ಬೆಟಗೇರಿಯ ಬಡ್ಡಿ ಯಲ್ಲಪ್ಪನ ಮನೆಯಲ್ಲಿ ಕಂತೆ ಕಂತೆ ಹಣ: ಪೊಲೀಸರೇ ಶಾಕ್!
ಗದಗದಲ್ಲಿ ಅಕ್ರಮ ಬಡ್ಡಿ ವ್ಯವಹಾರ ನಡೆಸುತ್ತಿದ್ದ ಯಲ್ಲಪ್ಪ ಮಿಸ್ಕಿನ್ ಎಂಬಾತನ ಮನೆಯ ಮೇಲೆ ಪೊಲೀಸರು ದಾಳಿ ನಡೆಸಿ, ಕೋಟಿ ಕೋಟಿ ರೂಪಾಯಿ ನಗದು, ಚಿನ್ನಾಭರಣ ಮತ್ತು ಇತರ ಆಸ್ತಿಗಳನ್ನು ವಶಪಡಿಸಿಕೊಂಡಿದ್ದಾರೆ. ಈತನ ಅಕ್ರಮ ಚಟುವಟಿಕೆಗಳಿಂದ ಬಡ ಜನರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದರು. ಪೊಲೀಸರ ಈ ಕಾರ್ಯಾಚರಣೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಗದಗ, ಫೆಬ್ರವರಿ 12: ಆತ ಬಡ್ಡಿ ಬಕಾಸುರ, ಅಕ್ರಮವಾಗಿ ಬಡ್ಡಿ ದಂಧೆ (meter interest) ಮಾಡುತ್ತಿದ್ದ. ಕೋಟಿ ಕೋಟಿ ಲೆಕ್ಕದಲ್ಲಿ ಬಡ್ಡಿದಂದೆ ಮಾಡ್ತಾಯಿದ್ದ. ಬಡ ಜನರ ರಕ್ತ ಹೀರಿ ಹೀರಿ ಕುಬೇರನಾಗಿದ್ದ. ಆದರೆ ಬಡ್ಡಿ ಬಕಾಸುರನ ಖಜಾನೆಯನ್ನು ಪೊಲೀಸರು ಜಾಲಾಡಿದ್ದಾರೆ. ಪದ್ಮನಾಭನ ಖಜಾನೆಯಂತೆ ಹತ್ತಾರು ಲಾಕರ್ ಗಳಲ್ಲಿ ಕೋಟಿ ಕೋಟಿ ರೂ. ಮೊತ್ತದ ಹಣದ ಕಂತೆಗಳು ನೋಡಿ ಪೊಲೀಸ್ ಅಧಿಕಾರಿಗಳೇ ದಂಗಾಗಿ ಹೋಗಿದ್ದಾರೆ. ಯಾರಿಗೂ ಅನುಮಾನ ಬರದಂತೆ ಹಳೆಯ ಕಟ್ಟಡದಲ್ಲಿ ಕೋಟಿ ಕೋಟಿ ರೂ. ಹಣ ಇಟ್ಟಿದ್ದ. ಆದರೆ ಖಾಕಿ ಪಡೆಯ ಇಂಚಿಂಚು ಶೋಧಕ್ಕೆ ಬಡ್ಡಿ ಬಕಾಸುರ ನೀರು ನೀರು ಅಂತಿದ್ದ. ಪೊಲೀಸರ ಕಾರ್ಯಾಚರಣೆಗೆ ಇಡೀ ಗದಗ ಜಿಲ್ಲೆಯ ಜನರು ಭೇಷ್ ಅಂತಿದ್ದಾರೆ.
ಅಂದಹಾಗೇ ನಿನ್ನೆಯಿಂದ ಪೋಲೀಸರು ಬಡ್ಡಿ ಬಕಾಸುರ ಯಲ್ಲಪ್ಪ ಮಿಸ್ಕಿನ್ ಮನೆ ಮೇಲೆ ದಾಳಿ ಮಾಡಿ ಕಾರ್ಯಾಚರಣೆ ನಡೆಸಿದ್ದಾರೆ. ಹೊರಗೆ ನೋಡೋಕೆ ಕಲ್ಲಿನ ಹಳೆಯದಾದ ಮನೆ. ಆ ಮನೆಯಲ್ಲಿ ಯಾರೂ ಇರ್ತಾರೆ ಅಂತ ಅತ್ತ ಯಾರೂ ತಿರುಗಿ ಕೂಡ ನೋಡಲ್ಲ. ಆದರೆ ಇಂದು ಪೊಲೀಸರು ಆ ಮನೆಯ ಬಾಗಿಲು ತೆಗೆದು ಒಳಗೆ ಹೋಗಿ ಫುಲ್ ದಂಗಾಗಿ ಹೋಗಿದ್ದರು. ಹಳೆಯ ಕಟ್ಟಡದಲ್ಲಿ ಅನಂತ ಪದ್ಮನಾಭನ ಖಜಾನೆಯೇ ಪತ್ತೆಯಾಗಿದೆ.
