Chanakya Niti: ಚಾಣಕ್ಯರ ಪ್ರಕಾರ ಈ ತಪ್ಪುಗಳಿಂದ ಸುಂದರ ಸಂಬಂಧ ಹಾಳಾಗುತ್ತಂತೆ
ಆಚಾರ್ಯ ಚಾಣಕ್ಯರು ಜೀವನಕ್ಕೆ ಸಂಬಂಧಿಸಿದ ಹಲವಾರು ವಿಚಾರಗಳ ಬಗ್ಗೆ ತಮ್ಮ ನೀತಿ ಶಾಸ್ತ್ರದಲ್ಲಿ ತಿಳಿಸಿದ್ದಾರೆ. ನೀತಿ ಶಾಸ್ತ್ರದಲ್ಲಿ ರಾಜಕೀಯ, ಆರ್ಥಿಕ ಅಂಶಗಳ ಬಗ್ಗೆ ಮಾತ್ರವಲ್ಲದೆ ಮಾನವೀಯ ಮೌಲ್ಯಗಳು, ಜೀವನ ಪಾಠಗಳ ಬಗ್ಗೆಯೂ ಬೋಧನೆಗಳನ್ನು ನೀಡಿದ್ದಾರೆ. ಹೌದು ಜೀವನದಲ್ಲಿ ಯಶಸ್ವಿಯಾಗಲು ಏನು ಮಾಡಬೇಕು, ಸುಖ ದಾಂಪತ್ಯ ಜೀವನದ ಸೂತ್ರಗಳು, ನಮ್ಮ ನಿಜವಾದ ಶತ್ರು-ಮಿತ್ರ ಯಾರು ಹೀಗೆ ಹಲವಾರು ವಿಚಾರಗಳ ಬಗ್ಗೆ ಹೇಳಿದ್ದಾರೆ. ಅದೇ ರೀತಿ ನಾವು ಮಾಡುವ ಯಾವ ತಪ್ಪುಗಳು ದಾಂಪತ್ಯ, ಪ್ರೇಮ ಸಂಬಂಧ ಹಾಳಾಗಲು ಮುಖ್ಯ ಕಾರಣ ಎಂಬುದನ್ನು ಸಹ ತಿಳಿಸಿಕೊಟ್ಟಿದ್ದಾರೆ.

ದಾಂಪತ್ಯ, ಪ್ರೇಮ ಯಾವುದೇ ಸಂಬಂಧವಾಗಿರಲಿ (Relationship) ತುಂಬಾನೇ ಸುಂದರವಾಗಿರುತ್ತದೆ. ಈ ಸಂಬಂಧ ಎನ್ನುವಂತಹದ್ದು, ಪರಸ್ಪರ ಪ್ರೀತಿ, ಸ್ನೇಹ, ನಂಬಿಕೆ ವಿಶ್ವಾಸದ ಮೇಲೆ ನಿಂತಿದೆ. ಆದರೆ ಸಂಗಾತಿಗಳಿಬ್ಬರು ಎಷ್ಟೇ ಚೆನ್ನಾಗಿದ್ದರೂ ಕೆಲವೊಂದು ಬಾರಿ ಸಂಬಂಧ ಎನ್ನುವಂತಹದ್ದು ಮುರಿದು ಬೀಳುತ್ತದೆ. ಅದರಲ್ಲೂ ಈಗಿನ ಕಾಲದಲ್ಲಂತೂ ಬ್ರೇಕಪ್, ಡಿವೋರ್ಸ್ ಕುರಿತ ಸುದ್ದಿಗಳು ತುಸು ಹೆಚ್ಚೇ ಹೇಳಿ ಬರುತ್ತಿದೆ. ಹೀಗೆ ಸುಂದರ ಸಂಬಂಧ ಹಾಳಾಗಲು ಮುಖ್ಯ ಕಾರಣವೇ ನಾವು ಮಾಡುವ ಈ ಒಂದಿಷ್ಟು ತಪ್ಪುಗಳಂತೆ. ಈ ಬಗ್ಗೆ ಚಾಣಕ್ಯರು ತಮ್ಮ ನೀತಿ ಶಾಸ್ತ್ರದಲ್ಲಿ (Chanakya Niti) ತಿಳಿಸಿದ್ದಾರೆ. ಹಾಗಿದ್ದರೆ ಚಾಣಕ್ಯರ ಪ್ರಕಾರ ಯಾವ ತಪ್ಪುಗಳಿಂದ ಸುಂದರ ಸಂಬಂಧ ಹಾಳಾಗುತ್ತದೆ ಎಂಬುದನ್ನು ನೋಡೋಣ ಬನ್ನಿ.
