IND vs ENG: ಲಾರ್ಡ್ಸ್ ಏಕದಿನ ಪಂದ್ಯಕ್ಕೂ ಮುನ್ನ ಭಾರತ ತಂಡದಲ್ಲಿ ಬದಲಾವಣೆ
India vs England 3rd ODI: ಭಾರತ-ಇಂಗ್ಲೆಂಡ್ ಏಕದಿನ ಸರಣಿಯ ಅಂತಿಮ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾದಲ್ಲಿ ಬದಲಾವಣೆಯಾಗಿದೆ. ಗಾಯಗೊಂಡ ಸ್ಟಾರ್ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ತಂಡದಿಂದ ಹೊರಬಿದ್ದಿದ್ದು, ಅವರ ಬದಲಿಗೆ ಯುವ ಸ್ಪಿನ್ ಆಲ್ರೌಂಡರ್ ಹರ್ಷ್ ದುಬೆ ಅವರನ್ನು ಸೇರಿಸಿಕೊಳ್ಳಲಾಗಿದೆ. ದುಬೆ ಅಫ್ಘಾನಿಸ್ತಾನ ವಿರುದ್ಧ ಉತ್ತಮ ಪ್ರದರ್ಶನ ನೀಡಿದ್ದರು. ಇದೀಗ ಕೊನೆಯ ಏಕದಿನದಲ್ಲಿ ಅವರಿಗೆ ಆಡುವ ಅವಕಾಶ ಸಿಗಲಿದೆಯೇ ಎಂಬುದು ಕುತೂಹಲಕಾರಿಯಾಗಿದೆ.

ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಿನ ಏಕದಿನ ಸರಣಿಯ ಕೊನೆಯ ಪಂದ್ಯಕ್ಕೂ ಮೊದಲು, ಟೀಂ ಇಂಡಿಯಾದಲ್ಲಿ ಪ್ರಮುಖ ಬದಲಾವಣೆಯಾಗಿದೆ. ಗಾಯದಿಂದ ಬಳಲುತ್ತಿರುವ ತಂಡದ ಸ್ಟಾರ್ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ (Washington Sundar) ಕೊನೆಯ ಏಕದಿನ ಪಂದ್ಯದಿಂದ ಹೊರಬಿದ್ದಿದ್ದಾರೆ. ಹೀಗಾಗಿ ಅವರ ಬದಲಿಗೆ ಯುವ ಸ್ಪಿನ್ ಆಲ್ರೌಂಡರ್ ಹರ್ಷ್ ದುಬೆ (Harsha Dubey) ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಉಭಯ ತಂಡಗಳ ನಡುವೆ ನಡೆದಿದ್ದ ಮೂರನೇ ಏಕದಿನ ಪಂದ್ಯದ ವೇಳೆ ಸುಂದರ್ ಗಾಯಕ್ಕೆ ತುತ್ತಾಗಿದ್ದರು. ಇದರಿಂದಾಗಿ ಅವರು ಫಿಲ್ಡಿಂಗ್ ಕೂಡ ಮಾಡಿರಲಿಲ್ಲ ಇದೀಗ ಅವರನ್ನು ತಂಡದಿಂದ ಕೈಬಿಟ್ಟಿದ್ದು, ಹರ್ಷ್ ದುಬೆಯನ್ನು ಆಯ್ಕೆ ಮಾಡಲಾಗಿದೆ.
ಸುಂದರ್ ಔಟ್, ದುಬೆಗೆ ಮತ್ತೊಂದು ಅವಕಾಶ
ಜುಲೈ 16, ಗುರುವಾರ ಕಾರ್ಡಿಫ್ನಲ್ಲಿ ನಡೆದ ಭಾರತ-ಇಂಗ್ಲೆಂಡ್ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಸುಂದರ್ ಬ್ಯಾಟಿಂಗ್ ಮಾಡುವಾಗ ಗಾಯಗೊಂಡರು. ವಿರಾಟ್ ಕೊಹ್ಲಿ ಔಟಾದ ನಂತರ ಬ್ಯಾಟಿಂಗ್ ಮಾಡಲು ಬಂದ ಸುಂದರ್ ಓಡುವಾಗ ಕಾಲಿನ ನೋವಿಗೆ ತುತ್ತಾದರು. ಕೂಡಲೇ ಮೈದಾನಕ್ಕೆ ಬಂದ ಫಿಸಿಯೋ ಸುಂದರ್ ಅವರ ಕಾಲಿಗೆ ಬ್ಯಾಂಡೇಜ್ ಮಾಡಿದರು.
ಆದರೆ ಚಿಕಿತ್ಸೆಯ ಬಳಿಕವೂ ಸುಂದರ್ ಅವರ ನೋವು ಕಡಿಮೆ ಆಗಲಿಲ್ಲ. ಇದು ಸುಂದರ್ ಅವರ ಬ್ಯಾಟಿಂಗ್ ಮೇಲೆ ಪರಿಣಾಮ ಬೀರಿತು. ಹೀಗಾಗಿ ಅವರು ಮುಂದಿನ ಎಸೆತದಲ್ಲಿ ಪುಲ್ ಶಾಟ್ ಮಾಡಲು ಪ್ರಯತ್ನಿಸಿ ವಿಕೆಟ್ ಕೀಪರ್ಗೆ ಸುಲಭವಾದ ಕ್ಯಾಚ್ ನೀಡಿದರು. ಹೀಗಾಗಿ, ಸುಂದರ್ ಕೇವಲ ಐದು ಎಸೆತಗಳನ್ನು ಆಡಿ ಪೆವಿಲಿಯನ್ಗೆ ಮರಳಿದರು. ಇದರಿಂದಾಗಿ ಸುಂದರ್ ಫಿಲ್ಡಿಂಗ್ ಸಮಯದಲ್ಲೂ ಮೈದಾನಕ್ಕಿಳಿಯಲಿಲ್ಲ.
