Duleep Trophy 2023: ರೋಚಕಘಟ್ಟದಲ್ಲಿ ದುಲೀಪ್ ಟ್ರೋಫಿ ಫೈನಲ್ ಪಂದ್ಯ

Duleep Trophy 2023 Final: ಮೊದಲ ಇನಿಂಗ್ಸ್ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್​ನಲ್ಲಿ 297 ರನ್​ಗಳ ಗುರಿ ಪಡೆದ ಪಶ್ಚಿಮ ವಲಯ ತಂಡವು 18 ರನ್ ​ಗಳಿಸುಷ್ಟರಲ್ಲಿ 2 ವಿಕೆಟ್ ಕಳೆದುಕೊಂಡಿತು.

Duleep Trophy 2023: ರೋಚಕಘಟ್ಟದಲ್ಲಿ ದುಲೀಪ್ ಟ್ರೋಫಿ ಫೈನಲ್ ಪಂದ್ಯ
ಸಾಂದರ್ಭಿಕ ಚಿತ್ರ
Follow us
| Updated By: ಝಾಹಿರ್ ಯೂಸುಫ್

Updated on: Jul 15, 2023 | 9:24 PM

Duleep Trophy 2023: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಶ್ಚಿಮ ವಲಯ vs ದಕ್ಷಿಣ ವಲಯ ನಡುವಣ ದುಲೀಪ್ ಟ್ರೋಫಿಯ ಫೈನಲ್ ಪಂದ್ಯವು ರೋಚಕಘಟ್ಟಕ್ಕೆ ಬಂದು ನಿಂತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಪಶ್ಚಿಮ ವಲಯ ತಂಡದ ನಾಯಕ ಪ್ರಿಯಾಂಕ್ ಪಾಂಚಾಲ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ದಕ್ಷಿಣ ವಲಯ ನಾಯಕ ಹನುಮ ವಿಹಾರಿ (63) ಅರ್ಧಶತಕ ಬಾರಿಸಿ ಮಿಂಚಿದರು.

ಆದರೆ ಉಳಿದ ಬ್ಯಾಟರ್​ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ ದಕ್ಷಿಣ ವಲಯ ತಂಡವು 213 ರನ್​ಗಳಿಗೆ ಆಲೌಟ್ ಆಯಿತು. ಪಶ್ವಿಮ ವಲಯ ಪರ ಅರ್ಝಾನ್, ಚಿಂತನ್ ಗಜ, ಡಿ. ಜಡೇಜಾ ತಲಾ 2 ವಿಕೆಟ್ ಪಡೆದರು.

ಇದಕ್ಕುತ್ತರವಾಗಿ ಇನಿಂಗ್ಸ್ ಆರಂಭಿಸಿದ ಪಶ್ಚಿಮ ವಲಯ ತಂಡಕ್ಕೆ ಆರಂಭಿಕ ಆಟಗಾರ ಪೃಥ್ವಿ ಶಾ (65) ಉತ್ತಮ ಆರಂಭ ಒದಗಿಸಿದ್ದರು. ಆದರೆ ಉಳಿದ ಬ್ಯಾಟರ್​ಗಳು ವಿಧ್ವತ್ ಕಾವೇರಪ್ಪ ಎಸೆತಗಳಲ್ಲಿ ಪೆವಿಲಿಯನ್ ಪರೇಡ್ ನಡೆಸಿದರು. ಪರಿಣಾಮ ಪಶ್ಚಿಮ ವಲಯ ತಂಡವು ಮೊದಲ ಇನಿಂಗ್ಸ್​ನಲ್ಲಿ ಕೇವಲ 146 ರನ್​ಗಳಿಗೆ ಆಲೌಟ್ ಆಯಿತು. ದಕ್ಷಿಣ ವಲಯ ಪರ ವಿಧ್ವತ್ ಕಾವೇರಪ್ಪ ಕೇವಲ 53 ರನ್​ಗಳಿಗೆ 7 ವಿಕೆಟ್ ಕಬಳಿಸಿ ಮಿಂಚಿದರು.

ಇದಾದ ಬಳಿಕ ದ್ವಿತೀಯ ಇನಿಂಗ್ಸ್ ಆರಂಭಿಸಿದ ದಕ್ಷಿಣ ವಲಯ ತಂಡವು ಧರ್ಮೇಂದ್ರ ಜಡೇಜಾ ದಾಳಿಗೆ ತತ್ತರಿಸಿತು. ಪರಿಣಾಮ ಕೇವಲ 230 ರನ್​ಗಳಿಗೆ ಆಲೌಟ್ ಆದರು. ಪಶ್ಚಿಮ ವಲಯ ಪರ ಧರ್ಮೇಂದ್ರ ಜಡೇಜಾ ಕೇವಲ 40 ರನ್ ನೀಡಿ 5 ವಿಕೆಟ್ ಕಬಳಿಸಿದರು.

ಮೊದಲ ಇನಿಂಗ್ಸ್ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್​ನಲ್ಲಿ 297 ರನ್​ಗಳ ಗುರಿ ಪಡೆದ ಪಶ್ಚಿಮ ವಲಯ ತಂಡವು 18 ರನ್​ಗಳಿಸುಷ್ಟರಲ್ಲಿ 2 ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದ ನಾಯಕ ಪ್ರಿಯಾಂಕ್ ಪಾಂಚಾಲ್ ತಂಡಕ್ಕೆ ಆಸರೆಯಾಗಿ ನಿಂತರು.

