ಬಾಗಲಕೋಟೆ: ಅಂಗನವಾಡಿಯಲ್ಲೂ ಮುಸ್ಲಿಂ ಓಲೈಕೆ ರಾಜಕಾರಣ, ಹಿಂದೂಪರ ಸಂಘಟನೆಗಳಿಂದ ಆರೋಪ
ಬಾಗಲಕೋಟೆ ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ನೇಮಕಾತಿಯಲ್ಲಿ ಉರ್ದು ಭಾಷಾ ಬಲ್ಲವರಿಗೆ ಆದ್ಯತೆ ನೀಡುತ್ತಿರುವುದು ವಿವಾದಕ್ಕೆ ಕಾರಣವಾಗಿದೆ. ಕೆಲವು ಅಂಗನವಾಡಿಗಳಲ್ಲಿ ಮುಸ್ಲಿಂ ಮಕ್ಕಳ ಸಂಖ್ಯೆ ಕಡಿಮೆ ಇದ್ದರೂ ಉರ್ದು ಭಾಷೆ ಬಲ್ಲವರಿಗೆ ಆದ್ಯತೆ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇದನ್ನು ಹಿಂದುಪರ ಸಂಘಟನೆಗಳು ಮುಸ್ಲಿಂ ಓಲೈಕೆ ಶಿಕ್ಷಣ ಎಂದು ಟೀಕಿಸಿದೆ.

ಬಾಗಲಕೋಟೆ, ಮೇ 30: ಜಿಲ್ಲೆಯಲ್ಲಿ ಉರ್ದು ಭಾಷೆ ಬಲ್ಲವರಿಗೆ ಅಂಗನವಾಡಿ (Anganwadi) ಕಾರ್ಯಕರ್ತೆ ಹುದ್ದೆ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಹೆಚ್ಚಿನ ಸಂಖ್ಯೆಯ ಹಿಂದೂ ಸಮುದಾಯದ ಮಕ್ಕಳಿರುವ ಅಂಗನವಾಡಿ ವ್ಯಾಪ್ತಿಯಲ್ಲೂ ಉರ್ದು ಭಾಷೆ (Urdu language) ಬಲ್ಲ ಕಾರ್ಯಕರ್ತೆಯರಿಗೆ ಆದ್ಯತೆ ನೀಡಲಾಗುತ್ತಿದೆ. ಇದು ಹಿಂದೂ ವಿರೋಧಿ ಮತ್ತು ಮುಸ್ಮಿಂ ಓಲೈಕೆ ಶಿಕ್ಷಣ ಎಂದು ಹಿಂದೂಪರ ಸಂಘಟನೆ ಕಾರ್ಯಕರ್ತರು ಆರೋಪಿಸಿದ್ದಾರೆ.
ಅಂಗನವಾಡಿ ವ್ಯಾಪ್ತಿಯಲ್ಲಿ 25% ಅಲ್ಪಸಂಖ್ಯಾತ ಜನಸಂಖ್ಯೆ ನೆಪದಲ್ಲಿ ಉರ್ದು ಭಾಷೆ ಬಲ್ಲವರಿಗೆ ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಆಯ್ಕೆ ಮಾಡಿಕೊಳ್ಳುತ್ತಿರುವ ಆರೋಪ ಕೇಳಿಬಂದಿದೆ. ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಗಲಗಲಿ ಗ್ರಾಮದ ಎರಡು ಕೇಂದ್ರಗಳಲ್ಲಿ ಉರ್ದು ಭಾಷೆ ಬರುವ ಕಾರ್ಯಕರ್ತೆಯರ ಆಯ್ಕೆ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 50 ಅಂಗನವಾಡಿಯಲ್ಲಿ ಉರ್ದು ಭಾಷೆ ಕಾರ್ಯಕರ್ತೆಯರಿಗೆ ಆದ್ಯತೆ ನೀಡಲಾಗಿದೆ.
