Breaking News Highlights: ಗುಡ್ ನ್ಯೂಸ್: ಬೆಳೆ ವಿಮೆ ನೋಂದಣಿ ಅವಧಿ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶ
TV9 Kannada News Today Highlights: ಆಗಸ್ಟ್ 25ರ ಕರ್ನಾಟಕದ ಪ್ರಮುಖ ಸುದ್ದಿಗಳು: ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಆನ್ಲೈನ್ನಲ್ಲಿ ವಿಷಕಾರಿ ದತ್ತೂರಿ ಹಣ್ಣು ಮಾರಾಟ ತಡೆಗೆ ಎಫ್ಡಿಎ ನೋಟಿಸ್ ಜಾರಿಗೊಳಿಸಿದೆ. ಇತ್ತ ಚಿಕ್ಕಮಗಳೂರಿನ ಟಿಪ್ಪು ಕಟೌಟ್ ವಿವಾದದ ಪ್ರಮುಖ ಆರೋಪಿ ಅಫ್ರಿದ್ನನ್ನು ಪೊಲೀಸರು ಬಂಧಿಸಿದ್ದಾರೆ. ಸಂಪೂರ್ಣ ಲೈವ್ ಅಪ್ಡೇಟ್ಸ್ ಇಲ್ಲಿದೆ.

Breaking News Today: ರಾಜ್ಯದಲ್ಲಿ ಮುಂಗಾರು ಮತ್ತೆ ಚುರುಕುಗೊಂಡಿದ್ದು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಹವಾಮಾನ ಇಲಾಖೆಯು ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಅಮೆಜಾನ್ ಸೇರಿದಂತೆ ಹಲವು ಇ-ಕಾಮರ್ಸ್ ಸಂಸ್ಥೆಗಳಲ್ಲಿ ಮಾರಣಾಂತಿಕ ದತ್ತೂರಿ ಹಣ್ಣು ಮತ್ತು ಬೀಜಗಳ ಮಾರಾಟ ಹೆಚ್ಚಿದ್ದರಿಂದ, ಎಫ್ಡಿಎ (FDA) ಮತ್ತು FSSAI ಕಠಿಣ ಕ್ರಮ ಕೈಗೊಂಡು ಸಂಸ್ಥೆಗಳಿಗೆ ನೋಟಿಸ್ ಜಾರಿಗೊಳಿಸಿವೆ. ಚಿಕ್ಕಮಗಳೂರಿನಲ್ಲಿ ಟಿಪ್ಪು ಸುಲ್ತಾನ್ ಕಟೌಟ್ಗೆ ಪಾಕ್ ಪರ ಹಾಡು ಜೋಡಿಸಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಇನ್ಸ್ಟಾಗ್ರಾಮ್ ಖಾತೆದಾರ, ಪ್ರಮುಖ ಆರೋಪಿ ಅಫ್ರಿದ್ನನ್ನು ಪೊಲೀಸರು ಬಂಧಿಸಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.
