IND vs SA: ಮತ್ತೆ ಕೈಕೊಟ್ಟ ಟಾಪ್ ಆರ್ಡರ್; ಭಾರತಕ್ಕೆ 51 ರನ್ಗಳ ಸೋಲು
India vs South Africa T20 match: ಕಟಕ್ನಲ್ಲಿ ಗೆದ್ದರೂ, ಚಂಡೀಗಢದಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಭಾರತ ದಕ್ಷಿಣ ಆಫ್ರಿಕಾ ವಿರುದ್ಧ 51 ರನ್ಗಳಿಂದ ಸೋತಿದೆ. ಟೀಂ ಇಂಡಿಯಾದ ಅಗ್ರ ಕ್ರಮಾಂಕ, ವಿಶೇಷವಾಗಿ ನಾಯಕ ಸೂರ್ಯಕುಮಾರ್ ಮತ್ತು ಉಪನಾಯಕ ಶುಭ್ಮನ್ ಗಿಲ್ ಅವರ ಕಳಪೆ ಪ್ರದರ್ಶನವೇ ಸೋಲಿಗೆ ಪ್ರಮುಖ ಕಾರಣ. ಇವರ ಬ್ಯಾಟಿಂಗ್ ವೈಫಲ್ಯ ತಂಡದ ಇತರೆ ಆಟಗಾರರ ಮೇಲೆ ಒತ್ತಡ ಹೆಚ್ಚಿಸಿದೆ.

ಕಟಕ್ನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 101 ರನ್ಗಳಿಂದ ಸೋಲಿಸಿದ್ದ ಟೀಂ ಇಂಡಿಯಾ (Team India) ಇದೀಗ ಚಂಡೀಗಢದಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ 51 ರನ್ಗಳ ಸೋಲು ಕಂಡಿದೆ. ಕಳೆದ ಪಂದ್ಯದಂತೆ ಈ ಪಂದ್ಯದಲ್ಲೂ ಟೀಂ ಇಂಡಿಯಾದ ಟಾಪ್ ಆರ್ಡರ್ ಕೈಕೊಟ್ಟಿತು. ಇದರ ಪರಿಣಾಮವಾಗಿ ಟೀಂ ಇಂಡಿಯಾಕ್ಕೆ ಸೋಲಿನ ಆಘಾತ ಎದುರಾಯಿತು. ಟೀಂ ಇಂಡಿಯಾದ ನಾಯಕ ಸೂರ್ಯಕುಮಾರ್ (Suryakumar Yadav), ಉಪನಾಯಕ ಶುಭ್ಮನ್ ಗಿಲ್ (Shubman Gill) ಈ ಪಂದ್ಯದ ಸೋಲಿಗೆ ಪ್ರಮುಖ ಕಾರಣ ಎಂದರೆ ತಪ್ಪಾಗಲಾರದು. ಕಳೆದೊಂದು ವರ್ಷದಿಂದ ಇವರಿಬ್ಬರ ಪ್ರದರ್ಶನ ಟಿ20 ಕ್ರಿಕೆಟ್ನಲ್ಲಿ ತೀರ ಕಳಪೆಯಾಗಿದೆ. ಆದಾಗ್ಯೂ ಅವರಿಗೆ ತಂಡದಲ್ಲಿ ಅವಕಾಶ ಸಿಗುತ್ತಿದೆ. ಇವರಿಬ್ಬರ ಕಳಪೆ ಬ್ಯಾಟಿಂಗ್ ಇತರ ಬ್ಯಾಟ್ಸ್ಮನ್ಗಳ ಮೇಲೆ ಒತ್ತಡ ಹೇರುತ್ತಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.
ಆಫ್ರಿಕಾಗೆ ಡಿ ಕಾಕ್ ಆಸರೆ
ನ್ಯೂ ಚಂಡೀಗಢದಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ 213 ರನ್ ಗಳಿಸಿತು. ತಂಡದ ಪರ ಆರಂಭಿಕ ಕ್ವಿಂಟನ್ ಡಿ ಕಾಕ್ ಕೇವಲ 46 ಎಸೆತಗಳಲ್ಲಿ 90 ರನ್ ಗಳಿಸಿದರು. ಕೆಳಕ್ರಮಾಂಕದಲ್ಲಿ ಡೊನೊವನ್ ಫೆರೀರಾ 30 ರನ್ಗಳ ಕಾಣಿಕೆ ನೀಡಿದರು. ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 162 ರನ್ಗಳಿಗೆ ಆಲೌಟ್ ಆಗುವ ಮೂಲಕ 51 ರನ್ಗಳ ಹೀನಾಯ ಸೋಲು ಅನುಭವಿಸಿತು. ಈ ಸೋಲಿನೊಂದಿಗೆ, ಟಿ20 ಸರಣಿಯು ಈಗ 1-1 ರಲ್ಲಿ ಸಮಬಲಗೊಂಡಿದೆ. ಐದು ಪಂದ್ಯಗಳ ಸರಣಿಯ ಮುಂದಿನ ಪಂದ್ಯ ಭಾನುವಾರ ಧರ್ಮಶಾಲಾದಲ್ಲಿ ನಡೆಯಲಿದೆ.