ಈ ತಪ್ಪುಗಳೇ ಸಂಬಂಧ ಹಾಳಾಗಲು ಮುಖ್ಯ ಕಾರಣ:
ಎಲ್ಲದರಲ್ಲೂ ತಪ್ಪು ಹುಡುಕುವುದು:
ನೀವು ಯಾವಾಗಲೂ ನಿಮ್ಮ ಸಂಗಾತಿಯಲ್ಲಿ ತಪ್ಪುಗಳನ್ನೇ ಹುಡುಕುತ್ತಿದ್ದರೆ, ಅನುಮಾನಿಸುತ್ತಿದ್ದರೆ ಇದರಿಂದ ಸಂಬಂಧ ಎನ್ನುವಂತಹದ್ದು ದುರ್ಬಲಗೊಳ್ಳುತ್ತದೆ. ಚಾಣಕ್ಯರ ಪ್ರಕಾರ, ನಿಮ್ಮ ನಿರಂತರ ಟೀಕೆಯು ಪ್ರೀತಿಯ ಬದಲು ಅಂತರವನ್ನು ಸೃಷ್ಟಿಸುತ್ತದೆ. ಇದರಿಂದ ಕೊನೆಗೆ ಸಂಬಂಧವೇ ಮುರಿದು ಬೀಳುತ್ತದೆ. ಹಾಗಾಗಿ ತಪ್ಪುಗಳಿದ್ದರೆ, ಟೀಕಿಸುವ ಬದಲು ಪ್ರೀತಿಯಿಂದ ಅದನ್ನು ತಿದ್ದಿಕೊಳ್ಳಲು ಹೇಳಿ, ಇದರಿಂದ ಸಂಬಂಧವು ಸುಂದರವಾಗಿರುತ್ತದೆ.
ಕೋಪದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು:
ಕೋಪದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳಿಂದ ಸಂಬಂಧವೇ ಮುರಿದು ಬೀಳಬಹುದು. ಹೌದು ಕೆಲವರು ಕೋಪದಲ್ಲಿ ಏನೇನೋ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಈ ಕೋಪದ ಕಾರಣದಿಂದ ಸಂಬಂಧ ಮುರಿದು ಬಿದ್ದ ಅದೆಷ್ಟೋ ಉದಾಹರಣೆಗಳಿವೆ. ಕೋಪ ನಮ್ಮ ದೊಡ್ಡ ಶತ್ರು ಎಂದು ಚಾಣಕ್ಯ ಹೇಳಿದ್ದಾರೆ. ಕೋಪ ಕಮ್ಮಿ ಮಾಡಬೇಕು. ಅದರಲ್ಲಿಯೂ ನಿಮ್ಮ ಪ್ರೀತಿ ಪಾತ್ರರ ಮೇಲೆ ಕೋಪ ಮಾಡಿಕೊಳ್ಳಲೇಬಾರದು. ಸಂಬಂಧದಲ್ಲಿ ಏನಾದರೂ ತಪ್ಪಾದಾಗ, ಶಾಂತ ಮನಸ್ಸಿನಿಂದ ಯೋಚಿಸಿ. ಶಾಂತ ರೀತಿಯಲ್ಲಿ ಮಾತನಾಡಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ.