Tv9 Kannada Live TV ಇಲ್ಲಿ ವೀಕ್ಷಿಸಿ
LIVE NEWS & UPDATES
-
ಗ್ರೇಟರ್ ಬೆಂಗಳೂರು ಟೌನ್ಶಿಪ್ ಭೂಸ್ವಾಧೀನಕ್ಕೆ ತಡೆ ಇಲ್ಲ
ಭೂಸ್ವಾಧೀನ ಪ್ರಕ್ರಿಯೆಗೆ ಹೈಕೋರ್ಟ್ನಿಂದ ಯಾವುದೇ ಸಾಮಾನ್ಯ ತಡೆಯಾಜ್ಞೆ ಇಲ್ಲ. ಇಡೀ ಯೋಜನೆಯ ಭೂಸ್ವಾಧೀನಕ್ಕೆ ತಡೆ ನೀಡಿಲ್ಲ ಎಂದು ಪ್ರಾಧಿಕಾರ ಸ್ಪಷ್ಟನೆ ನೀಡಿದೆ. ಕೆಲ ಭೂಮಾಲೀಕರು ಭೂಸ್ವಾಧೀನ ಪ್ರಶ್ನಿಸಿ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು ಆಗಸ್ಟ್ 25ರಂದು ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್, ರಿಟ್ ಅರ್ಜಿ ಇತ್ಯರ್ಥವಾಗುವವರೆಗೆ ಜಮೀನು ವಶಕ್ಕೆ ಪಡೆಯಬಾರದು ಎಂದು ಮಧ್ಯಂತರ ಆದೇಶ ನೀಡುವಂತೆ ಅರ್ಜಿದಾರರ ಪರ ವಕೀಲರಿಂದ ಮನವಿ ಮಾಡಲಾಗಿದೆ. ಈ ವೇಳೆ ಸರ್ಕಾರ ಮತ್ತು ಪ್ರಾಧಿಕಾರದ ಪರ ಅಡ್ವೊಕೇಟ್ ಜನರಲ್ ಅವರು ಭೂಸ್ವಾಧೀನ ಸಂಬಂಧ ಕೈಗೊಂಡಿರುವ ಕ್ರಮಗಳ ಬಗ್ಗೆ ಕೋರ್ಟ್ಗೆ ಮಾಹಿತಿ ನೀಡಿದ್ದು, ಪರಿಹಾರ Award ಸಿದ್ಧಪಡಿಸಲು ಪ್ರಾಧಿಕಾರಕ್ಕೆ ಅವಕಾಶ ಇದೆ ಎಂದು ಸ್ಪಷ್ಟಪಡಿಸಿದೆ.
-
KPSC ಕಚೇರಿಯಲ್ಲಿ ಸಿಐಡಿ ಅಧಿಕಾರಿಗಳ ದಾಳಿ ಮುಕ್ತಾಯ
KPSC ಕಚೇರಿಯಲ್ಲಿ ಸಿಐಡಿ ಅಧಿಕಾರಿಗಳ ದಾಳಿ ಮುಕ್ತಾಯವಾಗಿದೆ. ಆ.5ರಂದು ಮಾತ್ರವಲ್ಲದೇ ಇಂದು (ಆಗಸ್ಟ್ 25) ಸಹ ಮತ್ತೊಮ್ಮೆ KPSC ಕಚೇರಿ ಮೇಲೆ ದಾಳಿ ಮಾಡಿದ್ದ ಸಿಐಡಿ ಅಧಿಕಾರಿಗಳು ಇಂಚಿಚೂ ಪರಿಶೀಲನೆ ಮಾಡಿದ್ದಾರೆ. ಸದ್ಯ ಪರಿಶೀಲನೆ ಅಂತ್ಯವಾಗಿದ್ದು, ದಾಖಲೆಗಳಿದ್ದ ಬಾಕ್ಸ್ ಕೊಂಡೊಯ್ದಿದ್ದಾರೆ.
-
-
ಕೊನೆ ಕ್ಷಣದಲ್ಲಿ PDO ಕೌನ್ಸಿಲಿಂಗ್ ರದ್ದು
ಕೊನೆ ಕ್ಷಣದಲ್ಲಿ PDO ಕೌನ್ಸಿಲಿಂಗ್ ರದ್ದುಗೊಳಿಸಲಾಗಿದೆ. ಇದರಿಂದ 526 ಅಭ್ಯರ್ಥಿಗಳಿಗೆ ಆಘಾತವಾಗಿದೆ. ಗ್ರಾಮ ಪಂಚಾಯಿತಿ ಸೆಕ್ರೆಟರಿ ಹುದ್ದೆಯಿಂದ ಪಿಡಿಒ ನೀಡುವುದಾಗಿ ಸರ್ಕಾರ ಆದೇಶ ಹೊರಡಿಸಿತ್ತು. ನಿನ್ನೆ ಅಧಿಕೃತವಾಗಿ ಎಲ್ಲಾ ಸೆಕ್ರೆಟರಿ ಅಭ್ಯರ್ಥಿಗಳಿಗೆ ಮೆಸೇಜ್ ಕಳಿಸಲಾಗಿತ್ತು. ಇಂದು ಜೆ ಪಿ ನಗರದ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಕಚೇರಿಗೆ ಬರುವಂತೆ ತಿಳಿಸಲಾಗಿತ್ತು. ಆದರೆ ಯಾವುದೇ ಕಾರಣವನ್ನು ಕೊಡದೆ ಏಕಾಏಕಿ ಪಿಡಿಒ ಕೌನ್ಸಿಲಿಂಗ್ ರದ್ದು ಮಾಡಲಾಗಿದೆ. ಇದರಿಂದ ಕರ್ನಾಟಕದ 28 ಜಿಲ್ಲೆಗಳಿಂದ ಆಗಮಿಸಿರೋ ಅಭ್ಯರ್ಥಿಗಳು ಪರದಾಡುವಂತಾಗಿದೆ.
