AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಟ್ಟಿದರೆ ಮುನಿಯುವ ನಾಚಿಕೆ ಮುಳ್ಳು ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಗೊತ್ತಾ

ನಮ್ಮ ಸುತ್ತಮುತ್ತ ಇರುವ ಗಿಡಗಳು ಆರೋಗ್ಯ ಸಮಸ್ಯೆಯನ್ನು ನಿವಾರಿಸುವ ಗುಣವನ್ನು ಹೊಂದಿರುತ್ತದೆ. ಆದರೆ ನಮಗೆ ಅವುಗಳ ಬಗ್ಗೆ ಸರಿಯಾದ ಮಾಹಿತಿ ಇರಬೇಕಾಗುತ್ತದೆ. ಅಂತಹ ಆರೋಗ್ಯ ಗುಣಗಳಿರುವ ಸಸ್ಯಗಳಲ್ಲಿ ನಾಚಿಕೆ ಮುಳ್ಳು ಅಥವಾ ಮುಟ್ಟಿದರೆ ಮುನಿ ಗಿಡವೂ ಒಂದು. ಇದನ್ನು ಕಳೆ ಎಂದು ಕಿತ್ತು ಹಾಕುವ ಮೊದಲು ಇದರಿಂದ ಸಿಗುವ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳಿ.

ಮುಟ್ಟಿದರೆ ಮುನಿಯುವ ನಾಚಿಕೆ ಮುಳ್ಳು ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಗೊತ್ತಾ
ನಾಚಿಕೆ ಮುಳ್ಳುImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: May 21, 2025 | 6:58 PM

Share

ನಮ್ಮ ಪರಿಸರದಲ್ಲಿ ಸಿಗುವ ಅದೆಷ್ಟೋ ಗಿಡ ಮೂಲಿಕೆಗಳು  (Herb) ಹಲವು ರೀತಿಯ ಆರೋಗ್ಯ (Health) ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತವೆ. ಪ್ರಕೃತಿ ತನ್ನೊಡಲಲ್ಲಿ ಔಷಧೀಯ ಗಣಿಯನ್ನೇ ಹುದುಗಿಸಿಟ್ಟುಕೊಂಡಿದೆ ಎಂದರೆ ತಪ್ಪಾಗಲಾರದು. ನಮ್ಮ ಸುತ್ತಮುತ್ತಲು ಇರುವ ಅದಷ್ಟೋ ಗಿಡಗಳು ಆರೋಗ್ಯ ಸಮಸ್ಯೆಯನ್ನು ನಿವಾರಿಸುವ ಗುಣವನ್ನು ಹೊಂದಿದೆ. ಈ ರೀತಿ ವಿಶೇಷ ಗುಣವನ್ನು ಹೊಂದಿರುವ ಪಟ್ಟಿಗೆ ಮುಟ್ಟಿದರೆ ಮುನಿ (Touch Me Not) ಅಥವಾ ನಾಚಿಕೆ ಸೊಪ್ಪು, ಅಥವಾ ನಾಚಿಕೆ ಮುಳ್ಳು (Mimosa pudica) ಎಂದು ಕರೆಯುವ ಮುಳ್ಳಿನ ಗಿಡವು ಸೇರಿಕೊಳ್ಳುತ್ತದೆ. ಇದನ್ನು ಬೆಳೆಸುವುದಕ್ಕಿಂತ ಕಳೆ ಎಂದು ಕಿತ್ತು ಹಾಕುವವರೇ ಹೆಚ್ಚು. ಆದರೆ ಇದರ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿದರೆ ಖಂಡಿತವಾಗಿಯೂ ನೀವು ಕೂಡ ಇದನ್ನು ಮನೆಯಲ್ಲಿ ಬೆಳೆಸುತ್ತೀರಿ. ಹಾಗಾದರೆ ಇದು ಯಾವೆಲ್ಲಾ ಆರೋಗ್ಯ ಸಮಸ್ಯೆಗೆ ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳಿ.

