‘ಟಾಕ್ಸಿಕ್’ ನೋಡಿದ ಶಿವಣ್ಣ, ಸಿನಿಮಾದ ಬಗ್ಗೆ ಹೇಳಿದ್ದೇನು?
‘ಟಾಕ್ಸಿಕ್’ ಸಿನಿಮಾದ ಬಗ್ಗೆ ಕೆಲವರು ನೆಗೆಟಿವ್ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದರ ನಡುವೆ ಕನ್ನಡ ಸ್ಟಾರ್ ನಟರು ಸಿನಿಮಾದ ಬೆಂಬಲಕ್ಕೆ ಬರುತ್ತಿಲ್ಲ ಎಂಬ ದೂರು ಇತ್ತೀಚೆಗೆ ಕೇಳಿ ಬಂದಿತ್ತು. ಆರೋಪವನ್ನು ಸುಳ್ಳು ಮಾಡುವಂತೆ ಉಪೇಂದ್ರ, ಸುದೀಪ್ ಇನ್ನೂ ಹಲವರು ಸಿನಿಮಾದ ಪರವಾಗಿ ಮಾತನಾಡಿದ್ದರು. ಇದೀಗ ಶಿವರಾಜ್ ಕುಮಾರ್ ಖುದ್ದು ‘ಟಾಕ್ಸಿಕ್’ ಸಿನಿಮಾ ವೀಕ್ಷಿಸಿದ್ದಾರೆ.

ಮುಖ್ಯಾಂಶಗಳು
- ಟಾಕ್ಸಿಕ್ ಸಿನಿಮಾ ನೋಡಿದ್ದಾರೆ ನಟ ಶಿವರಾಜ್ ಕುಮಾರ್
- ಪತ್ನಿ ಗೀತಾ ಶಿವರಾಜ್ ಕುಮಾರ್ ಜೊತೆ ಸಿನಿಮಾ ವೀಕ್ಷಿಸಿದ್ದಾರೆ.
- ಶಿವರಾಜ್ ಕುಮಾರ್ ಅವರಿಗೆ ಸಿನಿಮಾ ಬಹಳ ಇಷ್ಟವಾಯ್ತಂತೆ
ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಆದರೆ ಅದರ ಜೊತೆಗೆ ಕೆಲವರು ಸಿನಿಮಾದ ಬಗ್ಗೆ ನೆಗೆಟಿವ್ ವಿಮರ್ಶೆಗಳನ್ನು ಸಹ ಮಾಡುತ್ತಲೇ ಇದ್ದಾರೆ. ಇದರ ಜೊತೆಗೆ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ‘ಟಾಕ್ಸಿಕ್’ ಸಿನಿಮಾಕ್ಕೆ ಬೆಂಬಲ ನೀಡುತ್ತಿಲ್ಲ ಎಂದು ಕೆಲವರು ಆರೋಪ ಮಾಡಿದ್ದರು. ಆದರೆ ಇದೀಗ ನಟ ಶಿವರಾಜ್ ಕುಮಾರ್, ಖುದ್ದು ಚಿತ್ರಮಂದಿರಕ್ಕೆ ಭೇಟಿ ನೀಡಿ ‘ಟಾಕ್ಸಿಕ್’ ಸಿನಿಮಾ ವೀಕ್ಷಣೆ ಮಾಡಿದ್ದಾರೆ. ಆ ಮೂಲಕ ಯಶ್ ಸಿನಿಮಾಕ್ಕೆ ಮತ್ತೊಮ್ಮೆ ಬೆಂಬಲ ನೀಡಿದ್ದಾರೆ.
ಪತ್ನಿ ಗೀತಾ ಶಿವರಾಜ್ ಕುಮಾರ್ ಅವರೊಟ್ಟಿಗೆ ಚಿತ್ರಮಂದಿರಕ್ಕೆ ಆಗಮಿಸಿದ ನಟ ಶಿವಕುಮಾರ್ ಕುಮಾರ್, ‘ಟಾಕ್ಸಿಕ್’ ಸಿನಿಮಾ ವೀಕ್ಷಣೆ ಮಾಡಿದರು. ಸಿನಿಮಾ ನೋಡಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಶಿವರಾಜ್ ಕುಮಾರ್, ‘ಟಾಕ್ಸಿಕ್’ ಸಿನಿಮಾ ಒಂದು ಒಳ್ಳೆ ಪ್ರಯತ್ನ, ಸಿನಿಮಾನಲ್ಲಿ ಯಶ್ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ, ಸಿನಿಮಾದ ಕೊನೆ 20 ನಿಮಿ ಗೇಮ್ ಚೇಂಜಿಂಗ್ ಆಗಿದೆ, ಲಾಸ್ಟ್ ಅಲ್ಲಿ ಯಶ್ ಅದ್ಭುತವಾಗಿ ನಟಿಸಿದ್ದಾರೆ. ನನಗೆ ರಾಯ ಮತ್ತು ಟಿಕೆಟ್ ಎರಡೂ ಪಾತ್ರ ಬಹಳ ಇಷ್ಟವಾಯ್ತು’ ಎಂದಿದ್ದಾರೆ ಶಿವಣ್ಣ.