-
ಬೆಳೆ ವಿಮೆ ನೋಂದಣಿ ಅವಧಿ ವಿಸ್ತರಿಸಿದ ಕೇಂದ್ರ ಸರ್ಕಾರ
ಕರ್ನಾಟಕ ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಬರಪೀಡಿತ ಪ್ರದೇಶದಲ್ಲಿ ಬೆಳೆ ವಿಮೆ ನೋಂದಣಿ ಅವಧಿ ವಿಸ್ತರಣೆ ಮಾಡಲಾಗಿದೆ. ಬೆಳೆ ವಿಮೆ ನೋಂದಣಿ ಅವಧಿ ವಿಸ್ತರಣೆ ಮಾಡಬೇಕೆಂದು ಕರ್ನಾಟಕ ಸರ್ಕಾರ ಮನವಿ ಮಾಡಿತ್ತು. ಇದಕ್ಕೆ ಕೇಂದ್ರ ಸರ್ಕಾರ ಪುರಸ್ಕರಿಸಿದ್ದು, ಬೆಳೆ ವಿಮೆ ನೋಂದಣಿ ಅವಧಿ ವಿಸ್ತರಿಸಿ ಇಂದು (ಆಗಸ್ಟ್ 25) ಆದೇಶ ಹೊರಡಿಸಿದೆ.
-
ನೈಸ್ ಟೋಲ್ ವಿರುದ್ಧ ರಾಜ್ಯಪಾಲರಿಗೆ ಜೆಡಿಎಸ್ ದೂರು
ನೈಸ್ ರಸ್ತೆಯಲ್ಲಿ ಟೋಲ್ ಕಟ್ಟಬೇಡಿ. ಅಕ್ರಮವಾಗಿ ಟೋಲ್ ಸಂಗ್ರಹ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಇದರ ಬೆನ್ನಲ್ಲೇ ಇದೀಗ ಜೆಡಿಎಸ್ ನಿಯೋ ಇಂದು (ಆಗಸ್ಟ್ 25) ಲೋಕಭವನಕ್ಕೆ ತೆರಳಿ ರಾಜ್ಯಪಾಲರಿಗೆ ದೂರು ನೀಡಿದೆ.
