ಕೆಲಸ ಮುಖ್ಯವೆಂದು ಆರೋಗ್ಯ ನಿರ್ಲಕ್ಷ್ಯಿಸಬೇಡಿ; ಬಿಪಿ 230ಕ್ಕೆ ಏರಿ ಐಸಿಯುಗೆ ದಾಖಲಾದ ಬೆಂಗಳೂರಿನ ಸಿಇಒ ಕಿವಿಮಾತಿದು
ಬೆಂಗಳೂರು ಮೂಲದ ಕಂಪನಿಯ ಸಿಇಒ ಒಬ್ಬರು ತಮ್ಮ ರಕ್ತದೊತ್ತಡ 230ಕ್ಕೆ ಏರಿದ ನಂತರ ಆಸ್ಪತ್ರೆಯಲ್ಲಿ ಐಸಿಯುಗೆ ದಾಖಲಾಗಿದ್ದಾರೆ. ಈ ಬಗ್ಗೆ ಅವರು ಲಿಂಕ್ಡ್ಇನ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅವರು ಕೆಲಸದ ಜೊತೆಗೆ ಆರೋಗ್ಯಕ್ಕೂ ಆದ್ಯತೆ ನೀಡಬೇಕೆಂದು ಜನರ ಬಳಿ ಮನವಿ ಮಾಡಿದರು. ಬೆಂಗಳೂರು ಕಂಪನಿಯ ಸಿಇಒ ಹಠಾತ್ ಮೂಗಿನ ರಕ್ತಸ್ರಾವ, ಅಧಿಕ ರಕ್ತದೊತ್ತಡದಿಂದಾಗಿ ಐಸಿಯುಗೆ ದಾಖಲಾಗಿದ್ದಾರೆ. ನಿರಂತರ ಕೆಲಸದ ಸಂಸ್ಕೃತಿಯು ಹೆಚ್ಚಾಗಿ ಬೆಲೆಗೆ ಬರುತ್ತದೆ ಎಂದು ಬೆಂಗಳೂರಿನ ಸಿಇಒ ಅಮಿತ್ ಮಿಶ್ರಾ ಹೇಳಿದ್ದಾರೆ.

ಬೆಂಗಳೂರು, ಏಪ್ರಿಲ್ 2: ಇಂದಿನ ವೇಗದ ವೃತ್ತಿಪರ ಜಗತ್ತಿನಲ್ಲಿ ಅನೇಕ ವ್ಯಕ್ತಿಗಳು ವೃತ್ತಿಜೀವನದ ಟಾರ್ಗೆಟ್ ಅನುಸರಿಸುವಲ್ಲಿ ತಮ್ಮ ಆರೋಗ್ಯವನ್ನು (Health Tips) ನಿರ್ಲಕ್ಷಿಸುತ್ತಾರೆ. ಕೆಲಸದ ಒತ್ತಡದಿಂದ ಜನರು ಆರೋಗ್ಯವೂ ಹದಗೆಡುತ್ತಿದೆ. ಆದರೆ, ಬಹುತೇಕ ಜನರು ಈ ಬಗ್ಗೆ ಗಮನವನ್ನೇ ಹರಿಸುವುದಿಲ್ಲ. ಆರೋಗ್ಯ ಸಮಸ್ಯೆ ವಿಪರೀತ ಮಟ್ಟಕ್ಕೆ ಹೋದಾಗ ಮಾತ್ರ ಅವರು ವೈದ್ಯರ ಬಳಿ ಹೋಗುತ್ತಾರೆ. ಆದರೆ, ಕೆಲಸ ಮುಖ್ಯವೆಂಬುದು ನಿಜವಾದರೂ ನಿಮ್ಮ ಆರೋಗ್ಯವನ್ನು ನಿರ್ಲಕ್ಷ್ಯಿಸಬೇಡಿ ಎಂದು ಬೆಂಗಳೂರಿನ ಉದ್ಯಮಿಯೊಬ್ಬರು ತಾವು ಐಸಿಯುಗೆ ಸೇರಿದ ಬಳಿಕ ಜನರಿಗೆ ಕಿವಿಮಾತು ಹೇಳಿದ್ದಾರೆ. ಅವರ ಪೋಸ್ಟ್ ಈಗ ತೀವ್ರ ಚರ್ಚೆಗೆ ಕಾರಣವಾಗಿದೆ.