ಇದನ್ನೂ ಓದಿ: ಗದಗನಲ್ಲಿ ಮೀಟರ್ ಬಡ್ಡಿ ದಂಧೆಕೋರರ ಮನೆ ಮೇಲೆ ಪೊಲೀಸರ ದಾಳಿ, 9 ಮಂದಿ ವಶಕ್ಕೆ
ಒಂದೊಂದು ಲಾಕರ್ಗಳು ಓಪನ್ ಮಾಡಿದರೆ 500 ಮುಖ ಬೆಲೆಯ ಕೋಟಿ ಕೋಟಿ ರೂ. ಹಣದ ಕಂತೆಗಳು ಪತ್ತೆಯಾಗಿವೆ. ಇಷ್ಟೊಂದು ಹಣ ಪಾಳು ಮನೆಯಲ್ಲಿ ಇರೋದು ನೋಡಿ ಪೊಲೀಸ್ ಅಧಿಕಾರಿಗಳೇ ದಂಗಾಗಿದ್ದರು. ಇಷ್ಟಕ್ಕೆಲ್ಲಾ ಕಾರಣ ಗದಗ ಬೆಟಗೇರಿ ಅವಳಿ ನಗರದಲ್ಲಿ ಅಕ್ರಮ ಬಡ್ಡಿ ದಂಧೆಯ ದೊಡ್ಡ ಕುಳ ಯಲ್ಲಪ್ಪ ಮಿಸ್ಕಿನ್.
ಬಲೆಗೆ ಬಿದ್ದ ಯಲ್ಲಪ್ಪ ಮಿಸ್ಕಿನ್
ಯಾವುದೇ ಲೈಸೆನ್ಸ್ ಇಲ್ಲದೆ ಕೋಟಿ ಕೋಟಿ ರೂ. ಹಣ ಸಾಲವನ್ನಾಗಿ ನೀಡ್ತಾಯಿದ್ದ. ಸಾಲವನ್ನು ಮರಳಿ ನೀಡದಿದ್ದರೆ, ಅವರ ಆಸ್ತಿಯನ್ನು ತನ್ನ ಹೆಸರಿಗೆ ಬರೆದುಕೊಂಡು ಕಿರುಕುಳ ನೀಡ್ತಾಯಿದ್ದನಂತೆ. ರೌಡಿಗಳನ್ನು ಬಿಟ್ಟು ಧಮ್ಕಿ, ಬೆದರಿಕೆ ಹಾಕ್ತಾಯಿದ್ದ. ಹೀಗಾಗಿ ಈತನಿಂದ ಕಿರುಕುಳಕ್ಕೆ ಒಳಗಾದ ಬೆಟಗೇರಿಯ ನಿವಾಸಿಯಾದ ಅಶೋಕ ಗಣಾಚಾರಿ ದೂರು ನೀಡಿದ್ದರು. ತಕ್ಷಣ ಅಲರ್ಟ್ ಆದ ಗದಗ ಎಸ್ಪಿ ಬಿ ಎಸ್ ನೇಮಗೌಡ, ಯಲ್ಲಪ್ಪ ಮಿಸ್ಕಿನ್ ಮಿಸಕದಂತೆ ಪಕ್ಕಾ ಪ್ಲಾನ್ ಮಾಡಿ ಬಡ್ಡಿ ಬಕಾಸುರನಿಗೆ ಬಲೆ ಹಾಕಿದ್ದರು.
