2029ರೊಳಗೆ ಎನ್ಡಿಎ ಆಡಳಿತದ 21 ರಾಜ್ಯಗಳಲ್ಲಿ ಯುಸಿಸಿ ಜಾರಿ: ಮುಂಬೈನಲ್ಲಿ ಗೃಹ ಸಚಿವ ಅಮಿತ್ ಶಾ ಮಹತ್ವದ ಘೋಷಣೆ
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 2029ರೊಳಗೆ 21 ಎನ್ಡಿಎ ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (UCC) ಜಾರಿಗೊಳಿಸುವುದಾಗಿ ಘೋಷಿಸಿದ್ದಾರೆ. ಇದು 'ವಿಕಸಿತ ಭಾರತ 2047' ಗುರಿಯ ಭಾಗವಾಗಿದ್ದು, ಭಯೋತ್ಪಾದನೆ, ಆಂತರಿಕ ಭದ್ರತೆ ಮತ್ತು ಆರ್ಥಿಕ ಸುಧಾರಣೆಗಳಿಗೆ ಒತ್ತು ನೀಡಲಿದೆ. UCC ಎಂದರೇನು, ಉತ್ತರಾಖಂಡದ ಅನುಭವ ಮತ್ತು ಸಂವಿಧಾನದ 44ನೇ ವಿಧಿಯ ಆಶಯಗಳನ್ನು ಲೇಖನ ವಿವರಿಸುತ್ತದೆ.

ಮುಂಬೈ, ಸೆಪ್ಟೆಂಬರ್ 14: 2029ರ ಲೋಕಸಭಾ ಚುನಾವಣೆಗೆ ಮುನ್ನವೇ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಅಧಿಕಾರದಲ್ಲಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ. ಮುಂಬೈನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆ, ಆಂತರಿಕ ಭದ್ರತೆ ಮತ್ತು ಆರ್ಥಿಕ ಸುಧಾರಣೆಗಳ ಮೂಲಕ ಮೋದಿಯವರ ‘ವಿಕಸಿತ ಭಾರತ 2047’ ಗುರಿಯನ್ನು ಮುಟ್ಟಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ಎನ್ಡಿಎ ಆಡಳಿತವಿರುವ ರಾಜ್ಯಗಳಲ್ಲಿ ಹಂತ-ಹಂತವಾಗಿ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ, 2029 ರ ವೇಳೆಗೆ ಏಕರೂಪ ನಾಗರಿಕ ಸಂಹಿತೆಯನ್ನು ಸಂಪೂರ್ಣವಾಗಿ ಜಾರಿಗೆ ತರುವ ವಿಶ್ವಾಸವಿದೆ ಎಂದು ಅಮಿತ್ ಶಾ ಸ್ಪಷ್ಟಪಡಿಸಿದರು. ಸುಮಾರು ಐದು ದಶಕಗಳಿಂದ ದೇಶದ ಭದ್ರತೆಗೆ ಸವಾಲಾಗಿದ್ದ ಜಮ್ಮು-ಕಾಶ್ಮೀರದ 370ನೇ ವಿಧಿ ರದ್ದತಿ, ನಕ್ಸಲಿಸಂ ನಿರ್ಮೂಲನೆ ಮತ್ತು ಈಶಾನ್ಯ ರಾಜ್ಯಗಳ ದಂಗೆ-ಬಿಕ್ಕಟ್ಟುಗಳಿಗೆ ಮೋದಿ ಸರ್ಕಾರ ಶಾಶ್ವತ ಪರಿಹಾರ ಕಂಡುಕೊಂಡಿದೆ ಎಂದರು.
ಆರ್ಥಿಕ ಬೆಳವಣಿಗೆ: ಭಾರತವು ಈ ಹಿಂದೆ ‘ದುರ್ಬಲ ಐದು’ಆರ್ಥಿಕತೆಗಳ ಪಟ್ಟಿಯಲ್ಲಿದ್ದು, ಈಗ ವಿಶ್ವದ ಅಗ್ರ ೫ ಆರ್ಥಿಕತೆಗಳಲ್ಲಿ ಒಂದಾಗಿದೆ. ಇತ್ತೀಚಿನ ಮೊದಲ ತ್ರೈಮಾಸಿಕದಲ್ಲಿ ಶೇ. 7.8ರ ಜಿಡಿಪಿ ಬೆಳವಣಿಗೆ ದಾಖಲಿಸಿ ವಿಶ್ವದಲ್ಲೇ ಮುಂಚೂಣಿಯಲ್ಲಿದೆ ಎಂದು ವಿವರಿಸಿದರು.