ಬೆಂಗಳೂರಿನ ಉದ್ಯಮಿ ಅಮಿತ್ ಮಿಶ್ರಾ ಎಂಬುವವರು ಯಾವುದೇ ಪೂರ್ವ ಲಕ್ಷಣಗಳಿಲ್ಲದೆ ಇದ್ದಕ್ಕಿದ್ದಂತೆ ವಿಪರೀತ ಮೂಗಿನ ರಕ್ತಸ್ರಾವವನ್ನು ಅನುಭವಿಸಿದರು. ಇದರಿಂದ ಅವರು ಆಸ್ಪತ್ರೆಗೆ ತುರ್ತು ಭೇಟಿ ನೀಡಿದರು. ಒಮ್ಮೆ ಆಸ್ಪತ್ರೆಗೆ ದಾಖಲಾದ ನಂತರ, ಅವರ ರಕ್ತದೊತ್ತಡ (ಬಿಪಿ) 230ಕ್ಕೆ ಏರಿದೆ ಎಂದು ಗೊತ್ತಾಯಿತು. ಇದು ಅಪಾಯಕಾರಿಯಾಗಿ ಹೆಚ್ಚಿನ ಮಟ್ಟವಾಗಿದ್ದು, ಅವರನ್ನು ತೀವ್ರ ನಿಗಾ ಘಟಕಕ್ಕೆ (ಐಸಿಯು) ಸೇರಿಸಲಾಯಿತು.
ಕೆಲಸ ಮುಖ್ಯವೆಂದು ಆರೋಗ್ಯದ ಜೊತೆ ರಾಜಿಯಾಗಬೇಡಿ. ನಿಮ್ಮ ಆರೋಗ್ಯವೂ ಬಹಳ ಮುಖ್ಯ ಎಂದು ಅಮಿತ್ ಮಿಶ್ರಾ ಪೋಸ್ಟ್ ಮಾಡಿದ್ದಾರೆ. ಲಿಂಕ್ಡ್ಇನ್ನಲ್ಲಿ ಈಗ ವೈರಲ್ ಆಗಿರುವ ಪೋಸ್ಟ್ನಲ್ಲಿ ಡೇಜಿನ್ಫೋ ಮೀಡಿಯಾ ಮತ್ತು ರಿಸರ್ಚ್ನ ಸಂಸ್ಥಾಪಕ ಮತ್ತು ಸಿಇಒ ಅಮಿತ್ ಮಿಶ್ರಾ ತಮ್ಮ ಆಘಾತಕಾರಿ ಅನುಭವವನ್ನು ಹಂಚಿಕೊಂಡಿದ್ದಾರೆ. ಅವರು ತಮ್ಮ ಲ್ಯಾಪ್ಟಾಪ್ನಲ್ಲಿ ಕೆಲಸ ಮಾಡುತ್ತಿದ್ದಾಗಲೇ ಇದ್ದಕ್ಕಿದ್ದಂತೆ ಮೂಗಿನಲ್ಲಿ ನಿಯಂತ್ರಿಸಲಾಗದ ರಕ್ತಸ್ರಾವ ಶುರುವಾಯಿತು. ಈ ಹಿನ್ನೆಲೆಯಲ್ಲಿ ಅವರು ಆಸ್ಪತ್ರೆಗೆ ಧಾವಿಸಿದರು.
ಇದನ್ನೂ ಓದಿ: Health Tips: ಶುಂಠಿ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆಯೇ? ತಜ್ಞರು ಹೇಳುವುದೇನು?
ಇದ್ದಕ್ಕಿದ್ದಂತೆ ಬಿಳಿ ವಾಶ್ಬೇಸಿನ್ ಕೆಂಪು ಬಣ್ಣಕ್ಕೆ ತಿರುಗಿತು. ದಪ್ಪ ಹತ್ತಿ ಬಟ್ಟೆ ರಕ್ತದಲ್ಲಿ ನೆನೆದು, ಕೋಮಾಕ್ಕೆ ಹೋಗಬೇಕಾಗಿದ್ದ ಅವರು ಐಸಿಯುಗೆ ದಾಖಲಾದರು. “ಇದು ನನ್ನ ಭಯಾನಕ ವೀಕೆಂಡ್ ಆಗಿತ್ತು” ಎಂದು ಅವರು ಹೇಳಿದ್ದಾರೆ.
