ದೇಶಕ್ಕೆ ಅಪ್ಪಳಿಸುತ್ತಿದೆ ಆರ್ಥಿಕ ಚಂಡಮಾರುತ; ಕುಸಿಯಲಿದೆ ಅರ್ಥ ವ್ಯವಸ್ಥೆ: ರಾಹುಲ್ ಗಾಂಧಿ ಆತಂಕ
Rahul Gandhi Slams Modi Govt's Economic Policies: ರಾಹುಲ್ ಗಾಂಧಿ ಅವರು ಇಂಧನ ಬೆಲೆ ಏರಿಕೆ ಮತ್ತು ಸರ್ಕಾರದ ಆರ್ಥಿಕ ನೀತಿಗಳನ್ನು ತೀವ್ರವಾಗಿ ಖಂಡಿಸಿದ್ದಾರೆ. ದೇಶವು "ಆರ್ಥಿಕ ಬಿರುಗಾಳಿ" ಎದುರಿಸಲಿದೆ ಎಂದು ಎಚ್ಚರಿಸಿದ್ದು, ಮೋದಿ ಸರ್ಕಾರ ಅದಾನಿ, ಅಂಬಾನಿ ಪರವಾಗಿದೆ, ಸಾಮಾನ್ಯ ಜನರಿಗೆ ಹೊರೆಯಾಗಲಿದೆ ಎಂದು ಟೀಕಿಸಿದ್ದಾರೆ. ವಿದೇಶಿ ಪ್ರವಾಸಗಳ ಬಗ್ಗೆ ಪ್ರಧಾನಿ ಮೋದಿ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ. ಮುಂಬರುವ ಆರ್ಥಿಕ ಕುಸಿತದಿಂದ ಸಾಮಾನ್ಯ ಜನರ ಜೀವನ ತೀವ್ರವಾಗಿ ಪರಿಣಾಮ ಬೀರಲಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ನವದೆಹಲಿ, ಮೇ 19: ಐದು ದಿನಗಳ ಅವಧಿಯಲ್ಲಿ ಕೇಂದ್ರ ಸರ್ಕಾರವು ಎರಡನೇ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸಿರುವುದನ್ನು ತೀವ್ರವಾಗಿ ಖಂಡಿಸಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi), ಭಾರತವು ಹಿಂದೆಂದೂ ಕಾಣದ ದೊಡ್ಡ “ಆರ್ಥಿಕ ಚಂಡಮಾರುತ” (Economic Storm) ಎದುರಿಸುವ ಹಂತದಲ್ಲಿದೆ ಎಂದು ಎಚ್ಚರಿಸಿದ್ದಾರೆ. ತಮ್ಮ ಸಂಸದೀಯ ಕ್ಷೇತ್ರವಾದ ಉತ್ತರ ಪ್ರದೇಶದ ರಾಯ್ಬರೇಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ರೂಪಿಸಿರುವ ಆರ್ಥಿಕ ನೀತಿಗಳು ಸಂಪೂರ್ಣವಾಗಿ ಕುಸಿಯಲಿದ್ದು, ಅದರ ಭೀಕರ ಪರಿಣಾಮವನ್ನು ಸಾಮಾನ್ಯ ನಾಗರಿಕರು ಅನುಭವಿಸಬೇಕಾಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.
ಈ ಸುದ್ದಿಯ ಮುಖ್ಯಾಂಶಗಳು
- ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೂಪಿಸಿರುವ ಆರ್ಥಿಕ ನೀತಿಗಳು ಅದಾನಿ, ಅಂಬಾನಿಯಂಥವರಿಗೆ ಉಪಯೋಗವಾಗುವಂತಿವೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.
- ಸರ್ಕಾರ ರೂಪಿಸಿದ ಆರ್ಥಿಕ ರಚನೆಗಳು ಹೆಚ್ಚು ದಿನ ಉಳಿಯುವುದಿಲ್ಲ. ದುರದೃಷ್ಟಕ್ಕೆ ಈ ಕುಸಿತವು ಅದಾನಿಯಂತಹ ಉದ್ಯಮಿಗಳಿಗೆ ಪರಿಣಾಮ ಬೀರುವುದಿಲ್ಲ ಎಂದಿದ್ದಾರೆ.
- ವಿದೇಶೀ ಪ್ರವಾಸ ಮಾಡಬೇಡಿ ಎಂದು ಜನಸಾಮಾನ್ಯರಿಗೆ ಹೇಳುವ ಮೋದಿಯವರು ತಾವೇ ದೇಶ ದೇಶ ಸುತ್ತುತ್ತಿರುತ್ತಾರೆ ಎಂದು ರಾಹುಲ್ ಗಾಂಧಿ ಸಿಡಿಗುಟ್ಟಿದ್ದಾರೆ.
ಕೋಟ್ಯಾಧಿಪತಿಗಳ ಪರವಾದ ಆರ್ಥಿಕ ರಚನೆ
ಕೇಂದ್ರದ ಆರ್ಥಿಕ ನೀತಿಗಳು ಕೇವಲ ಅದಾನಿ ಮತ್ತು ಅಂಬಾನಿಯಂತಹ ಆಯ್ದ ಕೆಲವು ಕೋಟ್ಯಧಿಪತಿ ಉದ್ಯಮಿಗಳಿಗೆ ಮಾತ್ರ ಪ್ರಯೋಜನವನ್ನು ನೀಡುವಂತೆ ವ್ಯವಸ್ಥಿತವಾಗಿ ರೂಪಿಸಲ್ಪಟ್ಟಿವೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಇದನ್ನೂ ಓದಿ: ಮೇ 20ಕ್ಕೆ ರಾಷ್ಟ್ರವ್ಯಾಪಿ ಔಷಧ ವ್ಯಾಪಾರಿಗಳ ಮುಷ್ಕರ; ಬಂದ್ ಆಗಲಿವೆ ಮೆಡಿಕಲ್ ಸ್ಟೋರ್ಗಳು; ಯಾಕಿದು ಪ್ರತಿಭಟನೆ?