ಇಂತಹ ಪರಿಸ್ಥಿತಿಯಲ್ಲಿ, ಆಯ್ಕೆ ಸಮಿತಿಯು ಅಂತಿಮ ಏಕದಿನ ಪಂದ್ಯಕ್ಕಾಗಿ ಎಡಗೈ ಸ್ಪಿನ್ ಆಲ್ರೌಂಡರ್ ಹರ್ಷ್ ದುಬೆ ಅವರನ್ನು ತಂಡದಲ್ಲಿ ಸೇರಿಸಿಕೊಂಡಿದೆ. ಹರ್ಷ್ ದುಬೆ ಕಳೆದ ತಿಂಗಳು ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದರು. ಈ ಸರಣಿಯಲ್ಲಿ ದುಬೆ ಎರಡು ಪಂದ್ಯಗಳನ್ನು ಆಡಿ ನಾಲ್ಕು ವಿಕೆಟ್ಗಳನ್ನು ಕಬಳಿಸಿದ್ದರು. ಅದಕ್ಕೂ ಮೊದಲು, ಅವರು ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ತಂಡದ ಭಾಗವಾಗಿದ್ದರಾದರೂ ತಂಡದಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ. ಮುಂಬರುವ ಜಿಂಬಾಬ್ವೆ ಪ್ರವಾಸಕ್ಕಾಗಿ ಅವರನ್ನು ಟಿ20 ತಂಡಕ್ಕೂ ಆಯ್ಕೆ ಮಾಡಲಾಗಿದೆ.
IND vs ENG: ಲಾರ್ಡ್ಸ್ನಲ್ಲಿ ಶತಕಗಳ ಬರ! ಟೀಂ ಇಂಡಿಯಾಕ್ಕೆ ಗೆಲುವೊಂದೇ ಗುರಿಯಲ್ಲ
ಹರ್ಷ್ ದುಬೆಗೆ ಆಡುವ ಅವಕಾಶ ಸಿಗುತ್ತಾ?
ಇದೀಗ ತಂಡವನ್ನು ಕೂಡಿಕೊಂಡಿರುವ ಹರ್ಷ್ ದುಬೆಗೆ ಲಾರ್ಡ್ಸ್ನಲ್ಲಿ ಆಡುವ ಅವಕಾಶ ಸಿಗುತ್ತಾ ಎಂಬುದು ಪ್ರಶ್ನೆಯಾಗಿದೆ. ಏಕೆಂದರೆ ಕಳೆದ ಎರಡು ಪಂದ್ಯಗಳಲ್ಲಿ ಟೀಂ ಇಂಡಿಯಾದ ಬ್ಯಾಟಿಂಗ್ ಪ್ರದರ್ಶನವೇ ಕಾರಣ. ಈ ಪ್ರವಾಸದ ಉದ್ದಕ್ಕೂ ಭಾರತದ ಬ್ಯಾಟಿಂಗ್ ಉತ್ತಮವಾಗಿರಲಿಲ್ಲ, ಅದರಲ್ಲೂ ಕಾರ್ಡಿಫ್ನಲ್ಲಿ ತಂಡದ ಪ್ರದರ್ಶನ ತೀರ ಕಳಪೆಯಾಗಿತ್ತು. ಮಧ್ಯಮ ಮತ್ತು ಕೆಳ ಮಧ್ಯಮ ಕ್ರಮಾಂಕದಿಂದ ನಿರೀಕ್ಷಿತ ಪ್ರದರ್ಶನ ಮೂಡಿಬರಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಟೀಂ ಇಂಡಿಯಾ ಹೆಚ್ಚುವರಿ ಬ್ಯಾಟ್ಸ್ಮನ್ರನ್ನು ಆಡಿಸುವ ಸಾಧ್ಯತೆಗಳಿವೆ. ಅದರಂತೆ ಕನ್ನಡಿಗ ಕೆಎಲ್ ರಾಹುಲ್ ಮತ್ತೆ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಒಂದು ವೇಳೆ ಸುಂದರ್ ಅವರ ಬದಲಿಯಾಗಿ ಬೌಲರ್ ಅನ್ನು ಕಣಕ್ಕಿಳಿಸಲು ನಿರ್ಧರಿಸಿದರೆ, ಕಳೆದ ಎರಡು ಪಂದ್ಯಗಳಲ್ಲಿ ಬೆಂಚ್ನಲ್ಲಿದ್ದ ಸ್ಪಿನ್ನರ್ ಕುಲ್ದೀಪ್ ಯಾದವ್ ಅವರಿಗೆ ಆದ್ಯತೆ ನೀಡುವ ಸಾಧ್ಯತೆ ಹೆಚ್ಚು. ಅಂತಹ ಪರಿಸ್ಥಿತಿಯಲ್ಲಿ, ಹರ್ಷ್ ದುಬೆ ಅವರಿಗೆ ಲಾರ್ಡ್ಸ್ನಲ್ಲಿ ಆಡಲು ಅವಕಾಶ ಸಿಗುವ ಸಾಧ್ಯತೆ ಕಡಿಮೆ.
ಭಾರತ ತಂಡ: ಶುಭ್ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ಉಪನಾಯಕ), ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹರ್ಷ್ ದುಬೆ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ, ಪ್ರಿನ್ಸ್ ಯಾದವ್, ಅರ್ಶ್ದೀಪ್ ಸಿಂಗ್, ಗುರ್ನೂರ್ ಬ್ರಾರ್, ಶಿವಂ ದುಬೆ.




