ಪಹಲ್ಗಾಮ್ ದಾಳಿಗೆ ವಿಶ್ವಸಂಸ್ಥೆಯ ಮುಖ್ಯಸ್ಥ ಖಂಡನೆ; ಯುದ್ಧ ಮಾಡದಿರಲು ಭಾರತ- ಪಾಕಿಸ್ತಾನಕ್ಕೆ ಒತ್ತಾಯ
ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಗೆ ಜಗತ್ತಿನಾದ್ಯಂತ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಇದೀಗ ವಿಶ್ವಸಂಸ್ಥೆಯ ಮುಖ್ಯಸ್ಥರೂ ಈ ಘಟನೆಯನ್ನು ಖಂಡಿಸಿದ್ದಾರೆ. ಆದರೆ, 'ಯುದ್ಧವೊಂದೇ ಪರಿಹಾರವಲ್ಲ' ಎಂದಿರುವ ಅವರು ಭಾರತ, ಪಾಕಿಸ್ತಾನ ಸಂಯಮ ಕಾಯ್ದುಕೊಳ್ಳಬೇಕು, ಯುದ್ಧದ ನಿರ್ಧಾರ ಮಾಡಬಾರದು ಎಂದು ವಿಶ್ವಸಂಸ್ಥೆ ಮುಖ್ಯಸ್ಥ ಒತ್ತಾಯಿಸಿದ್ದಾರೆ. ನ್ಯಾಯದ ಮೂಲಕ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕೇ ವಿನಃ ಮಿಲಿಟರಿ ಕ್ರಮವೊಂದೇ ದಾರಿಯಲ್ಲ ಎಂದಿದ್ದಾರೆ.

ನವದೆಹಲಿ, ಮೇ 5: ಭಾರತ ಮತ್ತು ಪಾಕಿಸ್ತಾನ (India-Pakistan Tensions) ನಡುವಿನ ಉದ್ವಿಗ್ನತೆ ಕೊನೆಯ ಹಂತಕ್ಕೆ ಹೋಗಿರುವುದರ ಬಗ್ಗೆ ಇಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಕಳವಳ ವ್ಯಕ್ತಪಡಿಸಿದರು. ಪಹಲ್ಗಾಮ್ನಲ್ಲಿ ನಡೆದ ಮಾರಕ ಭಯೋತ್ಪಾದಕ ದಾಳಿಯ ನಂತರ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಭಾರತ ಮತ್ತು ಪಾಕಿಸ್ತಾನ ಸಂಯಮವನ್ನು ವಹಿಸಬೇಕು ಮತ್ತು ಮಿಲಿಟರಿ ಸಂಘರ್ಷವನ್ನು ತಪ್ಪಿಸಬೇಕು ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಒತ್ತಾಯಿಸಿದ್ದಾರೆ. ಅವರು ಉಗ್ರರ ದಾಳಿಯನ್ನು ಖಂಡಿಸಿದ್ದು, ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ಮಾಡುವುದು ಸ್ವೀಕಾರಾರ್ಹವಲ್ಲ ಎಂದು ಒತ್ತಿ ಹೇಳಿದ್ದಾರೆ. ಎಲ್ಲದಕ್ಕೂ ಯುದ್ಧವೇ ಪರಿಹಾರವಲ್ಲ ಎಂದು ಹೇಳಿದ ಗುಟೆರೆಸ್, ಶಾಂತಿಯ ಮಂತ್ರ ಪಠಿಸಿದ್ದಾರೆ. “ತಾಳ್ಮೆಯಿಂದ ಪರಿಸ್ಥಿತಿ ನಿಭಾಯಿಸುವುದು, ರಾಜತಾಂತ್ರಿಕತೆ ಮತ್ತು ಶಾಂತಿಯನ್ನು ಉತ್ತೇಜಿಸುವ ಯಾವುದೇ ಕ್ರಮವನ್ನು ಬೆಂಬಲಿಸಲು ವಿಶ್ವಸಂಸ್ಥೆ ಸಿದ್ಧವಾಗಿದೆ” ಎಂದು ಅವರು ಹೇಳಿದ್ದಾರೆ.
