- Kannada News Photo gallery Madikeri Tanal Ashram Wedding: Maina Finds New Life and Family in Heartwarming Kodava Ceremony
ಅನಾಥಾಶ್ರಮದಲ್ಲಿ ಮದ್ವೆ ಸಂಭ್ರಮ: ಅನಾಥೆ ಬಾಳಲ್ಲಿ ಹೊಸ ಬೆಳಕು, ತುಂಬು ಮನೆ ಸೇರಿದ ಮೈನಾ
ಮಡಿಕೇರಿಯ ತನಲ್ ಆಶ್ರಮದಲ್ಲಿದ್ದ ಯುವತಿಗೆ ಹೊಸ ಜೀವನದ ಬಾಗಿಲು ತೆರೆದಿದೆ. ಕೊಡವ ಸಂಪ್ರದಾಯದಂತೆ ವಿವಾಹ ನೆರವೇರಿದ್ದು, ತುಂಬು ಕುಟುಂಬ ಸೇರಿದ್ದಾರೆ. ಆಶ್ರಮದ ವ್ಯವಸ್ಥಾಪಕ ಮೊಹಮ್ಮದ್ ತಂದೆಯ ಸ್ಥಾನದಲ್ಲಿ ನಿಂತು ಧಾರೆ ಎರೆದಿದ್ದು ವಿಶೇಷ. ಈ ಅಪರೂಪ ವಿವಾಹದ ಸುಂದರ ಫೋಟೋಗಳು ಇಲ್ಲಿವೆ ನೋಡಿ.
Updated on:Apr 24, 2026 | 3:29 PM

ಬದುಕಿನಲ್ಲಿ ಎಲ್ಲವೂ ಮುಗಿಯಿತು, ಎಲ್ಲರನ್ನು ಕಳೆದುಕೊಂಡು ಅನಾಥರಾಗಿದ್ದೇವೆ ಎನ್ನುವ ಭಾವನೆಯಲ್ಲಿ ಅನಾಥಾಶ್ರಮಕ್ಕೆ ಬರುತ್ತಾರೆ. ಆದರೆ ಅಂತಹ ಆಶ್ರಮವೊಂದರಲ್ಲಿ ಮದುವೆಯ ಸಂಭ್ರಮ ಮನೆ ಮಾಡಿತ್ತು. ಅನಾಥೆಯಾಗಿದ್ದ ಯುವತಿಯ ಬಾಳಲ್ಲಿ ಹೊಸ ಬೆಳಕು ಮೂಡಿದೆ. ಹಸೆಮಣೆ ಏರುವ ಮೂಲಕ ತುಂಬು ಕುಟುಂಬವನ್ನು ಕೂಡಿದ್ದಾರೆ.

ಹೆಸರೆ ಸೂಚಿಸುವಂತೆ ತನಲ್ ಅಂದ್ರೆ ನೆರಳು. ಅಂದರೆ ಬದುಕಿನಲ್ಲಿ ಯಾರು ಇಲ್ಲ ಎನ್ನುವವರಿಗೆ ಆಶ್ರಯ ನೀಡುವ ಆಶ್ರಮ ಇದು. ಮಡಿಕೇರಿಯ ಈ ಆಶ್ರಮದಲ್ಲಿ ಗುರುವಾರ ಮದುವೆ ಸಂಭ್ರಮ ಮನೆ ಮಾಡಿತ್ತು. ಹಸಿರು ತಳಿರು ತೋರಣ, ಹೂವುಗಳಿಂದ ಸಿಂಗಾರಗೊಂಡಿತ್ತು. ತೆಂಗಿನ ಗರಿ, ಗೊನೆತೂಗುವ ಬಾಳೆ ಮರಗಳ ನಿಲ್ಲಿಸಿ ಚಪ್ಪರ ಹಾಕಲಾಗಿತ್ತು.

ತನಲ್ ಆಶ್ರಮ ಸೇರಿ ನಾಲ್ಕು ವರ್ಷಗಳಿಂದ ಇಲ್ಲಿಯೇ ಬದುಕು ದೂಡುತ್ತಿದ್ದ ಮೈನಾ ಅವರ ಮದುವೆ ಸಂಭ್ರಮ ಮನೆ ಮಾಡಿತ್ತು. ಮಡಿಕೇರಿ ತಾಲ್ಲೂಕಿನ ಬೆಟ್ಟತ್ತೂರಿನ ಪೂವಣ್ಣ ಅವರೊಂದಿಗೆ ಕೊಡವ ಸಂಪ್ರದಾಯದಂತೆ ಮದುವೆ ನೆರವೇರಿತು. ತನಲ್ ಸಂಸ್ಥೆ ತವರು ಮನೆಯಂತೆ, ಸಂಸ್ಥೆಯ ವ್ಯವಸ್ಥಾಪಕ ಮೊಹಮ್ಮದ್ ಅವರು ವಧು ಮೈನಾ ಅವರ ತಂದೆಯ ಸ್ಥಾನದಲ್ಲಿ ನಿಂತು ಧಾರೆ ಎರೆದರು.

ಮೊಹಮ್ಮದ್ ಅವರು ಕೊಡವ ಸಂಪ್ರದಾಯದಂತೆ ಮದುವೆ ಮಾಡಿದ್ದು ಮಾತ್ರ ವಿಶೇಷ. ಹಿಂದೂ- ಮುಸಲ್ಮಾನರು ಎನ್ನುವ ಯಾವ ಭೇದ ಭಾವವಿಲ್ಲದೆ ಎಲ್ಲರೂ ಒಟ್ಟಾಗಿ ಮದುವೆ ಮಾಡಿದ್ದು ಎಲ್ಲರಿಗೂ ಮಾದರಿಯಾಗಿದೆ.

ಮೈನಾ ಮತ್ತು ಪೂವಣ್ಣ ಕೊಡವ ಧಿರಿಸಿನಲ್ಲಿ ಸಿಂಗಾರಗೊಂಡಿದ್ದರು. ನವಜೋಡಿಗೆ ಅಕ್ಷತೆ ಹಾಕಿ, ಉಡುಗೊರೆ ನೀಡಿ ಹರಸಿ, ಹಾರೈಸಿದರು. ಮದುವೆಗೆ ಕೊಡಗು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶೆ ಶುಭ, ರಾಜಕೀಯ ಮುಖಂಡರು, ಬಂಧು ಬಳಗ ಎಲ್ಲರೂ ಸಾಕ್ಷಿಯಾದರು.

ತನ್ನವರು ಯಾರೂ ಇಲ್ಲ, ನನ್ನದೆನ್ನುವ ಮನೆಯಿಲ್ಲ ಎಂದು ಆಶ್ರಮದಲ್ಲಿ ಬದುಕುತ್ತಿದ್ದ ಮೈನಾ ಇದೀಗ ಹೊಸ ಬದುಕಿನ ಪಯಣಕ್ಕೆ ಹೆಜ್ಜೆ ಇಟ್ಟಿದ್ದು, ನವಜೋಡಿಯ ಬದುಕು ಖುಷಿಯಾಗಿರಲಿ ಎಂಬುವುದು ಎಲ್ಲರ ಆಶಯವಾಗಿದೆ.
Published On - 3:28 pm, Fri, 24 April 26