“ಮೋದಿ ಜಿ ಬದಲಾಯಿಸಿರುವ ಈ ಆರ್ಥಿಕ ರಚನೆಯು ಹೆಚ್ಚು ದಿನ ಉಳಿಯುವುದಿಲ್ಲ; ಇದು ಸಂಪೂರ್ಣವಾಗಿ ಕುಸಿಯುವುದು ನಿಶ್ಚಿತ. ಆದರೆ, ಈ ಕುಸಿತದ ಹೊರೆ ಸಾಮಾನ್ಯ ಜನರಿಗೆ ಆಗುತ್ತದೆಯೇ ಹೊರತು ಅಂಬಾನಿಯಂಥವರಿಗಲ್ಲ” ಎಂದು ಅವರು ಹೇಳಿದ್ದಾರೆ.
ಸಾಮಾನ್ಯ ಜನರಿಗೆ ಆಘಾತ, ಶ್ರೀಮಂತರು ಸುರಕ್ಷಿತ
ಮುಂಬರುವ ಆರ್ಥಿಕ ಆಘಾತವು ಕಾರ್ಪೊರೇಟ್ ದಿಗ್ಗಜರನ್ನಾಗಲಿ ಅಥವಾ ರಾಜಕೀಯ ನಾಯಕರನ್ನಾಗಲಿ ಮುಟ್ಟುವುದಿಲ್ಲ. ಅವರು ತಮ್ಮ ಅರಮನೆಗಳಲ್ಲಿ ಸುರಕ್ಷಿತವಾಗಿ ಇರುತ್ತಾರೆ. ಆದರೆ ಇದರ ನೇರ ಹೊಡೆತ ಬೀಳುವುದು ದೇಶದ ಯುವಕರು, ರೈತರು, ಕಾರ್ಮಿಕರು ಮತ್ತು ಸಣ್ಣ ಉದ್ಯಮಿಗಳ ಮೇಲೆ. ವಿಶೇಷವಾಗಿ ಉತ್ತರ ಪ್ರದೇಶದ ಜನತೆ ಮತ್ತು ಯುವಸಮುದಾಯ ಇದರ ಸಂಪೂರ್ಣ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ವಿಪಕ್ಷ ನಾಯಕ ಕಳವಳ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮೈಕ್ರೋಸಾಫ್ಟ್ ಎಐ ಮುಖ್ಯಸ್ಥರ ಎಚ್ಚರಿಕೆ; ಇನ್ನು, 12-18 ತಿಂಗಳಲ್ಲಿ ಇನ್ನಿಲ್ಲವಾಗುತ್ತವಂತೆ ವೈಟ್ ಕಾಲರ್ ಜಾಬ್ಗಳು
ಪ್ರಧಾನಿ ಮೋದಿ ವಿದೇಶಿ ಪ್ರವಾಸಗಳ ವಿರುದ್ಧ ವಾಗ್ದಾಳಿ
ದೇಶದ ಆಂತರಿಕ ರಚನಾತ್ಮಕ ಬಿಕ್ಕಟ್ಟುಗಳನ್ನು ಪರಿಹರಿಸುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. “ಮೋದಿ ಅವರು ದೇಶದ ಜನರಿಗೆ ವಿದೇಶಿ ಪ್ರವಾಸಗಳನ್ನು ಕಡಿಮೆ ಮಾಡಲು ಬುದ್ಧಿವಾದ ಹೇಳುತ್ತಾರೆ, ಆದರೆ ಸ್ವತಃ ತಾವೇ ಜಗತ್ತಿನಾದ್ಯಂತ ಸದಾ ಸುತ್ತುತ್ತಿರುತ್ತಾರೆ” ಎಂದು ಟೀಕಿಸಿದ ರಾಹುಲ್, ಮುಂಬರುವ ದಿನಗಳಲ್ಲಿ ದೇಶವು ಕಠಿಣ ಪರಿಸ್ಥಿತಿಯನ್ನು ಎದುರಿಸಲಿದ್ದು, ಕಳೆದ ಹಲವು ವರ್ಷಗಳಲ್ಲೇ ಕಾಣದಷ್ಟು ತೀವ್ರ ಸ್ವರೂಪದ ಆರ್ಥಿಕ ಆಘಾತ ಎದುರಾಗಲಿದೆ ಎಂದಿದ್ದಾರೆ.
ಪಶ್ಚಿಮ ಏಷ್ಯಾ ಬಿಕ್ಕಟ್ಟಿನ (West Asian crisis) ಕಾರಣದಿಂದಾಗಿ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಏರುಪೇರಾಗಿದ್ದು, ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸಲಾಗಿದೆ. ಕಮರ್ಷಿಯಲ್ ಎಲ್ಪಿಜಿ ದರಗಳು ಬಹಳಷ್ಟು ಏರಿಕೆ ಆಗಿದೆ. ಗೃಹಬಳಕೆ ಎಲ್ಪಿಜಿ ದರವೂ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರು ಮೋದಿ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ. ಇದೇ ವಿಷಯವನ್ನು ಪ್ರಸ್ತಾಪಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ, ಇದು “ಮೋದಿ ಸರ್ಕಾರವೇ ಸೃಷ್ಟಿಸಿದ ಬಿಕ್ಕಟ್ಟು” ಎಂದು ಕಿಡಿಕಾರಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

