‘ಸಿಟಿ ಲೈಟ್ಸ್’ ಸಿನಿಮಾ ಟ್ರೇಲರ್ ರಿಲೀಸ್; ಸಿಕ್ತು ಹ್ಯಾಟ್ರಿಕ್ ಹೀರೋ ಮೆಚ್ಚುಗೆ
ಹಾಡುಗಳ ಮೂಲಕ ಸದ್ದು ಮಾಡಿದ ಬಳಿಕ, ‘ಸಿಟಿ ಲೈಟ್ಸ್’ ಚಿತ್ರದಿಂದ ಈಗ ಟ್ರೇಲರ್ ಅನಾವರಣ ಮಾಡಲಾಗಿದೆ. ಶಿವರಾಜ್ಕುಮಾರ್ ಅವರು ಟ್ರೇಲರ್ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ. ಮೋನಿಷಾ ವಿಜಯ್ ಕುಮಾರ್, ಉಮಾಶ್ರೀ, ವಿನಯ್ ರಾಜ್ಕುಮಾರ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸೆ.18ಕ್ಕೆ ‘ಸಿಟಿ ಲೈಟ್ಸ್’ ತೆರೆಕಾಣಲಿದೆ.

ದುನಿಯಾ ವಿಜಯ್ ಅವರು ನಿರ್ದೇಶನ ಮಾಡಿರುವ ‘ಸಿಟಿ ಲೈಟ್ಸ್’ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ದುನಿಯಾ ವಿಜಯ್ ಅವರ ಪುತ್ರಿ ಮೋನಿಷಾ ಹಾಗೂ ವಿನಯ್ ರಾಜ್ಕುಮಾರ್ ಅವರು ಈ ಸಿನಿಮಾದಲ್ಲಿ ಮುಖ್ಯಭೂಮಿಕೆ ನಿಭಾಯಿಸಿದ್ದಾರೆ. ಟ್ರೇಲರ್ ನೋಡಿದ ಬಳಿಕ ನಟ ಶಿವರಾಜ್ಕುಮಾರ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸೆಪ್ಟೆಂಬರ್ 18ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಸಿನಿಮಾದ ಕಥಾಹಂದರ ಏನು ಎಂಬುದರ ಝಲಕ್ ಈ ಟ್ರೇಲರ್ನಲ್ಲಿ ಕಾಣಿಸಿದೆ.
ಟ್ರೇಲರ್ ಬಿಡುಗಡೆ ಬಳಿಕ ಶಿವರಾಜ್ಕುಮಾರ್ ಅವರು ಮಾತನಾಡಿದರು. ‘ಈ ಟ್ರೇಲರ್ ನೋಡಿ ನನಗೆ ಖುಷಿ ಆಯಿತು. ಭೂಗತ ಜಗತ್ತಿನ ಸಿನಿಮಾ ಎಂದರೆ ಶಿವಣ್ಣ ನೆನಪಾಗ್ತಾರೆ ಅಂತ ಜನರು ಹೇಳುತ್ತಾರೆ. ಇನ್ಮೇಲೆ ಶಿವಣ್ಣ ಜೊತೆಯಲ್ಲಿ ವಿಜಯ್ ಕೂಡ ನೆನಪಾಗುತ್ತಾನೆ ಅಂತ ಹೇಳ್ತೀನಿ. ನನ್ನ ತಮ್ಮನ ಮಗ ಎಂಬ ಕಾರಣಕ್ಕೆ ನಾನು ಬೆಂಬಲ ನೀಡುತ್ತಿಲ್ಲ. ಅವನಲ್ಲಿ ಪ್ರತಿಭೆ ಇದೆ’ ಎಂದು ಶಿವರಾಜ್ಕುಮಾರ್ ಅವರು ಹೇಳಿದ್ದಾರೆ.