ಪೊಲೀಸರ ಬಲೆಗೆ ಬಿದ್ದ ಯಲ್ಲಪ್ಪ ಮಿಸ್ಕಿನ್ ವಿಲವಿಲ ಅಂತ ಒದ್ದಾಡುತ್ತಿದ್ದಾನೆ. ಪಕ್ಕಾ ಪ್ಲಾನ್ ಮಾಡಿ ದಾಳಿಗೆ ಇಳಿದ ಗದಗ ಎಸ್ಪಿ ಬಿ ಎಸ್ ನೇಮಗೌಡ, ಯಲ್ಲಪ್ಪ ಮಿಸ್ಕಿನ್ಗೆ ಸೇರಿದ್ದ 13 ಕಡೆ, ಏಕಕಾಲದಲ್ಲಿ ಸಿನಿಮೀಯ ರೀತಿಯಲ್ಲಿ ದಾಳಿ ಮಾಡಿದ್ದಾರೆ. ದಾಳಿ ವೇಳೆಯಲ್ಲಿ ಕೋಟ್ಯಂತರ ರೂ. ಹಣ ಪತ್ತೆಯಾಗಿತ್ತು. ಅಪಾರ ಪ್ರಮಾಣದ ಚಿನ್ನ ಹಾಗೂ ಖಾಲಿ ಬಾಂಡ್, ಖಾಲಿ ಚೆಕ್ ಹಾಗೂ ಅಕ್ರಮವಾಗಿ ಬಡ್ಡಿದಂಧೆಗೆ ಸೇರಿದಂತೆ ಪುಸ್ತಕ ಸಿಕ್ಕಿದ್ದು, ಎರಡು ದಿನಗಳ ದಾಳಿಯಲ್ಲಿ ಬರೊಬ್ಬರಿ 4 ಕೋಟಿ 90 ಲಕ್ಷ 98 ಸಾವಿರ ರೂ ಹಣ ಪತ್ತೆಯಾಗಿದೆ.
ಇನ್ನೂ ಹೊಸ ಖಜಾನೆ ಓಪನ್ ಮಾಡಲು ಬಡ್ಡಿ ಬಕಾಸುರ ಯಲ್ಲಪ್ಪ ಮಿಸ್ಕಿನ್ ಪೊಲೀಸ್ ಅಧಿಕಾರಿಗಳನ್ನು ಸಾಕಷ್ಟು ಸತಾಯಿಸಿದ್ದಾನೆ. ನನಗೆ ಬಿಪಿ ಲೋ ಆಗ್ತಾಯಿದೆ. ಆರೋಗ್ಯ ಸರಿಯಿಲ್ಲವೆಂದು ಬೆದರಿಸಿದ್ದಾನೆ. ಆ ಜಾಣ ಉಪಯೋಗಿಸಿದ ಪೊಲೀಸರು ತಕ್ಷಣ ಆಸ್ಪತ್ರೆಗೆ ಕರೆದ್ಯೊಯ್ದು ಆರೋಗ್ಯ ತಪಾಸಣೆ ಮಾಡಿದ್ದಾರೆ. ವೈದ್ಯರು ಯಾವುದೇ ಸಮಸ್ಯೆ ಇಲ್ಲ ಎಂದಿದ್ದೇ ತಡ. ತಕ್ಷಣ ಅಲರ್ಟ್ ಆಗಿ ಯಲ್ಲಪ್ಪ ಕಚೇರಿ ಪಕ್ಕದ ಹಳೆಕಲ್ಲಿನ ಮನೆಯ ಬಾಗಿಲು ಓಪನ ಮಾಡಿ ಎಂಟ್ರಿಯಾಗಿದ್ದಾರೆ. ಲಾಕರ್ ಓಪನ್ ಮಾಡದಿದ್ದರೆ ಒಡೆದು ತೆಗೆಯುವುದಾಗಿ ತಾಕೀತ್ತು ಮಾಡಿದ್ದಾರೆ. ಆಗ ಬೆಂಡಾದ ಯಲ್ಲಪ್ಪ ತಕ್ಷಣ ಲಾಕರ್ ಓಪನ್ ಮಾಡಿದ್ದಾರೆ.
ಒಂದು ಕ್ಷಣ ದಂಗಾಗಿ ಹೋದ ಪೊಲೀಸರು
ಒಳಗೆ ಹೋಗಿ ಲಾಕರ್ ಗಳು ಓಪನ್ ಮಾಡಿದ ಪೊಲೀಸ್ ಅಧಿಕಾರಿಗಲು ಒಂದು ಕ್ಷಣ ದಂಗಾಗಿ ಹೋಗಿದ್ದಾರೆ. 500 ಮುಖಬೆಲೆಯ ಕಂತೆ ಕಂತೆ ಕೋಟ್ಯಂತರ ರೂ ಹಣ ಪತ್ತೆಯಾಗಿದೆ. ಹಣ ಎಣಿಸಲು ಪೊಲೀಸರು ಸುಸ್ತಾಗಿ ಹೋಗಿದ್ದಾರೆ. ಯಲ್ಲಪ್ಪ ಮಿಸ್ಕಿನ್ ದಾಳಿ ಮುನ್ಸೂಚನೆ ಅರಿತು ಹಣ, ದಾಖಲೆಗಳು ಬೇರೆ ಬೇರೆ ಮನೆಗಳಲ್ಲಿ ಇಟ್ಟಿದ್ದ. ಆದರೆ ಎಸ್ಪಿ ಬಿ ಎಸ್ ನೇಮಗೌಡ ಮಿಸ್ಕಿನ್ ವ್ಯವಹಾರ ಪ್ರತಿಯೊಂದು ಎಳೆಯನ್ನು ಸ್ಟಡಿ ಮಾಡಿ ಹೆಡೆಮುರಿ ಕಟ್ಟಿದ್ದಾರೆ.
