AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bangalore Water Crisis: ಬೆಂಗಳೂರಿನ ಜನ ಹೀಗೆಲ್ಲ ನೀರು ಉಳಿಸುತ್ತಿದ್ದಾರೆ ನೋಡಿ!

ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟು ತೀವ್ರವಾಗಿದೆ. ನೀರಿನ ಬಳಕೆ ಸಂಬಂಧ ಜಲ ಮಂಡಳಿ ಮಾರ್ಗಸೂಚಿ ಹೊರಡಿಸಿದ್ದು, ಹಲವು ನಿರ್ಬಂಧಗಳನ್ನು ವಿಧಿಸಿದೆ. ಈ ಮಧ್ಯೆ, ಜನರೂ ತಮ್ಮದೇ ಆದ ರೀತಿಯಲ್ಲಿ ನೀರು ಉಳಿಸಲು ಮುಂದಾಗಿದ್ದಾರೆ. ನಗರದ ಜನ ಹೇಗೆಲ್ಲ ನೀರು ಮಿತ ಬಳಕೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಇಲ್ಲಿದೆ.

Bangalore Water Crisis: ಬೆಂಗಳೂರಿನ ಜನ ಹೀಗೆಲ್ಲ ನೀರು ಉಳಿಸುತ್ತಿದ್ದಾರೆ ನೋಡಿ!
ಸಾಂದರ್ಭಿಕ ಚಿತ್ರ
Ganapathi Sharma
|

Updated on: Mar 27, 2024 | 8:57 AM

Share

ಬೆಂಗಳೂರು, ಮಾರ್ಚ್​ 27: ಬೆಂಗಳೂರು ನಗರವು ತೀವ್ರವಾದ ನೀರಿನ ಬಿಕ್ಕಟ್ಟು (Bengaluru Water Crisis) ಎದುರಿಸುತ್ತಿದ್ದು, ಹನಿ ನೀರನ್ನು ಉಳಿಸುವುದಕ್ಕೆ ಅಪಾರ್ಟ್​​ಮೆಂಟ್​ಗಳು, ಇಂಡಿಪೆಂಡೆಂಟ್ ಹೌಸ್​ಗಳು, ನಿವಾಸಿಗಳ ಸಂಘಗಳು ಹಲವಾರು ಕ್ರಮಗಳನ್ನು ಕೈಗೊಂಡಿವೆ. ನೀರಿನ ಸಮಸ್ಯೆಯ ಗಂಭೀರತೆ ಅರ್ಥವಾದ ಬೆನ್ನಲ್ಲೇ ಜನರು ಯಾವೆಲ್ಲ ರೀತಿಯಲ್ಲಿ ನೀರನ್ನು ಉಳಿಸಬಹುದೋ, ಮಿತ ಬಳಕೆ ಮಾಡಬಹುದೋ ಆ ಎಲ್ಲ ವಿಧಾನಗಳನ್ನು ಅನುಸರಿಸಲು ಮುಂದಾಗುತ್ತಿದ್ದಾರೆ.

ತಾರಸಿ ಕೃಷಿಗೆ, ಕಾರು ತೊಳೆಯಲು ಆರ್​ಒ ನೀರು

ಬೆಂಗಳೂರಿನ ಅನೇಕ ನಿವಾಸಿಗಳು ತಾರಸಿಯಲ್ಲಿ ತರಕಾರಿ ಬೆಳೆಯಲು, ಕಾರುಗಳನ್ನು ತೊಳೆಯುವುದು ಮುಂತಾದ ಗೃಹಬಳಕೆಯ ಉದ್ದೇಶಗಳಿಗಾಗಿ ಆರ್​ಒದಿಂದ ಹೊರಹೋಗುವ ನೀರನ್ನು ಮರುಬಳಕೆ ಮಾಡುತ್ತಿದ್ದಾರೆ. ಕೆಲವು ಮಂದಿ ಹಿರಿಯ ನಾಗರಿಕರು ಮುಂದಿನ ಮಳೆಗಾಲ ಆರಂಭವಾಗುವವರೆಗೆ ಊರುಗಳಿಗೆ ತೆರಳಿ ಕುಟುಂಬಗಳೊಂದಿಗೆ ಇರಲು ಮುಂದಾಗಿರುವ ಬಗ್ಗೆ ವರದಿಯಾಗಿದೆ.

ಈಜುಕೊಳ ಬಂದ್, ನಲ್ಲಿಗಳಿಗೆ ಏರಿಯೇಟರ್

ನಗರದಾದ್ಯಂತ ಹಲವಾರು ಅಪಾರ್ಟ್ಮೆಂಟ್​​ಗಳು ಮತ್ತು ಪ್ರದೇಶಗಳು ಜಲ ಮಂಡಳಿಯ (BWSSB) ಮಾರ್ಗಸೂಚಿಗೆ ಅನುಸಾರವಾಗಿ ತಾತ್ಕಾಲಿಕವಾಗಿ ಈಜುಕೊಳಗಳನ್ನು ತಾತ್ಕಾಲಿಕವಾಗಿ ಮುಚ್ಚಿವೆ. ಅಲ್ಲದೆ, ನಲ್ಲಿಗಳಿಗೆ ಏರಿಯೇಟರ್​ಗಳನ್ನು ಸ್ಥಾಪಿಸುವ ಮೂಲಕ ನೀರನ್ನು ಉಳಿಸಲು ಕ್ರಮಗಳನ್ನು ಕೈಗೊಂಡಿವೆ.