“ನಾನು ಮತ್ತೊಮ್ಮೆ ಪಹಲ್ಗಾಮ್ ದಾಳಿಯನ್ನು ಬಲವಾಗಿ ಖಂಡಿಸುತ್ತೇನೆ. ಮೃತಪಟ್ಟವರ ಕುಟುಂಬಗಳಿಗೆ ನನ್ನ ಸಂತಾಪ ಸೂಚಿಸುತ್ತೇನೆ. ನಾಗರಿಕರನ್ನು ಗುರಿಯಾಗಿಸುವುದು ಸ್ವೀಕಾರಾರ್ಹವಲ್ಲ. ಅದಕ್ಕೆ ಹೊಣೆಯಾದವರಿಗೆ ಕಾನೂನುಬದ್ಧ ವಿಧಾನಗಳ ಮೂಲಕ ಶಿಕ್ಷೆ ನೀಡಬೇಕು” ಎಂದು ಅವರು ಹೇಳಿದ್ದಾರೆ.
VIDEO | Pahalgam terror attack: United Nations General Secretary António Guterres (@antonioguterres) says, “Tensions between India and Pakistan are at the highest in years. I deeply respect and I am profoundly grateful to the government and people of both countries and their… pic.twitter.com/OFtWmBXMvn
— Press Trust of India (@PTI_News) May 5, 2025
“ಎರಡೂ ದೇಶಗಳ ಸರ್ಕಾರಗಳು ಮತ್ತು ಜನರು ವಿಶ್ವಸಂಸ್ಥೆಯ ಕೆಲಸಕ್ಕೆ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ. ಅದನ್ನು ನಾನು ಗೌರವಿಸುತ್ತೇನೆ ಮತ್ತು ಅವರಿಗೆ ತುಂಬಾ ಕೃತಜ್ಞನಾಗಿದ್ದೇನೆ. ದೇಶ-ದೇಶಗಳ ನಡುವಿನ ಸಂಬಂಧಗಳು ಕುದಿಯುವ ಹಂತವನ್ನು ತಲುಪುವುದನ್ನು ನೋಡುವುದು ನನಗೆ ನೋವುಂಟುಮಾಡುತ್ತದೆ” ಎಂದು ಅವರು ಹೇಳಿದರು.
ಇದನ್ನೂ ಓದಿ: ಭಾರತ ಬಿಟ್ಟು ಶ್ರೀಲಂಕಾಕ್ಕೆ ಪರಾರಿಯಾದರಾ ಪಹಲ್ಗಾಮ್ ದಾಳಿಯ ಉಗ್ರರು? ಕೊಲಂಬೋ ವಿಮಾನ ನಿಲ್ದಾಣದಲ್ಲಿ ಶೋಧ
ಪಹಲ್ಗಾಮ್ ದಾಳಿಯಲ್ಲಿ 26 ಜನರು ಸಾವನ್ನಪ್ಪಿದರು. ಅದರಲ್ಲಿ ಹೆಚ್ಚಿನವರು ಪ್ರವಾಸಿಗರಾಗಿದ್ದರು. ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸುವುದು, ಅಟ್ಟಾರಿಯಲ್ಲಿನ ಏಕೈಕ ಭೂ ಗಡಿ ದಾಟುವಿಕೆಯ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವುದು ಮತ್ತು ಭಯೋತ್ಪಾದಕ ದಾಳಿಯ ನಂತರ ರಾಜತಾಂತ್ರಿಕ ಸಂಬಂಧಗಳನ್ನು ಕೆಳಮಟ್ಟಕ್ಕಿಳಿಸುವುದು ಸೇರಿದಂತೆ ಪಾಕಿಸ್ತಾನದ ವಿರುದ್ಧ ಭಾರತವು ಕಠಿಣ ಕ್ರಮಗಳನ್ನು ಘೋಷಿಸಿತು. ಭಯೋತ್ಪಾದಕರು ಮತ್ತು ಅವರ ಬೆಂಬಲಿಗರ ವಿರುದ್ಧ “ದೃಢ ಮತ್ತು ನಿರ್ಣಾಯಕ” ಕ್ರಮ ತೆಗೆದುಕೊಳ್ಳಲು ಭಾರತ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:50 pm, Mon, 5 May 25