AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೇತಾಜಿ​​ಗೆ ಅವಮಾನಿಸಿದ ಬಿಜೆಪಿ ಸಂಸದ ಅನಂತ ಮಹಾರಾಜ್; ‘ಬಂಗ ವಿಭೂಷಣ’ ಪ್ರಶಸ್ತಿ ಹಿಂಪಡೆದ ಪಶ್ಚಿಮ ಬಂಗಾಳ ಸರ್ಕಾರ

ನೇತಾಜಿ ಸುಭಾಷ್ ಚಂದ್ರ ಬೋಸ್ ಕುರಿತು ನೀಡಿದ ಆಕ್ಷೇಪಾರ್ಹ ಹೇಳಿಕೆಯ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಸಭಾ ಸಂಸದ ನಾಗೇಂದ್ರನಾಥ್ ರಾಯ್ ಅಲಿಯಾಸ್ ಅನಂತ ಮಹಾರಾಜ್ ಅವರಿಗೆ ನೀಡಲಾಗಿದ್ದ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಬಂಗ ವಿಭೂಷಣ'ವನ್ನು ಹಿಂಪಡೆಯುವುದಾಗಿ ಪಶ್ಚಿಮ ಬಂಗಾಳ ಸರ್ಕಾರ ಇಂದು (ಆಗಸ್ಟ್ 13) ಆದೇಶಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡುವವರ ವಿರುದ್ಧ ತಕ್ಷಣವೇ ಕಟ್ಟುನಿಟ್ಟಿನ ಕ್ರಮ ಜರುಗಿಸಿ ಬಂಧಿಸುವಂತೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಪೊಲೀಸರಿಗೆ ನಿರ್ದೇಶನ ನೀಡಿದ 24 ಗಂಟೆಗಳ ಒಳಗೆ ಈ ಪ್ರಮುಖ ಕ್ರಮ ಕೈಗೊಳ್ಳಲಾಗಿದೆ.

ನೇತಾಜಿ​​ಗೆ ಅವಮಾನಿಸಿದ ಬಿಜೆಪಿ ಸಂಸದ ಅನಂತ ಮಹಾರಾಜ್; 'ಬಂಗ ವಿಭೂಷಣ' ಪ್ರಶಸ್ತಿ ಹಿಂಪಡೆದ ಪಶ್ಚಿಮ ಬಂಗಾಳ ಸರ್ಕಾರ
Suvendu Adhikari And Ananta MaharajImage Credit source: TV9
ಸುಷ್ಮಾ ಚಕ್ರೆ
|

Updated on:Aug 13, 2026 | 6:57 PM

Share

ಕೊಲ್ಕತ್ತಾ, ಆಗಸ್ಟ್ 13: ನಿನ್ನೆಯಷ್ಟೇ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ (Suvendu Adhikari) ನೇತಾಜಿ ಸುಭಾಷ್ ಚಂದ್ರ ಬೋಸ್ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಹೇಳಿಕೆ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಿದ್ದರು. ಆ ಆದೇಶದ 24 ಗಂಟೆಯೊಳಗೆ ಬಿಜೆಪಿಯ ಸಂಸದರ ವಿರುದ್ಧವೇ ಬಂಗಾಳ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ತಮ್ಮದೇ ಪಕ್ಷದ ಸಂಸದ ಅನಂತ ಮಹಾರಾಜ್ ನೇತಾಜಿ ಸುಭಾಷ್ ಚಂದ್ರ ಬೋಸ್ (Netaji Subas Chandra Bose) ಅವರ ಕುರಿತು ನೀಡಿದ ಆಕ್ಷೇಪಾರ್ಹ ಹೇಳಿಕೆಯ ಹಿನ್ನೆಲೆಯಲ್ಲಿ ಅವರಿಗೆ ನೀಡಲಾಗಿದ್ದ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಬಂಗ ವಿಭೂಷಣ’ವನ್ನು ಪಶ್ಚಿಮ ಬಂಗಾಳ ಸರ್ಕಾರ ಇಂದು ವಾಪಾಸ್ ಪಡೆದು ರದ್ದುಗೊಳಿಸಿದೆ.

