Vijay Hazare Trophy 2021: ಸೋತರೂ ಪ್ರೀ ಕ್ವಾರ್ಟರ್ ಫೈನಲ್ಗೆ ಲಗ್ಗೆಯಿಟ್ಟ ಕರ್ನಾಟಕ
Vijay Hazare Trophy 2021-22: 253 ರನ್ಗಳ ಟಾರ್ಗೆಟ್ ಪಡೆದ ಬೆಂಗಾಲ್ ತಂಡಕ್ಕೆ ಅರ್ಧಶತಕ ಬಾರಿಸುವ ಮೂಲಕ ಅಭಿಷೇಕ್ ದಾಸ್ (58) ಉತ್ತಮ ಆರಂಭ ಒದಗಿಸಿದ್ದರು. ಇದಾಗ್ಯೂ ಕರ್ನಾಟಕ ಬೌಲರುಗಳು 13 ಓವರ್ನಲ್ಲಿ 3 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು.

ವಿಜಯ್ ಹಜಾರೆ ಟೂರ್ನಿಯ (Vijay Hazare Trophy 2021) ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಕರ್ನಾಟಕ ತಂಡವು ಬೆಂಗಾಲ್ ವಿರುದ್ದ 4 ವಿಕೆಟ್ಗಳಿಂದ ಸೋಲನುಭವಿಸಿದೆ. ಇದಾಗ್ಯೂ ಎಲೈಟ್ ಗ್ರೂಪ್-ಬಿ ನಲ್ಲಿ 12 ಅಂಕ ಪಡೆದು 2ನೇ ಸ್ಥಾನ ಪಡೆದಿರುವ ಕರ್ನಾಟಕ ತಂಡವು ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ಕರ್ನಾಕಟ ತಂಡದ ನಾಯಕ ಮನೀಷ್ ಪಾಂಡೆ ಬ್ಯಾಟಿಂಗ್ ಆಯ್ದುಕೊಂಡರು. ಆದರೆ ಕರ್ನಾಟಕ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ತಂಡದ ಮೊತ್ತ 35 ರನ್ ಆಗುವಷ್ಟರಲ್ಲಿ ರವಿಕುಮಾರ್ ಸಮರ್ಥ್ (17) ಔಟಾದರೆ, ಆ ಬಳಿಕ ಬಂದ ಸಿದ್ಧಾರ್ಥ್ ಕೂಡ 1 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಜೊತೆಗೂಡಿದ ರೋಹನ್ ಕದಮ್ ಹಾಗೂ ಮನೀಷ್ ಪಾಂಡೆ ಅರ್ಧಶತಕದ ಜೊತೆಯಾಟವಾಡಿದರು.
ಆದರೆ 37 ರನ್ಗಳಿಸಿದ್ದ ವೇಳೆ ಕದಮ್ ಕೂಡ ವಿಕೆಟ್ ಒಪ್ಪಿಸಿ ಹೊರನಡೆದರು. ಮತ್ತೊಂದೆಡೆ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಮನೀಷ್ ಪಾಂಡೆ ಆಕರ್ಷಕ ಹೊಡೆತಗಳ ಮೂಲಕ ಗಮನ ಸೆಳೆದರು. ಕರುಣ್ ನಾಯರ್ ಜೊತೆಗೂಡಿ ಮತ್ತೊಂದು ಅರ್ಧಶತಕದ ಪಾಲುದಾರಿಕೆ ಮಾಡಿದರು. ಇನ್ನು 25 ರನ್ಗಳಿಸಿ ಕರುಣ್ ನಾಯರ್ ಹೊರನಡೆದರೆ, ಬಳಿಕ ಶರತ್ 17 ರನ್ ಬಾರಿಸಿ ವಿಕೆಟ್ ಕೈಚೆಲ್ಲಿದರು.