ಸಿನಿಮಾದ ಬಗ್ಗೆ ನೆಗೆಟಿವ್ ಪ್ರಚಾರವ್ನು ಕೆಲವರು ಮಾಡುತ್ತಿರುವ ಬಗ್ಗೆ ಮಾತನಾಡಿದ ಶಿವಣ್ಣ, ‘ನೆಗೆಟಿವ್ ಯಾರು ಮಾಡುತ್ತಾರೆ ಅಂತ ನೀವೇ (ಮಾಧ್ಯಮದವರು) ಹುಡುಕಬೇಕು, ಯಶ್ ಸಿನಿಮಾ ನಮ್ಮ ಹುಡುಗನ ಸಿನಿಮಾ, ಟ್ರೈಲರ್ ಲಾಂಚ್ ನಾನೇ ಮಾಡಿದ್ದೆ, ನನ್ನ ತಮ್ಮ ಮಾಡಿದ ಸಿನಿಮಾ ಅಂತ ಖುಷಿ ಇತ್ತು, ನನ್ನ ತಮ್ಮನ ನೋಡಿದ ಹಾಗೆ ಯಶ್ ಅವರನ್ನ ನೋಡಿದ್ದೇನೆ. ನನಗೆ ಸಿನಿಮಾ ಇಷ್ಟವಾಯ್ತು’ ಎಂದರು.
ಇದನ್ನೂ ಓದಿ:ಯಶ್ ‘ಟಾಕ್ಸಿಕ್’ ಚಿತ್ರದ ಗಳಿಕೆ ಎಷ್ಟು ಕೋಟಿ ರೂಪಾಯಿ? 400 ಕೋಟಿ ಕಲೆಕ್ಷನ್ ಅನುಮಾನ?
‘ಹೈದರಾಬಾದ್ ಅಲ್ಲಿ ನಾನು ಸಿನಿಮಾ ನೋಡುತ್ತೇನೆ ಎಂದು ಹೇಳಿದ್ದೆ ಆದರೆ ಆಗಲಿಲ್ಲ. ನಿನ್ನೆನೆ ನಾನು ಬುಕ್ ಮಾಡಿದ್ದೆ, ಇಂದು ಮನೆಯವರೆಲ್ಲ ಸಿನಿಮಾ ನೋಡಿದೆವು. ನಾನು ಶಿವರಾಜ್ ಕುಮಾರ್ ಆಗಿ ಸಿನಿಮಾ ನೋಡಲಿಲ್ಲ ಬದಲಿಗೆ ಒಬ್ಬ ಪ್ರೇಕ್ಷಕರಾಗಿ ಸಿನಿಮಾ ನೋಡಿದ್ದೇನೆ’ ಎಂದರು ಶಿವಣ್ಣ.
‘ನಾನು ಮೊದಲಿಂದಲೂ ಎಷ್ಟೋ ಜನ ಹೀರೋ ಪರ ನಿಂತಿದ್ದೇನೆ, ನನಗೆ ನಮ್ಮವರು ಮತ್ತೆ ಇಂಡಸ್ಟ್ರಿ ಮುಖ್ಯ , ನಾನು ಯಶ್ ಗೋಸ್ಕರ ಇಂದು ಬಂದು ಸಿನಿಮಾ ನೋಡಿದ್ದೇನೆ, ಇಂಡಸ್ಟ್ರಿ ಬೆಳೆಯ ಬೇಕು, ನಮ್ಮ ಸಿನಿಮಾ ಅಲ್ಲ ಕನ್ನಡ ಸಿನಿಮಾ ಬೆಳೆಯಬೇಕು ಅಷ್ಟೆ. ನಮ್ಮವರು ಬರಿ ಸ್ಟಾರ್ ಸಿನಿಮಾ ನೋಡೋದು ಅಲ್ಲ ಎಲ್ಲರ ಸಿನಿಮಾ ನೋಡಬೇಕು , ಕನ್ನಡ ಸಿನಿಮಾ ಟಾಪ್ ಅಲ್ಲಿ ಇದೆ , ಯಾರೇ ಸ್ಟಾರ್ ಆದರೂ ಅವರು ಅಭಿಮಾನಿಗಳ ಸ್ಟಾರ್ ಅಷ್ಟೇ’ ಎಂದರು ಶಿವಣ್ಣ.
ಸಿನಿಮಾಕ್ಕೆ ಪೈರಸಿ ಕಾಟ ಎದುರಾಗಿರುವ ಬಗ್ಗೆಯೂ ಮಾತನಾಡಿದ ನಟ ಶಿವರಾಜ್ ಕುಮಾರ್, ‘ಪೈರಸಿ ಕಾಟ ಮೊದಲಿಂದಲೂ ಇದೆ, ಅದಕ್ಕೆ ನಾವು ಏನೂ ಮಾಡಬೇಕು ಅಂತ ಗೊತ್ತಾಗ್ತಿಲ್ಲ’ ಎಂದರು. ಶಿವರಾಜ್ ಕುಮಾರ್ ಅವರು ‘ಟಾಕ್ಸಿಕ್’ ಸಿನಿಮಾದ ಟ್ರೈಲರ್ ಲಾಂಚ್ ಇವೆಂಟ್ಗೆ ಅತಿಥಿಯಾಗಿ ಹೋಗಿದ್ದರು. ಆಗಲೂ ಸಹ ಸಿನಿಮಾಕ್ಕೆ ಶುಭ ಹಾರೈಸಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




