ರಷ್ಯಾದಿಂದ ತೈಲ ಖರೀದಿಸಬೇಡಿ ಎಂದು ಭಾರತಕ್ಕೆ ಯಾರೂ ಹೇಳಿಲ್ಲ; ಸಚಿವ ಹರ್ದೀಪ್ ಸಿಂಗ್ ಪುರಿ ಸ್ಪಷ್ಟನೆ
ಇರಾನ್ ಸಂಘರ್ಷದಿಂದಾಗಿ 'ಸ್ಟ್ರೈಟ್ ಆಫ್ ಹಾರ್ಮುಜ್' ಮೂಲಕ ಇಂಧನ ಪೂರೈಕೆಗೆ ಅಡ್ಡಿಯಾಗಿದ್ದರೂ ಸಹ, ಜಾಗತಿಕವಾಗಿ ಗಗನಕ್ಕೇರುತ್ತಿದ್ದ ಇಂಧನ ಬೆಲೆಗಳ ಬಿಸಿಯಿಂದ ಭಾರತೀಯರನ್ನು ರಕ್ಷಿಸುವಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ಭಾರಿ ಏರುಪೇರುಗಳು ಮತ್ತು ಇಂಧನ ಪೂರೈಕೆಯಲ್ಲಿ ಸವಾಲುಗಳು ಎದುರಾಗಿದ್ದಾಗಲೂ ಭಾರತವು ಇಂಧನ ಬೆಲೆಗಳನ್ನು ನಿಯಂತ್ರಣದಲ್ಲಿಡುವಲ್ಲಿ ಯಶಸ್ವಿಯಾಗಿದೆ ಎಂದಿದ್ದಾರೆ. ಸರ್ಕಾರದ ಇಂಧನ ನೀತಿಯಲ್ಲಿ ಗ್ರಾಹಕರ ಹಿತಾಸಕ್ತಿಯೇ ಪ್ರಮುಖ ಕೇಂದ್ರಬಿಂದುವಾಗಿದೆ ಎಂದು ಅವರು ತಿಳಿಸಿದ್ದಾರೆ.

ನವದೆಹಲಿ, ಜೂನ್ 8: ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ (Hardeep Singh Puri) ಅವರು ರಷ್ಯಾದಿಂದ ಕಚ್ಚಾ ತೈಲ ಖರೀದಿ ಮತ್ತು ಪಾಶ್ಚಿಮಾತ್ಯ ದೇಶಗಳ ನಿರ್ಬಂಧಗಳ ಕುರಿತು ನೀಡಿರುವ ಮಹತ್ವದ ಹೇಳಿಕೆ ನೀಡಿದ್ದಾರೆ. ‘ಭಾರತವು ರಷ್ಯಾದಿಂದ ಕಚ್ಚಾ ತೈಲವನ್ನು ಖರೀದಿಸಬಾರದು ಎಂದು ಯಾವುದೇ ದೇಶ ಅಥವಾ ಜಾಗತಿಕ ಶಕ್ತಿಯು ನಮಗೆ ಅಧಿಕೃತವಾಗಿ ಆದೇಶಿಸಿಲ್ಲ ಅಥವಾ ನಿರ್ಬಂಧ ಹೇರಿಲ್ಲ. ಭಾರತವು ಒಂದು ಸಾರ್ವಭೌಮ ರಾಷ್ಟ್ರವಾಗಿದ್ದು, ತನ್ನ ಇಂಧನ ಭದ್ರತೆ ಮತ್ತು ಅಗತ್ಯಕ್ಕೆ ಅನುಗುಣವಾಗಿ ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ’ ಎಂದು ಸಚಿವ ಹರ್ದೀಪ್ ಸಿಂಗ್ ಪುರಿ ಸ್ಪಷ್ಟಪಡಿಸಿದ್ದಾರೆ.