-
-
ಧರ್ಮಸ್ಥಳ ಮಂಜುನಾಥಸ್ವಾಮಿ ದರ್ಶನ ಪಡೆದ ನಟ ಯಶ್
ನಾಳೆ ‘ಟಾಕ್ಸಿಕ್’ ರಿಲೀಸ್ ಹಿನ್ನೆಲೆ ನಟ ಯಶ್ ಇಂದು (ಆಗಸ್ಟ್ 25) ಧರ್ಮಸ್ಥಳಕ್ಕೆ ತೆರಳಿ ಮಂಜುನಾಥನ ದರ್ಶನ ಪಡೆದುಕೊಂಡರು. ಟಾಕ್ಸಿಕ್ ಸಿನಿಮಾ ಯಶಸ್ಸಿಗಾಗಿ ಗರ್ಭಗುಡಿ ಬಳಿ ನಿಂತು ಕೆಲಕಾಲ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ಆರ್ಶೀರ್ವಾದ ಪಡೆ
-
ಕೆಆರ್ಎಸ್ಗೆ ಮುತ್ತಿಗೆ ಹಾಕಲು ಯತ್ನಿಸಿದ ವಾಟಾಳ್ ಪೊಲೀಸ್ ವಶಕ್ಕೆ
ತಮಿಳುನಾಡಿಗೆ ಯಾವುದೇ ಕಾರಣಕ್ಕೂ ಕಾವೇರಿ ನೀರು ಹರಿಸಬಾರದು ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಕೆಆರ್ಎಸ್ಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಬ್ಯಾರಿಕೇಡ್ ಹಾಕಿ ತಡೆದಿದ್ದಾರೆ. ಅಲ್ಲದೇ ವಾಟಾಳ್ ನಾಗರಾಜ್ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
-
ಧಾರವಾಡಕ್ಕೆ ತೆರಳಲು ಶಾಸಕ ವಿನಯ್ ಕುಲಕರ್ಣಿಗೆ ಅನುಮತಿ
ಯೋಗೇಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಕೋರ್ಟ್ ಮತ್ತೊಂದು ರಿಲೀಫ್ ನೀಡಿದೆ. ಧಾರವಾಡದ ಯೋಗೀಶ್ ಗೌಡರ್ ಕೊಲೆ ಕೇಸ್ ನ ಸಾಕ್ಷ್ಯ ನಾಶ ಆರೋಪದಲ್ಲಿ ಜಾಮೀನಿನ ಮೇಲೆ ಜೈಲಿನಿಂದ ಆಚೆ ಬಂದಿರುವ ವಿನಯ್ ಕುಲಕರ್ಣಿಗೆ ಇದೀಗ ಧಾರವಾಡಕ್ಕೆ ತೆರಳಲು 42ನೇ ಎಸಿಜೆಎಂ ಕೋರ್ಟ್, ಷರತ್ತುಬದ್ಧ ಅನುಮತಿ ನೀಡಿದೆ. ಮೆರವಣಿಗೆ ಇತ್ಯಾದಿ ಮಾಡದಂತೆ ಷರತ್ತು ವಿಧಿಸಿದ್ದು, ಒಂದು ವೇಳೆ ಷರತ್ತು ಉಲ್ಲಂಘಿಸಿದರೆ ಜಾಮೀನು ರದ್ದುಪಡಿಸುವುದಾಗಿ ಎಚ್ಚರಿಕೆ ನೀಡಿದೆ.
-
ಕೊನೆಗೂ ಮದುವೆ ಸುದ್ದಿ ಹಂಚಿಕೊಂಡ ನಟ ಚಿಕ್ಕಣ್ಣ
ಆಗಸ್ಟ್ 29 ಮತ್ತು 30ರಂದು ತಾವು ಹೊಸ ಜೀವನಕ್ಕೆ ಕಾಲಿಡುತ್ತಿರುವುದಾಗಿ ನಟ ಚಿಕ್ಕಣ್ಣ ಅಧಿಕೃತವಾಗಿ ತಿಳಿಸಿದ್ದಾರೆ. ಶ್ರೀರಂಗಪಟ್ಟಣದ ಪಾವನಾ ಎನ್ನುವವರ ಜೊತೆ ಅರೇಂಜ್ ಕಮ್ ಲವ್ ಮ್ಯಾರೇಜ್ ಆಗುತ್ತಿದ್ದು, “ಚಿತ್ರರಂಗದ ಪ್ರೋತ್ಸಾಹದಂತೆಯೇ ನನ್ನ ಹೊಸ ಬಾಳಿಗೂ ಇಡೀ ಕರ್ನಾಟಕದ ಜನತೆ ಆಶೀರ್ವದಿಸಬೇಕು” ಎಂದು ಮನವಿ ಮಾಡಿದ್ದಾರೆ.
