ಕರ್ನಾಟಕದಲ್ಲಿ ಒಟ್ಟು ಎಷ್ಟು ಆನೆಗಳಿವೆ? ಈ ವರ್ಷ ಗಜರಾಜನಿಗೆ ಬಲಿಯಾದವರ ಸಂಖ್ಯೆ ಎಷ್ಟು?
ಕರ್ನಾಟಕದಲ್ಲಿ ಮಾನವ-ಆನೆ ಸಂಘರ್ಷ ಹೆಚ್ಚುತ್ತಿದ್ದು, ಈ ವರ್ಷ 45 ಜನರು ಆನೆಗಳ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಈ ಸಮಸ್ಯೆ ತೀವ್ರವಾಗಿದೆ. ಇದನ್ನು ತಡೆಯಲು, ಸರ್ಕಾರವು 392 ಕಿ.ಮೀ. ರೈಲ್ವೆ ಬ್ಯಾರಿಕೇಡ್ ನಿರ್ಮಿಸಲು 1000 ಕೋಟಿ ರೂಪಾಯಿಗಳ ಯೋಜನೆ ರೂಪಿಸಿದೆ. ಬಂಡೀಪುರದ ರಾತ್ರಿ ಸಂಚಾರದ ಬಗ್ಗೆ ಸದ್ಯ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.

ಬೆಂಗಳೂರು, ಏಪ್ರಿಲ್ 04: ಕರ್ನಾಟಕದಲ್ಲಿ ಸುಮಾರು 6395 ಕಾಡಾನೆಗಳಿವೆ (Elephants). ಕರ್ನಾಟಕದಲ್ಲಿ ಮಾನವ ಕಾಡಾನೆ ಸಂಘರ್ಷ ಹೆಚ್ಚಳವಾಗುತ್ತಿದೆ. ಹಾಸನ (Hassan) ಮತ್ತು ಕೊಡಗು (Kodagu) ಜಿಲ್ಲೆಗಳಲ್ಲೇ ಕಾಡಾನೆ ಹಾವಳಿ ಹೆಚ್ಚಿದೆ. ಕಾಡಾನೆ ದಾಳಿಯಿಂದ ಕಳೆದ ವರ್ಷ 65 ಜನ ಮೃತಪಟ್ಟಿದ್ದರು. ಈ ವರ್ಷ ಕಾಡಾನೆಗಳ ದಾಳಿಗೆ 45 ಜನ ಬಲಿಯಾಗಿದ್ದಾರೆ. ಬೇಲೂರು, ಹಾಸನ ತಾಲೂಕಿನಲ್ಲಿ ಹೆಚ್ಚು ಜನ ಮೃತಪಟ್ಟಿದ್ದಾರೆ ಎಂದು ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ (Eshwar Khandre) ಹೇಳಿದರು.
ಕಾಡಾನೆ ಹಾವಳಿ ತಡೆಗೆ ಮೆಗಾ ಪ್ಲಾನ್
ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯಾವುದೇ ಬಿಗಿ ಕ್ರಮ ಕೈಗೊಂಡರೂ ಕಾಡಾನೆ ಹಾವಳಿ ತಡೆಗಟ್ಟಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ರೈಲ್ವೆ ಬ್ಯಾರಿಕೇಡ್ ಹಾಕಲು ಸರ್ಕಾರ ನಿರ್ಧರಿಸಿದ್ದೇವೆ. 392 ಕಿ.ಮೀ. ರೈಲ್ವೆ ಬ್ಯಾರಿಕೇಡ್ ಹಾಕಲಿದ್ದೇವೆ. ವಿಶೇಷವಾಗಿ ಪಶ್ಚಿಮ ಘಟ್ಟಗಳಲ್ಲಿ ಈ ಯೋಜನೆ ಜಾರಿಗೆ ಬರಲಿದೆ. ಈ ಸಂಬಂಧ 1 ಸಾವಿರ ಕೋಟಿ ಕ್ಯಾಂಪಾ ಫಂಡ್ ನೀಡುವಂತೆ ಕೇಂದ್ರ ಸಚಿವರಿಗೆ ನಾವು ಮನವಿ ಮಾಡಿದ್ದೇವೆ ಎಂದು ತಿಳಿಸಿದರು.
ಬಂಡೀಪುರದಲ್ಲಿ ರಾತ್ರಿ ಸಂಚಾರಕ್ಕೆ ಕೋರಿ ಸಂಸದೆ ಪ್ರಿಯಾಂಕಾ ಗಾಂಧಿ ಪತ್ರ ವಿಚಾರವಾಗಿ ಮಾತನಾಡಿದ ಅವರು, ಸದ್ಯ ಯಾವುದೇ ಬದಲಾವಣೆಯಾಗಿಲ್ಲ, ಯಥಾಸ್ಥಿತಿ ಇದೆ. ಸದ್ಯದಲ್ಲೇ ಈ ಬಗ್ಗೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ನಡೆಯುತ್ತೆ ಎಂದು ತಿಳಿಸಿದರು.
ಇದನ್ನೂ ನೋಡಿ: ವಿದೇಶಿ ಪ್ರಜೆಯನ್ನು ಬಲಿ ಪಡೆದ ಕಾಡಾನೆ, ಸೊಂಡಿಲಿನಿಂದ ಎತ್ತಿ ಬಿಸಾಡಿರುವ ವಿಡಿಯೋ ನೋಡಿ
ಸದ್ಯಕ್ಕೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೆಪಿಸಿಸಿ ಅಧ್ಯಕ್ಷ ಸ್ಥಾನ ಖಾಲಿ ಇಲ್ಲ. ಯಾರನ್ನು ಎಲ್ಲಿ ಕೂರಿಸಬೇಕೆಂದು ಹೈಕಮಾಂಡ್ಗೆ ಗೊತ್ತಿದೆ. ಹೈಕಮಾಂಡ್ ಏನು ಜವಾಬ್ದಾರಿ ಕೊಡುತ್ತೆ ಅದನ್ನು ನಿರ್ವಹಿಸುತ್ತೇವೆ. ಪಿಡಬ್ಲ್ಯುಡಿ ಸಚಿವ ಸತೀಶ್ ಜಾರಕಿಹೊಳಿ ನನಗೆ ಆತ್ಮೀಯರು. ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದೇವೆ. ಮುಂದೆಯೂ ನಾವು ಪಕ್ಷ ಸಂಘಟನೆಗಾಗಿ ಕೆಲಸ ಮಾಡುತ್ತೇವೆ. ನಮ್ಮಲ್ಲಿ ಯಾವುದೇ ಪೈಪೋಟಿ ಇಲ್ಲ. ಯಾರೇ ಅಧ್ಯಕ್ಷರಾದರೂ ನಮಗೆ ಖುಷಿ ಇದೆ. ಊಹಾಪೋಹ ಪ್ರಶ್ನೆಗಳಿಗೆ ನಾವು ಉತ್ತರಿಸಲು ಸಾಧ್ಯವಿಲ್ಲ ಎಂದು ಹೇಳಿದರು.