ಉಡುಗೆ ಇಲ್ಲದೆ ಕಂಗಾಲಾದ ಜಗ್ಗು ಮಮ್ಮಿಗೆ ಬಟ್ಟೆ ಕಳುಹಿಸಿದ ಕಿಚ್ಚ ಸುದೀಪ್
ಬಿಗ್ ಬಾಸ್ ಕನ್ನಡ 13ರಲ್ಲಿ ವೀಕೆಂಡ್ ಎಪಿಸೋಡ್ಗೆ ಸೂಕ್ತ ಉಡುಪಿಲ್ಲದೆ ಭಾವುಕರಾಗಿದ್ದ ಸ್ಪರ್ಧಿ ಜಗ್ಗು ಮಮ್ಮಿ (ಜಗದೀಶ್) ನೆರವಿಗೆ ನಿರೂಪಕ ಕಿಚ್ಚ ಸುದೀಪ್ ಧಾವಿಸಿದ್ದಾರೆ. ಬಡತನದ ಹಿನ್ನೆಲೆಯಿಂದ ಬಂದ ಜಗ್ಗು ಅವರಿಗೆ ತಮ್ಮ ಕಡೆಯಿಂದಲೇ ವಿಶೇಷ ಬಟ್ಟೆಗಳನ್ನು ಕಳುಹಿಸಿಕೊಡುವ ಮೂಲಕ ಅಭಿನಯ ಚಕ್ರವರ್ತಿ ಮತ್ತೊಮ್ಮೆ ತಮ್ಮ ಉದಾರ ಮನಸ್ಸನ್ನು ಪ್ರದರ್ಶಿಸಿ ಅಭಿಮಾನಿಗಳ ಮನ ಗೆದ್ದಿದ್ದಾರೆ.

ಮುಖ್ಯಾಂಶಗಳು
- ವೀಕೆಂಡ್ ಉಡುಪಿಗಾಗಿ ಕಣ್ಣೀರಿಟ್ಟಿದ್ದ 'ಜಗ್ಗು ಮಮ್ಮಿ'
- ಸಮಯೋಚಿತ ನೆರವಿನೊಂದಿಗೆ ದೊಡ್ಡತನ ಮೆರೆದ ಕಿಚ್ಚ ಸುದೀಪ್
- ಸ್ಪರ್ಧಿಗಳ ಕಷ್ಟಕ್ಕೆ ಸ್ಪಂದಿಸುವ ಅಭಿನಯ ಚಕ್ರವರ್ತಿಯ ಔದಾರ್ಯ
‘ಬಿಗ್ ಬಾಸ್ ಕನ್ನಡ ಸೀಸನ್ 13’ರ ಮೊದಲ ಸ್ಪರ್ಧಿಯಾಗಿ ಮನೆ ಪ್ರವೇಶಿಸಿದ್ದ ನಟ ಜಗದೀಶ್ (ಜಗ್ಗು ಮಮ್ಮಿ), ತಮ್ಮ ಮುಗ್ಧತೆ ಹಾಗೂ ಕಷ್ಟದ ಜೀವನದ ಕಥೆಯ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಅತ್ಯಂತ ಬಡ ಕುಟುಂಬದಿಂದ ಬಂದಿರುವ ಜಗ್ಗು, ಶೋಗೆ ಆಗಮಿಸಿದಾಗಲೂ ತಮ್ಮ ಬಳಿ ಉತ್ತಮ ಉಡುಪುಗಳಿಲ್ಲದೆ ಗೆಳೆಯನ ಮದುವೆ ಬಟ್ಟೆ ಧರಿಸಿ ಬಂದಿರುವುದಾಗಿ ವೇದಿಕೆ ಮೇಲೆಯೇ ಹೇಳಿಕೊಂಡು ಭಾವುಕರಾಗಿದ್ದರು. ಈಗ ಅವರಿಗೆ ಸುದೀಪ್ ಅವರು ಬಟ್ಟೆ ಕಳುಹಿಸಿದ್ದಾರೆ.
