ಕರ್ನಾಟಕ ಪ್ರವಾಸೋದ್ಯಮ ಇತಿಹಾಸದಲ್ಲೇ ಮೊದಲು: ರಾಜ್ಯಮಟ್ಟದ ‘ಕರ್ನಾಟಕ ಟೂರಿಸಂ ಅವಾರ್ಡ್ಸ್ 2026’ ಘೋಷಣೆ
ರಾಜ್ಯ ಪ್ರವಾಸೋದ್ಯಮ ಇಲಾಖೆ ಹಾಗೂ ಕರ್ನಾಟಕ ಟೂರಿಸಂ ಸೊಸೈಟಿ ಆಯೋಜಿಸಿರುವ 'ಕರ್ನಾಟಕ ಟೂರಿಸಂ ಅವಾರ್ಡ್ಸ್ 2026' ಪ್ರಕಟವಾಗಿದೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿನ ಅತ್ಯುತ್ತಮ ಸಂಸ್ಥೆಗಳು, ವ್ಯಕ್ತಿಗಳನ್ನು ಗುರುತಿಸಿ, 5 ವಿಭಾಗಗಳಲ್ಲಿ 35 ಪ್ರಶಸ್ತಿ ನೀಡಲಾಗುತ್ತಿದೆ. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 17 ಕೊನೆಯ ದಿನಾಂಕ. ವಿಶ್ವ ಪ್ರವಾಸೋದ್ಯಮ ದಿನದಂದು, ಸೆಪ್ಟೆಂಬರ್ 27ರಂದು ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಬೆಂಗಳೂರು, ಸೆ.8: ರಾಜ್ಯದ ಪ್ರವಾಸೋದ್ಯಮ ಇಲಾಖೆಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ, ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡುತ್ತಿರುವ ಸಂಸ್ಥೆಗಳು, ಉದ್ಯಮಿಗಳು ಹಾಗೂ ವ್ಯಕ್ತಿಗಳನ್ನು ಗುರುತಿಸಿ ಗೌರವಿಸಲು ‘ಕರ್ನಾಟಕ ಟೂರಿಸಂ ಅವಾರ್ಡ್ಸ್ 2026’ (Karnataka Tourism Awards 2026) ಆಯೋಜಿಸಲಾಗುತ್ತಿದೆ ಎಂದು ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಅವರು ಪ್ರಕಟಿಸಿದ್ದಾರೆ.
ರಾಜ್ಯ ಪ್ರವಾಸೋದ್ಯಮ ಇಲಾಖೆಯು ಕರ್ನಾಟಕ ಟೂರಿಸಂ ಸೊಸೈಟಿ ಸಹಯೋಗದೊಂದಿಗೆ ಈ ಪ್ರಶಸ್ತಿಗಳನ್ನು ಆಯೋಜಿಸುತ್ತಿದ್ದು, ‘One State, Many Worlds’ ಪರಿಕಲ್ಪನೆಯಡಿ ರಾಜ್ಯದ 31 ಜಿಲ್ಲೆಗಳಲ್ಲಿರುವ ವೈವಿಧ್ಯಮಯ ಪ್ರವಾಸೋದ್ಯಮ ಸಾಧನೆಗಳನ್ನು ಸನ್ಮಾನಿಸುವ ಪ್ರಮುಖ ವೇದಿಕೆಯಾಗಲಿದೆ.
