AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಂಕಜ್ ನಾರಾಯಣ್ ಅಭಿನಯದ ಹೊಸ ಸಿನಿಮಾ ‘ಸರ್ಚ್’; ನಡೆಯಿತು ಮುಹೂರ್ತ

‘ಸರ್ಚ್​’ ಸಿನಿಮಾಗೆ ಸೆಪ್ಟೆಂಬರ್ 15ರಿಂದ ಚಿತ್ರೀಕರಣ ಶುರುವಾಗಲಿದೆ. ಪಂಕಜ್ ನಾರಾಯಣ್, ಧಾಮಿನಿ, ಕೃತಿಕಾ ಮುಂತಾದವರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಯೋಗೇಶ್ ಎನ್. ಅವರು ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ‘ಸರ್ಚ್’ ಕಥೆಯಲ್ಲಿ ಮಲಯಾಳಂ ಸಿನಿಮಾದ ಫೀಲ್ ಇದೆ ಎಂದು ಅವರು ಹೇಳಿದ್ದಾರೆ. ಅಶೋಕ್ ಕೆ. ರಾಜ್ ಛಾಯಾಗ್ರಹಣ ಮಾಡುತ್ತಿದ್ದಾರೆ. ಶ್ರೀ ಅಂಜನ್ ಅವರು ಸಂಗೀತ ನೀಡುತ್ತಿದ್ದಾರೆ.

ಪಂಕಜ್ ನಾರಾಯಣ್ ಅಭಿನಯದ ಹೊಸ ಸಿನಿಮಾ ‘ಸರ್ಚ್’; ನಡೆಯಿತು ಮುಹೂರ್ತ
Search Movie Team
ಮದನ್​ ಕುಮಾರ್​
|

Updated on: Sep 11, 2026 | 8:11 PM

Share

ಖ್ಯಾತ ನಿರ್ದೇಶಕ ಎಸ್. ನಾರಾಯಣ್ ಅವರ ಪುತ್ರ ಪಂಕಜ್ ನಾರಾಯಣ್ ಒಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದೊಂದಿಗೆ ಮರಳಿದ್ದಾರೆ. ಈ ಸಿನಿಮಾಗೆ ‘ಸರ್ಚ್’ ಎಂದು ಹೆಸರು ಇಡಲಾಗಿದೆ. ಈ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ನಡೆಯಿತು. ನಾಗರಬಾವಿ ಮುದ್ದಿನ‌ ಪಾಳ್ಯದ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮುಹೂರ್ತ ಮಾಡಲಾಯಿತು. ವೈ.ಬಿ. ರಮೇಶ್ ಕೋಟೆ ಅವರು ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಯೋಗೇಶ್ ಎನ್. ಅವರು ಈ ಚಿತ್ರದ ನಿರ್ಮಾಪಕರು.

ಈ ವೇಳೆ ಚಿತ್ರದ ನಾಯಕ ನಟ ಪಂಕಜ್ ಅವರು ಮಾತನಾಡಿ ಸಿನಿಮಾ ಬಗ್ಗೆ ಮಾಹಿತಿ ನೀಡಿದರು. ‘ಉಗ್ರಂ ಮುರಳಿ ಅವರು ಈಗಾಗಲೇ ಚಿತ್ರದ ಟೈಟಲ್ ಲಾಂಚ್ ಮಾಡಿಕೊಟ್ಟರು. ಇದೀಗ ಗಣ್ಯರ ಸಮ್ಮುಖದಲ್ಲಿ ಮುಹೂರ್ತ ನೆರವೇರಿದೆ. ಮೊದಲನೆಯದಾಗಿ ನಾನು ಈ ಚಿತ್ರ ಒಪ್ಪಲು ಪ್ರಮುಖ ಕಾರಣವೇ ಕಥೆ. ಇದು ಒಂದೇ ವಿಷಯವನ್ನು ತಲೆಯಲ್ಲಿಟ್ಟುಕೊಂಡು ಚಾಲೆಂಜ್ ಆಗಿ ಹುಡುಕಾಟ ನಡೆಸುವ ವಿಭಿನ್ನ ವ್ಯಕ್ತಿಯ ಪಾತ್ರ’ ಎಂದು ಪಂಕಜ್ ಅವರು ಹೇಳಿದರು.