ಸಂಸದರು, ಶಾಸಕರು ಹಾಗೂ ಸರ್ಕಾರಿ ಅಧಿಕಾರಿಗಳು ಎಲ್ಲರಿಗೂ ಕಾನೂನು ಒಂದೇ ಎಂದು ಬಂಗಾಳದ ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಸರ್ಕಾರದ ಮಾಹಿತಿ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಇಲಾಖೆಯು ಇಂದು ಈ ಕುರಿತು ಅಧಿಕೃತ ಆದೇಶ ಹೊರಡಿಸಿದೆ. “2026ರ ಫೆಬ್ರವರಿ 21ರಂದು ನಾಗೇಂದ್ರ ರಾಯ್ ಅಲಿಯಾಸ್ ಅನಂತ ಮಹಾರಾಜ್ ಅವರಿಗೆ ಪ್ರಧಾನ ಮಾಡಲಾಗಿದ್ದ ಬಂಗ ವಿಭೂಷಣ ಪ್ರಶಸ್ತಿಯನ್ನು ಪಶ್ಚಿಮ ಬಂಗಾಳ ಸರ್ಕಾರವು ತಕ್ಷಣದಿಂದ ಜಾರಿಗೆ ಬರುವಂತೆ ವಾಪಾಸ್ ಪಡೆಯುತ್ತದೆ ಮತ್ತು ರದ್ದುಗೊಳಿಸುತ್ತದೆ” ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಪಾಕ್ ಉಗ್ರರ ಹಿಟ್​ಲಿಸ್ಟ್​ನಲ್ಲಿ ಬಂಗಾಳದ ಸಿಎಂ; ಜಂತರ್ ಮಂತರ್ ಪ್ರತಿಭಟನೆಯೊಳಗೆ ನುಸುಳಲು ಯತ್ನಿಸಿತ್ತು ಜೈಶ್

ಅಲ್ಲದೆ, ಅನಂತ ಮಹಾರಾಜ್ ಇನ್ಮುಂದೆ ತಮ್ಮನ್ನು ಬಂಗ ವಿಭೂಷಣ ಪುರಸ್ಕೃತರು ಎಂದು ಗುರುತಿಸಿಕೊಳ್ಳುವಂತಿಲ್ಲ ಹಾಗೂ ಪ್ರಶಸ್ತಿಗೆ ಸಂಬಂಧಿಸಿದ ಯಾವುದೇ ಗೌರವ, ಸವಲತ್ತು ಅಥವಾ ಸೌಲಭ್ಯಗಳನ್ನು ಪಡೆಯುವಂತಿಲ್ಲ ಎಂದು ನಿರ್ದೇಶಿಸಲಾಗಿದೆ. ಸಂಬಂಧಪಟ್ಟ ಎಲ್ಲಾ ಅಧಿಕೃತ ದಾಖಲೆಗಳು ಮತ್ತು ಬಂಗ ವಿಭೂಷಣ ಪುರಸ್ಕೃತರ ಪಟ್ಟಿಯಿಂದ ಅವರ ಹೆಸರನ್ನು ತಕ್ಷಣವೇ ತೆಗೆದುಹಾಕಲು ಮತ್ತು ಮುಂದಿನ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

ನೇತಾಜಿಯನ್ನು ‘ಯುದ್ಧ ಅಪರಾಧಿ’ ಎಂದಿದ್ದ ಅನಂತ ಮಹಾರಾಜ್:

ಅನಂತ ಮಹಾರಾಜ್ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರನ್ನು “ಯುದ್ಧ ಅಪರಾಧಿ” (War Criminal) ಎಂದು ಕರೆದಿದ್ದರಲ್ಲದೆ, ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನೇತಾಜಿ ಅವರ ನಾಯಕತ್ವ ಹಾಗೂ ಆಜಾದ್ ಹಿಂದ್ ಫೌಜ್‌ನ ಪಾತ್ರವನ್ನು ಪ್ರಶ್ನಿಸಿದ್ದರು.

