇದರ ಸಂಪೂರ್ಣ ಮಾಹಿತಿ ನೀಡಿ ಅದರ ಒಪ್ಪಿಗೆ ಕೋರಿತು. ಆದರೆ ಮದ್ರಾಸ್ ಸರ್ಕಾರ ಈ ಯೋಜನೆಗೆ ಅನುಮತಿ ನೀಡಲಿಲ್ಲ. ಪಟ್ಟು ಬಿಡದ ಮೈಸೂರು ರಾಜ್ಯ ಸರ್ಕಾರ ಅಣೆಕಟ್ಟಿನ ಅವಶ್ಯಕತೆ ಏನು? ಯಾವ ಕಾರಣಕ್ಕೆ ಇದನ್ನು ಮಾಡಲಾಗುತ್ತಿದೆ ಎಂಬುದನ್ನು ಮನವರಿಕೆ ಮಾಡಿಕೊಟ್ಟಿತು. ಆದರೂ ಮದ್ರಾಸ್ ಸರ್ಕಾರ ಒಪ್ಪದ ಹಿನ್ನೆಲೆ ಒಬ್ಬ ನ್ಯಾಯಾಧೀಶರ ಮಧ್ಯಸ್ಥಿಕೆಯಲ್ಲಿ ಮತ್ತೊಂದು ಒಪ್ಪಂದದ ಕರಾರಿನ ಮೇಲೆ ಮದ್ರಾಸ್ ಸರ್ಕಾರ ಅಣೆಕಟ್ಟು ನಿರ್ಮಾಣಕ್ಕೆ ಷರತ್ತುಬದ್ದ ಒಪ್ಪಿಗೆ ನೀಡಿತು. ಮದ್ರಾಸ್ ಸರ್ಕಾರದ ಪ್ರಮುಖ ಷರತ್ತು ಅಣೆಕಟ್ಟಿನಿಂದ ತಮಿಳುನಾಡಿಗೆ ನೀರು ಬಿಡುವ ವಿಚಾರವಾಗಿತ್ತು. ಮದ್ರಾಸ್ ನೇರ ಬ್ರಿಟಿಷ್ ಆಡಳಿತಕ್ಕೆ ಒಳಪಟ್ಟಿದ್ದ ಕಾರಣ ತಮಿಳುನಾಡಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಒಪ್ಪಂದ ಏರ್ಪಟ್ಟಿತು.

ಸ್ವಾತಂತ್ರ್ಯ ನಂತರ ವಿವಾದ

ದೇಶಕ್ಕೆ ಸ್ವಾತಂತ್ರ್ಯ ದೊರೆಯುವ ತನಕ ಕಾವೇರಿ ವಿವಾದ ಅಷ್ಟಾಗಿ ತಲೆದೋರಲಿಲ್ಲ. ಇದಕ್ಕೆ ಪ್ರಕೃತಿಯ ಸಹಕಾರ ಸಹಾ ಇತ್ತು. ಆದರೆ ಸ್ವಾತಂತ್ರ್ಯ ಬಂದು ರಾಜ್ಯಗಳ ಪುನರ್ವಿಂಗಡಣೆಯಾದ ನಂತರ ಈ ಒಪ್ಪಂದ‌ ಕಾಲಕ್ಕೆ ತಕ್ಕಂತೆ ಮಾರ್ಪಾಡಾಗಬೇಕಿತ್ತು. ಆದರೆ ಅದು ಆಗಲಿಲ್ಲ. ಬದಲಿಗೆ 1972ರಲ್ಲಿ ಕೇಂದ್ರ ಸರ್ಕಾರ ಕಾವೇರಿ ಸತ್ಯಶೋಧನಾ ಸಮತಿಯನ್ನು ರಚನೆ ಮಾಡಿ ಕಾವೇರಿ ನದಿ ನೀರು ಹಂಚಿಕೆಯ ಸಂಪೂರ್ಣ ವರದಿ ನೀಡುವಂತೆ ಸೂಚಿಸಿತು. ಸಮಿತಿಯು ವರದಿ ನೀಡಿದಾಗ ತಮಿಳುನಾಡು ಸ್ವಾತಂತ್ರ್ಯಪೂರ್ವದ ಒಪ್ಪಂದವನ್ನು ಪಾಲಿಸದೇ ಇರುವುದು ಬಹಿರಂಗವಾಗಿತ್ತು. ಆದರೂ ತಮಿಳುನಾಡು ಕರ್ನಾಟಕದ ವಿರುದ್ದ ಕ್ಯಾತೆ ತೆಗೆಯುವುದನ್ನು ನಿಲ್ಲಿಸಲಿಲ್ಲ. ಕರ್ನಾಟಕ ಸರ್ಕಾರದ ಯೋಜನೆಗಳಿಂದ ತಮಿಳುನಾಡಿನ ರೈತರಿಗೆ ಅನ್ಯಾಯವಾಗುತ್ತಿದೆ ಅಂತಾ ನ್ಯಾಯಾಲಯದ ಮೊರೆ ಹೋದರು. ತಮಿಳುನಾಡಿನ ರೈತರ ಮನವಿ ಪುರಸ್ಕರಿಸಿದ ಸುಪ್ರೀಂಕೋರ್ಟ್ 1990ರಲ್ಲಿ ಕರ್ನಾಟಕ ತಮಿಳುನಾಡು ನೀರು ಹಂಚಿಕೆ ವಿವಾದವನ್ನು ಬಗೆಹರಿಸಲು ನ್ಯಾಯ ಮಂಡಳಿ ರಚಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿತು.