ಆದರೆ ಚೇತೇಶ್ವರ ಪೂಜಾರ (15) ಹಾಗೂ ಸೂರ್ಯಕುಮಾರ್ ಯಾದವ್ (4) ವಿಕೆಟ್ ಕಬಳಿಸಿದ ವಿ ಕೌಶಿಕ್ ದಕ್ಷಿಣ ವಲಯಕ್ಕೆ ಅಮೂಲ್ಯ ಯಶಸ್ಸು ತಂದುಕೊಟ್ಟರು. ಈ ಹಂತದಲ್ಲಿ ಜೊತೆಯಾದ ಪ್ರಿಯಾಂಕ್ ಪಾಂಚಾಲ್ ಹಾಗೂ ಸರ್ಫರಾಝ್ ಖಾನ್ 5ನೇ ವಿಕೆಟ್​ಗೆ 98 ರನ್​ಗಳ ಜೊತೆಯಾಟವಾಡಿದರು.

ನಾಲ್ಕನೆ ದಿನದಾಟದ ಅಂತಿಮ ಓವರ್​ಗಳ ವೇಳೆ ಸಾಯಿ ಕಿಶೋರ್ ಎಸೆತವನ್ನು ಗುರುತಿಸುವಲ್ಲಿ ಎಡವಿದ ಸರ್ಫರಾಝ್ ಖಾನ್ (48) ಕ್ಲೀನ್ ಬೌಲ್ಡ್ ಆದರು. ಅದರಂತೆ ನಾಲ್ಕನೇ ದಿನದಾಟದ ಅಂತ್ಯಕ್ಕೆ ಪಶ್ಚಿಮ ವಲಯ ತಂಡವು 5 ವಿಕೆಟ್ ಕಳೆದುಕೊಂಡು 182 ರನ್​ಗಳಿಸಿದೆ.

ಇನ್ನು ಕೊನೆಯ ದಿನದಾಟ ಬಾಕಿಯಿದ್ದು, ಗೆಲ್ಲಲು ಪಶ್ಚಿಮ ವಲಯ ತಂಡವು 116 ರನ್​ಗಳಿಸಬೇಕಿದೆ. ಇತ್ತ ದಕ್ಷಿಣ ವಲಯಕ್ಕೆ 5 ವಿಕೆಟ್​ಗಳ ಅಗತ್ಯತೆಯಿದೆ. ಸದ್ಯ ಕ್ರೀಸ್​ನಲ್ಲಿ ಪ್ರಿಯಾಂಕ್ ಪಾಂಚಾಲ್ (92) ಹಾಗೂ ಅತಿತ್ ಶೇತ್ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಹೀಗಾಗಿ ಅಂತಿಮ ದಿನದಾಟದಲ್ಲಿ ಉಭಯ ತಂಡಗಳಿಂದ ರೋಚಕ ಹೋರಾಟವನ್ನು ನಿರೀಕ್ಷಿಸಬಹುದು.

ಪಶ್ಚಿಮ ವಲಯ ಪ್ಲೇಯಿಂಗ್ 11: ಪೃಥ್ವಿ ಶಾ , ಪ್ರಿಯಾಂಕ್ ಪಾಂಚಾಲ್ (ನಾಯಕ) , ಚೇತೇಶ್ವರ ಪೂಜಾರ , ಸೂರ್ಯಕುಮಾರ್ ಯಾದವ್ , ಸರ್ಫರಾಝ್ ಖಾನ್ , ಧರ್ಮೇಂದ್ರಸಿನ್ಹ್ ಜಡೇಜಾ , ಹಾರ್ವಿಕ್ ದೇಸಾಯಿ (ವಿಕೆಟ್ ಕೀಪರ್) , ಚಿಂತನ್ ಗಜ , ಅರ್ಝಾನ್ ನಾಗವಾಸ್ವಾಲ್ಲಾ , ಅತಿತ್ ಶೇತ್ , ಶಮ್ಸ್ ಮುಲಾನಿ.

ಇದನ್ನೂ ಓದಿ: ODI World Cup 2023: ಏಕದಿನ ವಿಶ್ವಕಪ್​ನಲ್ಲಿನ ಟೀಮ್ ಇಂಡಿಯಾದ 9 ಎದುರಾಳಿಗಳು ಇವರೇ..!

ದಕ್ಷಿಣ ವಲಯ ಪ್ಲೇಯಿಂಗ್ 11: ರವಿಕುಮಾರ್ ಸಮರ್ಥ್ , ಮಯಾಂಕ್ ಅಗರ್ವಾಲ್ , ಹನುಮ ವಿಹಾರಿ (ನಾಯಕ) , ರಿಕಿ ಭುಯಿ (ವಿಕೆಟ್ ಕೀಪರ್) , ತಿಲಕ್ ವರ್ಮಾ , ವಾಷಿಂಗ್ಟನ್ ಸುಂದರ್ , ಸಾಯಿ ಕಿಶೋರ್ , ಸಚಿನ್ ಬೇಬಿ , ವಿಧ್ವತ್ ಕಾವೇರಪ್ಪ , ವಿಜಯ್ ಕುಮಾರ್ ವೈಶಾಕ್ , ವಾಸುಕಿ ಕೌಶಿಕ್.