ಪಾಕಿಸ್ತಾನದ ಮೇಲೆ ಭಾರತ ದಾಳಿ; ಭಯದಿಂದ ಕರಾಚಿ ಬಿಟ್ಟು ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪರಾರಿ
ಭಾರತ ಮತ್ತು ಪಾಕಿಸ್ತಾನದ ನಡುವೆ ಪರಸ್ಪರ ದಾಳಿಗಳು ನಡೆಯುತ್ತಿದೆ. ಭಾರತದ ಡ್ರೋನ್ ವಿಮಾನಗಳು ಇಸ್ಲಾಮಾಬಾದ್, ಕರಾಚಿ, ಲಾಹೋರ್ ಒಳಗೆ ನುಗ್ಗಿ ದಾಳಿ ನಡೆಸಿವೆ. ಭಾರತದ ಮೋಸ್ಟ್ ವಾಂಟೆಡ್ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ತಾನದ ಕರಾಚಿಯಲ್ಲಿ ಅಡಗಿಕೊಂಡಿದ್ದಾನೆ ಎಂದು ಹಲವು ವರದಿಗಳು ಸೂಚಿಸಿದ್ದವು. ಇದೀಗ ಭಾರತ ಕರಾಚಿಗೂ ನುಗ್ಗಿ ವೈಮಾನಿಕ ದಾಳಿ ನಡೆಸಿರುವುದರಿಂದ ಕಂಗಾಲಾಗಿರುವ ಗ್ಯಾಂಗ್ಸ್ಟರ್ಗಳಾದ ದಾವೂದ್ ಇಬ್ರಾಹಿಂ, ಛೋಟಾ ಶಕೀಲ್ ಪಾಕಿಸ್ತಾನ ಬಿಟ್ಟು ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ ಎನ್ನಲಾಗಿದೆ.

ನವದೆಹಲಿ, ಮೇ 9: ಭಾರತೀಯ ಸೇನೆಯ ಆಪರೇಷನ್ ಸಿಂಧೂರ್ (Operation Sindoor) ಮತ್ತು ಡ್ರೋನ್ ದಾಳಿಯ ನಂತರ ಪಾಕಿಸ್ತಾನಿ ನಾಗರಿಕರಲ್ಲಿ ಅಪಾರ ಭೀತಿ ಉಂಟಾಗಿದೆ. ಪಾಕಿಸ್ತಾನದಲ್ಲಿ ಅಡಗಿಕೊಂಡಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂ (Dawood Ibrahim) ಕೂಡ ಭಾರತದ ದಾಳಿಯಿಂದ ಕಂಗೆಟ್ಟಿದ್ದಾನೆ. ಗುರುವಾರ ರಾತ್ರಿ ಭಾರತೀಯ ಸೇನೆಯು ಲಾಹೋರ್, ಕರಾಚಿ ಮತ್ತು ಇಸ್ಲಾಮಾಬಾದ್ನಲ್ಲಿ ಡ್ರೋನ್ ದಾಳಿ ನಡೆಸಿತು. ಆದ್ದರಿಂದ, ಪಾಕಿಸ್ತಾನವು ಭೂಗತ ಪಾತಕಿಗಳಾದ ದಾವೂದ್ ಇಬ್ರಾಹಿಂ, ಛೋಟಾ ಶಕೀಲ್ ಮತ್ತು ಮುನ್ನಾ ಜಿಂಗಾ ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದೆ. ಭಾರತದ ಭಯದಿಂದ ಈ ಮೂವರು ಭೂಗತ ಪಾತಕಿಗಳು ಪಾಕಿಸ್ತಾನದಿಂದ ಬೇರೆ ದೇಶಕ್ಕೆ ಪರಾರಿಯಾಗಿರಬಹುದು ಎನ್ನಲಾಗಿದೆ.
ಕಳೆದ ಹಲವಾರು ವರ್ಷಗಳಿಂದ, ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿ ಇದ್ದಾನೆ ಎಂಬ ಮಾತು ಕೇಳಿಬರುತ್ತಿದೆ. ಪಾಕಿಸ್ತಾನ ಅವನನ್ನು ರಕ್ಷಿಸಿ ಕರಾಚಿಯಲ್ಲಿ ಸುರಕ್ಷಿತವಾಗಿರಿಸಿದೆ ಎಂದು ಹೇಳಲಾಗುತ್ತದೆ. ಕಳೆದ ಕೆಲವು ದಿನಗಳಿಂದ ಭಾರತೀಯ ಸೇನೆಯು ಪಾಕಿಸ್ತಾನದ ಒಳಭಾಗದೊಳಗೆ ಡ್ರೋನ್ ದಾಳಿಗಳನ್ನು ನಡೆಸಿದೆ. ಭಾರತೀಯ ಸೇನೆಯು ಲಾಹೋರ್ನಲ್ಲಿ ವಾಯು ರಕ್ಷಣಾ ವ್ಯವಸ್ಥೆಯನ್ನು ಸಹ ನಾಶಪಡಿಸಿತು. ನಿನ್ನೆ ಇಸ್ಲಮಾಬಾದ್ ಮತ್ತು ಕರಾಚಿಯಲ್ಲೂ ಭಾರತ ದಾಳಿ ನಡೆಸಿದೆ. ಹೀಗಾಗಿ, ಭಯಗೊಂಡಿರುವ ದಾವೂದ್ ಇಬ್ರಾಹಿಂ ಕರಾಚಿ ಬಿಟ್ಟು ಬೇರೆ ಜಾಗಕ್ಕೆ ಪಲಾಯನ ಮಾಡಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ: ಭಾರತೀಯ ಸೇನೆ ದಾಳಿ ಮಾಡಿದ ಪಾಕಿಸ್ತಾನದ ನಗರಗಳ ಇತಿಹಾಸವೇನು ಗೊತ್ತೇ? ಇಲ್ಲಿದೆ ಆಸಕ್ತಿದಾಯಕ ಮಾಹಿತಿ
ಮೂಲಗಳ ಪ್ರಕಾರ, ಭಾರತೀಯ ಭದ್ರತಾ ಸಂಸ್ಥೆಗಳು ದಾವೂದ್ ಇಬ್ರಾಹಿಂ ಬಗ್ಗೆ ಹೊರಬರುತ್ತಿರುವ ಸುದ್ದಿಗಳನ್ನು ಗಮನಿಸುತ್ತಿವೆ. ಬಹುಶಃ ದಾವೂದ್ ಇಬ್ರಾಹಿಂ ಪಾಕಿಸ್ತಾನದ ಬೇರೆ ಭಾಗದಲ್ಲಿ ಅಡಗಿಕೊಂಡಿರಬಹುದು. ಆದರೆ, ಆತ ದೇಶ ಬಿಟ್ಟು ಓಡಿಹೋಗಿದ್ದಾನೆ ಎಂಬ ವದಂತಿಯನ್ನು ಭಾರತದ ದಾರಿತಪ್ಪಿಸಲು ಉದ್ದೇಶಪೂರ್ವಕವಾಗಿ ಹರಡಿರುವ ಸಾಧ್ಯತೆಯೂ ಇದೆ. ಆದ್ದರಿಂದ, ಭಾರತೀಯ ಭದ್ರತಾ ಸಂಸ್ಥೆಗಳು ತಮಗೆ ಬರುವ ಮಾಹಿತಿಯನ್ನು ಪರಿಶೀಲಿಸುತ್ತಿವೆ. ಆ ನಂತರವೇ ಕೇಂದ್ರ ಸರ್ಕಾರ ಈ ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡುತ್ತದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