ಇದನ್ನೂ ಓದಿ: ಕಾವೇರಿ ನೀರು ಸಂಕಷ್ಟ: ದೆಹಲಿ ಸಭೆಯಲ್ಲಿ ಮಹತ್ವದ ತೀರ್ಮಾನ, ಸಿದ್ದರಾಮಯ್ಯ-ಡಿಕೆ ಶಿವಕುಮಾರ್ ಹೇಳಿದ್ದಿಷ್ಟು

ನ್ಯಾಯಮಂಡಳಿ ರಚನೆ ನಂತರದ ಬೆಳವಣಿಗೆ

ಸುಪ್ರೀಂಕೋರ್ಟ್ ಸೂಚನೆಯ ಅನ್ವಯ ನ್ಯಾಯಮಂಡಳಿಯನ್ನು ರಚಿಸಲಾಯಿತು. ತಕ್ಷಣ ಕಾರ್ಯ ಆರಂಭಿಸಿದ ನ್ಯಾಯಮಂಡಳಿಯ‌ ಮುಂದೆ ಕರ್ನಾಟಕ, ತಮಿಳುನಾಡು‌ ಹಾಗೂ ಕೇರಳ ರಾಜ್ಯಗಳು ತಮ್ಮ ರಾಜ್ಯಕ್ಕೆ ಅವಶ್ಯಕತೆಯಿರುವ ನೀರಿಗೆ ಬೇಡಿಕೆ ಸಲ್ಲಿಸಿದವು. ಅದರಂತೆ ಕರ್ನಾಟಕ 465 ಟಿಎಂಸಿ ಕೇರಳ 99.8 ಪಾಂಡಿಚೆರಿ 9.03 ಟಿಎಂಸಿ ನೀರಿಗೆ ಬೇಡಿಕೆಯಿಟ್ಟವು. ಇನ್ನು ತಮಿಳುನಾಡು ಪಾಂಡಿಚೆರಿಯ ಪಾಲು ಸೇರಿ ತನಗೆ 566 ಟಿಎಂಸಿ‌ ನೀರು ಬೇಕೆಂದು ಬೇಡಿಕೆ ಸಲ್ಲಿಸಿತು. ಈ ವೇಳೆ ಕಳೆದ 10 ವರ್ಷಗಳ ಮಾಹಿತಿಯನ್ನು ಆಧಾರಿಸಿ ತಮಿಳುನಾಡಿಗೆ ಪ್ರತಿ ವರ್ಷ 205 ಟಿಎಂಸಿ ನೀರು ಬಿಡಬೇಕೆಂದು ಸೂಚಿಸಿತು. ಇದರ ಜೊತೆಗೆ ಕರ್ನಾಟಕ ಸದ್ಯ ಇರುವ ಕೃಷಿ ಪ್ರದೇಶದ ಪ್ರಮಾಣವನ್ನು ಹೆಚ್ಚಿಸಿಕೊಳ್ಳಬಾರದು ಎಂದು ಆದೇಶ ನೀಡಿತು. ಆದರೆ ಕರ್ನಾಟಕ ಇದನ್ನು ಒಪ್ಪಲಿಲ್ಲ. ಆಗ ತಮಿಳುನಾಡು ರಾಷ್ಟ್ರಪತಿಗಳ ಮೊರೆ ಹೋಗಿ, ಸುಪ್ರೀಂಕೋರ್ಟ್ ಕದ ತಟ್ಟಿ ನ್ಯಾಯಮಂಡಳಿ ಆದೇಶವನ್ನು ಕರ್ನಾಟಕ ಒಪ್ಪಿಕೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾಯಿತು.

