ಕೋಲಾರದಲ್ಲೊಂದು ವಿಚಿತ್ರ ಘಟನೆ: ಮನುಷ್ಯರ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಣಿಗಳ ರಕ್ತ ಪರೀಕ್ಷೆ
ಅದು ಸರ್ಕಾರಿ ಜಿಲ್ಲಾಸ್ಪತ್ರೆ ಅಲ್ಲಿಗೆ ನಿತ್ಯ ಸಾವಿರಾರು ಜನ ರೋಗಿಗಳು ಬಂದು ತಮ್ಮ ಆರೋಗ್ಯ ಹಾಗೂ ರಕ್ತ ಸೇರಿದಂತೆ ವಿವಿದ ಪರೀಕ್ಷೆ ಮಾಡಿಕೊಂಡು ಹೋಗುತ್ತಾರೆ,. ಆದರೆ ಅದೇ ಮನುಷ್ಯರ ಆಸ್ಪತ್ರೆಯಲ್ಲಿ ಪ್ರಾಣಿಗಳ ರಕ್ತ ಸಹ ಪರೀಕ್ಷೆ ಮಾಡಿರುವ ಅಪರೂಪದ ಪ್ರಕರಣ ಬೆಳಕಿಗೆ ಬಂದಿದೆ. ಅಚ್ಚರಿ ಅನ್ನಿಸಿದರೂ ಸತ್ಯ.

ಕೋಲಾರ, (ಏಪ್ರಿಲ್ 14): ಜನರ ಜೀವ ರಕ್ಷಣೆಗೆಂದು ಇರುವ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಣಿಗಳ ರಕ್ತ ಪರೀಕ್ಷೆ (blood check) ನಡೆಸಿರುವ ಘಟನೆ ಕೋಲಾರ ಜಿಲ್ಲಾಸ್ಪತ್ರೆಯಲ್ಲಿ (Kolar District Hospital) ನಡೆದಿದೆ. ಹೌದು…ಅಚ್ಚರಿ ಅನ್ನಿಸಿರೂ ಸತ್ಯ. ಹೌದು…ಕಳೆದ ಏಳೆಂಟು ತಿಂಗಳಿಂದ ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಪ್ರಾಣಿಗಳ ರಕ್ತ ಪರೀಕ್ಷೆ ನಡೆಸಿರುವುದು ಬೆಳಕಿಗೆ ಬಂದಿದೆ. ಕಳೆದ ಏಳೆಂಟು ತಿಂಗಳಿಂದ ಕೋಲಾರ ಜಿಲ್ಲಾಸ್ಪತ್ರೆಯ ರಕ್ತ ಪರೀಕ್ಷಾ ಘಟಕದಲ್ಲಿ ನಾಯಿ ಹಾಗೂ ಬೆಕ್ಕಿನ ರಕ್ತ ಪರೀಕ್ಷೆ ನಡೆಸಿರುವುದು ಕಂಡುಬಂದಿದ್ದು, ರಾಷ್ಟ್ರೀಯ ಆರೋಗ್ಯ ಅಭಿಯಾನ ಎನ್.ಹೆಚ್.ಎಂ ಸಿಬ್ಬಂದಿ ರಾಘವೇಂದ್ರ ಎಂಬುವರು ಇಂಥ ಕೃತ್ಯ ಎಸಗಿರುವುದು ತಿಳಿದು ಬಂದಿದೆ. ಹೀಗಾಗಿ ರಾಘವೇಂದ್ರ ವಿರುದ್ದ ಕ್ರಮಕ್ಕೆ ಜಿಲ್ಲಾಶಸ್ತ್ರಚಿಕಿತ್ಸಕ ಡಾ.ಜಗದೀಶ್ ಶಿಫಾರಸ್ಸು ಮಾಡಿದ್ದಾರೆ.
