ಕೂಲಿ ಕೆಲಸ ಮಾಡುತ್ತಿದ್ದ ಆಂಧ್ರದ ಲೇಡಿ ಡಾನ್ ಮನೆಯಲ್ಲಿ ಕೋಟ್ಯಂತರ ರೂ. ಮೌಲ್ಯದ ಅಕ್ರಮ ಆಸ್ತಿ ದಾಖಲೆ ಪತ್ತೆ
ಒಂದಾನೊಂದು ಕಾಲದಲ್ಲಿ ಕೃಷಿ ಕೂಲಿ ಕಾರ್ಮಿಕಳಾಗಿ, ಒಂದೇ ಕೊಠಡಿಯ ಸಣ್ಣ ಮನೆಯಲ್ಲಿ ವಾಸಿಸುತ್ತಿದ್ದ ಕೊನೇಟಿ ಸುಲೋಚನಾ ಸ್ಥಳೀಯ ರಾಜಕೀಯ ನಾಯಕರು ಮತ್ತು ಕೆಲವು ಪೊಲೀಸ್ ಅಧಿಕಾರಿಗಳ ಬೆಂಬಲದೊಂದಿಗೆ ಅತ್ಯಲ್ಪ ಅವಧಿಯಲ್ಲಿ 'ಲೇಡಿ ಡಾನ್' ಆಗಿ ಬೆಳೆದರು. ಪೊಲೀಸ್ ದಾಳಿಗಳು ಮತ್ತು ಜಮೀನು ವಿವಾದಗಳಿಗೆ ಸಂಬಂಧಿಸಿದ ದೂರುಗಳ ಬೆನ್ನಲ್ಲೇ ಆಕೆಯ ವಿರುದ್ಧ ಕೇಳಿಬರುತ್ತಿರುವ ರಾಜಕೀಯ ನಂಟು ಸಾರ್ವಜನಿಕರಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಈಕೆ, ಮದನಪಲ್ಲೆಯಲ್ಲಿ ವಿವಾದಾತ್ಮಕ ವ್ಯಕ್ತಿಯಾಗಿ ಹೊರಹೊಮ್ಮಿದ್ದು, ಸಾರ್ವಜನಿಕರು ಹಾಗೂ ಪೊಲೀಸರ ಗಮನ ಸೆಳೆದಿದ್ದಾರೆ.

ಮದನಪಲ್ಲಿ, ಸೆಪ್ಟೆಂಬರ್ 7: ಆಂಧ್ರಪ್ರದೇಶದ ಮದನಪಲ್ಲಿ ಪಟ್ಟಣದ ಲೇಡಿ ಡಾನ್ ಎಂದೇ ಖ್ಯಾತರಾದ ಕೊನೇಟಿ ಸುಲೋಚನಾ ಅವರ ನಿವಾಸದಲ್ಲಿ ಪೊಲೀಸರು ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಅಪಾರ ಪ್ರಮಾಣದ ಅಕ್ರಮ ಆಸ್ತಿಗಳನ್ನು ಪತ್ತೆಹಚ್ಚಿದ್ದಾರೆ. ಕೋಟ್ಯಂತರ ರೂ. ಮೌಲ್ಯದ ಆಸ್ತಿ ದಾಖಲೆಗಳನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ರಾಜಕೀಯ ನಾಯಕರೊಂದಿಗಿನ ಸಂಪರ್ಕದ ಮೂಲಕ ಅವರು ಡಾನ್ ಸ್ಥಾನಮಾನಕ್ಕೆ ಏರಿದ್ದಾರೆ ಎಂದು ತಿಳಿದುಬಂದಿದೆ. ಈ ಹಿಂದೆ ಅವರ ವಿರುದ್ಧ ರೌಡಿ ಶೀಟ್ ತೆರೆಯಲಾಗಿತ್ತು. ಇತ್ತೀಚಿನ ಪ್ರಕರಣವೊಂದರಲ್ಲಿ, ನ್ಯಾಯಾಲಯದ ಆದೇಶದ ಪ್ರಕಾರ ಸುಲೋಚನಾ ಮತ್ತು ಅವರ ಸಹೋದರನ ನಿವಾಸದಲ್ಲಿ ಶೋಧ ನಡೆಸಲಾಯಿತು. ಈ ವೇಳೆ 50ಕ್ಕೂ ಹೆಚ್ಚು ಆಸ್ತಿಗಳ ವಿವರಗಳನ್ನು ಗುರುತಿಸಲಾಯಿತು.
