ಒಂದೇ ಚಿತ್ರದಲ್ಲಿ ಇಬ್ಬರು ಬಿಗ್ ಬಾಸ್ ವಿನ್ನರ್ಸ್; ಗಮನ ಸೆಳೆದ ‘ಎಲ್ರ ಕಾಲೆಳಿಯುತ್ತೆ ಕಾಲ’ ಟ್ರೇಲರ್
‘ಎಲ್ರ ಕಾಲೆಳಿಯುತ್ತೆ ಕಾಲ’ ಚಿತ್ರವು ಚಂದನ್ ಶೆಟ್ಟಿ ಮತ್ತು ಮಂಜು ಪಾವಗಡ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಹಾಸ್ಯ-ಗಂಭೀರ ಮಿಶ್ರಿತ ಕನ್ನಡಿಗರ ಬಹುನಿರೀಕ್ಷಿತ ಚಿತ್ರವಾಗಿದೆ. ನಟ ಸುಜಯ್ ಶಾಸ್ತ್ರಿ ನಿರ್ದೇಶನದ ಈ ಸಿನಿಮಾ ಏಪ್ರಿಲ್ 17ರಂದು ಬಿಡುಗಡೆಯಾಗಲಿದೆ. ಗಡಿಯಾರ ಇಲ್ಲದಿದ್ದರೂ ಸಮಯದ ಸೆಳೆತ ತಪ್ಪದು ಎಂಬ ವಿಶಿಷ್ಟ ಕಥಾಹಂದರವನ್ನು ರೆಟ್ರೊ ಶೈಲಿಯಲ್ಲಿ ಹೇಳಲಾಗಿದೆ.

ರ್ಯಾಪರ್ ಚಂದನ್ ಶೆಟ್ಟಿ ಅವರು ‘ಬಿಗ್ ಬಾಸ್’ ವಿನ್ನರ್ ಆಗಿ ಗಮನ ಸೆಳೆದರು. ಆ ಬಳಿಕ ಅವರು ನಟನೆಯಲ್ಲಿ ಬ್ಯುಸಿ ಆದರು.ಈಗ ಅವರು ನಟ ಕೂಡ ಹೌದು. ಇನ್ನು, ಮತ್ತೋರ್ವ ಬಿಗ್ ಬಾಸ್ (Bigg Boss) ವಿನ್ನರ್ ಮಂಜು ಪಾವಗಡ ಅವರು ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಬ್ಯುಸಿ ಇದ್ದಾರೆ. ಇಬ್ಬರೂ ಒಟ್ಟಾಗಿ ನಟಿಸಿರೋ ‘ಎಲ್ರ ಕಾಲೆಳಿಯುತ್ತೆ ಕಾಲ’ ಟ್ರೇಲರ್ ರಿಲೀಸ್ ಆಗಿದೆ. ಈ ಸಿನಿಮಾಗೆ ನಟ ಸುಜಯ್ ಶಾಸ್ತ್ರಿ ನಿರ್ದೇಶನ ಇದೆ. ಅರ್ಚನಾ ಕೊಟ್ಟಿಗೆ ನಾಯಕಿ ಆಗಿರೋ ಈ ಚಿತ್ರ ಏಪ್ರಿಲ್ 17ರಂದು ರಿಲೀಸ್ ಆಗುತ್ತಿದೆ.
