Flight Tickets: ಪೆಟ್ರೋಲ್, ಎಲ್ಪಿಜಿ ಬಳಿಕ ಈಗ ವಿಮಾನ ಪ್ರಯಾಣ ದರವೂ ಹೆಚ್ಚಾಗುತ್ತಾ? ಸಚಿವರು ಹೇಳಿದ್ದೇನು?
ಜಾಗತಿಕ ತೈಲ ಬೆಲೆ ಏರಿಕೆಯಿಂದ ಏರ್ ಟರ್ಬೈನ್ ಇಂಧನ (ATF) ದರ ಹೆಚ್ಚಳವಾಗಿದ್ದು, ವಿಮಾನ ಟಿಕೆಟ್ ಬೆಲೆ ಏರಿಕೆ ಸಾಧ್ಯತೆ ಇದೆ. ಈ ಬಗ್ಗೆ ನಾಗರಿಕ ವಿಮಾನಯಾನ ಸಚಿವರು ಮಾತನಾಡಿ, ಪ್ರಯಾಣಿಕರ ಮೇಲಿನ ಹೊರೆಯನ್ನು ಕಡಿಮೆ ಮಾಡಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ತಿಳಿಸಿದ್ದಾರೆ. ದೇಶೀಯ ವಿಮಾನ ಪ್ರಯಾಣ ದರ ಮಿತಿಯನ್ನು ರದ್ದುಪಡಿಸಲಾಗಿದೆ. ಯುದ್ಧದ ಪರಿಸ್ಥಿತಿಯ ನಡುವೆ, ಸಚಿವಾಲಯವು ವಿಮಾನಯಾನ ಸಂಸ್ಥೆಗಳೊಂದಿಗೆ ಸಂಪರ್ಕದಲ್ಲಿದೆ.

ನವದೆಹಲಿ, ಮಾರ್ಚ್ 22: ಅಮೆರಿಕ-ಇಸ್ರೇಲ್-ಇರಾನ್ ಯುದ್ಧದಿಂದಾಗಿ ಜಾಗತಿಕ ತೈಲ ಬೆಲೆಗಳಲ್ಲಿ ಏರಿಕೆಯು ತೈಲ ಮತ್ತು ಅನಿಲ ಬೆಲೆಗಳ ಮೇಲೆ ಪರಿಣಾಮ ಬೀರಿದೆ, ಇದರಿಂದಾಗಿ ವಿಮಾನ ಟಿಕೆಟ್ ದರ(Flight Tickets)ಗಳು ಸಹ ದುಬಾರಿಯಾಗುವ ಸಾಧ್ಯತೆ ಇದೆ. ಈ ಬಗ್ಗೆ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಇಂಡಿಯಾ ಟುಡೇ ಜತೆ ಮಾತನಾಡಿದ್ದಾರೆ. ಇರಾನ್ ಯುದ್ಧದ ಮಧ್ಯೆ ಪ್ರಪಂಚದಾದ್ಯಂತ ಏರುತ್ತಿರುವ ತೈಲ ಬೆಲೆಗಳು ಏರ್ ಟರ್ಬೈನ್ ಇಂಧನ (ಎಟಿಎಫ್) ಬೆಲೆಗಳ ಮೇಲೂ ಪರಿಣಾಮ ಬೀರಿವೆ, ಇದನ್ನು ಏಪ್ರಿಲ್ 1 ರಿಂದ ಪರಿಷ್ಕರಿಸಲಾಗುವುದು ಎಂದು ಹೇಳಿದ್ದಾರೆ.
ಮಾರ್ಚ್ 7ರಂದು ಎಲ್ಪಿಜಿ ಬೆಲೆಗಳನ್ನು ಮತ್ತು ಮಾರ್ಚ್ 20ರಂದು ಪ್ರೀಮಿಯಂ ಪೆಟ್ರೋಲ್ ಬೆಲೆಗಳನ್ನು ಹೆಚ್ಚಿಸಲಾಗಿದೆ. ಪ್ರತಿ ತಿಂಗಳ ಮೊದಲ ದಿನದಂದು ಎಟಿಎಫ್ ಬೆಲೆಗಳನ್ನು ನಿಗದಿಪಡಿಸುತ್ತದೆ. ಆದ್ದರಿಂದ ಏಪ್ರಿಲ್ 1ರಿಂದ ಅದರ ಪರಿಣಾಮ ಗೋಚರಿಸಬಹುದು ಎಂದು ಸಚಿವರು ಹೇಳಿದ್ದಾರೆ.
ಪ್ರಸ್ತುತ ಪರಿಸ್ಥಿತಿಯನ್ನು ನಿರ್ಣಯಿಸಲು ಸರ್ಕಾರ ವಿಮಾನಯಾನ ಸಂಸ್ಥೆಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ಅವರು ಹೇಳಿದ್ದಾರೆ. ನಾಗರಿಕ ವಿಮಾನಯಾನ, ವಿದೇಶಾಂಗ ವ್ಯವಹಾರಗಳು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸೇರಿದಂತೆ ಹಲವು ಸಚಿವಾಲಯಗಳು ಒಟ್ಟಾಗಿ ಕಾರ್ಯನಿರ್ವಹಿಸುತ್ತಿವೆ.