ಹೂವಿನ ದಳಗಳ ಹೋಳಿ!

ಆರ್‌ಟಿ ನಗರದ ಅಪಾರ್ಟ್‌ಮೆಂಟ್ ಸಮುಚ್ಛಯ ವೈಟ್‌ಹೌಸ್ ನೀರನ್ನು ಸಂರಕ್ಷಿಸಲು ಮತ್ತು ಕುಡಿಯುವ ನೀರಿನ ವಿವೇಚನಾರಹಿತ ಬಳಕೆಯನ್ನು ತಪ್ಪಿಸಲು ಹೂವಿನ ದಳಗಳನ್ನು ಬಳಸಿ ನೀರಿಲ್ಲದ ಹೋಳಿಯನ್ನು ಆಚರಿಸಿದೆ ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ. ಈ ವಿಧಾನ ಸಹ ಸಾಂಪ್ರದಾಯಿಕ ಹೋಳಿಯಂತೆ ವರ್ಣರಂಜಿತವಾಗಿದೆ ಮತ್ತು ಮಕ್ಕಳಿಗೆ ಸುರಕ್ಷಿತವಾಗಿದೆ. ದೇಹ ಮತ್ತು ಬಟ್ಟೆಗಳಿಂದ ಬಣ್ಣಗಳನ್ನು ತೊಳೆಯಲು ಅಗತ್ಯವಿರುವ ಸಾಕಷ್ಟು ನೀರನ್ನು ಉಳಿಸಲು ಇದು ನಮಗೆ ಸಹಾಯ ಮಾಡಿತು ಎಂದು ಮಗುವೊಂದರ ಪೋಷಕರೊಬ್ಬರು ತಿಳಿಸಿದ್ದಾರೆ.

ಮಳೆನೀರು ಕೊಯ್ಲು

ನಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಹಲವಾರು ವರ್ಷಗಳಿಂದ ಮಳೆ ನೀರು ಕೊಯ್ಲು ಮಾಡಲಾಗುತ್ತಿದೆ. ಇದರಿಂದಾಗಿಯೇ ನಮ್ಮ ಅಪಾರ್ಟ್​​ಮೆಂಟ್ ನೀರಿನ ವಿಚಾರದಲ್ಲಿ ಸ್ವಾವಲಂಬಿಯಾಗಲು ಸಾಧ್ಯವಾಯಿತು. ಹೀಗಾಗಿ ಇನ್ನೂ ತೀವ್ರವಾದ ನೀರಿನ ಕೊರತೆಯನ್ನು ಎದುರಿಸುವಂತಾಗಿಲ್ಲ ಎಂದು ಬೆಂಗಳೂರು ಅಪಾರ್ಟ್‌ಮೆಂಟ್ ಫೆಡರೇಶನ್ (ಬಿಎಎಫ್) ಸದಸ್ಯೆ ವಿದ್ಯಾ ಗೊಗ್ಗಿ ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ.

ಇದನ್ನೂ ಓದಿ: ನೀರಿನ ಬಿಕ್ಕಟ್ಟಿನ ಕಾರಣ ವರ್ಕ್ ಫ್ರಂ ಹೋಮ್​ಗೆ ಐಟಿ ಉದ್ಯೋಗಿಗಳ ಬೇಡಿಕೆ, ತಜ್ಞರ ಸಲಹೆಯೂ ಅದೇ!

ಈ ಮಧ್ಯೆ, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಮುಂದಿನ ಮುಂಗಾರಿನಲ್ಲಿಯಾದರೂ ಮಳೆನೀರು ಕೊಯ್ಲು ಅಳವಡಿಸುವಂತೆ ನಾಗರಿಕರಿಗೆ ಸೂಚಿಸಿದೆ. ಅದಕ್ಕೆ ಬೇಕಾದ ಸಿದ್ಧತೆಗಳನ್ನೂ ಮಾಡುತ್ತಿದೆ. ಸದ್ಯ ಬೆಂಗಳೂರಿನಲ್ಲಿ ಪ್ರತಿ ಐದು ಮನೆಗೆ ಒಂದರಂತೆ ಮಾತ್ರ ಮಳೆನೀರು ಕೊಯ್ಲು ಮಾಡುತ್ತಿರುವುದು ಇತ್ತೀಚಿನ ಸಮೀಕ್ಷೆಯೊಂದರಿಂದ ತಿಳಿದುಬಂದಿದೆ ಎಂದು ವರದಿ ಉಲ್ಲೇಖಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