AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gabriel Garcia Marquez Death Anniversary: ಪ್ರೀತಿ ಕೂಡ ಚುಕ್ಕಾಣಿಯಾಗದೇ ಹೋದರೆ ಏನು ಮಾಡಬೇಕು

Literature : ಅವಳ ಮೌನದ ಅವಸ್ಥಾಂತರಗಳಿಂದಲೇ ಅವಳು ಯೋಚಿಸುತ್ತಾಳೆ ಎಂದು ನಾನು ಊಹಿಸಿದೆ ಎಂದು ಬರೆಯಬಲ್ಲ ಲೇಖಕ ಮಾರ್ಕ್ವೆಝ್. ‘ಲಿವಿಂಗ್ ಟು ಟೆಲ್ ದಿ ಟೇಲ್’ ಅವನ ಮುಖ್ಯ ಪುಸ್ತಕ. ಅದನ್ನು ಬರೆಯದೇ ಹೋಗಿದ್ದರೂ ಮಾರ್ಕ್ವೆಝ್ ಬದುಕಿದ್ದೇ ಕತೆ ಹೇಳಲು ಅಂತ ನಾವೆಲ್ಲ ಸರ್ವಾನುಮತದಿಂದ ಒಪ್ಪಿಕೊಂಡು ಬಿಡುತ್ತಿದ್ದೆವು.

Gabriel Garcia Marquez Death Anniversary: ಪ್ರೀತಿ ಕೂಡ ಚುಕ್ಕಾಣಿಯಾಗದೇ ಹೋದರೆ ಏನು ಮಾಡಬೇಕು
ಶ್ರೀದೇವಿ ಕಳಸದ
|

Updated on:Apr 17, 2022 | 12:54 PM

Share

Gabriel Garcia Marquez Death Anniversary: ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಝ್ ನನ್ನೊಳಗೆ ಕಾಲಿಟ್ಟದ್ದು ಯಾವಾಗ ಅಂತ ಯೋಚಿಸುತ್ತೇನೆ. ನನ್ನ ಗುರುವಾಯನಕೆರೆ ಅವನ ಕತೆಗಳಲ್ಲಿ ತಡಮಾಡಿದ್ದಾದರೂ  ಹೇಗೆ? ನಾನಿಲ್ಲಿ ಗೇರುಹಣ್ಣು ಕೊಯ್ಯುತ್ತಾ ಬಿಸಿಲು-ನೆರಳಿನ ಮಾಂತ್ರಿಕತೆಯನ್ನು ಮೈಗೂಡಿಸಿಕೊಂಡು  ಮರುಳನಾಗುತ್ತಿರುವ ಹೊತ್ತಲ್ಲಿ, ಮಾರ್ಕ್ವೆಝ್ ಬರೆದ ಹಳೆಯ ಪುಟವೊಂದು ನನ್ನ ಕಣ್ಮುಂದೆ ತಳತಳಿಸುತ್ತ ಇಗೋ ಇಲ್ಲಿ ನಿನ್ನ ಕತೆಯನ್ನು ಮತ್ತ್ಯಾರೋ ಬರೆದುಬಿಟ್ಟಿದ್ದಾರೆ ನೋಡು ಎಂದು ಹೇಳುತ್ತಿದ್ದಂತೆ ಕನಸು. ಈ ಜಗತ್ತು ನಿಜವಲ್ಲ. ಇದು ಮಾಯೆ. ವಾಸ್ತವದ ಲೋಕ ಬೇರೇನೋ ಇದೆ. ಅಲ್ಲಿಂದ ಸಾಗಲಿಕ್ಕೆ ಅಂತಲೇ ನಾನಿಲ್ಲಿ ದುಡಿಯುತ್ತ, ಬೆವರುತ್ತ, ನೀರು ಸೇದುತ್ತಾ, ಉಳುತ್ತಾ, ಅಡುಗೆ ಮಾಡುತ್ತಾ ತನ್ಮಯನಾಗಲು ಯತ್ನಿಸುತ್ತಿದ್ದೇನೆ. ಒಂದು ಕ್ಷಣ, ಈ ದುಡಿಮೆ, ಈ ದುಃಖ, ಈ ಒತ್ತಡಗಳಿಂದ ಬಿಡುಗಡೆ ಸಿಕ್ಕರೆ ಸಾಕು. ನಿಜವಾದ ಜಗತ್ತು ನಮ್ಮನ್ನು ಒಳಗೆ ಎಳೆದುಕೊಂಡುಬಿಡುತ್ತದೆ. ಆ ಜಗತ್ತಿನಲ್ಲಿ ನಮಗೆ ಬೇಕಾದ ನಿಜದ ಮನುಷ್ಯರಿದ್ದಾರೆ. ನಮ್ಮ ಅಂತರಂಗದ ಪಿಸುಮಾತುಗಳನ್ನು ಆಡಲಿಕ್ಕೆ ಬೇಕಾದ ಜೀವಗಳು ಸಿಗುತ್ತವೆ. ಆ ಲೋಕದಲ್ಲಿ ನಮ್ಮ ಪ್ರೀತಿಯ ಕಾತರವನ್ನು ಅರ್ಥಮಾಡಿಕೊಳ್ಳಬಲ್ಲವರಿದ್ದಾರೆ. ಅವರನ್ನೆಲ್ಲ ಕಳೆದುಕೊಂಡು ನಾವು ಈ ಜಗತ್ತಿನಲ್ಲಿ ಜೀವಿಸುತ್ತಿದ್ದೇವೆ. ಹೀಗನ್ನಿಸುತ್ತಿತ್ತು ಮಾರ್ಕ್ವೆಝ್ ಕಾದಂಬರಿಗಳನ್ನು ಓದುತ್ತಿದ್ದಂತೆ ಅವ ಮೈಮರೆಸುಬಿಡುತ್ತಿದ್ದ. ಜೋಗಿ (ಗಿರೀಶ್ ರಾವ್ ಹತ್ವಾರ್), ಕಥೆಗಾರ, ಪತ್ರಕರ್ತ (Jogi) 