ಪೊಲೀಸರ ಇಂಚಿಂಚು ಶೋಧಕ್ಕೆ ಯಲ್ಲಪ್ಪ ಮಿಸ್ಕಿನ್ ನೀರು ನೀರು ಎನ್ನುತ್ತಿದ್ದ. ನೀರಿನ ಬಾಟಲ್ ಕೈಗೆ ಕೊಟ್ಟಿದ್ದೇ ತಡ ಕುಡಿದಿದ್ದೇ ಕುಡಿದಿದ್ದು. ಆತನ ಬಳಿ ಅಂದಾರು 5 ಕೋಟಿ ರೂ. ನಗದು, ಬಾಂಡ್ 650, ಬ್ಯಾಂಕ್ ಎಟಿಎಂ 4, ಬ್ಯಾಂಕ್ ಪಾಸ್ ಬುಕ್ 9, ಎಲ್ಐಸಿ ಬಾಂಡ್ 2 ಹಾಗೂ ಅಕ್ರಮವಾಗಿ ಸಂಗ್ರಹ ಮಾಡಿದ 62 ಲೀಟರ್ ಮದ್ಯ ಜಪ್ತಿ ಮಾಡಿದ್ದಾರೆ. ಯಲ್ಲಪ್ಪ ಮಿಸ್ಕಿನ್ ಸೇರಿ 5 ಜನರನ್ನು ಬಂಧಿಸಲಾಗಿದೆ. ಗದಗ ಜಿಲ್ಲೆಯಲ್ಲೇ ಈ ದಾಳಿ ಇತಿಹಾಸ ನಿರ್ಮಿಸಿದೆ. ಗದಗ ಬೆಟಗೇರಿ ಅವಳಿ ನಗರದ ಬಡ್ಡಿ ದಂಧೆಕೋರರು ಬೆಚ್ಚಿಬಿದ್ದಿದ್ದಾರೆ.
ಇದನ್ನೂ ಓದಿ: ಗದುಗಿನ ಬಡ್ಡಿ ಯಲ್ಲಪ್ಪಗೆ ಸೇರಿದ ಮನೆಗಳಲ್ಲಿ ಲಾಕರ್ಗಳು ಒಡೆದಂತೆಲ್ಲ ಕೋಟಿಗಟ್ಟಲೆ ಹಣ ಮತ್ತು ಚಿನ್ನಾಭರಣ!
ನಿನ್ನೆ ಯಲ್ಲಪ್ಪ ಮಿಸ್ಕಿನ್ಗೆ ಸೇರಿದ ಸುಮಾರು 12 ಕಡೆ ದಾಳಿ ಮಾಡಿ ಕೊಟಿ ಕೋಟಿ ರೂ. ಹಣ ಸೀಜ್ ಮಾಡಲಾಗಿತ್ತು. ಇಂದು ಮತ್ತೊಂದು ಮನೆ ಮೇಲೆ ದಾಳಿ ಮಾಡಿ ಭರ್ಜರಿ ಬೇಟೆಯಾಡಿದ್ದಾರೆ. ಕೋಟಿ ಕೋಟಿ ರೂ. ಹಣದ ಕಂತೆಗಳು, ಅರ್ಧ ಕಿಜಿಗೂ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. ಬಡವರ ರಕ್ತ ಹೀರಿ ಕುಬೇರನಾಗಿದ್ದ ಯಲ್ಲಪ್ಪ ಮಿಸ್ಕಿನ್ ಮನೆ ಮೇಲಿನ ದಾಳಿ ಮಾಡಿದ ಪೊಲೀಸ್ ಕಾರ್ಯಕ್ಕೆ ಗದಗ ಬೆಟಗೇರಿ ಅವಳಿ ನಗರದ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಏನೇ ಇರಲಿ ಗದಗ ಜಿಲ್ಲೆಯ ಬಡ್ಡಿ ದಂಧೆಕೋರರಿಗೆ ಗದಗ ಎಸ್ಪಿ ಬಿ ಎಸ್ ನೇಮಗೌಡ ಸಿಂಹಸ್ವಪ್ನವಾಗಿ ಕಾಡುತ್ತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.