ಮನೆಯ ಅಂಗಳದಲ್ಲಿ, ತೋಟ, ಗದ್ದೆಗಳಲ್ಲಿ ಕಳೆಯಂತೆ ಬೆಳೆಯುವ ಸಸ್ಯವೇ ಮುಟ್ಟಿದರೆ ಮುನಿ. ಇದನ್ನು ಮುಟ್ಟಿದ ಕೂಡಲೇ ಮುದುಡಿಕೊಳ್ಳುವುದರಿಂದ ಈ ಹೆಸರು ಬಂದಿದೆ. ಇನ್ನು ಈ ಗಿಡ ಚಿಕ್ಕದಾಗಿದ್ದರೂ ಕೂಡ ಇದರ ಪ್ರತಿ ಭಾಗದಲ್ಲಿಯೂ ಔಷಧೀಯ ಗುಣಗಳನ್ನು ಹೊಂದಿದೆ. ಹೂವು, ಬೇರು, ಕಾಂಡ, ಎಲೆ, ಎಲ್ಲವೂ ಆರೋಗ್ಯ ಸಮಸ್ಯೆಗಳನ್ನು ನಿವಾರಣೆ ಮಾಡಲು ಬಳಕೆಯಾಗುತ್ತದೆ. ಹಾಗಾಗಿಯೇ ಆಯುರ್ವೇದದಲ್ಲಿ ಈ ಸಸ್ಯಕ್ಕೆ ವಿಶೇಷ ಮಹತ್ವವಿದೆ.

ನಾಚಿಕೆ ಮುಳ್ಳಿನ ಆರೋಗ್ಯ ಪ್ರಯೋಜನ;