ನನಗೆ ಆಗ ಗೊತ್ತಿದ್ದ ಅರೆಬರೆ ಇಂಗ್ಲಿಷಿಗೆ ಅವನ ಮಾತು ಪೂರ್ತಿ ಅರ್ಥವಾಗುತ್ತಿರಲಿಲ್ಲ. ಅಂಥ ಅಸ್ಪಷ್ಟ ಅರ್ಥಗಳನ್ನು ಹೊರಡಿಸಲು ಬರೆವಣಿಗೆಯಲ್ಲಿಯೇ ನನಗೆ ಬೇಕಾದ್ದು ಸಿಗುತ್ತದೆ ಅಂತ ಕಾಯೋಣ ಅನ್ನಿಸತೊಡಗಿತ್ತು. ತುಂಬಾ ನಿಚ್ಚಳವಾದ ಬೆಳಕಿನಲ್ಲಿ ಎಲ್ಲವೂ ಸಪಾಟಾಗಿ ಕಾಣುತ್ತಿರಲ್ಲ. ಬೆಳಕು ಎಲ್ಲವನ್ನೂ ಕರಗಿಸುತ್ತಾ ಹೋಗುತ್ತದೆ, ನಮಗೆ ಅತ್ಯವಶ್ಯ ಬೇಕಾದ ಅರೆಬರೆ ಕತ್ತಲೆಯನ್ನು ಕೂಡ.

ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟ್ಯೂಡ್-ಒಂದು ವರುಷಗಳ ಏಕಾಂತವನ್ನು ನಾನು ಯಾವಾಗ ಓದಿದೆನೋ ನೆನಪಿಲ್ಲ. ಆಗಷ್ಟೇ ಇಂಗ್ಲಿಷ್ ಕಲಿಯುತ್ತಿದ್ದ ದಿನಗಳಲ್ಲಿ ಮಾರ್ಕ್ವೆಝ್ ಬರೆದ ಹೆಸರುಗಳನ್ನು ತಪ್ಪುತಪ್ಪಾಗಿ ಓದಿಕೊಂಡು, ಸನ್ನಿವೇಶಗಳನ್ನು ತಪ್ಪಾಗಿ ಅರ್ಥ ಮಾಡಿಕೊಂಡು ಓದಿದ್ದು ನೆನಪಾಗುತ್ತದೆ. ಆ ಇಡೀ ಕಾದಂಬರಿ ನನ್ನೊಳಗೆ ಹೇಗೆ ನೆಲೆಸಿದೆ ಎಂದರೆ ಅರೆವಿಸ್ಮೃತಿ, ಅರೆವಿಭ್ರಮದಲ್ಲಿ ಉಳಿದುಹೋದ ಅದನ್ನು ಮತ್ತೆ ಓದಲು ಭಯವಾಗುತ್ತದೆ. ಅಂದರೆ, ಎಲ್ಲಿ ಅದು ತನ್ನ ಮಾಂತ್ರಿಕತೆಯನ್ನು ಕಳೆದುಕೊಂಡು ಬಿಡುತ್ತದೆಯೋ, ಎಲ್ಲಿ ಕಥನವಾಗಿ ಬರುತ್ತದೆಯೋ ಎಂಬ ಭಯ. ಅರೆಗತ್ತಲೆಯಲ್ಲಿ ಸುಂದರವಾಗಿ ಕಂಡ ಮುಖ ಬಿರುಬೆಳಕಿನಲ್ಲಿ ಅಷ್ಟು ಸೊಗಸಾಗಿ ಕಾಣಸಿದೇ ಹೋದರೆ ಎಂಬ ಭಯದ ಹಾಗೆಯೇ ಇದು. ಅರ್ಥವಾದಷ್ಟೇ ಅರ್ಥ ಎಂಬ ಮಾತು ಇಂಥ ಓದಿಗೆ ಬೆಂಬಲನುಡಿ.

ಕಾಲ ಕಳೆದು ಹೋಗುವಲ್ಲಿ. ಅದೆಂದು ಸುಳಿಯಾಗಿ ಸುತ್ತುತ್ತಾ ಇರು ಎಂಬ ಮಾತು ಒನ್​ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟ್ಯೂಡ್ ಕಾದಂಬರಿಯಲ್ಲಿ ಬರುತ್ತದೆ. ಕನ್ನಡದಲ್ಲಿಯೂ ಕಾಲಚಕ್ರ, ಕಾಲದ ಸುಳಿ ಎಂಬ ಪ್ರಯೋಗ ಇದೆ. ಮಾರ್ಕ್ವೆಝ್​ನನ್ನು ಓದುವತನಕ ಕಾಲ ಸುಳಿಯಂತೆ ಸುತ್ತುವುದು ಅರ್ಥವೇ ಆಗಿರಲಿಲ್ಲ. ನಾವೆಲ್ಲರೂ ನಮ್ಮ ಭೂತಕಾಲದಿಂದ, ಚರಿತ್ರೆಯಿಂದ ಬಂಧಿತರಾದವರು. ತುಂಬಾ ದೂರ ಹೋಗಿದ್ದೇವೆ ಅಂತ ಅಂದುಕೊಳ್ಳುತ್ತೇವೆ. ಚಲಿಸುತ್ತಲೇ ಇರುತ್ತೇವೆ. ಆ ಚಲನೆ ಹೇಗೆಂದರೆ ಜಾತ್ರೆಯಲ್ಲಿ ವೃತ್ತಾಕಾರದಲ್ಲಿ ಚಲಿಸುವ ಕುದುರೆಗಳ ಮೇಲೆ ಕುಳಿತು ಚಲಿಸಿದಂತೆ. ಎಷ್ಟೇ ಸುತ್ತಿದರೂ ನಿಂತಾಗ ಅಲ್ಲಲ್ಲಿಯೇ ಇರುತ್ತೇವೆ. ಸುತ್ತಿದೆವು, ಓಡಿದೆವು ಅನ್ನುವುದೆಲ್ಲ ನಿಜ. ಆದರೆ ಇದ್ದಲ್ಲಿಯೇ ಇರುವುದು ಕೂಡ ನಿಜ ಎಂಬುದನ್ನೆಲ್ಲ ಮನಸ್ಸಿಗೆ ಮುಟ್ಟಿಸಿದ್ದು ಮಾರ್ಕ್ವೆಝ್.