ಭಾರತದ ಕಳಪೆ ಆಟ
ವಾಸ್ತವವಾಗಿ ಎರಡನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾದ ಬ್ಯಾಟಿಂಗ್ ಆಗಿರಲಿ ಅಥವಾ ಬೌಲಿಂಗ್ ಆಗಿರಲಿ, ಎರಡೂ ವಿಭಾಗಗಳಲ್ಲಿ ಶೋಚನೀಯ ಪ್ರದರ್ಶನ ನೀಡಿತು. ಜಸ್ಪ್ರೀತ್ ಬುಮ್ರಾ ಮತ್ತು ಅರ್ಶ್ದೀಪ್ ಸಿಂಗ್ ಎಂಟು ಓವರ್ಗಳಲ್ಲಿ ಒಟ್ಟು 99 ರನ್ಗಳನ್ನು ಬಿಟ್ಟುಕೊಟ್ಟರು. ವರುಣ್ ಚಕ್ರವರ್ತಿ ಹೊರತುಪಡಿಸಿ, ಎಲ್ಲಾ ಬೌಲರ್ಗಳು ಅತ್ಯಂತ ದುಬಾರಿಯಾದರು. ಅತ್ಯಂತ ನಾಚಿಕೆಗೇಡಿನ ವಿಷಯವೆಂದರೆ ಟೀಂ ಇಂಡಿಯಾದ ಬೌಲರ್ಗಳು 16 ವೈಡ್ಗಳು ಸೇರಿದಂತೆ 22 ಹೆಚ್ಚುವರಿ ರನ್ಗಳನ್ನು ಬಿಟ್ಟುಕೊಟ್ಟರು.
IND vs SA: 1 ಓವರ್ನಲ್ಲಿ 7 ವೈಡ್, 13 ಎಸೆತ ಎಸೆದ ಅರ್ಷದೀಪ್; ಉಗ್ರರೂಪ ತಾಳಿದ ಗಂಭೀರ್
ತಿಲಕ್ ಏಕಾಂಗಿ ಹೋರಾಟ ವ್ಯರ್ಥ
ಬೌಲರ್ಗಳ ನಂತರ, ಬ್ಯಾಟ್ಸ್ಮನ್ಗಳು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಮೊದಲ ಎಸೆತದಲ್ಲೇ ಶುಭ್ಮನ್ ಗಿಲ್ ಔಟಾದರೆ, ಅಭಿಷೇಕ್ ಶರ್ಮಾ 17 ರನ್ ಗಳಿಸಿ ಔಟಾದರು. ನಾಯಕ ಸೂರ್ಯಕುಮಾರ್ ಯಾದವ್ ಕೇವಲ 5 ರನ್ಗಳಿಗೆ ಸುಸ್ತಾದರು. ಕಳೆದ ಪಂದ್ಯದ ಹೀರೋ ಹಾರ್ದಿಕ್ ಪಾಂಡ್ಯ 23 ಎಸೆತಗಳಲ್ಲಿ ಕೇವಲ 20 ರನ್ ಗಳಿಸಿ ಔಟಾದರು. ತಂಡದ ಪರ ಏಕಾಂಗಿ ಹೋರಾಟ ನಡೆಸಿದ ತಿಲಕ್ ವರ್ಮಾ 62 ರನ್ ಗಳಿಸಿದರಾದರೂ ಅವರಿಗೆ ಇತರರಿಂದ ಉತ್ತಮ ಬೆಂಬಲ ಸಿಗಲಿಲ್ಲ. ಇದರ ಫಲವಾಗಿ ಟೀಂ ಇಂಡಿಯಾಕ್ಕೆ ಪೂರ್ಣ 20 ಓವರ್ಗಳನ್ನು ಆಡಲು ಸಾಧ್ಯವಾಗಲಿಲ್ಲ. ಆಫ್ರಿಕಾ ಪರ ಬೌಲಿಂಗ್ನಲ್ಲಿ ಮಿಂಚಿದ ವೇಗದ ಬೌಲರ್ ಬಾರ್ಟ್ಮನ್ ನಾಲ್ಕು ವಿಕೆಟ್ ಪಡೆದರೆ, ಸಿಪಾಮ್ಲಾ, ಎನ್ಗಿಡಿ ಮತ್ತು ಯಾನ್ಸೆನ್ ತಲಾ ಎರಡು ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:52 pm, Thu, 11 December 25