ಸುಜಯ್ ಶಾಸ್ತ್ರಿ ಅವರು ಹಾಸ್ಯ ಪಾತ್ರಗಳ ಮೂಲಕ ಗಮನ ಸೆಳೆದವರು. ಈಗ ಅವರು ನಿರ್ದೇಶನ ಮಾಡಿದ್ದಾರೆ. ಒಂದೂರಲ್ಲಿ ಗಡಿಯಾರವೇ ಇಲ್ಲ ಅಂದ್ರೆ ಏನಾಗುತ್ತೇ? ಗಡಿಯಾರ ಇಲ್ಲ ಅಂದ್ರೂ ಸಮಯ ನಮ್ಮ ಕಾಲೆಳೆಯೋದನ್ನು ಬಿಡೋದಿಲ್ಲ ಎಂಬ ವಿಷಯವನ್ನು ‘ಎಲ್ರ ಕಾಲೆಳಿಯುತ್ತೆ ಕಾಲ’ ಸಿನಿಮಾದಲ್ಲಿ ಹೇಳಲಾಗುತ್ತಿದೆಯಂತೆ. ರೆಟ್ರೋ ಸ್ಟೈಲ್ನಲ್ಲಿ ಸಿನಿಮಾ ಮೂಡಿಬಂದಿದೆ.
ಚಂದನ್ ಶೆಟ್ಟಿ ಬೆಂಗಳೂರಿನಿಂದ ಹಳ್ಳಿಗೆ ಬರುತ್ತಾರೆ. ಅಲ್ಲಿ ಒಂದಷ್ಟು ಘಟನೆಗಳು ನಡೆಯುತ್ತವೆ. ಆರಂಭದಲ್ಲಿ ಎಲ್ಲವೂ ಹಾಸ್ಯಮಯವಾಗಿಯೇ ಕಾಣಿಸಿದರೂ ಕೊನೆಗೆ ಟ್ರೇಲರ್ ಗಂಭೀರ ಸ್ವರೂಪ ಪಡೆದುಕೊಳ್ಳುತ್ತದೆ. ಈ ರೀತಿಯಲ್ಲಿ ‘ಎಲ್ರ ಕಾಲೆಳಿಯುತ್ತೆ ಕಾಲ’ ಟ್ರೇಲರ್ ಮೂಡಿ ಬಂದಿದೆ.
ಇದನ್ನೂ ಓದಿ: ಕ್ರಿಸ್ ಗೇಲ್ ಜೊತೆ ಚಂದನ್ ಶೆಟ್ಟಿ ವಿಡಿಯೋ ಸಾಂಗ್; ಕನ್ನಡ ಹಾಡಿಗೆ ಎಗ್ಸೈಟ್ ಆದ ಯೂನಿವರ್ಸಲ್ ಬಾಸ್
ಈ ಸಿನಿಮಾ ಸೆಟ್ಟೇರಿ ಕೆಲ ವರ್ಷಗಳು ಕಳೆದಿವೆ. ಆದರೆ, ಸಿನಿಮಾ ರಿಲೀಸ್ ಮಾಡಲು ಸಾಧ್ಯವಾಗಿರಲಿಲ್ಲ. ಈಗ ಎಲ್ಲಾ ಸಿದ್ಧತೆಗಳೊಂದಿಗೆ ಸಿನಿಮಾ ಬರುತ್ತಿದೆ. ಚಂದನ್, ಮಂಜು, ಅರ್ಚನಾ ಜೊತೆ ತಾರಾ ಅನುರಾಧಾ, ಮಂಡ್ಯ ರಮೇಶ್, ದತ್ತಣ್ಣ ಮೊದಲಾದವರು ನಟಿಸಿದ್ದಾರೆ. ದಿವಂಗತ ರಾಜೇಶ್ ಪೂಜಾರಿ ಕೂಡ ನಟಿಸಿದ್ದಾರೆ. ಉಶಾ ಗೋವಿಂದ ರಾಜು ನಿರ್ಮಾಣ ಇರುವ ಈ ಚಿತ್ರಕ್ಕೆ ಪ್ರವೀಣ್-ಪ್ರದೀಪ್ ಸಂಗೀಯ ಸಂಯೋಜನೆ ಮಾಡಿದ್ದಾರೆ. ರಾಜ್ಗುರು ಹೊಸಕೋಟೆ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದಿದ್ದಾರೆ. ವಿಶ್ವಜಿತ್ ರಾವ್ ಛಾಯಾಗ್ರಹಣ ಸಿನಿಮಾಗೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:44 am, Tue, 7 April 26
