ಬಿಗ್ ಬಾಸ್ ವೇದಿಕೆಯಲ್ಲಿ ಸಿಎಂ ವಿಜಯ್ಗೆ ಟಾಂಗ್ ಕೊಟ್ಟ ವಿಜಯ್ ಸೇತುಪತಿ?
ಬಿಗ್ ಬಾಸ್ ತಮಿಳು ಸೀಸನ್ 10ರ ವೇದಿಕೆಯಲ್ಲಿ ನಟ ವಿಜಯ್ ಸೇತುಪತಿ ನಾಯಕತ್ವದ ಕುರಿತು ನೀಡಿದ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಸಿಎಂ ವಿಜಯ್ ಅವರನ್ನು ಉದ್ದೇಶಿಸಿ ಈ ಮಾತುಗಳನ್ನು ಹೇಳಲಾಗಿದೆ ಎಂದು ನೆಟ್ಟಿಗರು ಚರ್ಚಿಸುತ್ತಿದ್ದು, ಈ ವಿವಾದಕ್ಕೆ ಯಾವುದೇ ಆಧಾರವಿಲ್ಲ ಎಂದು ಅಭಿಮಾನಿಗಳು ಸ್ಪಷ್ಟಪಡಿಸಿದ್ದಾರೆ.

ಮುಖ್ಯಾಂಶಗಳು
- ಬಿಗ್ ಬಾಸ್ ವೇದಿಕೆಯಲ್ಲಿ ವಿಜಯ್ ಸೇತುಪತಿ ಉಪದೇಶ
- ನಾಯಕತ್ವದ ಮಾತಿಗೆ ರಾಜಕೀಯ ಬಣ್ಣ
- ಸಿಎಂ ವಿಜಯ್ಗೆ ಟಾಂಗ್ ನೀಡಿದ್ರಾ ಸೇತುಪತಿ?
ಖ್ಯಾತ ನಟ ವಿಜಯ್ ಸೇತುಪತಿ ಬಿಗ್ ಬಾಸ್ ತಮಿಳು ಸೀಸನ್ 10ರ ಇತ್ತೀಚಿನ ಸಂಚಿಕೆಯಲ್ಲಿ ನೀಡಿದ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಬಿಗ್ ಬಾಸ್ ಸ್ಪರ್ಧಿ ಜೊತೆ ಲೀಡರ್ಶಿಪ್ ಕುರಿತು ವಿಜಯ್ ಸೇತುಪತಿ ಮಾತನಾಡಿದ್ದರು. ಈ ವೇಳೆ ಜವಾಬ್ದಾರಿಗಳು ಮತ್ತು ಭರವಸೆಗಳ ಬಗ್ಗೆ ಸೇತುಪತಿ ಪ್ರಸ್ತಾಪಿಸಿದ್ದರು. ಕಷ್ಟದ ಸಂದರ್ಭಗಳಲ್ಲಿ ನಾಯಕನಾದವನು ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ವಿವರಿಸಿದ್ದರು. ಇದನ್ನು ಕೆಲವರು ತಪ್ಪಾಗಿ ಅರ್ಥೈಸಿದ್ದಾರೆ.
‘ವಿಚಾರಿಸದೆ ಆತುರದಲ್ಲಿ ಭರವಸೆ ನೀಡುವುದು ಸರಿಯಲ್ಲ. ಸಮಸ್ಯೆಗಳು ಎದುರಾದಾಗ ಓಡಿಹೋಗುವುದು ನಿಜವಾದ ನಾಯಕತ್ವವಲ್ಲ. ವಿಪಕ್ಷಗಳ ಮೇಲೆ ಗೂಬೆ ಕೂರಿಸುವುದು ನಾಯಕನ ಲಕ್ಷಣವಲ್ಲ’ ಎಂದು ಸ್ಪರ್ಧಿಗೆ ವಿವರಿಸಿದರು. ಇವು ಬಿಗ್ ಬಾಸ್ ಮನೆಗೆ ಸಂಬಂಧಿಸಿದ ಮಾತುಗಳಾಗಿದ್ದರೂ ಹೊರಗಡೆ ಭಾರಿ ಚರ್ಚೆ ಹುಟ್ಟುಹಾಕಿವೆ.