ಅವನು ಪ್ರೀತಿಗಾಗಿ ಹುಡುಕುತ್ತಿದ್ದ. ಕೊನೆಯ ಪ್ರಯತ್ನವಾಗಿ ತನ್ನ ಹೃದಯವನ್ನೇ ಹಣಿಕಿ ಹಾಕಿ ನೋಡಿದ. ಅಲ್ಲಿಯೂ ಪ್ರೀತಿಯ ಸುಳಿವು ಕಾಣಸಲಿಲ್ಲ ಎಂಬ ಸಾಲು ಕೂಡ ಮಾರ್ಕ್ವೆಝ್​ನದ್ದೆ. ನಮ್ಮೆದೆಯಲ್ಲಿ ಇಲ್ಲದ ಪ್ರೀತಿ ಮತ್ತೆಲ್ಲಿ ಸಿಗಲು ಸಾಧ್ಯ?

ಇದನ್ನು ಓದಿ : Gabriel Garcia Marquez’s Birth Anniversary: ‘ಗೋರಿಯ ದಾರಿಯಲ್ಲಿ’ ಗಂಗಾಧರಯ್ಯ ಅನುವಾದಿಸಿದ ಮಾರ್ಕ್ವೆಝ್ ಕಥೆ

ನಾವು ಮರಣದ ಹೊಸ್ತಿಲಲ್ಲಿ ನಿಂತಾಗ ನಮಗೇನು ನೆನಪಾಗುತ್ತದೆ ಅನ್ನುವುದನ್ನೂ ಕೂಡ ಮಾರ್ಕ್ವೇಝ್ ಅತ್ಯಂತ ಮಧುರ ಪದಗಳಿಂದ ಹೇಳಿದ್ದಾನೆ. ಒನ್ ಹಂಡ್ರೆಡ್​ ಇಯರ್ಸ್​ ಆಫ್ ಸಾಲಿಟ್ಯೂಡ್​ ಕಾದಂಬರಿಯ ಅರೇಲಿಯಾನೋ ಬುಯೆಂದಿಯಾ ಫೈರಿಂಗ್ ಸ್ಕ್ವ್ಯಾಡ್ ಮುಂದೆ ನಿಂತಾಗ ಅವನಿಗೆ ನಡುಮಧ್ಯಾಹ್ನ ಅಪ್ಪನೊಂದಿಗೆ ನಡೆದ ಮಂಜುಗಟ್ಟಿದ ದಾರಿ ನೆನಪಾಗುತ್ತದೆ. ಸಾವು ಎಂತೆಂಥ ಕನಸು, ನೆನಪುಗಳನ್ನು ಮರುಕಳಿಸುತ್ತದೆ ಅನ್ನುವುದೇ ನಿಗೂಢ.

‘ನೋ ಒನ್ ರೈಟ್ಸ್​ ಟು ದಿನ ಕೊಲೊನಲ್’ ಕೂಡ ಅದರ ದುರ್ಭರ ವಾಸ್ತವದಿಂದ ಕಾಡಿದ ಪುಸ್ತಕ. ಯಾರೂ ಯಾರನ್ನೂ ಸಂರಕ್ಷಿಸಲು ಯತ್ನಿಸುವುದಿಲ್ಲ. ಎಂದೂ ಯಾರನ್ನೂ ಹುಡುಕಿಕೊಂಡು ಬರುವುದಿಲ್ಲ. ಎಲ್ಲರ ಬದುಕಿನಲ್ಲೂ ಕಲ್ಲು ಬಂಡೆಗಳಿಂದ, ಹಾಡು ಸೂಸದ ಬಿರುಕುಗಳ, ಒರತೆಯಿರದ ಕಾಡುನೆಲದಂಥ ಜೀವಾವಧಿಯೊಂದು  ಬಂದು ಹೋಗುತ್ತದೆ. ಅದನ್ನು ನಾವು ದಾಟದೇ ಮೀರಲಾರೆವು. ಹಾಗೆ ದಾಟುವುದೇ ಮೀರುವ ಹಾದಿ ಕೂಡ. ಮನುಷ್ಯ ಯಾವಾಗ ಸಾಯಬೇಕೋ ಆಗ ಸಾಯುವುದಿಲ್ಲ. ಯಾವಾಗ ಸಾಯಬಲ್ಲನೋ ಆಗ ಸಾಯುತ್ತಾನೆ ಅನ್ನುವುದು ಕೂಡ ಇಚ್ಛಾಮರಣದಂತೆ ಕೇಳಿಸುತ್ತಿಲ್ಲವೆ?