-
ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘ ಚುನಾವಣೆ
ರಾಜ್ಯಾದ್ಯಂತ ಪಿಯು ಮತ್ತು ಡಿಗ್ರಿ ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸಲು ಸರ್ಕಾರ ನಿರ್ಧರಿಸಿದ್ದು, 15 ದಿನಗಳಲ್ಲಿ ಆದೇಶ ಹೊರಡಿಸುವುದಾಗಿ ಸಚಿವ ಶರಣು ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ. ಯಾವುದೇ ಬಾಹ್ಯ ವಿದ್ಯಾರ್ಥಿ ಸಂಘಟನೆಗಳ ಗುರುತಿಸಿಕೊಳ್ಳುವಿಕೆಗೆ ಅವಕಾಶವಿಲ್ಲದೆ, ವಿದ್ಯಾರ್ಥಿನಿಯರಿಗೆ ಮೀಸಲಾತಿಯೊಂದಿಗೆ ಈ ವರ್ಷವೇ ಚುನಾವಣೆ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
-
‘ಟಾಕ್ಸಿಕ್’ ರಿಲೀಸ್ಗೆ ಕೌಂಟ್ಡೌನ್: ಧರ್ಮಸ್ಥಳ ಮಂಜುನಾಥನ ದರ್ಶನ ಪಡೆಯಲಿದ್ದಾರೆ ಯಶ್!
ಆಗಸ್ಟ್ 26ರಂದು ‘ಟಾಕ್ಸಿಕ್’ ಸಿನಿಮಾ ಅದ್ಧೂರಿಯಾಗಿ ಬಿಡುಗಡೆಯಾಗಲಿರುವ ಹಿನ್ನೆಲೆಯಲ್ಲಿ ನಟ ರಾಕಿಂಗ್ ಸ್ಟಾರ್ ಯಶ್ ಮಂಗಳೂರಿಗೆ ಆಗಮಿಸಿದ್ದಾರೆ. ಚೆನ್ನೈನಿಂದ ವಿಶೇಷ ವಿಮಾನದಲ್ಲಿ ಬಂದಿಳಿದ ಅವರು, ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ತೆರಳಿ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಚಿತ್ರದ ಯಶಸ್ಸಿಗಾಗಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ವೀಡಿಯೋ ನೋಡಿ
-
ಬಾಕ್ಸ್ ಆಫೀಸ್ನಲ್ಲಿ ‘ಇರುಮುಡಿ’ ಧಮಾಕಾ
ಯಾವುದೇ ಅಬ್ಬರವಿಲ್ಲದೆ ಸಾಧಾರಣ ಬಜೆಟ್ನಲ್ಲಿ ತೆರೆಕಂಡ ನಟ ರವಿ ತೇಜ ಅಭಿನಯದ ತೆಲುಗಿನ ‘ಇರುಮುಡಿ’ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಐತಿಹಾಸಿಕ ದಾಖಲೆ ಬರೆಯುತ್ತಿದೆ. ಪ್ರೇಕ್ಷಕರ ಮೆಚ್ಚುಗೆಯಿಂದಾಗಿ ಕೇವಲ ನಾಲ್ಕೇ ದಿನಗಳಲ್ಲಿ 72 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿದ್ದು, ಮುಂಬರುವ ದೊಡ್ಡ ಸಿನಿಮಾಗಳಿಗೂ ಪ್ರಬಲ ಪೈಪೋಟಿ ನೀಡಲು ಸಜ್ಜಾಗಿದೆ. ಮತ್ತಷ್ಟು ಓದಿ
-
ತಮಿಳುನಾಡಿಗೆ 9,000 ಕ್ಯೂಸೆಕ್ ನೀರು: CWRC ಶಿಫಾರಸು ಎತ್ತಿಹಿಡಿದ CWMA!
ತಮಿಳುನಾಡಿಗೆ ಮುಂದಿನ 15 ದಿನ ದಿನಕ್ಕೆ 9,000 ಕ್ಯೂಸೆಕ್ ನೀರು ಹರಿಸುವಂತೆ CWMA ಆದೇಶಿಸಿದೆ. ತಮಿಳುನಾಡು ಕೋರಿದ್ದ 28 ಟಿಎಂಸಿ ಬೇಡಿಕೆಯನ್ನು ತಿರಸ್ಕರಿಸಲಾಗಿದ್ದು, ಮುಂದಿನ ಹಂತದ ಕಾನೂನು ಹೋರಾಟದ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತಂದು ವಕೀಲರ ತಂಡ ನಿರ್ಧರಿಸಲಿದೆ ಎಂದು ಎಸಿಎಸ್ ಗೌರವ್ ಗುಪ್ತಾ ತಿಳಿಸಿದ್ದಾರೆ.