ಕೆಲವು ವೀಕ್ಷಕರು ಈ ಹೇಳಿಕೆಯನ್ನು ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರಿಗೆ ಲಿಂಕ್ ಮಾಡುತ್ತಿದ್ದಾರೆ. ಇತ್ತೀಚಿನ ರಾಜಕೀಯ ಬೆಳವಣಿಗೆಗಳಿಗೆ ಈ ಮಾತುಗಳು ಹೋಲಿಕೆಯಾಗುತ್ತಿವೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಆದರೆ ವಿಜಯ್ ಸೇತುಪತಿ ತಮ್ಮ ಮಾತಿನಲ್ಲಿ ಸಿಎಂ ವಿಜಯ್ ಅವರ ಹೆಸರು ಎಲ್ಲೂ ಪ್ರಸ್ತಾಪಿಸಿಲ್ಲ. ಯಾವುದೇ ರಾಜಕೀಯ ಪಕ್ಷ ಅಥವಾ ನಾಯಕರ ಹೆಸರನ್ನು ಅವರು ಹೇಳಿಲ್ಲ.
— Vijay Television (@vijaytelevision) September 14, 2026
ಬಿಗ್ ಬಾಸ್ ಮನೆಯೊಳಗಿನ ಆಟ ಮತ್ತು ನಾಯಕತ್ವದ ಬಗ್ಗೆ ಸ್ಪರ್ಧಿಗೆ ಹೇಳಿದ ಕಿವಿಮಾತು ಇದು. ಆದರೆ, ಇದನ್ನು ಬೇರೆ ರೀತಿಯಲ್ಲೇ ಹೇಳಲಾಗುತ್ತಾ ಇದೆ. ಇನ್ನು, ತಮಿಳಿನಲ್ಲಿ ಬಿಗ್ ಬಾಸ್ ಪ್ರಸಾರ ಮಾಡುವ ವಿಜಯ್ ಟೆಲಿವಿಷನ್ ಕೂಡ ಪರೋಕ್ಷವಾಗಿ ಸ್ಪಷ್ಟನೆ ಕೊಟ್ಟಿದ್ದು, ‘ಒಂದೊಮ್ಮೆ ಬಿಗ್ ಬಾಸ್ ಹೇಳಿಕೆ ಹೊರ ಜಗತ್ತಿಗೆ ಕನೆಕ್ಟ್ ಆದರೆ ಅದು ಕೇವಲ ಕಾಕತಾಳೀಯ’ ಎಂದಿದೆ.
ಇದನ್ನೂ ಓದಿ: ಬಿಗ್ ಬಾಸ್ ವೇದಿಕೆಯಲ್ಲಿ ಸುದೀಪ್ ಜೊತೆ ಕನ್ನಡದಲ್ಲಿ ವಿಜಯ್ ಸೇತುಪತಿ ಮಾತು
ವಿಜಯ್ ಸೇತುಪತಿ ಅವರು ಸಿಎಂ ವಿಜಯ್ ಅವರನ್ನು ಹಲವು ವರ್ಷಗಳಿಂದ ಗೌರವಿಸುತ್ತಿದ್ದಾರೆ. ಅವರನ್ನು ಪ್ರೀತಿಯಿಂದ ‘ಅಣ್ಣ’ ಎಂದು ಕರೆಯುತ್ತಾರೆ ‘ಮಾಸ್ಟರ್’ ಸಿನಿಮಾ ವೇದಿಕೆಯಲ್ಲಿಯೂ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದರು. ಹಾಗಾಗಿ ಇದು ಯಾವುದೇ ಆಧಾರವಿಲ್ಲದ ಅನಗತ್ಯ ವಿವಾದ ಎಂದು ಕೆಲವರು ಅಭಿಪ್ರಾಯ ಹೊರಹಾಕಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




