ಸುಶಾಂತ್ ಸಿಂಗ್ ರಜಪೂತ್ ಕೇಸ್ ಆಧಾರಿತ ‘ಸಾರಿ ಬಾಬು’ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ
ಸುಶಾಂತ್ ಸಿಂಗ್ ರಜಪೂತ್ ಸಾವಿನ ವಿವರಗಳನ್ನು ಒಳಗೊಂಡ ಸಿನಿಮಾಗೆ ‘ಸಾರಿ ಬಾಬು’ ಎಂದು ಟೈಟಲ್ ಇಡಲಾಗಿದೆ. ‘ಎಸ್ಎಸ್ಆರ್ ಫಿಲ್ಮ್ಸ್’ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಪೋಸ್ಟರ್ ರಿಲೀಸ್ ಬೆನ್ನಲ್ಲೇ ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ. ಸಿನಿಮಾದ ಶೂಟಿಂಗ್ ಮತ್ತು ಬಿಡುಗಡೆಯ ದಿನಾಂಕದ ಕುರಿತು ಚಿತ್ರತಂಡ ಶೀಘ್ರದಲ್ಲೇ ಮಾಹಿತಿ ನೀಡುವ ಸಾಧ್ಯತೆ ಇದೆ.

ಬಾಲಿವುಡ್ ಅಂಗಳದಿಂದ ಅತ್ಯಂತ ಇಂಟರೆಸ್ಟಿಂಗ್ ಸುದ್ದಿಯೊಂದು ಹೊರಬಿದ್ದಿದೆ. ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಅವರ ನಿಗೂಢ ಸಾವು ಮತ್ತು ಅದರ ಸುತ್ತ ಮುಸುಕಿದ್ದ ವಿವಾದಗಳನ್ನಾಧರಿಸಿ ಈಗ ಕಮರ್ಷಿಯಲ್ ಸಿನಿಮಾವೊಂದು ತಯಾರಾಗುತ್ತಿದೆ. ಇಡೀ ದೇಶದ ಗಮನ ಸೆಳೆದಿದ್ದ ಆ ಒಂದು ನಿರ್ದಿಷ್ಟ ಪದವನ್ನೇ ಈ ಚಿತ್ರಕ್ಕೆ ಶೀರ್ಷಿಕೆಯಾಗಿ ಇಡಲಾಗಿದೆ. ಹೌದು, ಈ ಸಿನಿಮಾಗೆ ‘ಸಾರಿ ಬಾಬು’ (Sorry Babu) ಎಂದು ಹೆಸರಿಡಲಾಗಿದೆ. ಚಿತ್ರತಂಡವು ಈ ಸಿನಿಮಾದ ಮೊದಲ ಅಧಿಕೃತ ಪೋಸ್ಟರ್ ಬಿಡುಗಡೆ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಇದು ಸಖತ್ ವೈರಲ್ ಆಗುತ್ತಿದೆ.
ಸುಶಾಂತ್ ಸಿಂಗ್ ರಜಪೂತ್ ನಿಧನದ ನಂತರ ಕೂಪರ್ ಆಸ್ಪತ್ರೆಯಲ್ಲಿ ನಡೆದ ಒಂದು ಘಟನೆಯನ್ನು ಈ ಸಿನಿಮಾ ಆಧರಿಸಿದೆ. ಸುಶಾಂತ್ ಸಾವಿನ ಬಳಿಕ ನಟಿ ರಿಯಾ ಚಕ್ರವರ್ತಿ ಮತ್ತು ಕರ್ನಿ ಸೇನೆಯ ಮುಖಂಡ ಸುಜೀತ್ ಸಿಂಗ್ ರಾಥೋಡ್ ಕೂಪರ್ ಆಸ್ಪತ್ರೆಯ ಶವಾಗಾರಕ್ಕೆ ಭೇಟಿ ನೀಡಿ ಪಾರ್ಥಿವ ಶರೀರದ ಕೊನೆಯ ದರ್ಶನ ಪಡೆದಿದ್ದರು. ಆ ಸಮಯದಲ್ಲಿ ಸುಶಾಂತ್ ಅವರ ದೇಹವನ್ನು ನೋಡಿ ರಿಯಾ ಚಕ್ರವರ್ತಿ ಬಾಯಿಂದ ಬಂದ ಕೊನೆಯ ಮಾತು ‘ಸಾರಿ ಬಾಬು’ ಆಗಿತ್ತು ಎಂದು ಹೇಳಲಾಗುತ್ತದೆ.
