AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟ್ರಾಫಿಕ್ ಫೈನ್ ಶೇ 50 ರಿಯಾಯಿತಿ: ಕೇವಲ 4 ದಿನದಲ್ಲಿ 6 ಕೋಟಿ ರೂ. ಸಂಗ್ರಹ!

ಸಂಚಾರ ನಿಯಮ ಉಲ್ಲಂಘನೆಯ ಬಾಕಿ ದಂಡ ಪಾವತಿಗೆ ನೀಡಿರುವ ಶೇಕಡಾ 50 ರಷ್ಟು ರಿಯಾಯಿತಿ ಯೋಜನೆಗೆ ಬೆಂಗಳೂರಿನಲ್ಲಿ ಭರ್ಜರಿ ಬೆಂಬಲ ವ್ಯಕ್ತವಾಗಿದೆ. ಜೂನ್ 21 ರಿಂದ ಆರಂಭವಾದ ಈ ಕೊಡುಗೆಯಡಿ ಕೇವಲ ನಾಲ್ಕೇ ದಿನಗಳಲ್ಲಿ ಬೆಂಗಳೂರಿನಲ್ಲಿ ಬರೊಬ್ಬರಿ 2 ಲಕ್ಷಕ್ಕೂ ಅಧಿಕ ಪ್ರಕರಣಗಳು ಇತ್ಯರ್ಥವಾಗಿವೆ. ಪೊಲೀಸರ ಖಜಾನೆಗೆ 6.06 ಕೋಟಿ ರೂಪಾಯಿ ದಂಡದ ಹಣ ಹರಿದುಬಂದಿದೆ.

ಟ್ರಾಫಿಕ್ ಫೈನ್ ಶೇ 50 ರಿಯಾಯಿತಿ: ಕೇವಲ 4 ದಿನದಲ್ಲಿ 6 ಕೋಟಿ ರೂ. ಸಂಗ್ರಹ!
ಸಾಂದರ್ಭಿಕ ಚಿತ್ರImage Credit source: @rtnagartraffic
ಗಣಪತಿ ಶರ್ಮಾ
|

Updated on:Jun 25, 2026 | 12:58 PM

Share

ಮುಖ್ಯಾಂಶಗಳು

  • ಮೂರೇ ದಿನದಲ್ಲಿ 6.06 ಕೋಟಿ ರೂ. ವಸೂಲಿ
  • 2 ಲಕ್ಷಕ್ಕೂ ಅಧಿಕ ಕೇಸ್ ಕ್ಲಿಯರ್
  • ಜುಲೈ 10 ರವರೆಗೆ ಇರಲಿದೆ ರಿಯಾಯಿತಿ

ಬೆಂಗಳೂರು, ಜೂನ್ 25: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಸಂಚಾರ ನಿಯಮ ಉಲ್ಲಂಘನೆಯ ಇ-ಚಲನ್ ಬಾಕಿ ದಂಡದ ಮೇಲಿನ ಶೇ 50 ರಷ್ಟು ರಿಯಾಯಿತಿ (Traffic Fine Discount) ಯೋಜನೆಗೆ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. ಜೂನ್ 21 ರಿಂದ ಅಧಿಕೃತವಾಗಿ ಆರಂಭವಾಗಿರುವ ಈ ರಿಯಾಯಿತಿ ಬಳಸಿಕೊಂಡು ಸಾವಿರಾರು ಸವಾರರು ವಾಹನಗಳ ಮೇಲಿದ್ದ ಹಳೇ ದಂಡಗಳನ್ನು ಪಾವತಿಸಿ ಚುಕ್ತಾಗೊಳಿಸುತ್ತಿದ್ದಾರೆ. ಬೆಂಗಳೂರು ಸಂಚಾರ ಪೊಲೀಸರು (Bengaluru Traffic Police) ಬಿಡುಗಡೆ ಮಾಡಿರುವ ಅಧಿಕೃತ ಅಂಕಿಅಂಶ ಪ್ರಕಾರ, ಜೂನ್ 21 ರಿಂದ ಜೂನ್ 24 ರವರೆಗಿನ ಮೊದಲ 4 ದಿನಗಳ ಅವಧಿಯಲ್ಲಿ ವಿವಿಧ ಆನ್‌ಲೈನ್ ಮತ್ತು ಆಫ್‌ಲೈನ್ ಮಾಧ್ಯಮಗಳ ಮೂಲಕ ಒಟ್ಟು 2,00,139 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ಬರೋಬ್ಬರಿ 6,06,65,150 ರೂಪಾಯಿ ಭಾರೀ ಮೊತ್ತದ ದಂಡ ವಸೂಲಿಯಾಗಿದೆ.