ಮತ್ತಷ್ಟು ಓದಿ: ನೇಪಾಳ ಪ್ರವಾಹದಲ್ಲಿ ಸಿಲುಕಿದ ಭಾರತೀಯರ ರಕ್ಷಣೆಗಾಗಿ ಪ್ರಧಾನಿ ಮೋದಿ, ಅಮಿತ್ ಶಾಗೆ ಖರ್ಗೆ ಪತ್ರ
ಸೆಪ್ಟೆಂಬರ್ 17 ರಿಂದ ‘ಸೇವಾ ಸಂಕಲ್ಪ ಅಭಿಯಾನ’: ಪ್ರಧಾನಿ ನರೇಂದ್ರ ಮೋದಿಯವರ ಸಾರ್ವಜನಿಕ ಸೇವೆಯ 25 ವರ್ಷಗಳ ಪಯಣದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 17 ರವರೆಗೆ ದೇಶಾದ್ಯಂತ ತಿಂಗಳ ಕಾಲ ‘ಸೇವಾ ಸಂಕಲ್ಪ ಅಭಿಯಾನ’ವನ್ನು ಬಿಜೆಪಿ ಮತ್ತು ಮಿತ್ರಪಕ್ಷಗಳು ಹಮ್ಮಿಕೊಳ್ಳಲಿವೆ.
ವಿಡಿಯೋ
मोदी जी के सेवा व समर्पण के 25 वर्ष होने पर आयोजित ‘सेवा संकल्प अभियान’ पर मुंबई में प्रेस वार्ता से लाइव… https://t.co/xVN94aBM5G
— Amit Shah (@AmitShah) September 13, 2026
ಏನಿದು ಏಕರೂಪ ನಾಗರಿಕ ಸಂಹಿತೆ?: ಭಾರತದಲ್ಲಿ ಪ್ರಸ್ತುತ ಮದುವೆ, ವಿಚ್ಛೇದನ, ಜೀವನಾಂಶ, ದತ್ತು ಮತ್ತು ಉತ್ತರಾಧಿಕಾರದಂತಹ ನಾಗರಿಕ ವಿಷಯಗಳಿಗೆ ವಿವಿಧ ಧರ್ಮಗಳು ತಮ್ಮದೇ ಆದ ವೈಯಕ್ತಿಕ ಕಾನೂನುಗಳನ್ನು ಅನುಸರಿಸುತ್ತಿವೆ. ಯುಸಿಸಿ ಜಾರಿಯಾದರೆ ಧರ್ಮ, ಜಾತಿ ಭೇದವಿಲ್ಲದೆ ದೇಶದ ಎಲ್ಲಾ ನಾಗರಿಕರಿಗೂ ಈ ವಿಷಯಗಳಲ್ಲಿ ಒಂದೇ ಕಾನೂನು ಅನ್ವಯವಾಗುತ್ತದೆ.
ಉತ್ತರಾಖಂಡದ ಹೆಜ್ಜೆ: ದೇಶದಲ್ಲೇ ಮೊದಲ ಬಾರಿಗೆ ಉತ್ತರಾಖಂಡ ರಾಜ್ಯವು ಇತ್ತೀಚೆಗೆ ಏಕರೂಪ ನಾಗರಿಕ ಸಂಹಿತೆಯನ್ನು ಅಂಗೀಕರಿಸಿ ಇತಿಹಾಸ ಸೃಷ್ಟಿಸಿತ್ತು. ಇದನ್ನೇ ಮಾದರಿಯಾಗಿಟ್ಟುಕೊಂಡು ಉಳಿದ ಬಿಜೆಪಿ ಹಾಗೂ ಎನ್ಡಿಎ ಆಡಳಿತದ ರಾಜ್ಯಗಳಲ್ಲೂ ಅನುಷ್ಠಾನಕ್ಕೆ ತರಲು ಸಿದ್ಧತೆಗಳು ನಡೆದಿವೆ.
ಸಂವಿಧಾನದ ಆಶಯ: ಸಂವಿಧಾನದ 44ನೇ ವಿಧಿಯು ದೇಶದಾದ್ಯಂತ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ಸರ್ಕಾರಗಳು ಶ್ರಮಿಸಬೇಕು ಎಂದು ಹೇಳುತ್ತದೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ಲಿಂಗ ಸಮಾನತೆ ಮತ್ತು ಮಹಿಳೆಯರ ಹಕ್ಕುಗಳ ರಕ್ಷಣೆಗಾಗಿ ಪ್ರತಿಪಾದಿಸಿದ್ದ ಆಶಯವನ್ನು ಯುಸಿಸಿ ಈಡೇರಿಸಲಿದೆ ಎಂಬುದು ಕೇಂದ್ರದ ನಿಲುವು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