ಸಿಟಿ ಲೈಟ್ಸ್ ಸಿನಿಮಾದ ಟ್ರೇಲರ್:
‘ನಾನು ಈ ಸಿನಿಮಾಗಾಗಿ ಕಾಯುತ್ತಿದ್ದೇನೆ. ಖಂಡಿತವಾಗಿಯೂ ಈ ಚಿತ್ರ ಹಿಟ್ ಆಗುತ್ತದೆ. ಮಾಸ್ತಿ ಅವರ ಸಂಭಾಷಣೆ ಚೆನ್ನಾಗಿದೆ. ವಿಜಯ್ ಅವರು ಸಲಗ ಚಿತ್ರದಿಂದ, ಭೀಮ ಚಿತ್ರದಿಂದ ಸಿಟಿ ಲೈಟ್ಸ್ ತನಕ ತಾಂತ್ರಿಕವಾಗಿ ತುಂಬ ಚೆನ್ನಾಗಿ ಸಿನಿಮಾ ಮಾಡುತ್ತಾ ಬಂದಿದ್ದಾರೆ. ಹೊಸಬರಿಗೆ ಅವಕಾಶ ಕೊಡುತ್ತಿರುವುದು ನನಗೆ ಹೆಚ್ಚು ಖುಷಿ ನೀಡುತ್ತಿದೆ. ಇಂಥ ಒಳ್ಳೆಯ ಸಿನಿಮಾ ಮಾಡಿದ್ದಕ್ಕೆ ಧನ್ಯವಾದಗಳು’ ಎಂದಿದ್ದಾರೆ ಶಿವಣ್ಣ.
‘ಈ ಚಿತ್ರದಲ್ಲಿ ಮೋನಿಷಾ ಚೆನ್ನಾಗಿ ಕಾಣುತ್ತಾರೆ ಹಾಗೂ ಚೆನ್ನಾಗಿ ಅಭಿನಯಿಸಿದ್ದಾರೆ. ಅವರಿಗೆ ದೇವರು ಒಳ್ಳೆಯದು ಮಾಡಲಿ’ ಎಂದು ಶಿವರಾಜ್ಕುಮಾರ್ ಅವರು ಶುಭ ಹಾರೈಸಿದ್ದಾರೆ. ‘ಈ ಚಿತ್ರ ಕೂಡ ಓಂ ಸಿನಿಮಾ ರೀತಿ ಆಗುತ್ತದೆ ಅಂತ ನನಗೆ ಅನಿಸುತ್ತದೆ. ವಿನಯ್ನ ಈ ಸಿನಿಮಾದಲ್ಲಿ ಬೇರೆ ರೀತಿ ತೋರಿಸಿದ್ದಾರೆ’ ಎಂದು ಗೀತಾ ಶಿವರಾಜ್ಕುಮಾರ್ ಅವರು ಹೇಳಿದ್ದಾರೆ.
ಇದನ್ನೂ ಓದಿ: ಸಂಜಿತ್ ಹೆಗಡೆ ಕಂಠದಲ್ಲಿ ಮೂಡಿಬಂತು ‘ಸಿಟಿ ಲೈಟ್ಸ್’ ಚಿತ್ರದ ‘ಕಂದಮ್ಮ’ ಹಾಡು
‘ನನ್ನನ್ನು ನಂಬಿ ಇಷ್ಟು ದೊಡ್ಡ ಪಾತ್ರ ಕೊಟ್ಟಿದ್ದಕ್ಕೆ ನಮ್ಮ ತಂದೆಗೆ, ನಿರ್ದೇಶಕರಿಗೆ ಧನ್ಯವಾದ ಹೇಳುತ್ತೇನೆ. ನಮ್ಮ ತಂದೆಗೆ ಪ್ರೀತಿ ನೀಡಿದ ರೀತಿಯಲ್ಲೇ ನನಗೂ ಪ್ರೀತಿ ನೀಡಿ’ ಎಂದು ಮೋನಿಷಾ ಅವರು ಹೇಳಿದರು. ನಟ ವಿನಯ್ ರಾಜ್ಕುಮಾರ್ ಅವರು ಮಾತನಾಡಿ, ‘ಹಾಡು, ಟ್ರೇಲರ್ ಹೇಗಿದೆ ಎಂಬುದನ್ನು ಜನರು ನೋಡಿದ್ದಾರೆ. ಈಗ ಸಿನಿಮಾ ಹೇಗಿದೆ ಅಂತ ಜನರು ನೋಡಿ ಹೇಳಬೇಕು. ಈ ಸಿನಿಮಾ ಮಾಡಿದ ಮೇಲೆ ಬೆಂಗಳೂರಿನಲ್ಲಿ ಕಷ್ಟಪಟ್ಟು ಜೀವನ ಮಾಡುತ್ತಿರುವ ಪ್ರತಿಯೊಬ್ಬರ ಮೇಲೆ ನನಗೆ ಗೌರವ ಹೆಚ್ಚಾಗಿದೆ’ ಎಂದು ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