ಅತಿಯಾದ ನಿರೀಕ್ಷೆ:
ಅತಿಯಾದ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದು ಸಹ ಸಂಬಂಧ ಮುರಿದು ಬೀಳಲು ಒಂದು ಪ್ರಮುಖ ಕಾರಣವಂತೆ. ಸಂಬಂಧದಲ್ಲಿ ನಿರೀಕ್ಷೆಗಳನ್ನು ಇಟ್ಟುಕೊಳ್ಳುವೇ ಅತೀ ದೊಡ್ಡ ತಪ್ಪು. ಈ ನಿರೀಕ್ಷೆಗಳನ್ನು ಸಂಗಾತಿ ಪೂರೈಸದಿದ್ದಾಗ, ಅದು ನೋವುಂಟು ಮಾಡುತ್ತದೆ. ಇದರಿಂದ ಸಂಗಾತಿಗಳ ನಡುವೆ ಬಿರುಕು ಮೂಡಲು ಪ್ರಾರಂಭಿಸುತ್ತದೆ. ಹಾಗಾಗಿ ಯಾವುದೇ ನಿರೀಕ್ಷೆಗಳನ್ನು ಇಟ್ಟುಕೊಳ್ಳದೆ ನಿಷ್ಕಲ್ಮಶವಾಗಿ ಪ್ರೀತಿಸಿ.
ಇದನ್ನೂ ಓದಿ: ಚಾಣಕ್ಯ ಹೇಳ್ತಾರೆ ಹೆಂಡತಿಯಾದವಳು ಈ ವಿಷಯಗಳನ್ನು ಗಂಡನಿಂದ ಮುಚ್ಚಿಡುತ್ತಾಳಂತೆ
ಸುಳ್ಳು ಹೇಳುವುದು:
ಪ್ರೀತಿ ಎನ್ನುವಂತಹದ್ದು ನಿಂತಿರುವುದೇ ನಂಬಿಕೆ ಮತ್ತು ವಿಶ್ವಾಸದ ಮೇಲೆ. ಹೀಗಿರುವಾಗ ನೀವು ಸಂಗಾತಿಗೆ ಯಾವುದೇ ವಿಷಯದಲ್ಲಾದರೂ ಸುಳ್ಳು ಹೇಳಿದರೆ ಮುಂದೊಂದು ದಿನ ಈ ಸುಳ್ಳು ಸಂಬಂಧವನ್ನೇ ಹಾಳು ಮಾಡಿಬಿಡುತ್ತದೆ. ನೀವು ಪದೇ ಪದೇ ಸುಳ್ಳು ಹೇಳಿದರೆ, ಸಂಗಾತಿಗೆ ನಿಮ್ಮ ಮೇಲಿನ ನಂಬಿಕೆ ಹೊರಟು ಹೋಗುತ್ತದೆ. ಒಮ್ಮೆ ನಂಬಿಕೆ ಕಳೆದುಹೋದರೆ, ಅದನ್ನು ಪುನರ್ನಿರ್ಮಿಸಲು ಸಾಧ್ಯವಿಲ್ಲ. ಹಾಗಾಗಿ ಸಂಗಾತಿಯ ಬಳಿ ಯಾವುದೇ ಕಾರಣಕ್ಕೂ ಸುಳ್ಳು ಹೇಳಬಾರದು ಎನ್ನುತ್ತಾರೆ ಚಾಣಕ್ಯ.
ಮೂರನೇ ವ್ಯಕ್ತಿಯ ಮಾತನ್ನು ಕೇಳುವುದು
ಯಾರೋ ಮೂರನೇ ವ್ಯಕ್ತಿಯ ಮಾತಿಗೆ ಪ್ರಭಾವಿತರಾಗಿ ನಿಮ್ಮ ಸಂಗಾತಿಯನ್ನು ಅನುಮಾನಿಸುವುದು, ಪ್ರಶ್ನಿಸುವುದು ಇತ್ಯಾದಿಗಳನ್ನು ಮಾಡಿದರೆ, ಖಂಡಿತವಾಗಿಯೂ ಇದು ಸಂಬಂಧವನ್ನು ಹಾಳು ಮಾಡುತ್ತದೆ. ಮೂರನೇ ವ್ಯಕ್ತಿಯ ಮಾತನ್ನು ನಂಬಬೇಡಿ. ಯಾವಾಗಲೂ ಸಂಗಾತಿಯ ಮಾತನ್ನು ಕೇಳಬೇಕು ಎನ್ನುತ್ತಾರೆ ಚಾಣಕ್ಯ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