ಪ್ರವಾಸೋದ್ಯಮ ಕ್ಷೇತ್ರದ ಸಂಪೂರ್ಣ ಪರಿಸರ ವ್ಯವಸ್ಥೆಯನ್ನು ಒಳಗೊಳ್ಳುವಂತೆ 5 ಪ್ರಮುಖ ವಿಭಾಗಗಳಲ್ಲಿ ಒಟ್ಟು 35 ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಇನ್ನು ಈ 5 ಪ್ರಮುಖ ವಿಭಾಗದಲ್ಲಿ ಮೊದಲು ಹೋಟೆಲ್, ರೆಸಾರ್ಟ್, ಬೂಟಿಕ್ ಸ್ಟೇ, ಹೆರಿಟೇಜ್ ಪ್ರಾಪರ್ಟಿ ಹಾಗೂ ರೆಸ್ಟೋರೆಂಟ್ಗಳು. ಎರಡನೇಯದ್ದು ಇನ್ಬೌಂಡ್/ದೇಶೀಯ ಟೂರ್ ಆಪರೇಟರ್ಗಳು, ಸಾಹಸ ಪ್ರವಾಸೋದ್ಯಮ, MICE ಹಾಗೂ ಸಾರಿಗೆ ಸಂಸ್ಥೆಗಳು. ಮೂರನೇಯದ್ದು ಸ್ಮಾರಕಗಳು, ವಸ್ತುಸಂಗ್ರಹಾಲಯಗಳು ಹಾಗೂ ಪ್ರವಾಸೋದ್ಯಮ ಸ್ನೇಹಿ ತಾಣಗಳು. ನಾಲ್ಕನೇಯದ್ದು ಪ್ರವಾಸಿ ಮಾರ್ಗದರ್ಶಿಗಳು (Guides), ನೈಸರ್ಗಿಕ ತಜ್ಞರು, ಸ್ಟಾರ್ಟ್ಅಪ್ಗಳು, ತಂತ್ರಜ್ಞಾನ ಸಾಧಕರು ಹಾಗೂ ಜೀವಮಾನ ಸಾಧಕರು. ಐದನೇಯದ್ದು ನೋಂದಾಯಿತ ಹೋಂಸ್ಟೇಗಳು, ಗ್ರಾಮೀಣ ಯೋಜನೆಗಳು ಹಾಗೂ ಪರಿಸರ ಸ್ನೇಹಿ ಪ್ರವಾಸೋದ್ಯಮ.
ಇದನ್ನೂ ಓದಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲೋಕಾಯುಕ್ತ ದಾಳಿ: ಬಂಟ್ವಾಳದ ಪುದು, ಮಾಣಿ ಸೇರಿದಂತೆ 7 ಗ್ರಾಮ ಪಂಚಾಯತ್ಗಳ ಮೇಲೆ ಏಕಕಾಲಕ್ಕೆ ದಾಳಿ
ವಿಷಯ ತಜ್ಞರು ಹಾಗೂ ಹಿರಿಯರನ್ನು ಒಳಗೊಂಡ ಸ್ವತಂತ್ರ ಸ್ಕ್ರೀನಿಂಗ್ ಸಮಿತಿ ಮೂಲಕ ಪಾರದರ್ಶಕ ಹಾಗೂ ಅರ್ಹತೆ ಆಧಾರಿತ ಆಯ್ಕೆ ನಡೆಯಲಿದೆ. ಇನ್ನು ಇದಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 17, 2026 ( ರಾತ್ರಿ 11.59 ಅವಕಾಶ ಇದೆ) ವಿಶ್ವ ಪ್ರವಾಸೋದ್ಯಮ ದಿನದಂದೇ ಅಂದರೆ ಸೆಪ್ಟೆಂಬರ್ 27 ರಂದು ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕರ್ನಾಟಕ ಟೂರಿಸಂ ಸೊಸೈಟಿ ಅಧ್ಯಕ್ಷ ಕೆ. ಶ್ಯಾಮರಾಜು ಮಾತನಾಡಿ, ಈ ಉಪಕ್ರಮವು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸೇವಾ ಗುಣಮಟ್ಟ ಮತ್ತು ನಾವೀನ್ಯತೆಯನ್ನು ಹೆಚ್ಚಿಸಲು ಉತ್ತೇಜನ ನೀಡಲಿದೆ ಎಂದು ತಿಳಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




