RCB ತಂಡದ ಇಬ್ಬರು ಆಟಗಾರರಿಗೆ ಇಂದು ಜನುಮದಿನ
IPL 2024 RCB: ಈ ಬಾರಿಯ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಒಟ್ಟು 15 ಪಂದ್ಯಗಳನ್ನಾಡಿತ್ತು. ಈ ಪಂದ್ಯಗಳಲ್ಲಿ ಗೆದ್ದಿರುವುದು ಕೇವಲ 7 ಮ್ಯಾಚ್ಗಳನ್ನು ಮಾತ್ರ. ಇದಾಗ್ಯೂ ಪ್ಲೇಆಫ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಮುಗ್ಗರಿಸುವ ಮೂಲಕ ಆರ್ಸಿಬಿ ಐಪಿಎಲ್ನಿಂದ ಹೊರಬಿದ್ದಿತ್ತು.
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಇಬ್ಬರು ಸ್ಟಾರ್ ಆಟಗಾರರು ಇಂದು ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಡಿಕೆ ಖ್ಯಾತಿಯ ಕೃಷ್ಣಕುಮಾರ್ ದಿನೇಶ್ ಕಾರ್ತಿಕ್ ಅವರು ಇಂದು 39ನೇ ವರ್ಷಕ್ಕೆ ಕಾಲಿಟ್ಟರೆ, ರಜತ್ ಪಾಟಿದಾರ್ 31ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 1 ಜೂನ್ 1993 ರಲ್ಲಿ ರಜತ್ ಪಾಟಿದಾರ್ ಮಧ್ಯಪ್ರದೇಶದಲ್ಲಿ ಜನಿಸಿದ್ದರು. ಇನ್ನು 1985 ರಲ್ಲಿ ಡಿಕೆ ಇದೇ ದಿನಾಂಕದಂದು ಚೆನ್ನೈನಲ್ಲಿ ಹುಟ್ಟಿದ್ದರು. ಇದೀಗ ಇಬ್ಬರು ಆಟಗಾರರು ಒಂದೇ ದಿನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಸೋಷಿಯಲ್ ಮೀಡಿಯಾದಲ್ಲಿ ಆರ್ಸಿಬಿ ಅಭಿಮಾನಿಗಳು ಜನ್ಮದಿನ ಶುಭ ಕೋರುತ್ತಿದ್ದಾರೆ.
ಮಿಂಚಿದ ಡಿಕೆ-ರಪಾ:
ಈ ಬಾರಿಯ ಐಪಿಎಲ್ನಲ್ಲಿ ರಜತ್ ಪಾಟಿದಾರ್ ಹಾಗೂ ದಿನೇಶ್ ಕಾರ್ತಿಕ್ ಆರ್ಸಿಬಿ ಪರ ಅತ್ಯುತ್ತಮ ಪ್ರದರ್ಶನ ನೀಡಿದ್ದರು. 15 ಪಂದ್ಯಗಳಲ್ಲಿ ಬ್ಯಾಟ್ ಬೀಸಿದ್ದ ಪಾಟಿದಾರ್ 5 ಅರ್ಧಶತಕಗಳೊಂದಿಗೆ 395 ರನ್ ಬಾರಿಸಿ ಮಿಂಚಿದ್ದರು.
ಮತ್ತೊಂದೆಡೆ ಆರ್ಸಿಬಿ ಪರ ಫಿನಿಶರ್ ಆಗಿ ಅಬ್ಬರಿಸಿದ್ದ ದಿನೇಶ್ ಕಾರ್ತಿಕ್ 15 ಇನಿಂಗ್ಸ್ಗಳಲ್ಲಿ 2 ಅರ್ಧಶತಕಗಳೊಂದಿಗೆ ಒಟ್ಟು 326 ರನ್ ಚಚ್ಚಿದ್ದರು. ಈ ಮೂಲಕ ಆರ್ಸಿಬಿ ತಂಡವು ಪ್ಲೇಆಫ್ಗೆ ಪ್ರವೇಶಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
It’s a double birthday bash for our boys! 🎂🥳
Join us in wishing our Dependables Dinesh Karthik and Rajat Patidar the happiest of birthdays! 😎💯#PlayBold #ನಮ್ಮRCB pic.twitter.com/AnRV66L9pm
— Royal Challengers Bengaluru (@RCBTweets) June 1, 2024
ದಿನೇಶ್ ಕಾರ್ತಿಕ್ ವಿದಾಯ:
ಈ ಬಾರಿಯ ಐಪಿಎಲ್ನೊಂದಿಗೆ ದಿನೇಶ್ ಕಾರ್ತಿಕ್ ಇಂಡಿಯನ್ ಪ್ರೀಮಿಯರ್ ಲೀಗ್ಗೆ ವಿದಾಯ ಹೇಳಿದ್ದಾರೆ. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಎಲಿಮಿನೇಟರ್ ಪಂದ್ಯದ ಬಳಿಕ ಡಿಕೆ ತಮ್ಮ ನಿವೃತ್ತಿಯನ್ನು ಘೋಷಿಸಿದ್ದು, ಹೀಗಾಗಿ ಮುಂದಿನ ಸೀಸನ್ನಲ್ಲಿ ದಿನೇಶ್ ಕಾರ್ತಿಕ್ ಕಾಣಿಸಿಕೊಳ್ಳುವುದಿಲ್ಲ.
ಇದನ್ನೂ ಓದಿ: IPL 2025: RCB ರಿಟೈನ್ ಮಾಡಿಕೊಳ್ಳಲಿರುವ 4 ಆಟಗಾರರು..!
ಐಪಿಎಲ್ನಲ್ಲಿ ಒಟ್ಟು 257 ಪಂದ್ಯಗಳನ್ನಾಡಿರುವ ದಿನೇಶ್ ಕಾರ್ತಿಕ್ 22 ಅರ್ಧಶತಕಗಳೊಂದಿಗೆ ಒಟ್ಟು 4842 ರನ್ ಕಲೆಹಾಕಿದ್ದಾರೆ. ಈ ವೇಳೆ 97 ರನ್ ಬಾರಿಸಿದ್ದು ಅವರ ಗರಿಷ್ಠ ಸ್ಕೋರ್. ಇದಲ್ಲದೆ ಧೋನಿ ಬಳಿಕ ಅತೀ ಹೆಚ್ಚು ಪಂದ್ಯವಾಡಿದ ವಿಕೆಟ್ ಕೀಪರ್ ಎಂಬ ದಾಖಲೆ ಕೂಡ ದಿನೇಶ್ ಕಾರ್ತಿಕ್ ಹೆಸರಿನಲ್ಲಿದೆ. ಈ ಎಲ್ಲಾ ದಾಖಲೆಗಳೊಂದಿಗೆ ಇದೀಗ ಡಿಕೆ ಐಪಿಎಲ್ಗೆ ವಿದಾಯ ಹೇಳಿದ್ದಾರೆ.
Published On - 9:58 am, Sat, 1 June 24