“ನಾನು ಅಪೋಲೋ ಆಸ್ಪತ್ರೆಗೆ ಧಾವಿಸುವ ಹೊತ್ತಿಗೆ ನಾನು ಗಮನಾರ್ಹ ಪ್ರಮಾಣದ ರಕ್ತವನ್ನು ಕಳೆದುಕೊಂಡಿದ್ದೆ. ತುರ್ತು ತಂಡವು ರಕ್ತಸ್ರಾವವನ್ನು ತಾತ್ಕಾಲಿಕವಾಗಿ ನಿಲ್ಲಿಸುವ ಮೊದಲು 20 ನಿಮಿಷಗಳ ಕಾಲ ಹೋರಾಡಿತು. ಆದರೆ ನಂತರ ನನ್ನ ರಕ್ತದೊತ್ತಡ 230 ಆಗಿತ್ತು. ತಲೆನೋವು ಇಲ್ಲ, ತಲೆತಿರುಗುವಿಕೆ ಇಲ್ಲ, ಯಾವುದೇ ಸೂಚನೆಗಳೂ ಸಿಗಲಿಲ್ಲ. ನನಗೆ ಬಿಪಿಯೂ ಇರಲಿಲ್ಲ. ಆದರೂ ಅನಿರೀಕ್ಷಿತವಾಗಿ ಈ ರೀತಿ ಆಯಿತು. ನನ್ನ ಬಿಪಿ 230ಕ್ಕೆ ಏರಿದ್ದು ನೋಡಿ ಆಘಾತವಾಯಿತು” ಎಂದು ಅಮಿತ್ ಮಿಶ್ರಾ ಹೇಳಿದ್ದಾರೆ.
“ನನ್ನನ್ನು ತಕ್ಷಣ ಐಸಿಯುಗೆ ಸ್ಥಳಾಂತರಿಸಲಾಯಿತು, ಅಲ್ಲಿ ವೈದ್ಯರು ನನ್ನ ರಕ್ತದೊತ್ತಡವನ್ನು ಕಡಿಮೆ ಮಾಡಲು ಪ್ರಯತ್ನ ಮಾಡಿದರು. ತಡರಾತ್ರಿಯ ಹೊತ್ತಿಗೆ, ಪರಿಸ್ಥಿತಿ ನಿಯಂತ್ರಣದಲ್ಲಿರುವಂತೆ ತೋರುತ್ತಿತ್ತು. ಆದರೆ, ಮರುದಿನ ಬೆಳಿಗ್ಗೆ ನಾನು ಐಸಿಯು ಒಳಗೆ ನಡೆಯಲು ಪ್ರಯತ್ನಿಸುತ್ತಿದ್ದಾಗ ನಾನು ಇದ್ದಕ್ಕಿದ್ದಂತೆ ಮೂರ್ಛೆ ಹೋದೆ. ಈ ಬಾರಿ ನನ್ನ ರಕ್ತದೊತ್ತಡ ತೀವ್ರವಾಗಿ ಕುಸಿದಿತ್ತು. ವೈದ್ಯರು ಕೂಡ ಗೊಂದಲಕ್ಕೊಳಗಾದರು. ನಂತರ 4 ದಿನಗಳ ಕಾಲ ಎಲ್ಲಾ ರೀತಿಯ ಪರೀಕ್ಷೆಗಳು ನಡೆದವು. ಇಸಿಜಿ, ಎಲ್ಎಫ್ಟಿ, ಇಸಿಎಚ್ಒ, ಕೊಲೆಸ್ಟ್ರಾಲ್ ಮತ್ತು ನೋವಿನ ಆಂಜಿಯೋಗ್ರಫಿ ಎಲ್ಲವನ್ನೂ ಮಾಡಲಾಯಿತು” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: World Hypertension Day 2024: ಅಧಿಕ ರಕ್ತದೊತ್ತಡದ ಲಕ್ಷಣಗಳೇನು? ನಿಯಂತ್ರಿಸುವುದು ಹೇಗೆ?
