ಬರದ ಮಧ್ಯೆ ಕರ್ನಾಟಕಕ್ಕೆ ಬರಸಿಡಿಲು: ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಆದೇಶ
ಕರ್ನಾಟಕದಲ್ಲಿ ಮಳೆ ಕೊರತೆಯಿಂದ ಕಾವೇರಿ ನದಿಯ ಕೆಆರ್ಎಸ್ ಜಲಾಶಯದಲ್ಲಿ ನೀರಿಲ್ಲದೇ ಬೆಂಗಳೂರು, ಮೈಸೂರು, ಮಂಡ್ಯ, ರಾಮನಗರ ಸೇರಿದಂತೆ ಹಲವು ಜಿಲ್ಲೆಗಳ ಜನರು ಪರದಾಡುತ್ತಿದ್ದಾರೆ. ರಾಜ್ಯದಲ್ಲಿ ಮಳೆಯಿಲ್ಲದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ನಡುವೆ ಇಂದು (ಜುಲೈ 28) ದೆಹಲಿಯಲ್ಲಿ ನಡೆದ ಕಾವೇರಿ ನೀರು ನಿರ್ವಹಣಾ ಸಮಿತಿ ಸಭೆಯಲ್ಲಿ ರಾಜ್ಯಕ್ಕೆ ಹಿನ್ನಡೆಯಾಗಿದೆ.

ಮುಖ್ಯಾಂಶಗಳು
- ಬರದ ಮಧ್ಯೆ ಕರ್ನಾಟಕಕ್ಕೆ ಬರಸಿಡಿಲು
- ತಮಿಳುನಾಡಿಗೆ ಕಾವೇರಿ ನೀರು ಹರಿಸಲು CWMA ಆದೇಶ
- ಮುಂದಿನ 15 ದಿನ ತಮಿಳುನಾಡಿಗೆ 3,500 ಕ್ಯೂಸೆಕ್ ನೀರು ಹರಿಸಲು ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶ
ನವದೆಹಲಿ, (ಜುಲೈ 28): ಕರ್ನಾಟಕದಲ್ಲಿ ಮುಂಗಾರು ಮಳೆ (Rain) ಕೈ ಕೊಟ್ಟಿದ್ದು, ಬರದ ಭೀತಿ ಆವರಿಸಿದೆ. ರೈತರು ಬೆಳೆದ ಬೆಳೆಗೆ ನೀರಿಲ್ಲದೇ ಆಕಾಶದತ್ತ ನೋಡುತ್ತಾ ಕುಳಿತ್ತಿದ್ದಾರೆ. ಇನ್ನೊಂದೆಡೆ ರಾಜ್ಯದ ಜಲಾಶಯಗಳು ಸಹ ಖಾಲಿಯಾಗಿವೆ. ಇಂಥಹ ಪರಿಸ್ಥಿತಿಯಲ್ಲೂ ಸಹ ಕಾವೇರಿ (Cauvery Water) ನೀರನ್ನು ತಮಿಳುನಾಡಿಗೆ (Tamilnadu) ಬಿಡುವಂತೆ ಕಾವೇರಿ ನೀರು ನಿರ್ವಹಣಾ ಮಂಡಳಿ ಮಹತ್ವದ ಸೂಚನೆ ನೀಡಿದೆ. ಹೌದು….ಇಂದು (ಜುಲೈ 28) ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿಯು (Cauvery Water Regulation Committee – CWRC) ಮುಂದಿನ 15 ದಿನಗಳ ಕಾಲ ನಿರಂತರವಾಗಿ ದಿನಕ್ಕೆ 3,500 ಕ್ಯೂಸೆಕ್ ಕಾವೇರಿ ನೀರನ್ನು (Cusecs Water) ತಮಿಳುನಾಡಿಗೆ ಬಿಡುಗಡೆ ಮಾಡುವಂತೆ ಸೂಚಿಸಿದೆ.