ಪ್ರಸ್ತುತ ಪರಿಸ್ಥಿತಿಯಲ್ಲಿ ತೈಲ ಮತ್ತು ಎಟಿಎಫ್ ಬೆಲೆಗಳು ಏರಿಕೆಯಾಗುವುದು ಬಹುತೇಕ ಖಚಿತವಾಗಿದ್ದರೂ, ಪ್ರಯಾಣಿಕರ ಮೇಲಿನ ಹೊರೆ ಕಡಿಮೆ ಮಾಡುವುದು ಸರ್ಕಾರದ ಗುರಿಯಾಗಿದೆ. ನಡೆಯುತ್ತಿರುವ ಯುದ್ಧದ ಮಧ್ಯೆ, ನಾಗರಿಕ ವಿಮಾನಯಾನ ಸಚಿವಾಲಯವು ಶನಿವಾರ ಮಾರ್ಚ್ 23 ರಿಂದ ದೇಶೀಯ ವಿಮಾನ ಟಿಕೆಟ್ಗಳ ಮೇಲಿನ ತಾತ್ಕಾಲಿಕ ಮಿತಿಯನ್ನು ತೆಗೆದುಹಾಕಲು ನಿರ್ಧರಿಸಿದೆ .
ಕಳೆದ ವರ್ಷ ಡಿಸೆಂಬರ್ನಲ್ಲಿ ಇಂಡಿಗೋ ವೈಫಲ್ಯದ ನಂತರ ಈ ಮಿತಿಯನ್ನು ವಿಧಿಸಲಾಗಿತ್ತು. ಡಿಸೆಂಬರ್ 2025 ರಲ್ಲಿ ಇಂಡಿಗೋ ವಿಮಾನಗಳಿಗೆ ವ್ಯಾಪಕ ಅಡಚಣೆಗಳು ಉಂಟಾದ ಹಿನ್ನೆಲೆಯಲ್ಲಿ ದರ ಮಿತಿಯನ್ನು ವಿಧಿಸಲಾಗಿತ್ತು, ಇದು ಆ ಅವಧಿಯಲ್ಲಿ ಬೆಲೆ ಏರಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು. ಅಂದಿನಿಂದ ಕಾರ್ಯಾಚರಣೆಗಳು ಸ್ಥಿರವಾಗುತ್ತಿದ್ದಂತೆ, ಸಚಿವಾಲಯವು ಈಗ ನಿರ್ಬಂಧಗಳನ್ನು ತೆಗೆದುಹಾಕಲು ಮುಂದಾಗಿದೆ.
ಮತ್ತಷ್ಟು ಓದಿ: ಇರಾನ್ನ 140 ಮಿಲಿಯನ್ ಬ್ಯಾರೆಲ್ ತೈಲವನ್ನು ಜಾಗತಿಕ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಂತೆ ಅಮೆರಿಕ!
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷವು ಜಾಗತಿಕ ಇಂಧನ ಪೂರೈಕೆಯಲ್ಲಿ ಅಡಚಣೆಯನ್ನು ಉಂಟುಮಾಡಿದೆ, ಇದು ಹಾರ್ಮುಜ್ ಜಲಸಂಧಿಯಂತಹ ಪ್ರಮುಖ ಮಾರ್ಗಗಳ ಮೂಲಕ ಕಚ್ಚಾ ತೈಲ ಮತ್ತು ಅನಿಲ ಹರಿವಿನ ಮೇಲೆ ಪರಿಣಾಮ ಬೀರುತ್ತದೆ.
ಮಾರ್ಚ್ 12 ರಂದು, ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಲೋಕಸಭೆಗೆ ಮಾಹಿತಿ ನೀಡಿ, ಪಶ್ಚಿಮ ಏಷ್ಯಾ ಸಂಘರ್ಷದ ನಂತರ ಜಾಗತಿಕ ಇಂಧನ ಪೂರೈಕೆಯಲ್ಲಿನ ಪ್ರಮುಖ ಅಡಚಣೆಯನ್ನು ದೇಶ ಯಶಸ್ವಿಯಾಗಿ ನಿಭಾಯಿಸುತ್ತಿದೆ ಎಂದು ಹೇಳಿದ್ದರು. ಪೆಟ್ರೋಲ್, ಡೀಸೆಲ್, ಸೀಮೆಎಣ್ಣೆ, ಎಟಿಎಫ್ ಅಥವಾ ಇಂಧನ ತೈಲದ ಕೊರತೆಯಿಲ್ಲ. ಪೆಟ್ರೋಲ್, ಡೀಸೆಲ್, ವಾಯುಯಾನ ಟರ್ಬೈನ್ ಇಂಧನ, ಸೀಮೆಎಣ್ಣೆ ಮತ್ತು ಇಂಧನ ತೈಲ ಲಭ್ಯವಿದೆ ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