ಸಾಲ ನೀಡಲಾಗಿದೆ ಎಂದು ನಕಲಿ ದಾಖಲೆಗಳನ್ನು ಸೃಷ್ಟಿಸಿ, ನಂತರ ಬೆದರಿಕೆ ಹಾಕಿ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಈ ವಿಷಯ ಬೆಳಕಿಗೆ ಬಂದಾಗ, ಸಂತ್ರಸ್ತರು ನ್ಯಾಯಕ್ಕಾಗಿ ಪೊಲೀಸರನ್ನು ಸಂಪರ್ಕಿಸಿದರು. ನಕಲಿ ದಾಖಲೆಗಳನ್ನು ಬಳಸಿ ವಂಚನೆ ಮಾಡಿದ ಸುಲೋಚನಾ ವಿರುದ್ಧ ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ. ವಿವಿಧ ಪ್ರದೇಶಗಳಿಂದ ಆಸ್ತಿ ದಾಖಲೆಗಳು, ಪ್ರಾಮಿಸರಿ ನೋಟ್ಗಳು, ಖಾಲಿ ಬಾಂಡ್ಗಳು ಮತ್ತು ಸ್ಟಾಂಪ್ ಪೇಪರ್ಗಳನ್ನು ವಶಪಡಿಸಿಕೊಂಡ ಪೊಲೀಸರು, ಅವುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುತ್ತಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ಮ್ಯಾಟ್ರಿಮೋನಿಯಲ್ನಲ್ಲಿ ಪರಿಚಯವಾದ ವ್ಯಕ್ತಿಯಿಂದ ವೈದ್ಯೆಗೆ ಪಂಗನಾಮ: ಪೀಕಿದ್ದು 2.2 ಲಕ್ಷಕ್ಕೂ ಅಧಿಕ ಹಣ
ಯಾರು ಈ ಸುಲೋಚನಾ?:
ಮದನಪಲ್ಲಿಯ ನೀರುಗಟ್ಟುವರಿಪಲ್ಲೆಯ ನಿವಾಸಿ ಸುಲೋಚನಾ ಒಬ್ಬ ಸಾಮಾನ್ಯ ಮಹಿಳೆ. ಆದರೆ, ರಾಜಕಾರಣಿಗಳು ಮತ್ತು ಅಧಿಕಾರಿಗಳೊಂದಿಗಿನ ಸಂಪರ್ಕದಿಂದಾಗಿ ಅವರು ಕಾಲಾನಂತರದಲ್ಲಿ ಲೇಡಿ ಡಾನ್ ಆಗಿ ಬೆಳೆದರು. ಅವರ ಬೆಂಬಲದೊಂದಿಗೆ, ಆಕೆ ಬಹಳ ಕಡಿಮೆ ಸಮಯದಲ್ಲಿ ಕೋಟ್ಯಂತರ ರೂ. ಆಸ್ತಿ ಮಾಡಿದರು. ಆಕೆ ಬಂದಕಮ್ಮೈಡಪಲ್ಲೆ, ಪೊನ್ನುಟಿಪಲೆಮ್ ಮತ್ತು ಇತರ ಪ್ರದೇಶಗಳಲ್ಲಿ ಭೂಮಿಯನ್ನು ಖರೀದಿಸಿದರು ಮತ್ತು ಅನೇಕ ಸ್ಥಳಗಳಲ್ಲಿ ಅತಿಕ್ರಮಣಗಳನ್ನು ಸಹ ಮಾಡಿದರು.
ರಿಯಲ್ ಎಸ್ಟೇಟ್ ಉದ್ಯಮದ ನೆಪದಲ್ಲಿ ಸುಲೋಚನಾ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಗಳಿಗೆ ಸಂಬಂಧಿಸಿದ ಜಮೀನು ಮಾಫಿಯಾ ಜಾಲದಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ಆರೋಪವಿದೆ. ಅಮಾಯಕರನ್ನು ಹೆದರಿಸಿ, ಬೆದರಿಸಿ ಬೆಲೆಬಾಳುವ ಆಸ್ತಿಗಳನ್ನು ತನ್ನ ವಶಕ್ಕೆ ಪಡೆದುಕೊಳ್ಳುತ್ತಿದ್ದರು ಎನ್ನಲಾಗಿದೆ. ಜನರಿಗೆ ಹಣವನ್ನು ಸಾಲವಾಗಿ ನೀಡಿ, ನಂತರ ಆ ಸಾಲ ತೀರಿಸುವಂತೆ ತೀವ್ರ ಒತ್ತಡ ಹೇರಿ, ಬೆದರಿಕೆ ಒಡ್ಡುವ ಮೂಲಕ ಅವರ ಕೋಟ್ಯಂತರ ಮೌಲ್ಯದ ಜಮೀನುಗಳನ್ನು ಕಬಳಿಸುತ್ತಿದ್ದರು ಎಂಬ ದೂರುಗಳು ಬಂದಿವೆ. ಸ್ಥಳೀಯರ ಪ್ರಕಾರ, ಆಕೆಯ ನಿವಾಸದ ಸುತ್ತಲೂ ಬೌನ್ಸರ್ಗಳನ್ನು ಭದ್ರತೆಗೆ ನಿಯೋಜಿಸಲಾಗಿತ್ತು.