  • ಗಾಯವಾಗಿ ರಕ್ತ ಸುರಿಯುತ್ತಿದ್ದರೆ, ನಾಚಿಕೆ ಮುಳ್ಳಿನ ಎಲೆಯನ್ನು ಜಜ್ಜಿ, ಗಾಯಕ್ಕೆ ಹಚ್ಚಿದರೆ, ಕೂಡಲೇ ರಕ್ತ ಸೋರುವಿಕೆ ಕಡಿಮೆಯಾಗಿ, ಗಾಯವು ಬೇಗನೆ ವಾಸಿಯಾಗುತ್ತದೆ. ಅಥವಾ ಕೈ ಕತ್ತರಿಸಿಕೊಂಡಾಗಲು ಕೂಡ ಚಹಾ ಪುಡಿ ಮತ್ತು ನಾಚಿಕೆ ಸೊಪ್ಪನ್ನು ಅರೆದು ಗಾಯದ ಮೇಲೆ ಹಚ್ಚುವುದರಿಂದ ರಕ್ತ ಸೋರುವುದು ಕಡಿಮೆಯಾಗುತ್ತದೆ.
  • ದೇಹದಲ್ಲಿ ಊತದ ಸಮಸ್ಯೆ ಉಂಟಾದಾಗ ಮುಟ್ಟಿದರೆ ಮುನಿ ಗಿಡವನ್ನು ಬೇರು ಸಮೇತವಾಗಿ ಅರೆದು, ಅದನ್ನು ಊತವಾದ ಜಾಗಕ್ಕೆ ಹಚ್ಚಿ, ಬಟ್ಟೆಯಿಂದ ಕಟ್ಟಿದರೆ ಊತ ಬೇಗನೆ ಕಡಿಮೆಯಾಗುತ್ತದೆ.
  • ಹೆಣ್ಣು ಮಕ್ಕಳಿಗೆ ಮುಟ್ಟಿನ ಸಮಯದಲ್ಲಿ ಕಂಡು ಬರುವ ಅಧಿಕ ರಕ್ತಸ್ರಾವ ತಡೆಯಲು ಇದನ್ನು ಬಳಕೆ ಮಾಡಲಾಗುತ್ತದೆ. ಮುಟ್ಟಿದರೆ ಮುನಿ ತೆಗೆದುಕೊಂಡು, ಅದಕ್ಕೆ ನೀರು ಸೇರಿಸಿ ಚೆನ್ನಾಗಿ ಕುದಿಸಿ, ಅದಕ್ಕೆ 1 ಚಿಟಿಕೆ ಸ್ಪಟಿಕ / ಆಲಮ್ ನ್ನು ಸೇರಿಸಿ ದಿನಕ್ಕೆ 2 ರಿಂದ 3 ಬಾರಿ ಸೇವಿಸಬೇಕು.
  • ಇನ್ನು ಅಧಿಕ ರಕ್ತಸ್ರಾವ ತಡೆಯಲು ಮುಟ್ಟಿದರೆ ಮುನಿ ಗಿಡದ ಕಷಾಯ ಮಾಡಿ ಕುಡಿಯುತ್ತ ಬರಬೇಕು. ಈ ರೀತಿ ಮಾಡುವುದರಿಂದ ಆ ರಕ್ತನಾಳಗಳು ಸಂಕುಚಿತಗೊಂಡು ಸಮಸ್ಯೆ ಪರಿಹಾರವಾಗುತ್ತದೆ.
  • ಮುಟ್ಟಿದರೆ ಮುನಿ ಗಿಡದ ಎಲೆ ಮತ್ತು ಬೇರನ್ನು ಚೆನ್ನಾಗಿ ಜಜ್ಜಿ, ಅದರ ರಸ ತೆಗೆದು 2 ರಿಂದ 3 ಚಮಚ ರಸವನ್ನು, 1 ಲೋಟ ನೀರಿಗೆ ಹಾಕಿ ಕುಡಿಯುವುದರಿಂದ ಮಲಬದ್ಧತೆ ಸಮಸ್ಯೆ ಕಡಿಮೆ ಆಗುತ್ತದೆ.
  • ಮುಟ್ಟಿದರೆ ಮುನಿ ಗಿಡವನ್ನು ಒಣಗಿಸಿ, ಪುಡಿ ಮಾಡಿಟ್ಟುಕೊಂಡು, 1 ಲೋಟ ನೀರಿಗೆ ಈ ಪುಡಿಯನ್ನು ಸೇರಿಸಿ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಮೂಲವ್ಯಾಧಿ ಸಮಸ್ಯೆಯನ್ನು ಹತೋಟಿಯಲ್ಲಿಡಲು ಸಹಕಾರಿಯಾಗಿದೆ.
  • ಬಾಣಂತನ ಆದ ಮೇಲೆ ಕೆಲವರಿಗೆ ಹೊಟ್ಟೆ ಕರಗಿಸುವುದೇ ದೊಡ್ಡ ಚಿಂತೆಯಾಗಿರುತ್ತದೆ. ಆದರೆ ಮೊದಲಿನಂತೆ ಫಿಟ್ ಆಗಿ ಕಾಣಲು ಮುಟ್ಟಿದರೆ ಮುನಿ ಗಿಡವು ತುಂಬಾ ಸಹಕಾರಿಯಾಗಲಿದೆ. ಈ ಗಿಡದ ಎಲೆಯ ರಸವನ್ನು ತೆಗೆದು, ಅದನ್ನು ಕೈಗೆ ಹಾಕಿ ಬಳಿಕ ಹೊಟ್ಟೆಯ ಭಾಗಕ್ಕೆ ಲೇಪಿಸಿ, ಒಂದೆರೆಡು ನಿಮಿಷ ಮಸಾಜ್ ಮಾಡುವುದರಿಂದ ಹೊಟ್ಟೆ ಕರಗಿ ಮೊದಲಿಂದಂತೆ ಪಿಟ್ ಆಗಿ ಕಾಣುತ್ತದೆ.
  • ಸೌಂದರ್ಯ ಹಾಳು ಮಾಡುವ ಮೊಡವೆಗಳನ್ನು ನಿಯಂತ್ರಿಸಲು, ಮುಟ್ಟಿದರೆ ಮುನಿ ಗಿಡದ ರಸವನ್ನು ಮೊಡವೆಗಳ ಜಾಗಕ್ಕೆ ಲೇಪಿಸುವುದರಿಂದ, ಮೊಡವೆಗಳು ನಿವಾರಣೆಯಾಗುತ್ತವೆ.
  • ಚರ್ಮದಲ್ಲಿನ ತುರಿಕೆ ಮತ್ತು ಇತರ ಸಾಮಾನ್ಯ ಚರ್ಮ ರೋಗಗಳನ್ನು ಹೋಗಲಾಡಿಸಲು, ಮುಟ್ಟಿದರೆ ಮುನಿ ಗಿಡದ ರಸವನ್ನು, ಚರ್ಮಕ್ಕೆ ಹಚ್ಚಿಕೊಳ್ಳುವುದರಿಂದ ಚರ್ಮರೋಗ ನಿವಾರಣೆಯಾಗುತ್ತದೆ.
  • ಪುರುಷರಲ್ಲಿ, 40, 50 ವರ್ಷಗಳ ನಂತರದಲ್ಲಿ ಪ್ರೊಸ್ಟೇಟ್ ಗ್ರಂಥಿಯ ಸಮಸ್ಯೆ ಕಂಡುಬರುತ್ತದೆ. ಹೀಗಾದಾಗ ಪ್ರೊಸ್ಟೇಟ್ ಗ್ರಂಥಿಯು ಉಬ್ಬಿಕೊಂಡಿರುತ್ತದೆ. ಇದು ಪುನಃ ತನ್ನ ಮೊದಲಿನ ಸ್ಥಿತಿಗೆ ಬರಲು ಮುಟ್ಟಿದರೆ ಮುನಿ ಸಸ್ಯ ನಿಮಗೆ ಸಹಾಯ ಮಾಡುತ್ತದೆ. ಈ ಗಿಡದ ಸೊಪ್ಪನ್ನು ಚೆನ್ನಾಗಿ ಅರೆದು, ಉಂಡೆ ಮಾಡಿ ನಲವತ್ತೈದು ದಿನಗಳ ಕಾಲ ಪ್ರತಿದಿನ ಸೇವನೆ ಮಾಡಿದರೆ ಈ ಸಮಸ್ಯೆ ಖಂಡಿತವಾಗಿಯೂ ನಿವಾರಣೆಯಾಗುತ್ತದೆ.