‘ನಾನು ಗ್ಯಾಪ್ ಬಳಿಕ ಸಿನಿಮಾ ಮಾಡುತ್ತಿರುವುದೇನೋ ನಿಜ. ನಮ್ಮ ತಂದೆಯ ಮಾತಿನಂತೆ ಪ್ರತಿ ಸಿನಿಮಾಗಾಗಿ ಕೂಡ ನಾನು ಸಮರ್ಪಣಾಭಾವದಿಂದ ಕೆಲಸ ಮಾಡುತ್ತೇನೆ. ಆದರೆ ಈ‌ ಬಾರಿ ಈ ಹಿಂದೆಂದೂ ಮಾಡಿರದಂತಹ ಪಾತ್ರ ಸಿಕ್ಕಿರುವುದು ಮಾತ್ರ ನಿಜ. ಅದರಲ್ಲೂ ನಿರ್ದೇಶಕ ರಮೇಶ್ ಅವರು ಕಲಾವಿದರಿಂದ ಏನು ಬೇಕು ಎಂದು ಕೆಲಸ ತೆಗೆಯಬಲ್ಲವರು. ಹಾಗಾಗಿ ಸಹಜವಾಗಿಯೇ ನಿರೀಕ್ಷೆಗಳಿವೆ’ ಎಂದಿದ್ದಾರೆ ಪಂಕಜ್.

ನಿರ್ದೇಶಕ ವೈ.ಬಿ. ರಮೇಶ್ ಕೋಟೆ ಮಾತನಾಡಿ, ‘ಇದು ಒಂದು ರಾತ್ರಿಯಲ್ಲಿ ನಡೆಯುವ ಕಥೆ. ಅದನ್ನು 25 ರಾತ್ರಿಗಳಲ್ಲಿ ಚಿತ್ರೀಕರಿಸಲಿದ್ದೇವೆ. ಬೆಂಗಳೂರಲ್ಲೇ ಸರ್ಕಲ್ ಸೆಟ್ ಹಾಕಿ ಶೂಟಿಂಗ್ ಮಾಡಲಿದ್ದೇವೆ. ಚಿತ್ರದಲ್ಲಿ ನಾಯಕನ ಕಣ್ಣಮುಂದೆಯೇ ಮಿಸ್ ಆಗುವ ಹುಡುಗಿಯ ಹುಡುಕಾಟವಿದೆ. ಪ್ರೇಕ್ಷಕರನ್ನು ಕುತೂಹಲದಿಂದ ನೋಡಿಸಿಕೊಂಡು ಹೋಗುತ್ತದೆ ಈ ಕಥೆ’ ಎಂದು ಭರವಸೆ ನೀಡಿದರು.

ಇದನ್ನೂ ಓದಿ: ‘ಚಂದ್ರ ಚಕೋರಿ’ ಸಿನಿಮಾ ಶ್ರೀಮುರಳಿಗಾಗಿ ಮಾಡಿದ್ದಲ್ಲ: ಎಸ್ ನಾರಾಯಣ್

ಪಂಕಜ್ ಅವರಿಗೆ ಜೋಡಿಯಾಗಿ ಧಾಮಿನಿ ಅವರು ನಟಿಸುತ್ತಿದ್ದಾರೆ. ಕೊಡಗು ಮೂಲದ ಅವರಿಗೆ ಧಾರಾವಾಹಿಗಳಲ್ಲಿ ನಟಿಸಿದ ಅನುಭವ ಇದೆ. ನಟಿ ಕೃತಿಕಾ ಅವರು ಕೂಡ ಒಂದು ಪಾತ್ರ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಒಳ್ಳೆಯ ಪಾತ್ರ ಸಿಕ್ಕಿರುವುದಕ್ಕೆ ಅವರಿಗೆ ಸಂತಸ ಇದೆ. ಸುಭಾನ್ ಅವರು ಕೂಡ ಒಂದು ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಸಹ-ನಿರ್ಮಾಪಕರಾಗಿಯೂ ಅವರು ಕೆಲಸ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us