ಅಂಗನವಾಡಿ ಬಂದ್ ಮಾಡಿ ಹೋರಾಟ ಮಾಡುತ್ತೇವೆ: ಶ್ಯಾಮ
ಈ ಬಗ್ಗೆ ಹಿಂದೂಪರ ಸಂಘಟನೆ ಕಾರ್ಯಕರ್ತ ಶ್ಯಾಮ ಎಂಬುವವರು ಪ್ರತಿಕ್ರಿಯಿಸಿದ್ದು, ಇದು ಹಿಂದೂ ವಿರೋಧಿ ಮತ್ತು ಮುಸ್ಮಿಂ ಓಲೈಕೆ ಶಿಕ್ಷಣ. ಇದು ಮಕ್ಕಳು ಬೆಳೆಯುವ ಹಂತದಲ್ಲೇ ಕೋಮು ತಾರತಮ್ಯ ಬಿತ್ತುವ ಕೆಲಸ. ಬಹುಸಂಖ್ಯಾತರನ್ನು ಬಿಟ್ಟು ಅಲ್ಪಸಂಖ್ಯಾರಿಗೆ ಮನ್ನಣೆ ನೀಡಲಾಗುತ್ತಿದೆ. ಬೆರಳೆಣಿಕೆ ಮಕ್ಕಳಿಗೆ ಅರ್ಥ ಆಗಲಿ ಅಂತ ಉರ್ದು ಭಾಷೆಗೆ ಆದ್ಯತೆ ಏಕೆ? ಈ ನಿಯಮ ಹಿಂಪಡೆಯಬೇಕು, ಇಲ್ಲದಿದ್ದರೆ ಎಲ್ಲಾ ಅಂಗನವಾಡಿ ಬಂದ್ ಮಾಡಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಹೇಳಿದ್ದಿಷ್ಟು
ಇನ್ನು ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಡಿಡಿ ಪ್ರಭಾಕರ್ ಕವಿತಾಳ ಪ್ರತಿಕ್ರಿಯಿಸಿದ್ದು, ಇದನ್ನು ಸರ್ಕಾರದ ನಿಯಮಾನುಸಾರವೇ ಆಯ್ಕೆ ಮಾಡಲಾಗಿದೆ. ಯಾವುದೇ ಅಂಗನವಾಡಿ ಕೇಂದ್ರ ವ್ಯಾಪ್ತಿಯಲ್ಲಿ 24% ಜನ ಅಲ್ಪಸಂಖ್ಯಾತರಿದ್ದಲ್ಲಿ ಅಲ್ಲಿನ ಅಂಗನವಾಡಿಗೆ ಉರ್ದು ಭಾಷೆ ಬಲ್ಲ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಅಚ್ಚರಿ ಘಟನೆಗೆ ಸಾಕ್ಷಿಯಾದ ಬಾಗಲಕೋಟೆ: ಪಶು ಆಸ್ಪತ್ರೆಗೆ ಬಂದು ವೈದ್ಯನ ಬಳಿ ತನ್ನ ಬಾಧೆ ತೋಡಿಕೊಂಡ ಮಂಗ, ವಿಡಿಯೋ ವೈರಲ್
ಮಾತೃಭಾಷೆ ಮಾತ್ರ ಬಲ್ಲ ಮುಸ್ಲಿಂ ಮಕ್ಕಳಿಗೆ ಕೆಲವೊಂದು ಕನ್ನಡ ಪದ ಅರ್ಥ ಆಗದೇ ಇದ್ದಾಗ ಅವರಿಗೆ ಉರ್ದು ಭಾಷೆಯಲ್ಲಿ ಮನವಕರಿಕೆ ಮಾಡಿಕೊಡುವ ಉದ್ದೇಶದಿಂದ ಈ ನಿಯಮವಿದೆ. ಆದರೆ ಅಂಗನವಾಡಿಯಲ್ಲಿ ಕನ್ನಡ ಮಾಧ್ಯಮದ ಮೂಲಕವೇ ಶಿಕ್ಷಣ ನೀಡಲಾಗುತ್ತದೆ ಎಂದು ಹೇಳಿದ್ದಾರೆ.
ಇದೇ ರೀತಿ ಜಿಲ್ಲೆಯ 50 ಅಂಗನವಾಡಿಗಳಿಗೆ ಕನ್ನಡ ಸೇರಿದಂತೆ ಉರ್ದು ಭಾಷೆ ಬಲ್ಲ ಕಾರ್ಯಕರ್ತೆಯರಿಗೆ ಆದ್ಯತೆ ನೀಡಲಾಗಿದೆ. ಉರ್ದು ಭಾಷೆ ಬಲ್ಲ ಯಾವುದೇ ಸಮುದಾಯದ ಕಾರ್ಯಕರ್ತೆ ಇದ್ದರೂ ಅವರನ್ನು ಸಂದರ್ಶನ ಮಾಡಿ ಮೆರಿಟ್ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ಪ್ರಭಾಕರ್ ಕವಿತಾಳ ತಿಳಿಸಿದ್ದಾರೆ.
ಗಲಗಲಿ ಗ್ರಾಮದ ಅಂಗನವಾಡಿ ನಂ 15ಕ್ಕೆ ಸಹಾಯಕಿಯಾಗಿ ಶಾಹೀನ್ ಮುಲ್ಲಾ, 32ನೇ ನಂ ಅಂಗನವಾಡಿಗೆ ಶಾಹೀನ್ ಸುಲ್ತಾನ್ ಎಂಬ ಕಾರ್ಯಕರ್ತೆ ಆಯ್ಕೆಯಾಗಿದ್ದು, ಸಹಾಯಕಿಯಾಗಿ ಸಲ್ಮಾ ಶೇಖ್ ಆಯ್ಕೆ ಆಗಿದ್ದಾರೆ. ಅದೇ ರೀತಿಯಾಗಿ 11ನೇ ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಯಾಸ್ಮಿನ್ ಜಮಾದಾರ್ ಆಯ್ಕೆ ಆಗಿದ್ದು, ಈ ಅಂಗನವಾಡಿಯಲ್ಲಿ 18 ಮಕ್ಕಳಲ್ಲಿ 12 ಮಕ್ಕಳು ಹಿಂದೂ ಸಮುದಾಯದ ಮಕ್ಕಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:11 pm, Fri, 30 May 25