‘ಪಾಶ್ಚಿಮಾತ್ಯ ದೇಶಗಳು ರಷ್ಯಾದ ಕೆಲವು ತೈಲ ಕಂಪನಿಗಳು ಅಥವಾ ಹಡಗುಗಳ ಮೇಲೆ ನಿರ್ಬಂಧಗಳನ್ನು ಹೇರಿದ್ದರೂ, ಭಾರತಕ್ಕೆ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವಲ್ಲಿ ಯಾವುದೇ ತಾಂತ್ರಿಕ ಅಥವಾ ಕಾನೂನು ಸಮಸ್ಯೆಗಳು ಎದುರಾಗಿಲ್ಲ ಎಂದು ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ. ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಪೂರೈಕೆಗೆ ಯಾವುದೇ ಧಕ್ಕೆಯಾಗದಂತೆ ಮತ್ತು ಭಾರತದ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಇಂಧನ ಸಿಗುವಂತೆ ನೋಡಿಕೊಳ್ಳಲು ಭಾರತವು ಎಲ್ಲಾ ಕಾನೂನು ಚೌಕಟ್ಟುಗಳಡಿಯೇ ವ್ಯಾಪಾರವನ್ನು ಮುಂದುವರಿಸಿದೆ’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ವಿದೇಶಿ ಒತ್ತಡಕ್ಕೆ ಭಾರತ ಬಗ್ಗುವುದಿಲ್ಲ; ರಷ್ಯಾದಿಂದ ತೈಲ ಖರೀದಿ ವಿಚಾರದಲ್ಲಿ ಟ್ರಂಪ್ಗೆ ಪುಟಿನ್ ತಿರುಗೇಟು
ಹಾಗೇ, ಭಾರತವು ರಷ್ಯಾದಿಂದ ರಿಯಾಯಿತಿ ದರದಲ್ಲಿ ತೈಲ ಖರೀದಿಸುತ್ತಿರುವುದನ್ನು ಸಚಿವ ಹರ್ದೀಪ್ ಸಿಂಗ್ ಪುರಿ ಸಮರ್ಥಿಸಿಕೊಂಡಿದ್ದಾರೆ. ‘ಭಾರತದಂತಹ ದೊಡ್ಡ ಜನಸಂಖ್ಯೆಯ ದೇಶದಲ್ಲಿ ಇಂಧನ ಬೆಲೆಗಳು ನಿಯಂತ್ರಣದಲ್ಲಿರಲು ಈ ಖರೀದಿ ಅತಿ ಅಗತ್ಯವಾಗಿದೆ. ಭಾರತವು ರಷ್ಯಾದ ತೈಲವನ್ನು ಖರೀದಿಸದಿದ್ದರೆ, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಗಗನಕ್ಕೇರುತ್ತಿದ್ದವು. ಇದು ಪರೋಕ್ಷವಾಗಿ ಜಾಗತಿಕ ಇಂಧನ ಮಾರುಕಟ್ಟೆಯನ್ನು ಸ್ಥಿರವಾಗಿಡಲು ಸಹಾಯ ಮಾಡಿದೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಗ್ರಾಹಕರನ್ನು ರಕ್ಷಿಸುವುದು ಪ್ರಧಾನಿ ಮೋದಿಯವರಿಗೆ ಕೇವಲ ರಾಜಕೀಯ ಘೋಷಣೆಯಲ್ಲ, ಅದೊಂದು ಅವರ ಪರಮ ಬದ್ಧತೆಯಾಗಿದೆ. ಜಾಗತಿಕ ನಾಯಕರೊಂದಿಗೆ ಪ್ರಧಾನಿ ಮೋದಿ ಹೊಂದಿರುವ ಅಪ್ರತಿಮ ರಾಜತಾಂತ್ರಿಕ ಸಂಬಂಧಗಳು ಮತ್ತು ವಿಶ್ವದಾದ್ಯಂತ ಇಂಧನ ಪಾಲುದಾರಿಕೆಯನ್ನು ವಿಸ್ತರಿಸಲು ಅವರು ನಡೆಸಿದ ಪ್ರಯತ್ನಗಳೇ ಇದಕ್ಕೆ ಕಾರಣ ಎಂದು ಪುರಿ ಶ್ಲಾಘಿಸಿದ್ದಾರೆ.
ಇದನ್ನೂ ಓದಿ: ಇಂಧನ ಬಿಕ್ಕಟ್ಟಿನ ಮಧ್ಯೆ ಭಾರತಕ್ಕೆ ಗುಡ್ ನ್ಯೂಸ್: ಅಂಡಮಾನ್ ಸಮುದ್ರದಲ್ಲಿ ಬೃಹತ್ ನೈಸರ್ಗಿಕ ಅನಿಲ ನಿಕ್ಷೇಪ ಪತ್ತೆ
ಭಾರತದ ಇಂಧನ ನೀತಿಯು ಕೇವಲ ತನ್ನ ರಾಷ್ಟ್ರೀಯ ಹಿತಾಸಕ್ತಿ, ಬೆಲೆಯ ಅನುಕೂಲ ಮತ್ತು ದೇಶದ ಜನರ ಅಗತ್ಯಗಳನ್ನು ಆಧರಿಸಿದೆಯೇ ಹೊರತು ಯಾವುದೇ ಬಾಹ್ಯ ಒತ್ತಡಗಳಿಗೆ ಮಣಿಯುವುದಿಲ್ಲ ಎಂಬುದನ್ನು ಕೇಂದ್ರ ಸರ್ಕಾರ ಪುನರುಚ್ಚರಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




