ಜೈ ಶ್ರೀರಾಮ್ ಹೇಳುವ ರೋಗಿಗಳಿಗೆ 500 ರೂ. ಶುಲ್ಕ ರಿಯಾಯಿತಿ; ವಿವಾದಕ್ಕೀಡಾದ ವೈದ್ಯ
ಪಶ್ಚಿಮ ಬಂಗಾಳದ ಕೊಲ್ಕತ್ತಾದ ವೈದ್ಯರೊಬ್ಬರು ತನ್ನ ರೋಗಿಗಳು 'ಜೈ ಶ್ರೀ ರಾಮ್' ಎಂದು ಹೇಳಿದರೆ ಅವರಿಗೆ 500 ರೂ. ಶುಲ್ಕ ಕಡಿತ ಮಾಡುವುದಾಗಿ ಹೇಳಿರುವ ವಿಡಿಯೋ ವೈರಲ್ ಆಗಿದೆ. ಇದು ಭಾರೀ ವಿವಾದಕ್ಕೆ ಕಾರಣವಾಗಿದೆ. ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್ ಆಗಿರುವ ಡಾ. ಪಿ. ಕೆ. ಹಜ್ರಾ ತಮ್ಮ ಖಾಸಗಿ ಕ್ಲಿನಿಕ್ನಲ್ಲಿ ಬಿಜೆಪಿ ಸ್ಕಾರ್ಫ್ ಧರಿಸಿದ ತಮ್ಮ ಫೋಟೋ ಹೊಂದಿರುವ ಪೋಸ್ಟರ್ ಅನ್ನು ಹಾಕಿದ್ದಾರೆ. ಅವರ ಈ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿಯಿಂದ ಟಿಕೆಟ್ ಪಡೆಯಲು ನಾನು ಬಯಸಿದ್ದೇನೆ ಎಂದು ಕೂಡ ಅವರು ಹೇಳಿಕೊಂಡಿದ್ದಾರೆ.

ಕೊಲ್ಕತ್ತಾ, ಏಪ್ರಿಲ್ 14: ಕೊಲ್ಕತ್ತಾದ ಹೃದ್ರೋಗ ತಜ್ಞರೊಬ್ಬರು ತಮ್ಮ ಕ್ಲಿನಿಕ್ನಲ್ಲಿ “ಜೈ ಶ್ರೀ ರಾಮ್” (Jai Shree Ram) ಎಂದು ಹೇಳುವ ರೋಗಿಗಳಿಗೆ ಶುಲ್ಕದಲ್ಲಿ 500 ರೂ. ರಿಯಾಯಿತಿ ನೀಡುವ ಮೂಲಕ ವಿವಾದವನ್ನು ಹುಟ್ಟುಹಾಕಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಸದ್ಯದಲ್ಲೇ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಈ ವೈದ್ಯರ ನಡೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಕೊಲ್ಕತ್ತಾದ ಹೃದ್ರೋಗ ತಜ್ಞ ಡಾ. ಪಿ. ಕೆ. ಹಜ್ರಾ ತಮ್ಮ ಖಾಸಗಿ ಕ್ಲಿನಿಕ್ನಲ್ಲಿ ಬಿಳಿ ಕೋಟ್ ಧರಿಸಿ, ಅದರ ಮೇಲೆ ಬಿಜೆಪಿಯ ಚಿಹ್ನೆ ಇರುವ ಶಾಲು ಹಾಕಿಕೊಂಡಿರುವ ಪೋಸ್ಟರ್ ಹಾಕಿಕೊಂಡಿದ್ದಾರೆ. ಆ ಪೋಸ್ಟರ್ ಮೇಲೆ ಜೈ ಶ್ರೀರಾಮ್ ಎಂದು ಹೇಳುವ ರೋಗಿಗಳಿಗೆ 500 ರೂ. ಡಿಸ್ಕೌಂಟ್ ನೀಡುವುದಾಗಿ ಘೋಷಿಸಿದ್ದಾರೆ. ಈ ಆಫರ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿಯೂ ಹಂಚಿಕೊಂಡಿದ್ದಾರೆ.