-
ಖರ್ಗೆಗೆ ಅವಮಾನ: ಭಾಲ್ಕಿಯಲ್ಲಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ!
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಭಾಷಣದ ವೇದಿಕೆ ಶುದ್ಧೀಕರಣಗೊಳಿಸಿ ಅವಮಾನಿಸಿದ್ದನ್ನು ಖಂಡಿಸಿ ಭಾಲ್ಕಿಯಲ್ಲಿ ಸಂಸದ ಸಾಗರ ಖಂಡ್ರೆ ನೇತೃತ್ವದಲ್ಲಿ ಬೃಹತ್ ರ್ಯಾಲಿ ನಡೆಯಿತು. ಜಾತಿ ತಾರತಮ್ಯ ವಿರುದ್ಧ ಆಕ್ರೋಶ ಹೊರಹಾಕಿದ ನೂರಾರು ಕಾಂಗ್ರೆಸ್ ಕಾರ್ಯಕರ್ತರು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
-
ಹೆಬ್ಬಾಳ ಪೊಲೀಸರ ಡ್ರಗ್ಸ್ ಭೇಟೆ: 15 ಕೋಟಿ ರೂ. ಮೌಲ್ಯದ ಎಂಡಿಎಂಎ ವಶ!
ಈ ಹಿಂದೆ 70 ಕೋಟಿ ರೂ. ಡ್ರಗ್ಸ್ ಜಪ್ತಿ ಮಾಡಿದ್ದ ಹೆಬ್ಬಾಳ ಪೊಲೀಸರು, ಇದೀಗ 7.6 ಕೆಜಿ ಎಂಡಿಎಂಎ (MDMA) ಸಮೇತ ಇಬ್ಬರನ್ನು ಬಂಧಿಸಿದ್ದಾರೆ. ದೆಹಲಿಯ ರವಿ ಕುಮಾರ್ ಫ್ಲೈಟ್ನಲ್ಲಿ ಟ್ರ್ಯಾಲಿ ಬ್ಯಾಗ್ ಮೂಲಕ ತಂದಿದ್ದ ಡ್ರಗ್ಸ್ ಅನ್ನು ಸ್ಥಳೀಯ ಪೆಡ್ಲರ್ ಮುದಸ್ಸಿರ್ಗೆ ನೀಡುವಾಗ ಪೊಲೀಸರು ದಾಳಿ ನಡೆಸಿದ್ದಾರೆ.
-
ಚುನಾವಣಾ ಆಯೋಗಕ್ಕೆ ಪ್ರಕಾಶ್ ರಾಜ್ ಎಚ್ಚರಿಕೆ
ನಾಗರಿಕ ಸಮಾಜದ ಪರವಾಗಿ ಚುನಾವಣಾ ಆಯೋಗದ ವಿರುದ್ಧ ಎಫ್ಐಆರ್ ದಾಖಲಿಸುತ್ತಿದ್ದು, ಮುಂದಿನ ದಿನಗಳಲ್ಲಿ ಚಾರ್ಜ್ಶೀಟ್ ಸಲ್ಲಿಕೆಯಾಗಲಿದೆ ಎಂದು ನಟ ಪ್ರಕಾಶ್ ರಾಜ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಎಫ್ಐಆರ್ ಪ್ರತಿಯನ್ನು ಬಿಡುಗಡೆ ಮಾಡಿದ ಅವರು ಆಯೋಗದ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
-
ಬೆಂಗಳೂರು 6ನೇ ಹಂತದ ನೀರು ಯೋಜನೆ: ಅಧಿಕಾರಿಗಳಿಗೆ ರೈತರ ‘ಗೋ ಬ್ಯಾಕ್’ ಬಿಸಿ!