ಈಗ ಅದೇ ಸೂಕ್ಷ್ಮ ಪ್ರಕರಣದ ಹಲವು ಆಯಾಮಗಳನ್ನು ಬೆಳ್ಳಿಪರದೆಯ ಮೇಲೆ ತರಲು ಸಿದ್ಧತೆಗಳು ನಡೆದಿವೆ. ಈ ಇಡೀ ಘಟನೆಗೆ ಕಣ್ಣಾರೆ ಸಾಕ್ಷಿಯಾಗಿದ್ದ ಸುಜೀತ್ ಸಿಂಗ್ ರಾಥೋಡ್ ಅವರೇ ಈ ಚಿತ್ರದಲ್ಲಿ ನಾಯಕ ನಟನಾಗಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಖ್ಯಾತ ನಿರ್ದೇಶಕ ದೀಪಕ್ ಭಾಗವತ್ ಈ ಚಿತ್ರದ ಸಾರಥ್ಯ ವಹಿಸಿದ್ದು, ಕಥೆಯನ್ನು ಯಾವುದೇ ಫಿಲ್ಟರ್ ಇಲ್ಲದೆ ಹೊಸ ದೃಷ್ಟಿಕೋನದಲ್ಲಿ ಪ್ರೇಕ್ಷಕರ ಮುಂದೆ ಇಡಲಿದ್ದಾರೆ ಎನ್ನಲಾಗಿದೆ.
View this post on Instagram
ಈಗ ಬಿಡುಗಡೆಯಾಗಿರುವ ಫಸ್ಟ್ ಲುಕ್ ಪೋಸ್ಟರ್ ಸುಶಾಂತ್ ಅಭಿಮಾನಿಗಳಲ್ಲಿ ಮತ್ತು ಸಿನಿಪ್ರೇಮಿಗಳಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ಪೋಸ್ಟರ್ ವಿನ್ಯಾಸ ಮತ್ತು ಚಿತ್ರದ ಶೀರ್ಷಿಕೆಯನ್ನು ಗಮನಿಸಿದರೆ, ಇದು ಕೂಪರ್ ಆಸ್ಪತ್ರೆಯೊಳಗೆ ನಡೆದ ರಹಸ್ಯಗಳು ಮತ್ತು ಸುಶಾಂತ್ ಕೇಸ್ನ ಬಗ್ಗೆ ಇದುವರೆಗೆ ಜಗತ್ತಿಗೆ ತಿಳಿಯದ ವಿವರಗಳನ್ನು ಅನಾವರಣಗೊಳಿಸಲಿದೆ ಎಂಬ ಮುನ್ಸೂಚನೆ ಸಿಗುತ್ತಿದೆ.
ಇದನ್ನೂ ಓದಿ: ನಿಧನರಾಗಿ ಆರೇ ವರ್ಷಕ್ಕೆ ಸುಶಾಂತ್ ಸಿಂಗ್ ರಜಪೂತ್ ಯಾರಿಗೂ ನೆನಪಿಲ್ಲ; ಪುಣ್ಯತಿಥಿಗೆ ಬಾಲಿವುಡ್ ಮೌನ
ಗಮನಿಸಬೇಕಾದ ಅಂಶ ಏನೆಂದರೆ, ಅಂದು ಕೂಪರ್ ಆಸ್ಪತ್ರೆಯಲ್ಲಿ ಸ್ವತಃ ಹಾಜರಿದ್ದ ಸುಜೀತ್ ಸಿಂಗ್ ರಾಥೋಡ್ ಅವರೇ ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವುದರಿಂದ ಸಿನಿಮಾ ಮತ್ತಷ್ಟು ನೈಜ ಹಾಗೂ ಆಸಕ್ತಿದಾಯಕವಾಗಿರಲಿದೆ ಎನ್ನಲಾಗುತ್ತಿದೆ. ನಿರ್ದೇಶಕ ದೀಪಕ್ ಭಾಗವತ್ ಈ ಸೂಕ್ಷ್ಮ ವಿಷಯವನ್ನು ಪರದೆಯ ಮೇಲೆ ಹೇಗೆ ಪ್ರಸ್ತುತಪಡಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