ಇದನ್ನೂ ಓದಿ: ಈ ಗಿಡವನ್ನು ಮನೆಯಲ್ಲಿ ಅಗತ್ಯವಾಗಿ ಬೆಳೆಸಿ, ಆರೋಗ್ಯಕ್ಕೆ ಒಳ್ಳೆಯದು

ಇದನ್ನೂ ಓದಿ
Image
Milk Rice: ಹಾಲು ಅನ್ನ ಆರೋಗ್ಯಕ್ಕೆ ಅಮೃತವಿದ್ದಂತೆ
Image
ಲಿಚಿ ಹಣ್ಣು ಚಿಕ್ಕದಾಗಿದ್ದರೂ ಪ್ರಯೋಜನ ಸಾಕಷ್ಟಿದೆ!
Image
5 ಗಿಡಗಳಲ್ಲಿ ಆರೋಗ್ಯದ ಪಂಚ ಸೂತ್ರ, ಇಲ್ಲಿದೆ ನೋಡಿ
Image
ತಮಿಳುನಾಡಿನಲ್ಲಿದೆ ಸಕ್ಕರೆ ಕಾಯಿಲೆ ವಾಸಿಮಾಡುವ ದೇವಸ್ಥಾನ!

ನಾಚಿಕೆ ಮುಳ್ಳಿನಿಂದ ತಯಾರಾಗುವ ಆಹಾರ

ಇದು ಕೇವಲ ಔಷಧಿಗೆ ಮಾತ್ರವಲ್ಲ ಇವುಗಳನ್ನು ನಮ್ಮ ದಿನನಿತ್ಯದ ಆಹಾರದಲ್ಲಿಯೂ ಉಪಯೋಗ ಮಾಡಬಹುದು. ಇದರಿಂದ ತಂಬುಳಿ ಮಾಡಬಹುದು. ಈ ಎಲೆ ಮತ್ತು ಬೇರುಗಳನ್ನು ಚೆನ್ನಾಗಿ ತೊಳೆದು ಇದರಿಂದ ಚಟ್ನಿ ಮಾಡಬಹುದು. ಆದರೆ ಮುಟ್ಟಿದರೆ ಮುನಿ ಗಿಡದ ಎಲೆಯನ್ನು ಸ್ವಲ್ಪ ತುಪ್ಪದಲ್ಲಿ ಹುರಿದು ತೆಂಗಿನ ತುರಿಯೊಂದಿಗೆ ಸೇರಿಸಿ ರುಬ್ಬಿದರೆ ನಿಮ್ಮ ಅಡುಗೆಗೆ ಮತ್ತಷ್ಟು ರುಚಿ ಬರುತ್ತದೆ. ಇದು ಆರೋಗ್ಯಕ್ಕೂ ಬಹಳ ಒಳ್ಳೆಯದು. ಹಾಗಾಗಿ ನೀವು ಕೂಡ ಒಮ್ಮೆ ಟ್ರೈ ಮಾಡಿ ನೋಡಬಹುದು.

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