ಮನೆಯಲ್ಲೂ ವೀಕೆಂಡ್ ‘ಕಿಚ್ಚನ ಪಂಚಾಯಿತಿ’ ಎಪಿಸೋಡ್ನಲ್ಲಿ ಭಾಗವಹಿಸಲು ತಮ್ಮ ಬಳಿ ಸೂಕ್ತ ಬಟ್ಟೆಗಳಿಲ್ಲ ಎಂದು ಅಸಹಾಯಕತೆಯಿಂದ ಕಣ್ಣೀರಿಟ್ಟಿದ್ದರು. ಈ ವಿಷಯ ತಿಳಿದ ಕಾರ್ಯಕ್ರಮದ ನಿರೂಪಕ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ತಕ್ಷಣವೇ ಸ್ಪಂದಿಸಿದ್ದಾರೆ. ಜಗ್ಗು ಮಮ್ಮಿ ಅವರಿಗೆ ವೀಕೆಂಡ್ ಎಪಿಸೋಡ್ಗಾಗಿ ತಮ್ಮ ಕಡೆಯಿಂದಲೇ ವಿಶೇಷ ಬಟ್ಟೆಗಳನ್ನು ಕಳುಹಿಸಿಕೊಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಸುದೀಪ್ ಕಳುಹಿಸಿದ ಬಟ್ಟೆಯನ್ನು ಕಂಡು ತೀವ್ರ ಭಾವುಕರಾದ ಜಗ್ಗು ಮಮ್ಮಿ, ಧನ್ಯವಾದ ಅರ್ಪಿಸಿದ್ದಾರೆ. ಕಷ್ಟದಲ್ಲಿದ್ದ ಸ್ಪರ್ಧಿಯ ಮುಗ್ಧತೆಗೆ ಬೆಂಬಲವಾಗಿ ನಿಂತ ಕಿಚ್ಚ ಸುದೀಪ್ ಅವರ ಈ ಔದಾರ್ಯಕ್ಕೆ ಬಿಗ್ ಬಾಸ್ ವೀಕ್ಷಕರು ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ.
ಕಿಚ್ಚ ಸುದೀಪ್ ಅವರು ಈ ರೀತಿ ಸಾಕಷ್ಟು ಔದಾರ್ಯ ಮೆರೆದ ಸಾಕಷ್ಟು ಉದಾಹರಣೆ ಇದೆ. ಈ ಮೊದಲು ಹನುಮಂತ ಅವರಿಗೆ ಬಟ್ಟೆ ಇಲ್ಲದೆ ಕಷ್ಟಪಟ್ಟಿದ್ದರು. ಆಗಲೂ ಸುದೀಪ್ ಅವರು ಬಟ್ಟೆ ಕೊಟ್ಟು ದೊಡ್ಡತನ ಮೆರೆದಿದ್ದನ್ನು ಕಾಣಬಹುದು.
ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಮಹಿಳೆಯರು ಕೆಲಸಕ್ಕೆ ಮಾತ್ರ ಸೀಮಿತ? ಕೇಳಿಬಂತು ಗಂಭೀರ ಆರೋಪ
ಇಷ್ಟೇ ಅಲ್ಲದೆ, ಬಿಗ್ ಬಾಸ್ ಸ್ಪರ್ಧಿಗಳನ್ನು ಸುದೀಪ್ ಅವರು ತಮ್ಮ ಮನೆಯವರಂತೆ ಕಾಣಿಸುತ್ತಾರೆ. ಅವರು ಕೇಳಿದ ಬೇಡಿಕೆಗಳನ್ನು ಅನೇಕ ಬಾರಿ ಈಡೇರಿಸಿದ ಉದಾಹರಣೆ ಕೂಡ ಇದೆ. ಈಗ ಸುದೀಪ್ ಅವರು ದೊಡ್ಡತನ ಮೆರೆದಿದ್ದಾರೆ. ‘ಲವ್ ಮಾಕ್ಟೇಲ್ 3’ ಸಿನಿಮಾದಲ್ಲಿ ಜಗ್ಗು ಮಮ್ಮಿ ಪಾತ್ರದಲ್ಲಿ ಜಗದೀಶ್ ಕಾಣಿಸಿಕೊಂಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