ವರ್ಚ್ಯುವಲ್ ಮೂಲಕ ಕರ್ನಾಟಕ, ತಮಿಳುನಾಡು (TamilNadu), ಕೇರಳ ಮತ್ತು ಪುದುಚೇರಿ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ಆದೇಶ ಮಾಡಿದೆ. ಪ್ರತಿ ದಿನ 3,500 ಕ್ಯೂಸೆಕ್ನಂತೆ 15 ದಿನಗಳಲ್ಲಿ ಒಟ್ಟು 4 ಟಿಎಂಸಿ ನೀರು ಹರಿಸಲು ಸಿಡಬ್ಲ್ಯೂಆರ್ಸಿ ಹೇಳಿದೆ. ಆದ್ರೆ ಇದಕ್ಕೆ ಕರ್ನಾಟಕ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ.
ಇದನ್ನೂ ಓದಿ: ಮೇಕೆದಾಟು ಯೋಜನೆ: ಕರ್ನಾಟಕಕ್ಕೆ ತಮಿಳುನಾಡಿನ ಒಪ್ಪಿಗೆ ಅಗತ್ಯವಿಲ್ಲ ಎಂದ ಕೇಂದ್ರ ಜಲಶಕ್ತಿ ಸಚಿವಾಲಯ
ಕರ್ನಾಟಕದ ವಾದ ತಿರಸ್ಕೃತ
ಜುಲೈನಲ್ಲಿ ಕೆಲವೆಡೆ ಮಾತ್ರ ಸ್ವಲ್ಪ ಮಳೆಯಾಗಿದೆ ಮತ್ತು ಅಣೆಕಟ್ಟುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗಿಲ್ಲ. ಮತ್ತೊಂದೆಡೆ, ಮುಂಗಾರು ಮತ್ತೆ ಚುರುಕಾಗುವ ಮುನ್ಸೂಚನೆ ಕೂಡ ಇಲ್ಲದಿರುವುದು ತಮಿಳುನಾಡಿಗೆ ನೀರು ಹರಿಸುವುದು ಕಷ್ಟಸಾದ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಪ್ರಸ್ತುತ ಸಂಗ್ರಹವಾಗಿರುವ ನೀರನ್ನು ಕುಡಿಯುವ ಉದ್ದೇಶಗಳಿಗಾಗಿ ಮಾತ್ರ ಬಳಸಬೇಕು ಎಂದು ಕರ್ನಾಟಕ ವಾದಿಸಿದ್ದು, ನಮ್ಮ ಅಣೆಕಟ್ಟುಗಳಲ್ಲಿ ಹೆಚ್ಚಿನ ನೀರು ಸಂಗ್ರಹವಿಲ್ಲ. ಈಗ ಲಭ್ಯವಿರುವ ನೀರು ಕುಡಿಯುವುದಕ್ಕಷ್ಟೇ ಸೀಮಿತವಾಗಿದೆ ಎಂದಿತ್ತು.
ರಾಜ್ಯವು ಹಿಂದೆಂದೂ ನೋಡಿರದ ಮಳೆಯ ಕೊರತೆಯನ್ನು ಎದುರಿಸುತ್ತಿದೆ ಎಂದು ಕರ್ನಾಟಕ ಬಲವಾದ ಮಂಡಿಸಿದೆ. ರಾಜ್ಯದ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿದ್ದರೂ ಸಹ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಮುಂದಿನ 15 ದಿನಗಳ ಕಾಲ ನಿತ್ಯ 3500 ಕ್ಯೂಸೆಕ್ ನೀರು ಬಿಡಲು ಆದೇಶ ನೀಡಿರುವುದು ನಿಜಕ್ಕೂ ಕಳವಳಕಾರಿಯಾಗಿದೆ.
