ಒಟಿಟಿಗೆ ಕಾಲಿಟ್ಟ ‘ಕರಾವಳಿ’; ಇಂದಿನಿಂದ ಜೀ5ನಲ್ಲಿ ಪ್ರಜ್ವಲ್ ದೇವರಾಜ್-ರಾಜ್ ಬಿ. ಶೆಟ್ಟಿ ಅಭಿನಯದ ಚಿತ್ರ ಪ್ರಸಾರ
ಪ್ರಜ್ವಲ್ ದೇವರಾಜ್ ಹಾಗೂ ರಾಜ್ ಬಿ. ಶೆಟ್ಟಿ ನಟನೆಯ 'ಕರಾವಳಿ' ಸಿನಿಮಾ ಇದೀಗ ಜೀ5 ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ. ಕರಾವಳಿಯ ಜಾನಪದ ಕ್ರೀಡೆ ಕಂಬಳ ಮತ್ತು ಸಂಸ್ಕೃತಿಯ ಕಥಾಹಂದರ ಹೊಂದಿರುವ ಈ ಆ್ಯಕ್ಷನ್ ಡ್ರಾಮಾವನ್ನು ಥಿಯೇಟರ್ನಲ್ಲಿ ಮಿಸ್ ಮಾಡಿಕೊಂಡವರು ಒಟಿಟಿಯಲ್ಲಿ ವೀಕ್ಷಿಸಬಹುದು. ಗುರುದತ್ತ ಗಾಣಿಗ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಮುಖ್ಯಾಂಶಗಳು
- ಜೀ5 ಒಟಿಟಿಗೆ ಲಗ್ಗೆಯಿಟ್ಟ 'ಕರಾವಳಿ'
- ಇಂದಿನಿಂದಲೇ ಡಿಜಿಟಲ್ ಪ್ರಸಾರ ಆರಂಭ
- ಕಂಬಳ ಜಾನಪದ ಕ್ರೀಡೆ ಮತ್ತು ಆಕ್ಷನ್ ಹಿನ್ನೆಲೆಯ ಬಿಗ್ ಬಜೆಟ್ ಸಿನಿಮಾ
ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಆ್ಯಕ್ಷನ್ ಡ್ರಾಮಾ ‘ಕರಾವಳಿ’ ಚಿತ್ರ ಇದೀಗ ಒಟಿಟಿ ವೇದಿಕೆಗೆ ಲಗ್ಗೆಯಿಟ್ಟಿದೆ. ಕರಾವಳಿ ಭಾಗದ ಜನಪ್ರಿಯ ಜಾನಪದ ಕ್ರೀಡೆ ‘ಕಂಬಳ’ದ ಹಿನ್ನೆಲೆಯಲ್ಲಿ ಮೂಡಿಬಂದಿರುವ ಈ ಚಿತ್ರವು ಆಗಸ್ಟ್ 28ರಿಂದ ಪ್ರಮುಖ ಒಟಿಟಿ ಸಂಸ್ಥೆಯಾದ ‘ಜೀ5’ನಲ್ಲಿ ಜಾಗತಿಕವಾಗಿ ಪ್ರಸಾರವಾಗುತ್ತಿದೆ. ಸಿನಿಮಾನ ಥಿಯೇಟರ್ನಲ್ಲಿ ಮಿಸ್ ಮಾಡಿಕೊಂಡವರು ಒಟಿಟಿಯಲ್ಲಿ ವೀಕ್ಷಿಸಬಹುದು.
ಕಂಬಳ ಮತ್ತು ಸಂಸ್ಕೃತಿಯ ಕಥಾಹಂದರ
ಕರಾವಳಿ ಭಾಗದ ಸೊಗಡು, ಆಚರಣೆ ಹಾಗೂ ಪರಂಪರೆಯನ್ನು ತೆರೆಯ ಮೇಲೆ ತಂದಿರುವ ಈ ಚಿತ್ರದಲ್ಲಿ ಕಂಬಳವು ಪ್ರಮುಖ ವಸ್ತುವಾಗಿದೆ. ತಲೆಮಾರುಗಳ ನಡುವಿನ ಸಂಘರ್ಷ, ಮಹತ್ವಾಕಾಂಕ್ಷೆ ಮತ್ತು ಸಂಬಂಧಗಳ ತೀವ್ರತೆಯನ್ನು ಒಳಗೊಂಡಿರುವ ಚಿತ್ರಕಥೆ ಪ್ರೇಕ್ಷಕರ ಗಮನ ಸೆಳೆದಿದೆ. ಇಲ್ಲಿ ದ್ವೇಷದ ಕಥೆ ಪ್ರಮುಖವಾಗಿ ಹೈಲೈಟ್ ಆಗಿದೆ.