ಬಾಕಿ ಉಳಿದ ಕೇಸ್ ವಿಲೇವಾರಿಗೆ ಕ್ರಮ

ಬೆಂಗಳೂರು ನಗರವೊಂದರಲ್ಲೇ ಕೋಟ್ಯಂತರ ರೂಪಾಯಿ ಮೌಲ್ಯದ 5 ಕೋಟಿಗೂ ಅಧಿಕ ಇ-ಚಲನ್ ಪ್ರಕರಣಗಳು ದಂಡ ಪಾವತಿಯಾಗದೆ ವರ್ಷಗಳಿಂದ ಬಾಕಿ ಇದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಸಾರಿಗೆ ಮತ್ತು ಪೊಲೀಸ್ ಇಲಾಖೆ, ಜೂನ್ 21 ರಿಂದ ಜುಲೈ 10 ರವರೆಗೆ ಅನ್ವಯವಾಗುವಂತೆ ಸೀಮಿತ ಅವಧಿಗೆ ಈ ಶೇ 50 ರಿಯಾಯಿತಿ ಯೋಜನೆಯನ್ನು ಮರುಜಾರಿ ಮಾಡಿತ್ತು. ಮೊದಲ ದಿನವೇ ಸವಾರರು ಪೇಟಿಎಂ, ಕರ್ನಾಟಕ ಒನ್ ಮತ್ತು ಸಂಚಾರ ಪೊಲೀಸ್ ವೆಬ್‌ಸೈಟ್‌ಗಳ ಮೂಲಕ ಮುಗಿಬಿದ್ದು ದಂಡ ಪಾವತಿಸಲು ಆರಂಭಿಸಿದ್ದರು.

ಟ್ರಾಫಿಕ್ ಪೊಲೀಸ್ ಎಕ್ಸ್ ಸಂದೇಶ

ಬಾಕಿ ಉಳಿಸಿಕೊಳ್ಳುವವರ ವಿರುದ್ಧ ಕಠಿಣ ಕ್ರಮ

ನಗರದ ಸಂಚಾರ ವಿಭಾಗದ ಹಿರಿಯ ಅಧಿಕಾರಿಗಳ ಪ್ರಕಾರ, ಈ ಯೋಜನೆಯು ಸಾರ್ವಜನಿಕರಿಗೆ ಆರ್ಥಿಕ ಹೊರೆ ಕಡಿಮೆ ಮಾಡಿಕೊಳ್ಳಲು ಸಿಕ್ಕಿರುವ ಸುವರ್ಣಾವಕಾಶವಾಗಿದೆ. ಜುಲೈ 10 ರ ಗಡುವು ಮುಗಿದ ನಂತರ ಯಾವುದೇ ಕಾರಣಕ್ಕೂ ರಿಯಾಯಿತಿ ವಿಸ್ತರಿಸಲಾಗುವುದಿಲ್ಲ ಮತ್ತು ಬಾಕಿ ಉಳಿಸಿಕೊಳ್ಳುವ ವಾಹನಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:57 pm, Thu, 25 June 26

Follow Us