ಬಾಗಲಕೋಟೆ ಅಕ್ರಮ ಗರ್ಭಪಾತ ಕೇಸ್: ಆರೋಪಿ ಕವಿತಾ ಖಾತೆಗೆ ಕಂದಾಯ ಇಲಾಖೆಯ ಅಧಿಕಾರಿಯಿಂದ ಪ್ರತಿ ತಿಂಗಳು ಹಣ ವರ್ಗ
ಬಾಗಲಕೋಟೆಯ ಆಯಾ ಕವಿತಾ ಬಾಡನವರ ಗರ್ಭಪಾತ ದಂಧೆಗೆ ಓರ್ವ ಮಹಿಳೆ ಬಲಿಗಾಗಿದ್ದು, ತನಿಖೆ ಚುರುಕುಗೊಂಡಿದೆ. ತನಿಖೆಯಲ್ಲಿ ಆಯಾಳ ಬಗ್ಗೆ ಬಗೆದಷ್ಟು ಬಂಡವಾಳ ಬಯಲಾಗುತ್ತಿದೆ. ಐದು ಜನರ ಬಂಧಿಸಿರುವ ಪೊಲೀಸರು ಆಕೆಯ ಅಕೌಂಟ್ ಪ್ರೀಜ್ ಮಾಡುತ್ತಿದ್ದಾರೆ. ಗರ್ಭಪಾತ ಪ್ರಕರಣ ತನಿಖೆ ಯಾವ ಹಂತದಲ್ಲಿದೆ ಇಲ್ಲಿದೆ ಓದಿ

ಬಾಗಲಕೋಟೆ, ಜೂನ್ 03: ಆರೋಪಿ ಆಯಾ ಕವಿತಾ ಬಾಡನವರ ಗರ್ಭಪಾತ (Abortion) ದಂಧೆಗೆ ಮಹಾರಾಷ್ಟ್ರ ಮೂಲದ ಮಹಿಳೆ ಮೃತಪಟ್ಟಿದ್ದು, ಪ್ರಕರಣದ ತನಿಖೆಯನ್ನು ಪೊಲೀಸರು (Police) ಚುರುಕುಗೊಳಿಸಿದ್ದಾರೆ. ಪ್ರಕರಣದ ತನಿಖೆಯಲ್ಲಿ ಸ್ಫೋಟಕ ವಿಚಾರಗಳು ಬಯಲಾಗಿವೆ. ಆಯಾ ಕವಿತಾ ಬಾಡನವರ ಹೆಸರಿನಲ್ಲಿ ಒಟ್ಟು ಐದು ಖಾತೆಗಳಿವೆ. ಕಂದಾಯ ಇಲಾಖೆಯ (Revenue Department) ಹಿರಿಯ ಅಧಿಕಾರಿಯೊಬ್ಬರು ಕವಿತಾಳ ಖಾತೆಗಳಿಗೆ ಹಣ ವರ್ಗಾವಣೆ ಮಾಡುತ್ತಿದ್ದರು ಎಂಬುವುದು ತಿಳಿದು ಬಂದಿದೆ. ಈ ಖಾತೆಗಳನ್ನು ಪ್ರೀಜ್ ಮಾಡುವಂತೆ ಮಹಾಲಿಂಗಪುರ ಪೊಲೀಸರು ಬ್ಯಾಂಕ್ಗಳಿಗೆ ಪತ್ರ ಬರೆದಿದ್ದಾರೆ.
ಯಾಕೆ ಹಣದ ವರ್ಗಾವಣೆಯಾಗಿದೆ, ಇಬ್ಬರ ಸಂಪರ್ಕ ಹಿಂದಿನ ಕಾರಣವೇನು? ಎಂಬುವುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಸಂಬಂಧ ಹೆಚ್ಚಿನ ತನಿಖೆಗಾಗಿ ಬನಹಟ್ಟಿ ಸಿಪಿಐ ನೇತೃತ್ವದಲ್ಲಿ ನಾಲ್ಕು ಜನರ ಪೊಲೀಸ್ ತಂಡ ರಚಿಸಲಾಗಿದೆ.
ತಿಂಗಳಿಗೆ 10-30 ಸಾವಿರ ಹಣ ಜಮೆ
ಪ್ರಾಥಮಿಕ ತನಿಖೆಯಲ್ಲಿ ಈಕೆ ಕಳೆದ ಆರು ತಿಂಗಳಿಂದ ವಾರಕ್ಕೆ ಕನಿಷ್ಟ ಮೂರು ಗರ್ಭಪಾತ ಮಾಡಿಸಿರುವ ಮಾಹಿತಿ ಸಿಕ್ಕಿದೆ. ಇನ್ನು ಕವಿತಾ ಹೆಸರಲ್ಲಿ ಐದು ಬ್ಯಾಂಕ್ ಖಾತೆಗಳಿವೆ ಇಂಡಿಯನ್ ಬ್ಯಾಂಕ್, ಕೆನರಾ ಬ್ಯಾಂಕ್, ಇಂಡಿಯನ್ ಒವರ್ ಸೀಸ್ ಬ್ಯಾಂಕ್, ಬಸವೇಶ್ವರ ಸಹಕಾರಿ ಬ್ಯಾಂಕ್. ಮಗನ ಜೊತೆ ಜಂಟಿ ಖಾತೆ ಹೊಂದಿದ ಕೆನರಾ ಬ್ಯಾಂಕ್ನ ಮತ್ತೊಂದು ಖಾತೆಯಿದೆ. ತನಿಖೆ ಗಂಭೀರವಾಗಿ ನಡೆಸುತ್ತಿರುವ ಪೊಲೀಸರು ಹಣದ ವರ್ಗಾವಣೆ ಮೇಲೂ ಕಣ್ಣಿಟ್ಟಿದ್ದಾರೆ. ಐದು ಖಾತೆ ಪ್ರೀಜ್ ಮಾಡಲು ಬ್ಯಾಂಕ್ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಕಂದಾಯ ಇಲಾಖೆ ಹಿರಿಯ ಅಧಿಕಾರಿ ಖಾತೆಯಿಂದ ಕವಿತಾಗೆ ಹಣ ವರ್ಗಾವಣೆಯಾಗಿದೆ. ತಿಂಗಳಿಗೆ 10 ರಿಂದ 30 ಸಾವಿರವರೆಗೆ ವರ್ಗಾವಣೆಯಾಗಿದ್ದು ತಿಳಿದು ಬಂದಿದೆ.