ನಮ್ಮ ಏಕಾಂತ ಎಲ್ಲಿದೆ ಎಂಬುದನ್ನು ಶೋಧಿಸುತ್ತ ಹೋದಂತೆ ಮಾರ್ಕ್ವೆಝ್, ತನ್ನ ಪ್ರತಿ ಕತೆ, ಕಾದಂಬರಿಯಲ್ಲೂ ಅದಕ್ಕೆ ಉತ್ತರ ಹುಡುಕುತ್ತಾನೆ ಅನ್ನಿಸುತ್ತದೆ. ಪ್ರತಿಯೊಬ್ಬನೂ ಕೂಡ ತನ್ನ ಅಧಿಕಾರ, ಅಂತಸ್ತು, ಸಾರ್ವಭೌಮತ್ವ, ಸಂಪತ್ತಿನ ದಾರಿಯಲ್ಲಿ, ಹಾದಿ ತಪ್ಪಿ ನಡೆಯುತ್ತಿರುತ್ತಾನೆ. ದಿಕ್ಕು ತೋಚದೆ ನಿಂತಿರುತ್ತಾನೆ. ಕೊನೆಗೂ ಅವನಿಗೆ ದಿಕ್ಕು ತೋರಿಸುವುದು ಪ್ರೀತಿ. ಪ್ರೀತಿ ಕೂಡ ಚುಕ್ಕಾಣಿಯಾಗದೇ ಹೋದರೆ ಏನು ಮಾಡಬೇಕು ಎಂಬುದು ಯಾರಿಗೂ ಗೊತ್ತಿಲ್ಲ. ಅಂಥ ‘ಗೊತ್ತಿಲ್ಲದ’ ಸ್ಥಿತಿಯಲ್ಲಿ ನಾವು ಆ ಜಗತ್ತನ್ನು ಸಹಿಸದೆ ಹಣ, ಕೀರ್ತಿ, ಅಮಲು, ಭಕ್ತಿ, ವೈರಾಗ್ಯಗಳ ಹಿಂದೆ ಹೋಗುತ್ತೇವೆ. ಅದ್ಯಾವುದೂ ನಮ್ಮ ದಾರಿ ಅಲ್ಲವೇ ಅಲ್ಲ ಎನ್ನುವುದು ನಮಗೆ ಸ್ಪಷ್ಟ ಗೊತ್ತಿರುತ್ತದೆ.

ಅವಳ ಮೌನದ ಅವಸ್ಥಾಂತರಗಳಿಂದಲೇ ಅವಳು ಯೋಚಿಸುತ್ತಾಳೆ ಎಂದು ನಾನು ಊಹಿಸಿದೆ ಎಂದು ಬರೆಯಬಲ್ಲ ಲೇಖಕ ಮಾರ್ಕ್ವೆಝ್. ‘ಲಿವಿಂಗ್ ಟು ಟೆಲ್ ದಿ ಟೇಲ್’ ಅವನ ಮುಖ್ಯ ಪುಸ್ತಕ. ಅದನ್ನು ಬರೆಯದೇ ಹೋಗಿದ್ದರೂ ಮಾರ್ಕ್ವೇಝ್ ಬದುಕಿದ್ದೇ ಕತೆ ಹೇಳಲು ಅಂತ ನಾವೆಲ್ಲ ಸರ್ವಾನುಮತದಿಂದ ಒಪ್ಪಿಕೊಂಡು ಬಿಡುತ್ತಿದ್ದೆವು. ಇಂದು ಮಾರ್ಕ್ವೇಝ್ ಮರೆಯಾದ ದಿನ. ಕಥೆಗಾರರಿಗೆ ಕಥಾಸಮಯದ ದಿನ.

ಪ್ರತಿಕ್ರಿಯೆಗಾಗಿ : tv9kannadadigital@gmail.com

ಇದನ್ನೂ ಓದಿ : Bangalore Literature Festival : ‘ನಾನು ಪ್ರಶಸ್ತಿ ನಿರೋಧಕ ಲಸಿಕೆಯನ್ನು ಹಾಕಿಕೊಂಡೇ ಓಡಾಡುತ್ತಿದ್ದೇನೆ’ ಕಥೆಗಾರ ಜೋಗಿ

Published On - 12:33 pm, Sun, 17 April 22

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