ಬರಗಾಲ ಬಂದಾಗ ಸಮಸ್ಯೆ ಉಲ್ಬಣ

ಕಾವೇರಿ ನದಿ ನೀರು ವಿವಾದ ಉಲ್ಬಣವಾಗುವುದು ಮಳೆಯ ಪ್ರಮಾಣ ಕುಸಿದ ಬರಗಾಲ ಎದುರಾದಾಗ. ಮಳೆ ಪ್ರಮಾಣ ಹೆಚ್ಚಾದರೆ ಅಗತ್ಯಕ್ಕಿಂತ ಹೆಚ್ಚು ನೀರು ತಮಿಳುನಾಡಿಗೆ ಹರಿದು ಹೋಗುತ್ತದೆ. ತಮಿಳುನಾಡು ಸಹಾ ಹೆಚ್ಚಿನ ನೀರನ್ನು ಬಳಸಿಕೊಳ್ಳಲಾಗದೆ ಮೆಟ್ಟೂರು ಜಲಾಶಯದಿಂದ ಸಮುದ್ರಕ್ಕೆ ಬಿಟ್ಟು ಬಿಡುತ್ತದೆ. ಹಿಂದೆ 1990ರಲ್ಲಿ ಒಮ್ಮೆ ಬರಗಾಲ ಎದರುರಾಗಿ ಸಮಸ್ಯೆ ಉಲ್ಬಣವಾಗಿತ್ತು. ತಮಿಳುನಾಡು ಕರ್ನಾಟಕದ ನಡುವೆ ಸಂಘರ್ಷ ತಾರಕಕ್ಕೇರಿತ್ತು. ತದನಂತರ 2002ರಲ್ಲಿ ಮತ್ತೆ ಭೀಕರ ಬರಗಾಲ ಬಂದು ಮತ್ತೆ ಹೋರಾಟಗಳು ನಡೆದವು. ಅದರೆ ಏನು ಪ್ರಯೋಜನವಾಗದೆ ಎಲ್ಲಾ ಸಂದರ್ಭದಲ್ಲೂ ಕರ್ನಾಟಕದ ಹಿತಾಸಕ್ತಿಯನ್ನು ಮರೆತು ತಮಿಳುನಾಡಿಗೆ ನೀರು ಹರಿಸಲಾಗಿದೆ.

2007ರಲ್ಲಿ ನೀರು ಹಂಚಿಕೆ ಸೂತ್ರ

2007ರಲ್ಲಿ ಕಾವೇರಿ ನ್ಯಾಯಮಂಡಳಿ ರಾಜ್ಯಗಳಿಗೆ ನೀರು ಹಂಚಿಕೆ ಮಾಡಿ ತನ್ನ ತೀರ್ಪು ನೀಡಿತು. ಅದರ ಅನ್ವಯ ತಮಿಳುನಾಡಿಗೆ 419 ಟಿಎಂಸಿ ಕರ್ನಾಟಕಕ್ಕೆ 270 ಟಿಎಂಸಿ ಕೇರಳ ರಾಜ್ಯಕ್ಕೆ 30 ಟಿಎಂಸಿ ಪಾಂಡಿಚೆರಿಗೆ 7 ಟಿಎಂಸಿ ನೀರು ನೀಡಬೇಕೆಂದು ಆದೇಶ ನೀಡಿತು. ಈ ತೀರ್ಪನ್ನು ತಮಿಳುನಾಡು ಸ್ವಾಗತಿಸಿದರೆ ಕರ್ನಾಟಕ ವಿರೋಧಿಸಿ ಮೇಲ್ಮನವಿ ಸಲ್ಲಿಸಿತು. ಆದರೆ ಇದುವರೆಗೂ ಇದರಿಂದ ಕರ್ನಾಟಕಕ್ಕೆ ಯಾವುದೇ ಪ್ರಯೋಜನವಾಗಿಲ್ಲ.