ಇದನ್ನೂ ಓದಿ: ಮಹಾಲಿಂಗಪುರದಲ್ಲಿ ಗರ್ಭಪಾತ, ಮಹಿಳೆ ಸಾವು ಕೇಸ್: ಕೆದಕಿದಷ್ಟು ಹೊರ ಬರ್ತಿದೆ ಆರೋಪಿ ಕವಿತಾಳ ಕೃತ್ಯಗಳು
ಕವಿತಾ ಬಾಡನವರ ಈ ಹಿಂದೆ ಕೆಲ ವರ್ಷಗಳ ಕಾಲ ಖಾಸಗಿ ಆಸ್ಪತ್ರೆಯಲ್ಲಿ ಆಯಾ ಆಗಿ ಕೆಲಸ ಮಾಡಿದ್ದಳು. ಆಗ ಇಂತಹ ಕೆಲಸ ಕಲಿತ ಈಕೆ ಮುಂದೆ ಅದನ್ನೇ ದೊಡ್ಡ ದಂಧೆ ಮಾಡಿಕೊಂಡಿದ್ದಾಳೆ. ಈಕೆ ಕೋಟಿ ಕೋಟಿ ಬೆಲೆ ಬಾಳುವ ಮೂರಂತಸ್ತಿನ ಮನೆ ಕಟ್ಟಿಸಿದ್ದಾಳೆ. ಈಕೆಯ ಮನೆ ಕೂಡಾ ಅಕ್ರಮ ಎಂಬ ಮಾಹಿತಿ ಇದೆ. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಐವರನ್ನು ಬಂಧಿಸಲಾಗಿದೆ. ಬನಹಟ್ಟಿ ಸಿಪಿಐ ನೇತೃತ್ವದಲ್ಲಿ ನಾಲ್ಕು ಜನರ ತಂಡ ರಚಿಸಿದ್ದು, ತಂಡ ಆರೋಪಿ ವಿಜಯ್ ಗೌಳಿ ಸಮೇತ ಸೋನಾಲಿ ಗರ್ಭ ಸ್ಕ್ಯಾನಿಂಗ್ ಮಾಡಸಿದ ಸ್ಥಳ ಮಹಾರಾಷ್ಟ್ರದ ಶಾಹುನಗರಕ್ಕೆ ತೆರಳಿದೆ.
ಕವಿತಾಳನ್ನು ಪೊಲೀಸ್ ಕಸ್ಟಡಿಗೆ ಪಡೆದು, ಮನೆ ಸ್ಥಳ ಮಹಜರು ಮಾಡಲಾಗಿದೆ. ಗರ್ಭಪಾತ ದಂಧೆ ವಾಟ್ಸಾಪ್ ಕಾಲ್ ಮೂಲಕವೇ ನಡೆಯುತ್ತಿತ್ತಂತೆ. ಒಬ್ಬರಿಗೆ 40-60 ಸಾವಿರ ರೂ. ಇನ್ನೂ ಕೆಲವೊಬ್ಬರಿಂದ ಲಕ್ಷದವರೆಗೆ ಹಣ ಪಡೆಯುತ್ತಿದ್ದಳು.
ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕೆಎಮ್ ಜಾನಕಿ ಅವರು ಜಮಖಂಡಿ ಎಸಿ ಸಂತೋಷ ಕಾಮಗೊಂಡ, ಡಿಹೆಚ್ಒ ರಾಜಕುಮಾರ ಯರಗಲ್, ಕುಟುಂಬ ಕಲ್ಯಾಣಾಧಿಕಾರಿ ಡಿಬಿ ಪಟ್ಟಣಶೆಟ್ಟಿ, ಮುಧೋಳ ಟಿ ಹೆಚ್, ಒಪಿಎಲ್ ಮಲಘಾಣ್ ಸೇರಿದಂತೆ ಐದು ಜನರಿಗೆ ಶೊಕಾಸ್ ನೋಟಿಸ್ ನೀಡಿದ್ದಾರೆ.
“ಅಧಿಕಾರಿಗಳಿಂದ ಉತ್ತರ ಬಂದಿದ್ದು, ಪರಿಶೀಲನೆ ಮಾಡುತ್ತೇನೆ, ಸಮಂಜಸ ಉತ್ತರ ಬಾರದಿದ್ದರೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಇದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಜಿಲ್ಲಾಧಿಕಾರಿ ಕೆ ಎಮ್ ಜಾನಕಿ ಹೇಳಿದರು. ಇನ್ನು ಕವಿತಾ ದಂಧೆಗೆ ಕೆಲ ವೈದ್ಯರು ಕೂಡ ಸಾತ್ ನೀಡಿರುವ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:45 am, Mon, 3 June 24