ಇದನ್ನೂ ಓದಿ: ಅಡುಗೆ ಮಾಡದೆ ಡ್ಯಾನ್ಸ್ ಕ್ಲಾಸ್ಗೆ ಹೋಗುತ್ತೇನೆಂದ ಪತ್ನಿಗೆ ಮಕ್ಕಳ ಎದುರೇ ಇರಿದು ಕೊಂದ ಗಂಡ!
ಮದನಪಲ್ಲೆ ಡಿಎಸ್ಪಿ ಬುಚಿರಾಜು ನೇತೃತ್ವದ ಮೂರು ಪೊಲೀಸ್ ತಂಡಗಳು ಸುಲೋಚನಾ ನಿವಾಸ ಹಾಗೂ ಆಕೆಯ ಸಹೋದರ ಶ್ರೀನಿವಾಸುಲು ಮನೆ ಮೇಲೆ ದಿಢೀರ್ ದಾಳಿ ನಡೆಸಿ ಶೋಧ ಕೈಗೊಂಡವು. ಪೊಲೀಸರು ದಾಳಿ ನಡೆಸಿದಾಗ ಸುಲೋಚನಾ ಮನೆಯಲ್ಲಿ ಇರಲಿಲ್ಲ. ಅವರ ಮನೆಯಲ್ಲಿ ಪತ್ತೆಯಾದ ದಾಖಲೆಗಳು, ಖಾಲಿ ಬಾಂಡ್ ಪೇಪರ್ಗಳು ಮತ್ತು ಪ್ರಾಮಿಸರಿ ನೋಟ್ಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದೆ ಎಂದು ಡಿಎಸ್ಪಿ ಬುಚಿರಾಜು ಸ್ಪಷ್ಟಪಡಿಸಿದ್ದಾರೆ.
ಮಾರ್ಪು ವೆಂಕಟೇಶ್ ನಾಯ್ಡು ನೀಡಿದ ದೂರಿನ ಆಧಾರದ ಮೇಲೆ ವಾರಂಟ್ ಪಡೆದು ಈ ದಾಳಿ ನಡೆಸಲಾಗಿತ್ತು. ಶೋಧದ ವೇಳೆ ಪೊಲೀಸರು ನಕಲಿ ಸಹಿಗಳನ್ನು ಹೊಂದಿರುವ ಸುಮಾರು 50 ದಾಖಲೆಗಳು ಮತ್ತು 15 ಬಾಂಡ್ ಪೇಪರ್ಗಳನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಆಸ್ತಿ ಪತ್ರಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಸಾಕ್ಷ್ಯಗಳನ್ನು ನಾಶಪಡಿಸುವುದನ್ನು ಅಥವಾ ಸ್ಥಳಾಂತರಿಸುವುದನ್ನು ತಡೆಯಲು ಪೊಲೀಸರು ಈ ದಿಢೀರ್ ದಾಳಿ ನಡೆಸಿದ್ದಾರೆ.
ಪೊಲೀಸ್ ದಾಖಲೆಗಳ ಪ್ರಕಾರ, ಮದನಪಲ್ಲೆಯ ಒನ್ ಟೌನ್, ಟೂ ಟೌನ್ ಮತ್ತು ತಾಲೂಕು ಪೊಲೀಸ್ ಠಾಣೆಗಳು ಸೇರಿದಂತೆ ವಿವಿಧೆಡೆ ಸುಲೋಚನಾ ವಿರುದ್ಧ 14 ಅಪರಾಧ ಪ್ರಕರಣಗಳು ದಾಖಲಾಗಿವೆ. ಟೂ ಟೌನ್ ಪೊಲೀಸ್ ಠಾಣೆಯಲ್ಲಿ ಆಕೆಯ ವಿರುದ್ಧ ‘ರೌಡಿ ಶೀಟ್’ ಕೂಡ ತೆರೆಯಲಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




