ಕರ್ನಾಟಕದ 122 ತಾಲೂಕುಗಳಲ್ಲಿ ಮೂರು ವಾರಗಳಿಂದಿಲ್ಲ ಮಳೆ: ರಾಜ್ಯದಲ್ಲಿ ಶೇ.50ರಷ್ಟು ಬೆಳೆ ನಷ್ಟ ಸಾಧ್ಯತೆ
ಕರ್ನಾಟಕದ 122 ತಾಲೂಕುಗಳಲ್ಲಿ ಸತತ ಮೂರು ವಾರಗಳಿಂದ ಮಳೆಯಾಗದ ಹಿನ್ನೆಲೆಯಲ್ಲಿ ತೀವ್ರ ಬರದ ಛಾಯೆ ಆವರಿಸಿದ್ದು, ರಾಜ್ಯದಲ್ಲಿ ಈ ಬಾರಿ ಶೇ. 50ರಷ್ಟು ಬೆಳೆ ನಷ್ಟ ಸಂಭವಿಸುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಹಿಂದಿನ ಕೃಷಿ ಋತುವಿನಲ್ಲಿ ಕರ್ನಾಟಕದ 82.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಉತ್ಪಾದನೆ ನಡೆದಿತ್ತು. ಆದರೆ ಈ ವರ್ಷ ಇದುವರೆಗೆ ಕೇವಲ 36.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ ಎನ್ನಲಾಗಿದೆ.

ಬೆಂಗಳೂರು, ಸೆಪ್ಟೆಂಬರ್ 07: ದುರ್ಬಲವಾಗಿರುವ ಮುಂಗಾರು ಮಳೆ ಚೇತರಿಕೆ ಕಾಣುವ ಯಾವುದೇ ಲಕ್ಷಣ ಗೋಚರಿಸದಿರುವ ನಡುವೆ ಮುಂದಿನ ವಾರಗಳಲ್ಲಿ ರಾಜ್ಯದ ಮಳೆ ಕೊರತೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಕರ್ನಾಟಕದ ಒಟ್ಟು 239 ತಾಲೂಕುಗಳ ಪೈಕಿ ಈಗಾಗಲೇ 102 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು ಇನ್ನೂ 26 ತಾಲೂಕುಗಳು ಒಂದು ವಾರದೊಳಗೆ ಈ ಪಟ್ಟಿಗೆ ಸೇರುವ ಸಾಧ್ಯತೆಯಿದೆ. ಪರಿಣಾಮ ರಾಜ್ಯವು ಈ ಬಾರಿ ಕೃಷಿ ಮತ್ತು ತೋಟಗಾರಿಕಾ ಬೆಳೆಗಳ ಸುಮಾರು ಶೇ.50ರಷ್ಟು ಇಳುವರಿ ಕಳೆದುಕೊಳ್ಳುವ ಬಗ್ಗೆ ಅಂದಾಜಿಸಲಾಗಿದೆ.
ಬಿತ್ತನೆ ಪ್ರಮಾಣದಲ್ಲಿ ಗಣನೀಯ ಕುಸಿತ
ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳು ಮಳೆ ಕೊರತೆಯಿಂದ ತೀವ್ರವಾಗಿ ಬಾಧಿತವಾಗಿವೆ. ರಾಜ್ಯದ ಉತ್ತರ ಭಾಗದಲ್ಲಿರುವ ಹಾವೇರಿ, ಬೀದರ್ ಹಾಗೂ ರಾಯಚೂರು ಜಿಲ್ಲೆಗಳಲ್ಲೂ ಬಿತ್ತನೆ ಪ್ರಮಾಣದಲ್ಲಿ ಗಣನೀಯ ಕುಸಿತ ಕಂಡುಬಂದಿದೆ. ಪ್ರಾಥಮಿಕ ಅಂದಾಜಿನ ಪ್ರಕಾರ, ಬರದಂತಹ ಪರಿಸ್ಥಿತಿ ಎದುರಿಸುತ್ತಿರುವ 228 ತಾಲೂಕುಗಳ ಪೈಕಿ 122 ತಾಲೂಕುಗಳಲ್ಲಿ ಸತತ ಮೂರು ವಾರಗಳ ಕಾಲ ಮಳೆ ಇಲ್ಲದ ಪರಿಸ್ಥಿತಿ ಮುಂದುವರಿದಿದೆ. ಇದರಿಂದ ಬೆಳೆ ಬೆಳೆಯುವ ಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಮಳೆಗಾಲದಲ್ಲೇ ಕರ್ನಾಟಕದಲ್ಲಿ ಸುಡು ಬಿಸಿಲು: ಬೆಂಗಳೂರಿನಲ್ಲಿ ತಾಪಮಾನ ಏರಿಕೆ, ಸೆಪ್ಟೆಂಬರ್ ಉಷ್ಣಾಂಶ ಏರಿಕೆ
ಇದುವರೆಗೆ 36.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ
ಅಧಿಕಾರಿಗಳ ಪ್ರಕಾರ, ದಕ್ಷಿಣ ಒಳನಾಡು ಪ್ರದೇಶವು ಮಳೆ ಕೊರತೆಯಿಂದ ಅತಿ ಹೆಚ್ಚು ಬಾಧಿತವಾಗಿದೆ. ನೀರಾವರಿ ಪ್ರದೇಶಗಳಲ್ಲಿ ಕೆಲವು ಬೆಳೆಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಬಹುದು. ಆದರೆ ಮಳೆಯನ್ನೇ ಅವಲಂಬಿಸಿರುವ ಬೆಳೆಗಳಿಂದ ಈ ಬಾರಿ ಅಲ್ಪ ಪ್ರಮಾಣದ ಅಥವಾ ಯಾವುದೇ ಇಳುವರಿ ಬರುವ ಸಾಧ್ಯತೆಯಿಲ್ಲ. ನಾವು ಶೇ.50ರಷ್ಟು ಬೆಳೆ ನಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ ಎಂದವರು ಹೇಳಿದ್ದಾರೆ. ಹಿಂದಿನ ಕೃಷಿ ಋತುವಿನಲ್ಲಿ ಕರ್ನಾಟಕದ 82.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಉತ್ಪಾದನೆ ನಡೆದಿತ್ತು. ಆದರೆ ಈ ವರ್ಷ ಇದುವರೆಗೆ ಕೇವಲ 36.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದೆ ಎಂದು ದಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.