ಕೆಸರು ಗದ್ದೆಯಲ್ಲಿ ದೂಳೆಬ್ಬಿಸುವ ವೇಗ… ಇದು ಕರಾವಳಿಯ ಹೆಮ್ಮೆಯ ಕಂಬಳ! ಇದು ಕೇವಲ ಓಟವಲ್ಲ, ಸ್ವಾಭಿಮಾನದ ಹೋರಾಟ! “ಕರಾವಳಿ” ಈಗ ಕನ್ನಡ Zee 5ನಲ್ಲಿ ಸ್ಟ್ರೀಮ್ ಆಗುತ್ತಿದೆ.@gurudath_ganiga @sush_bhat94 @GuruGanigaFilms @RajbShettyOMK #Karavali #KaravaliOnZee5 #KannadaZee5 pic.twitter.com/Z4NIKWBp2N
— Zee 5 Kannada (@ZEE5Kannada) August 28, 2026
ಚಿತ್ರತಂಡದ ಕಥನ
ಗುರುದತ್ತ ಗಾಣಿಗ ನಿರ್ದೇಶಿಸಿ ನಿರ್ಮಿಸಿರುವ ಈ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಅರ್ಪಿಸಿದೆ. ಚಿತ್ರದಲ್ಲಿ ಪ್ರಜ್ವಲ್ ದೇವರಾಜ್, ರಾಜ್ ಬಿ. ಶೆಟ್ಟಿ ಹಾಗೂ ಸಂಪದಾ ಹುಲಿವಾನ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಮಿತ್ರ, ರಮೇಶ್ ಇಂದಿರಾ, ಗೋವಿಂದೇ ಗೌಡ ಸೇರಿದಂತೆ ಹಲವು ಕಲಾವಿದರು ತಾರಾಗಣದಲ್ಲಿದ್ದಾರೆ.
ಇದನ್ನೂ ಓದಿ: ಚಿತ್ರಮಂದಿರಗಳ ಬಳಿಕ ಈಗ ಜೀ5ನಲ್ಲಿ ಅಬ್ಬರಿಸಲು ಸಜ್ಜಾದ ‘ಕರಾವಳಿ’; ಇಲ್ಲಿದೆ ವಿವರ
‘ಕರಾವಳಿಯ ಮಣ್ಣಿನ ಕಥೆ ಮತ್ತು ಕಂಬಳದ ಶಕ್ತಿಯನ್ನು ಪರದೆಯ ಮೇಲೆ ತರುವುದು ವಿಶಿಷ್ಟ ಅನುಭವವಾಗಿತ್ತು’ ಎಂದು ನಟ ರಾಜ್ ಬಿ. ಶೆಟ್ಟಿ ತಿಳಿಸಿದ್ದಾರೆ. ಕರಾವಳಿಯ ನೈಜ ಜೀವನ ಮತ್ತು ಸಂಸ್ಕೃತಿಯನ್ನು ಜಾಗತಿಕ ಮಟ್ಟದ ವೀಕ್ಷಕರಿಗೆ ತಲುಪಿಸುವ ಉದ್ದೇಶದಿಂದ ಈ ಚಿತ್ರವನ್ನು ಒಟಿಟಿಯಲ್ಲಿ ತರಲಾಗಿದೆ ಎಂದು ನಿರ್ದೇಶಕ ಗುರುದತ್ತ ಗಾಣಿಗ ಹೇಳಿದ್ದಾರೆ. ಈ ಸಿನಿಮಾದಲ್ಲಿ ಕಾರಣಾಂತರಗಳಿಂದ ಪ್ರಜ್ವಲ್ ದೇವರಾಜ್ ಅವರ ಪಾತ್ರಕ್ಕೆ ಅವರ ಧ್ವನಿ ಇಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:29 am, Fri, 28 August 26