ಈ ಬಗ್ಗೆ ಪಿಟಿಐ ಜೊತೆ ಮಾತನಾಡಿದ ಡಾ. ಹಜ್ರಾ, “ಹಲವು ವರ್ಷಗಳಲ್ಲಿ ವೈದ್ಯನಾಗಿ ಕೆಲಸ ಮಾಡಿರುವ ನಾನು ಬಿಜೆಪಿಯ ಅನುಯಾಯಿ. ಜೈ ಶ್ರೀರಾಮ್ ಎಂಬುದು ರಾಜಕೀಯ ಘೋಷಣೆಯೇ ವಿನಃ ಧಾರ್ಮಿಕ ಘೋಷಣೆಯಲ್ಲ. ಹೀಗಾಗಿ, ಯಾವ ಧರ್ಮದವರು ಬೇಕಾದರೂ ಈ ಘೋಷಣೆ ಕೂಗಬಹುದು. ಬಂಗಾಳದ ರೋಗಿಗಳು ಅಸ್ಸಾಂ, ಒಡಿಶಾ ಅಥವಾ ದಕ್ಷಿಣ ಭಾರತಕ್ಕೆ ಹೋಗುವುದನ್ನು ನಾನು ನೋಡಿದಾಗಲೆಲ್ಲಾ ನನಗೆ ಬೇಸರವಾಗುತ್ತದೆ. ಹೀಗಾಗಿ, ನನ್ನ ರೋಗಿಗಳಿಗೂ ಸಹಾಯವಾಗಲೆಂದು 500 ರೂ. ರಿಯಾಯಿತಿ ಘೋಷಿಸಿದ್ದೇನೆ. ನನ್ನ ಕನ್ಸಲ್ಟೇಷನ್ ಫೀಸ್ 2000 ರೂ. ಆದರೆ, ಜೈ ಶ್ರೀರಾಮ್ ಹೇಳಿದವರಿಗೆ 1,500 ರೂ. ಶುಲ್ಕ ವಿಧಿಸುತ್ತೇನೆ. ಇದರಿಂದ ನನಗೂ ಲಾಭ, ಅವರಿಗೂ ಲಾಭ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಅಲ್ಲಾ..ಹೇಳಬೇಡ,’ಜೈ ಶ್ರೀ ರಾಮ್’ ಹೇಳಬೇಕು ಎಂದು 3 ಮಕ್ಕಳಿಗೆ ಚಪ್ಪಲಿಯಲ್ಲಿ ಹೊಡೆದ ಯುವಕ
ಕೊಲ್ಕತ್ತಾದ ಖಾಸಗಿ ಆಸ್ಪತ್ರೆಯ ಇಂಟರ್ವೆನ್ಷನಲ್ ಕಾರ್ಡಿಯಾಲಜಿ ವಿಭಾಗದ ನಿರ್ದೇಶಕರೂ ಆಗಿರುವ ಡಾ. ಹಜ್ರಾ ಆ ಆಸ್ಪತ್ರೆಯಲ್ಲಿ ಈ ರೀತಿಯ ವಿನಾಯಿತಿ ಇಲ್ಲ. ಅದರ ಬದಲಾಗಿ ನನ್ನ ಖಾಸಗಿ ಕ್ಲಿನಿಕ್ಗೆ ಬರುವ ರೋಗಿಗಳಿಗೆ ಮಾತ್ರ ಈ ರಿಯಾಯಿತಿ ಇರಲಿದೆ ಎಂದು ಹೇಳಿದ್ದಾರೆ. ಹೀಗಾಗಿ, ಅವರ ಕ್ಲಿನಿಕ್ ಹೊರಗೆ ‘ಜೈ ಶ್ರೀ ರಾಮ್’ ಘೋಷಣೆಯನ್ನು ಕೂಗುವ ರೋಗಿಗಳಿಗೆ ವೈದ್ಯರ ಸಮಾಲೋಚನಾ ಶುಲ್ಕದಲ್ಲಿ ವಿಶೇಷ ರಿಯಾಯಿತಿ ನೀಡಲಾಗುತ್ತದೆ ಎಂದು ಪೋಸ್ಟರ್ ಹಾಕಲಾಗಿದೆ.
ಇದನ್ನೂ ಓದಿ: ದರೋಡೆಗೆ ಬಂದ ಕಳ್ಳರನ್ನೇ ಕೂಡಿಹಾಕಿದ ಜನರು!
“ನಾನು ಬಿಜೆಪಿಯೊಂದಿಗೆ ನೇರವಾಗಿ ಸಂಬಂಧ ಹೊಂದಿಲ್ಲ, ಆದರೆ ಅವರ ಆಡಳಿತದಲ್ಲಿರುವ ಇತರ ರಾಜ್ಯಗಳು ಪ್ರಗತಿ ಸಾಧಿಸಿದ ರೀತಿಯನ್ನು ನಾನು ಮೆಚ್ಚುತ್ತೇನೆ. ಅಲ್ಲದೆ, ಪ್ರಧಾನಿ ಮೋದಿಯವರೆಂದರೆ ನನಗೆ ಬಹಳ ಇಷ್ಟ. ನನ್ನ ಈ ಕಾರ್ಯದಿಂದ ಬಿಜೆಪಿಗೆ ಸಹಾಯವಾಗಲೆಂಬುದು ನನ್ನ ಉದ್ದೇಶ” ಎಂದು ಅವರು ಹೇಳಿದ್ದಾರೆ. ಹಾಗೇ, ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತಾವು ವಾಸಿಸುವ ಪಶ್ಚಿಮ ಮೇದಿನಿಪುರ ಜಿಲ್ಲೆಯ ಪಿಂಗ್ಲಾದಿಂದ ಬಿಜೆಪಿಯಿಂದ ಟಿಕೆಟ್ ಪಡೆಯುವ ನಿರೀಕ್ಷೆಯಿದೆ ಎಂದು ಕೂಡ ಡಾ. ಹಜ್ರಾ ಹೇಳಿಕೊಂಡಿದ್ದಾರೆ. ಹೀಗಾಗಿ, ಬಿಜೆಪಿ ಟಿಕೆಟ್ ಪಡೆಯಲು ತಮ್ಮ ವೃತ್ತಿಯನ್ನು ಬಳಸಿಕೊಳ್ಳುತ್ತಿರುವ ಅವರ ವಿರುದ್ಧ ಟಿಎಂಸಿ ಸೇರಿದಂತೆ ವಿಪಕ್ಷಗಳು ಟೀಕಾಪ್ರಹಾರ ನಡೆಸಿವೆ.
294 ಸದಸ್ಯ ಬಲದ ಪಶ್ಚಿಮ ಬಂಗಾಳ ವಿಧಾನಸಭೆಗೆ ಏಪ್ರಿಲ್ 23 ಮತ್ತು 29ರಂದು ಚುನಾವಣೆ ನಡೆಯಲಿದೆ. ಮೇ 4ರಂದು ಮತ ಎಣಿಕೆ ನಡೆಯಲಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:24 pm, Tue, 14 April 26