ಇದನ್ನೂ ಓದಿ: ಕಾವೇರಿ ಹೋರಾಟಕ್ಕೆ ಬೆಂಬಲ ನೀಡದ ಚಿತ್ರ ನಟರ ವಿರುದ್ಧ ಸಿಡಿದೆದ್ದ ಮಂಡ್ಯ ರೈತರು: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ ಪೋಸ್ಟ್

ಪ್ರಾದೇಶಿಕ ಪಕ್ಷದ ಪ್ರಭಾವ – ಕೇಂದ್ರದ ಮಲತಾಯಿ ಧೋರಣೆ

ಕಾವೇರಿ ಜಲ ವಿವಾದದಲ್ಲಿ ಮೊದಲಿನಿಂದಲೂ ಅನ್ಯಾಯವಾಗುತ್ತಲೆ ಬಂದಿದೆ. ಇದಕ್ಕೆ ಪ್ರಮುಖ ಕಾರಣ ರಾಜಕಾರಣ‌. ಹೌದು ತಮಿಳುನಾಡಿನಲ್ಲಿ ಸ್ವಾತಂತ್ರ್ಯ ಬಂದ ದಿನದಿಂದಲೂ ಪ್ರಾದೇಶಿಕ ಪಕ್ಷದ್ದೇ ಪಾರುಪತ್ಯ. ತಮಿಳುನಾಡಿನ ಪ್ರಾದೇಶಿಕ ಪಕ್ಷಗಳು ಸದಾ ಕಾಲ ಕೇಂದ್ರದ ಮೇಲೆ‌ ತಮ್ಮ ಹಿಡಿತವನ್ನು ಸಾಧಿಸಿದ್ದವು. ಕೇಂದ್ರ ಸರ್ಕಾರಕ್ಕೂ ಹಲವು ಸಂದರ್ಭಗಳಲ್ಲಿ ತಮಿಳುನಾಡಿನ ಪ್ರಾದೇಶಿಕ ಪಕ್ಷಗಳ ಅವಶ್ಯಕತೆ ಹೆಚ್ಚಾಗಿ ಇರುತಿತ್ತು. ಈ ಹಿನ್ನೆಲೆಯಲ್ಲಿ ಅವುಗಳನ್ನು ಓಲೈಸಿಕೊಳ್ಳಲು ಸದಾ ಕಾಲ ಅವರ ಪರವಾಗಿಯೂ ವಾಲುತ್ತಿದ್ದವು. ತಮಿಳುನಾಡಿನ ತಾಳಕ್ಕೆ ತಕ್ಕಂತೆ ಕುಣಿದ ಉದಾಹರಣೆಗಳೇ ಹೆಚ್ಚು. ಮತ್ತೊಂದು ಕಡೆ ರಾಜ್ಯದಲ್ಲಿ ಯಾವಾಗಲೂ ಕೇಂದ್ರವನ್ನು ಗಟ್ಟಿಯಾಗಿ ಎದುರಿಸುವ ಸರ್ಕಾರ ಬರಲೇ ಇಲ್ಲ ಎಂದು ಹೇಳಬಹುದು. ಇದೇ ಕಾರಣಕ್ಕೆ ಕರ್ನಾಟಕದ ಧ್ವನಿ ಕೇಂದ್ರಕ್ಕೆ ತಲುಪಲೇ ಇಲ್ಲ. ಇದು ಈಗಲೂ ಮುಂದುವರಿದಿರುವುದು ವಿಪರ್ಯಾಸವೇ ಸರಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:50 pm, Wed, 20 September 23

ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ
VIDEO: ಮೈದಾನದಲ್ಲೇ ಹೊಡೆದಾಡಿಕೊಂಡ ಬ್ಯಾಟರ್-ಬೌಲರ್..!
VIDEO: ಮೈದಾನದಲ್ಲೇ ಹೊಡೆದಾಡಿಕೊಂಡ ಬ್ಯಾಟರ್-ಬೌಲರ್..!