ಇದನ್ನೂ ಓದಿ: ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮದಿನವನ್ನು ಪರಾಕ್ರಮ ದಿನ ಆಚರಿಸುವುದರ ಹಿಂದಿದೆ ಈ ಕಾರಣ

ಇದಕ್ಕೂ ಮುನ್ನ ಬುಧವಾರ ಮಾತನಾಡಿದ್ದ ಮುಖ್ಯಮಂತ್ರಿ ಸುವೇಂಧು ಅಧಿಕಾರಿ, ನೇತಾಜಿ ಸುಭಾಷ್ ಚಂದ್ರ ಬೋಸ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಹಾಕುವವರ ವಿರುದ್ಧ ಬಂಧನವೂ ಸೇರಿದಂತೆ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದರು. ಉತ್ತರ ಬಂಗಾಳದ ಹಲವು ಶಾಸಕರು ಮತ್ತು ಸಚಿವರು ಈ ಕುರಿತು ದೂರು ನೀಡಿದ್ದಾರೆ ಎಂದಿದ್ದರು. “ನೇತಾಜಿ ಬಗ್ಗೆ ತಪ್ಪು ಮಾಹಿತಿ ಹರಡುವ ಮತ್ತು ಮೀಮ್ಸ್‌ಗಳನ್ನು ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು, ಅವರನ್ನು ಬಂಧಿಸಲಾಗುವುದು” ಎಂದು ಹೇಳಿದ್ದರು.

ಅನಂತ ಮಹಾರಾಜ್ ಯಾರು?:

ಅನಂತ ಮಹಾರಾಜ್ ಎಂದೇ ಪ್ರಸಿದ್ಧರಾಗಿರುವ ನಾಗೇಂದ್ರ ರಾಯ್ ಜುಲೈ 2023ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಪಶ್ಚಿಮ ಬಂಗಾಳದಿಂದ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದರು. ಅವರು ‘ಗ್ರೇಟರ್ ಕೂಚ್ ಬಿಹಾರ್ ಪೀಪಲ್ಸ್ ಅಸೋಸಿಯೇಷನ್’ ನಾಯಕ ಹಾಗೂ ಉತ್ತರ ಬಂಗಾಳದ ರಾಜಬಂಶಿ ಸಮುದಾಯದ ಪ್ರಭಾವಿ ನಾಯಕರಾಗಿದ್ದಾರೆ. ಈ ಹಿಂದೆ ಅವರು ಪ್ರತ್ಯೇಕ ಕೂಚ್ ಬಿಹಾರ್ ರಾಜ್ಯಕ್ಕೆ ಆಗ್ರಹಿಸುತ್ತಿದ್ದರಾದರೂ, ರಾಜ್ಯಸಭಾ ಸಂಸದರಾದ ನಂತರ ತಮ್ಮ ನಿಲುವನ್ನು ಬದಲಾಯಿಸಿಕೊಂಡಿದ್ದರು.

ಕೋಲ್ಕತ್ತಾದಲ್ಲಿ ನಡೆದ ಅಂತರರಾಷ್ಟ್ರೀಯ ಮಾತೃಭಾಷಾ ದಿನಾಚರಣೆಯ ಸಂದರ್ಭದಲ್ಲಿ, 2026ರ ಫೆಬ್ರವರಿ 21ರಂದು ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅನಂತ ಮಹಾರಾಜ್ ಅವರಿಗೆ ಬಂಗ ವಿಭೂಷಣ ಪ್ರಶಸ್ತಿ ಪ್ರಧಾನ ಮಾಡಿದ್ದರು. ಪಶ್ಚಿಮ ಬಂಗಾಳ ರಾಜ್ಯಕ್ಕೆ ನೀಡಿದ ವಿಶೇಷ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:49 pm, Thu, 13 August 26

Follow Us