Prithvi Shaw: ಪೃಥ್ವಿ ಶಾ ಗೆಳೆಯನಿಗೆ ಕೊಲೆ ಬೆದರಿಕೆ: ನಟಿಯ ವಿರುದ್ಧ ಮತ್ತೊಂದು ಕೇಸ್
Prithvi Shaw-Sapna Gill: ಸಪ್ನಾ ಗಿಲ್ ಹಾಗೂ ಸ್ನೇಹಿತರು ರೆಸ್ಟೋರೆಂಟ್ ಹೊರಗೆ ಕಾಯುತ್ತಾ ನಿಂತಿದ್ದರು. ಅಲ್ಲದೆ ಪೃಥ್ವಿ ಶಾ ಹೋಗುತ್ತಿದ್ದ ಕಾರನ್ನು ಹಿಂಬಾಲಿಸಿ ಬೇಸ್ ಬಾಲ್ ಸ್ಟಿಕ್ನಿಂದ ಕಾರಿನ ಗಾಜನ್ನು ಒಡೆದಿದ್ದರು.
Updated on:Feb 21, 2023 | 6:30 PM

ಟೀಮ್ ಇಂಡಿಯಾ ಆಟಗಾರ ಪೃಥ್ವಿ ಶಾ ಹಾಗೂ ಭೋಜ್ಪುರಿ ನಟಿ ಸಪ್ನಾ ಗಿಲ್ ನಡುವಣ ಸೆಲ್ಫಿ ವಿವಾದವು ಇದೀಗ ಕೋರ್ಟ್ ಮೆಟ್ಟಿಲೇರಿದೆ. ಈಗಾಗಲೇ ಈ ಪ್ರಕರಣದಲ್ಲಿ ಭಾಗಿಯಾಗಿದ್ದ 8 ಮಂದಿಯ ವಿರುದ್ಧ ಪೃಥ್ವಿ ಎಫ್ಐಆರ್ ದಾಖಲಿಸಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಪ್ನಾ ಗಿಲ್ ಹಾಗೂ ಆಕೆಯ ಸ್ನೇಹಿತರನ್ನು ಪೊಲೀಸರು ಬಂಧಿಸಿದ್ದರು. ಈ ಬಗ್ಗೆ ಮುಂಬೈ ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲಿ ದಾವೆ ಹೂಡಿದ್ದ ಸಪ್ನಾ ಗಿಲ್ ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಇದರ ಬೆನ್ನಲ್ಲೇ ಇದೀಗ ಪೃಥ್ವಿ ಶಾ ಅವರ ಸ್ನೇಹಿತ ಆಶಿಶ್ಗೆ ನಟಿ ಕೊಲೆ ಬೆದರಿಕೆ ಒಡ್ಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸ್ನೇಹಿತನ ನೆರವಿಗೆ ನಿಂತಿದ್ದಕ್ಕೆ ನನಗೆ ಸಪ್ನಾ ಗಿಲ್ ಕೊಲೆ ಬೆದರಿಕೆ ಹಾಕಿದ್ದಾಳೆ ಎಂದು ಆಶಿಶ್ ದೂರು ದಾಖಲಿಸಿದ್ದಾರೆ. ಅದರಂತೆ ಇದೀಗ ನಟಿಯ ಕೇಸ್ನಲ್ಲಿ ಐಪಿಸಿ ಸೆಕ್ಷನ್ 387 ಅನ್ನು ಕೂಡ ಸೇರಿಸಲಾಗಿದೆ.

ಈ ಘಟನೆ ನಡೆಯುವಾಗ ಆಶಿಶ್ ಕೂಡ ಪೃಥ್ವಿ ಶಾ ಜೊತೆಯಲ್ಲಿದ್ದರು. ಫೆಬ್ರವರಿ 15 ರಂದು ನಡೆದ ಜಗಳದ ನಂತರ ಆಶಿಶ್ ಅವರ ಕಾರಿನ ಗಾಜುಗಳನ್ನು ಸಪ್ನಾ ಗಿಲ್ ಹಾಗೂ ಸ್ನೇಹಿತರು ಜೊತೆಗೂಡಿ ಒಡೆದು ಹಾಕಿದ್ದರು. ಈ ಸಂಬಂಧ ಆಶಿಶ್ ನಟಿಯ ವಿರುದ್ಧ ದೂರು ಕೂಡ ದಾಖಲಿಸಿದ್ದರು. ಇದೀಗ ಕೊಲೆ ಬೆದರಿಕೆ ಹಾಕಿರುವ ಬಗ್ಗೆ ಮತ್ತೊಂದು ದೂರನ್ನು ದಾಖಲಿಸಲಾಗಿದೆ.