ಇದಾಗ್ಯೂ ಮನೀಷ್ ಪಾಂಡೆ ಬ್ಯಾಟಿಂಗ್ ಮುಂದುವರೆದಿತ್ತು. 40 ಓವರ್ ವೇಳೆಗೆ ತಂಡದ ಮೊತ್ತವನ್ನು 192 ಕ್ಕೆ ತಲುಪಿಸಿದ ಮನೀಷ್ ಪಾಂಡೆ ಈ ಹಂತದಲ್ಲಿ ವಿಕೆಟ್ ಒಪ್ಪಿಸಿದರು. 85 ಎಸತೆಗಳನ್ನು ಎದುರಿಸಿದ್ದ ಪಾಂಡೆ 4 ಸಿಕ್ಸ್ ಹಾಗೂ 4 ಬೌಂಡರಿಯೊಂದಿಗೆ 90 ರನ್ ಬಾರಿಸಿ ಇನಿಂಗ್ಸ್ ಅಂತ್ಯಗೊಳಿಸಿದರು. ಇನ್ನು ಕೊನೆಯ ಹಂತದಲ್ಲಿ ಪ್ರವೀಣ್ ದುಬೆ ಅಜೇಯ 37 ರನ್ಗಳಿಸುವ ಮೂಲಕ ನಿಗದಿತ 50 ಓವರ್ನಲ್ಲಿ 8 ವಿಕೆಟ್ ನಷ್ಟಕ್ಕೆ ತಂಡದ ಮೊತ್ತವನ್ನು 252 ಕ್ಕೆ ತಂದು ನಿಲ್ಲಿಸಿದರು.
253 ರನ್ಗಳ ಟಾರ್ಗೆಟ್ ಪಡೆದ ಬೆಂಗಾಲ್ ತಂಡಕ್ಕೆ ಅರ್ಧಶತಕ ಬಾರಿಸುವ ಮೂಲಕ ಅಭಿಷೇಕ್ ದಾಸ್ (58) ಉತ್ತಮ ಆರಂಭ ಒದಗಿಸಿದ್ದರು. ಇದಾಗ್ಯೂ ಕರ್ನಾಟಕ ಬೌಲರುಗಳು 13 ಓವರ್ನಲ್ಲಿ 3 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಆದರೆ 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ನಾಯಕ ಸುದೀಪ್ ಚಟರ್ಜಿ 63 ರನ್ ಬಾರಿಸುವ ಮೂಲಕ ತಂಡಕ್ಕೆ ಆಸರೆಯಾದರು. ನಾಯಕನಿಗೆ ಸಾಥ್ ನೀಡಿದ ರಿತ್ವಿಕ್ (49) ಶತಕದ ಜೊತೆಯಾಟವಾಡಿದರು. ಅಷ್ಟರಲ್ಲಾಗಲೇ ಬೆಂಗಾಲ್ ತಂಡವು ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು.
ಇನ್ನು ಕೊನೆಯಲ್ಲಿ ಶಹಬಾಜ್ ಅಹ್ಮದ್ (26) ಹಾಗೂ ಸುವಂಕರ್ ಉತ್ತಮ ಬ್ಯಾಟಿಂಗ್ ಮಾಡುವ ಮೂಲಕ ತಂಡವನ್ನು 48.3 ಓವರ್ನಲ್ಲಿ 6 ವಿಕೆಟ್ ನಷ್ಟಕ್ಕೆ 253 ರನ್ಗಳ ಗುರಿ ತಲುಪಿಸುವ ಮೂಲಕ ಬೆಂಗಾಲ್ 4 ವಿಕೆಟ್ಗಳ ಜಯ ಸಾಧಿಸಿತು. ಕರ್ನಾಟಕ ಪರ ಪ್ರತೀಕ್ ಜೈನ್ 3 ವಿಕೆಟ್ ಪಡೆದು ಗಮನ ಸೆಳೆದರು.
ಇದನ್ನೂ ಓದಿ: Yuzvendra Chahal: ಚಹಲ್ ಭರ್ಜರಿ ಸ್ಪಿನ್ ಮೋಡಿ: ಮೆಗಾ ಹರಾಜಿಗೂ ಮುನ್ನ ಕೈಬಿಟ್ಟು ಆರ್ಸಿಬಿ ತಪ್ಪು ಮಾಡಿತೇ?
ಇದನ್ನೂ ಓದಿ: Sourav Ganguly: ವಿರಾಟ್ ಕೊಹ್ಲಿ ಇಲ್ಲದಿದ್ದಾಗಲೂ ಟೀಮ್ ಇಂಡಿಯಾ ಕಪ್ ಗೆದ್ದಿದೆ!
ಇದನ್ನೂ ಓದಿ: IPL 2022: ಪಂಜಾಬ್ ಕಿಂಗ್ಸ್ಗೆ ಕನ್ನಡಿಗನೇ ಕಿಂಗ್ ಆಗುವ ಸಾಧ್ಯತೆ..!
(Vijay Hazare Trophy 2021: Bengal beat Karnataka)
Published On - 4:50 pm, Tue, 14 December 21