ಮಂಡ್ಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾವೇರಿ 6ನೇ ಹಂತದ ಕುಡಿಯುವ ನೀರು ಯೋಜನೆ ಸಂಬಂಧ ಬೆಂಗಳೂರು ಜಲಮಂಡಳಿ ನಡೆಸುತ್ತಿದ್ದ ಸಭೆಯಲ್ಲಿ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲಾಧಿಕಾರಿ ಇಲ್ಲದೆ ಸಭೆ ನಡೆಸಿದ್ದಕ್ಕೆ ಕಿಡಿಕಾರಿದ ರೈತರು, ಯೋಜನೆಗೆ ವಿರೋಧ ವ್ಯಕ್ತಪಡಿಸಿ ಅಧಿಕಾರಿಗಳಿಗೆ ‘ಗೋ ಬ್ಯಾಕ್’ ಎಂದಿದ್ದಾರೆ.
-
ಕದ್ದ ಹಣದಲ್ಲೇ ದಾನ, ಪಾರ್ಟಿ ಮಾಡ್ತಿದ್ದ ಖತರ್ನಾಕ್ ಕಳ್ಳ ಲಾಕ್!
ಬಡವರಿಗೆ ನೆರವು ನೀಡಿ ಅವರ ಮೂಲಕವೇ ಕಳ್ಳತನಕ್ಕೆ ಮನೆಗಳನ್ನು ವಾಚ್ ಮಾಡಿಸುತ್ತಿದ್ದ ತಮಿಳುನಾಡು ಮೂಲದ ಆರ್ಟಿಸ್ಟ್ ಶಿವರಸನ್ (34) ಎಂಬಾತನನ್ನು ಬೇಗೂರು ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ₹36 ಲಕ್ಷ ಮೌಲ್ಯದ 196 ಗ್ರಾಂ ಚಿನ್ನ ಹಾಗೂ 4 ಕೆಜಿ ಬೆಳ್ಳಿ ವಶಪಡಿಸಿಕೊಳ್ಳಲಾಗಿದೆ.
-
KPSC ನೇಮಕಾತಿ ಹಗರಣ: 329 ಅಭ್ಯರ್ಥಿಗಳಿಗೆ ಸಿಐಡಿ ಮತ್ತೆ ನೋಟಿಸ್!
ಇಡಿ (ED) ಮುಂದೆ ಕೆಲವರು ತಪ್ಪೊಪ್ಪಿಗೆ ನೀಡಿದ ಹಿನ್ನೆಲೆಯಲ್ಲಿ, ಕೆಪಿಎಸ್ಸಿ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ 329 ಅಭ್ಯರ್ಥಿಗಳಿಗೆ ಸಿಐಡಿ ಇಂದೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ. ಈ ಹಿಂದೆ ಆಗಸ್ಟ್ 5ರಂದು ಸಿಐಡಿ ಅಧಿಕಾರಿಗಳು ದಾಳಿ ನಡೆಸಿದ್ದರು.
-
ಹನೂರು ಶೂಟೌಟ್ ಪ್ರಕರಣ ಸಿಐಡಿಗೆ
ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಧಾಮದಲ್ಲಿ ಮೂವರ ಸಾವಿಗೆ ಕಾರಣವಾಗಿದ್ದ ಶೂಟೌಟ್ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರವು ಸಿಐಡಿ (CID) ತನಿಖೆಗೆ ವರ್ಗಾಯಿಸಿ ಅಧಿಕೃತ ಆದೇಶ ಹೊರಡಿಸಿದೆ.
-
ಬೆಂಗಳೂರು: ಸಿಗ್ನಲ್ನಲ್ಲಿ ಕಾರು ಡಿಕ್ಕಿ; ಬೈಕ್ ಸವಾರ ಸಾವು
ವಿಜ್ಞಾನ ನಗರದಲ್ಲಿ ನಿನ್ನೆ ಬೆಳಗ್ಗೆ ಸಿಗ್ನಲ್ನಲ್ಲಿ ನಿಂತಿದ್ದ ಬೈಕ್ಗೆ ಕಾರು ರಭಸದಿಂದ ಡಿಕ್ಕಿ ಹೊಡೆದು, ಸವಾರ ನವೀನ್ (33) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರು ಚಾಲಕನನ್ನು ವಶಕ್ಕೆ ಪಡೆಯಲಾಗಿದ್ದು, ಜೀವನ್ ಭೀಮಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - Aug 25,2026 9:34 AM