ಏನಿದು ಪ್ರಕರಣ: ಫೆಬ್ರವರಿ 15 ರಂದು, ಟೀಮ್ ಇಂಡಿಯಾ ಆಟಗಾರ ಪೃಥ್ವಿ ಶಾ ಅವರು ತಮ್ಮ ಕೆಲ ಸ್ನೇಹಿತರೊಂದಿಗೆ ಮುಂಬೈನ ಸಾಂತಾಕ್ರೂಜ್ ಹೊಟೆಲ್ಗೆ ಹೋಗಿದ್ದರು. ಇದೇ ವೇಳೆ ಅಲ್ಲಿ ಪಾರ್ಟಿ ಮಾಡುತ್ತಿದ್ದ ಬೋಜ್ಪುರಿ ನಟಿ ಸಪ್ನಾ ಗಿಲ್ ಹಾಗೂ ಸ್ನೇಹಿತರು ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದರು. ಆದರೆ ಸೆಲ್ಫಿಗೆ ಪೋಸ್ ನೀಡಲು ಪೃಥ್ವಿ ಶಾ ನಿರಾಕರಿಸಿದ್ದಾರೆ.

ಇದರಿಂದ ಕೋಪಗೊಂಡ ಸಪ್ನಾ ಗಿಲ್ ಮತ್ತು ಆಕೆಯ ಸ್ನೇಹಿತರು ಜಗಳವಾಡಿದ್ದಾರೆ. ಈ ವೇಳೆ ರೆಸ್ಟೋರೆಂಟ್ ಮ್ಯಾನೇಜರ್ ಅನ್ನು ಕರೆಸಿದ ಪೃಥ್ವಿ ಶಾ ಸ್ನೇಹಿತ ಆಶಿಶ್ ಎಲ್ಲರನ್ನು ಹೊರಗೆ ಕಳುಹಿಸಲು ಸೂಚಿಸಿದರು. ತಕ್ಷಣವೇ ಸಪ್ನಾ ಗಿಲ್ ಹಾಗೂ ಸ್ನೇಹಿತರನ್ನು ಹೊಟೇಲ್ನಿಂದ ಹೊರಹಾಕಲಾಯಿತು.

ಇದರಿಂದ ಮತ್ತಷ್ಟು ರೊಚ್ಚಿಗೆದ್ದ ಸಪ್ನಾ ಗಿಲ್ ಹಾಗೂ ಸ್ನೇಹಿತರು ರೆಸ್ಟೋರೆಂಟ್ ಹೊರಗೆ ಕಾಯುತ್ತಾ ನಿಂತಿದ್ದರು. ಅಲ್ಲದೆ ಪೃಥ್ವಿ ಶಾ ಹೋಗುತ್ತಿದ್ದ ಕಾರನ್ನು ಹಿಂಬಾಲಿಸಿ ಬೇಸ್ ಬಾಲ್ ಸ್ಟಿಕ್ನಿಂದ ಕಾರಿನ ಗಾಜನ್ನು ಒಡೆದಿದ್ದರು. ಇದೇ ವೇಳೆ ಟೀಮ್ ಇಂಡಿಯಾ ಆಟಗಾರನ ಮೇಲೆ ಹಲ್ಲೆಗೆ ಮುಂದಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಲಾಗಿತ್ತು. ಇದೀಗ ಪೃಥ್ವಿ ಶಾ ದೂರಿಗೆ ಸಪ್ನಾ ಗಿಲ್ ಕೂಡ ಪ್ರತಿ ದೂರು ನೀಡಿದ್ದಾರೆ.
Published On - 6:30 pm, Tue, 21 February 23

TV9 Kannada
Read More