ಯಾವುದೇ ಪೂರ್ವ ಲಕ್ಷಣಗಳಿಲ್ಲದ ಅಮಿತ್ ಮಿಶ್ರಾ, ಈ ಅನುಭವವನ್ನು ಅನಿರೀಕ್ಷಿತ ಎಚ್ಚರಗೊಳಿಸುವ ಕರೆ ಎಂದು ಬಣ್ಣಿಸಿದ್ದಾರೆ. ಬಿಪಿ ಎಂಬ ಸೈಲೆಂಟ್ ಕಿಲ್ಲರ್ನಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ ಎಂದಿದ್ದಾರೆ. “ನನ್ನ ರಕ್ತದೊತ್ತಡ ಹೇಗೆ ಇಷ್ಟು ಹೆಚ್ಚಾಯಿತು ಮತ್ತು ಎಚ್ಚರಿಕೆ ಇಲ್ಲದೆ ಇದ್ದಕ್ಕಿದ್ದಂತೆ ಹೇಗೆ ಕುಸಿಯಿತು?” ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಅಮಿತ್ ಮಿಶ್ರಾ ನೀಡಿರುವ ಕೆಲವು ಸಲಹೆಗಳು ಇಲ್ಲಿವೆ:
– ನಿಮ್ಮ ದೇಹವು ಯಾವಾಗಲೂ ಸ್ಪಷ್ಟ ಎಚ್ಚರಿಕೆಗಳನ್ನು ನೀಡುವುದಿಲ್ಲ. ಅಧಿಕ ರಕ್ತದೊತ್ತಡ, ಒತ್ತಡ ಮತ್ತು ಆರೋಗ್ಯ ಅಪಾಯಗಳು ಸೈಲೆಂಟ್ ಕಿಲ್ಲರ್ ಆಗಬಹುದು. ನಿಯಮಿತ ತಪಾಸಣೆಗಳು ಅತ್ಯಗತ್ಯ.
– ಕೆಲಸ ಮುಖ್ಯ, ಆದರೆ ಆರೋಗ್ಯದ ಬಗ್ಗೆ ರಾಜಿ ಮಾಡಿಕೊಳ್ಳಬೇಡಿ. ನಾವು ಸಾಮಾನ್ಯವಾಗಿ ಸಣ್ಣ ಚಿಹ್ನೆಗಳನ್ನು ನಿರ್ಲಕ್ಷಿಸುತ್ತೇವೆ. ನಾವು ಚೆನ್ನಾಗಿದ್ದೇವೆ ಎಂದು ಭಾವಿಸುತ್ತೇವೆ, ಆದರೆ ನಾವು ಚೆನ್ನಾಗಿರುವುದಿಲ್ಲ.
– ತುರ್ತು ಸಿದ್ಧತೆ ಮುಖ್ಯ. ಬಿಕ್ಕಟ್ಟಿನಲ್ಲಿ ಏನು ಮಾಡಬೇಕೆಂದು ತಿಳಿದುಕೊಳ್ಳುವುದು ಮತ್ತು ಹತ್ತಿರದ ಆಸ್ಪತ್ರೆ ಎಲ್ಲಿದೆ ಎಂಬುದನ್ನು ತಿಳಿದುಕೊಳ್ಳುವುದರಿಂದ ಜೀವಗಳನ್ನು ಉಳಿಸಬಹುದು.
– ವೈದ್ಯಕೀಯ ವಿಜ್ಞಾನವು ಇನ್ನೂ ನಿಗೂಢವಾಗಿದೆ. 15+ ಪರೀಕ್ಷೆಗಳ ನಂತರವೂ ನನ್ನ ಬಿಪಿ ಏರಿಕೆಗೆ ಕಾರಣ ತಿಳಿದಿಲ್ಲ. ಆದರೆ ಸ್ಪಷ್ಟವಾದ ಸಂಗತಿಯೆಂದರೆ ಒಬ್ಬರ ಆರೋಗ್ಯವನ್ನು ನೋಡಿಕೊಳ್ಳುವುದು ಕೇವಲ ಆಯ್ಕೆಯಲ್ಲ. ಅದು ಅವಶ್ಯಕತೆಯಾಗಿದೆ.
– ನಿಮ್ಮ ದೇಹವನ್ನು ಆಲಿಸಿ. ನನ್ನಂತೆ ಅನಿರೀಕ್ಷಿತವಾಗಿ ಆರೋಗ್ಯ ಸಂಪೂರ್ಣ ಹದಗೆಟ್ಟುವವರೆಗೆ ಕಾಯಬೇಡಿ ಎಂದು ಅವರು ತಮ್ಮ ಪೋಸ್ಟ್ನಲ್ಲಿ ಹೇಳಿದ್ದಾರೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