ರಾಜ್ಯದಲ್ಲಿ ತೀವ್ರ ಮಳೆ ಕೊರತೆಯಿಂದ ಜಲಾಶಯಗಳು ಬರಿದಾಗಿದ್ದರೂ, ಕಾವೇರಿ ನೀರು ನಿಯಂತ್ರಣ ಸಮಿತಿಯು (CWRC) ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ ಪ್ರತಿದಿನ 3,500 ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕಕ್ಕೆ ಶಿಫಾರಸು ಮಾಡಿದೆ. ಕರ್ನಾಟಕದ ವಾದವನ್ನು ಪರಿಗಣಿಸದ ಈ ಆದೇಶದಿಂದಾಗಿ ರಾಜ್ಯದ ರೈತರು ಹಾಗೂ ಬೆಂಗಳೂರು ಸೇರಿದಂತೆ ಹಲವು ನಗರಗಳ ಜನರಲ್ಲಿ ಆತಂಕ ಮೂಡಿಸಿದೆ.
ನೀರಾವರಿ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದೇನು?
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ನೀರಾವರಿ ಸಚಿವ ರಾಮಲಿಂಗಾರೆಡ್ಡಿ, ಇಂದು ಕಾವೇರಿ ನೀರು ನಿರ್ವಹಣಾ ಸಮಿತಿ ಇತ್ತು. ಸಭೆಯಲ್ಲಿ 3500 ಕ್ಯೂಸೆಕ್ ನೀರು 15 ದಿನ ಬಿಡುವಂತೆ ಹೇಳಿದ್ದಾರೆ. 4 ಟಿಎಂಸಿ ನೀರು ನಮಗೆ ಬೇಕಾಗುತ್ತೆ. ಹೀಗಿರುವಾಗ, ನಾವು CWMAಗೆ ಅಪೀಲು ಹಾಕಬಹುದು. ಇದರ ಬಗ್ಗೆ ಖುದ್ದಾಗಿ ಸಿಎಂ ಜತೆ ಮಾತಾಡಿ ತೀರ್ಮಾನ ಕೈಗೊಳ್ಳುತ್ತೇವೆ ಎಂದಿದ್ದಾರೆ.
ಕಾವೇರಿ ಜಲಯಾಶದ ನೀರಿನ ಮಟ್ಟ
ತಮಿಳುನಾಡಿಗೆ 15 ದಿನಗಳ ಕಾಲ ನೀರು ಹರಿಸಿದರೆ 4.5 ಟಿಎಂಸಿ ನೀರು ಬೇಕಾಗುತ್ತೆ. ಸದ್ಯ ಜಲಾಶಯದಲ್ಲಿ ಇರುವುದು 17.039 ಟಿಎಂಸಿ ನೀರು ಸಂಗ್ರಹವಾಗಿದೆ. ಇದರಲ್ಲಿ 5 ಟಿಎಂಸಿ ಡೆಡ್ ಸ್ಟೋರೇಜ್. 12 ಟಿಎಂಸಿ ಮಾತ್ರ ಬಳಕೆಗೆ ಲಭ್ಯ. ಇಂದಿನ ಒಳಹರಿವು 2552. ಇಂದಿನ ಹೊರಹರಿವು 1745. ಜಲಾನಯನ ಪ್ರದೇಶದಲ್ಲಿ ಮಳೆ ನಿಂತರೆ ಒಳ ಹರಿವಿನ ಪ್ರಮಾಣ ಇನ್ನು ಕಡಿಮೆಯಾಗಲಿದೆ. ಜೂನ್ ನಲ್ಲಿ 9.19 ಟಿಎಂಸಿ ಮತ್ತು ಜುಲೈನಲ್ಲಿ 31.42 ಟಿಎಂಸಿ ನೀರನ್ನು ಕೊಡಬೇಕಾಗಿತ್ತು. ಸದ್ಯ ಈ ವರೆಗೆ 3.5 ಟಿಎಂಸಿ ನೀರು ತಮಿಳುನಾಡಿಗೆ ಹರಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:57 pm, Tue, 28 July 26