ಜಿಲ್ಲಾಸ್ಪತ್ರೆಯ ರಕ್ತ ಪರೀಕ್ಷಾ ಪ್ರಯೋಗಾಲಯದಲ್ಲಿನ ಯಂತ್ರಗಳಲ್ಲಿ ಪ್ರಾಣಿಗಳ ರಕ್ತವನ್ನು ಪರೀಕ್ಷೆಗೆ ಒಳಪಡಿಸಿರುವ ಕುರಿತು ಕೆಲವರು ಅನುಮಾನ ವ್ಯಕ್ತಪಡಿಸಿದ್ದರು. ಇಲ್ಲಿನ ಸಿಬ್ಬಂದಿ ಹಾಗೂ ಪ್ರಯೋಗಾಲಯದಲ್ಲಿ ಯಂತ್ರಗಳ ನಿರ್ವಹಣೆ ಮಾಡುವ ಕಂಪನಿಯವರಿಗೆ ಅನುಮಾನ ವ್ಯಕ್ತವಾಗಿತ್ತು. ಈ ಸಂಬಂಧ ರಕ್ತ ಪರೀಕ್ಷಾ ಪ್ರಯೋಗಾಲಯದಲ್ಲಿ ಕೆಲಸ ಮಾಡುವ ಕೆಲವು ಸಿಬ್ಬಂದಿ ಮೇಲಧಿಕಾರಿಗಳಿಗೆ ದೂರು ನಿಡಿದ್ದರು. ಈ ಬಗ್ಗೆ ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ.ಜಗದೀಶ್, ತನಿಖಾ ತಂಡವನ್ನು ರಚಿಸಿ ಪರಿಶೀಲನೆ ಮಾಡಿಸಿದಾಗ ಕಳೆದ ಏಳೆಂಟು ತಿಂಗಳಿಂದ ಇಲ್ಲಿನ ರಕ್ತ ಪರೀಕ್ಷಾ ಘಟಕದಲ್ಲಿ ನಾಯಿ ಹಾಗೂ ಬೆಕ್ಕಿನ ರಕ್ತಗಳ ಪರೀಕ್ಷೆ ನಡೆಸಿ ವರದಿ ಪಡೆದಿರುವುದು ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಕೋಲಾರದಲ್ಲಿ ಕಲಬೆರಕೆ ಹಾಲು: ವರದಿಯಲ್ಲಿ ಆಘಾತಕಾರಿ ಅಂಶ; ಬೆಚ್ಚಿಬಿದ್ದ ಜನ
ಇನ್ನು ರಕ್ತ ಪರೀಕ್ಷೆಯಲ್ಲಿ ಸಾಮಾನ್ಯವಾಗಿ ಪ್ರಾಣಿಗಳ ರಕ್ತ ಪರೀಕ್ಷೆ ಹಾಗೂ ಮನುಷ್ಯರ ರಕ್ತ ಪರೀಕ್ಷೆಗೆ ಒಂದೇ ರೀತಿಯ ಯಂತ್ರಗಳನ್ನು ಬಳಸಲಾಗುತ್ತದೆ. ಆದರೆ ಒಂದೇ ಯಂತ್ರದಲ್ಲಿ ಪ್ರಾಣಿ ಹಾಗೂ ಮನುಷ್ಯನ ರಕ್ತ ಪರೀಕ್ಷೆ ಮಾಡಲಾಗುವುದಿಲ್ಲ. ಅದನ್ನು ಪ್ರತ್ಯೇಕವಾಗಿಯೇ ಮಾಡಬೇಕಾಗುತ್ತದೆ. ಹಾಗೆ ಮಾಡಿದರೆ ಯಂತ್ರಗಳಲ್ಲಿನ ಕೆಲವು ದೋಷಗಳು ಕಂಡು ಬರುತ್ತವೆ. ಜೊತೆಗೆ ಯಂತ್ರಗಳು ತಮ್ಮ ಗುಣಮಟ್ಟ ಕಳೆದುಕೊಂಡು ಸರಿಯಾದ ಪರೀಕ್ಷಾ ವರದಿಯನ್ನ ಪಡೆಯಲು ಕಷ್ಟವಾಗುತ್ತದೆ. ಅದಕ್ಕಾಗಿಯೇ ಪ್ರಾಣಿಗಳಿಗೆಂದೇ ಪಶು ಆರೋಗ್ಯ ಕೇಂದ್ರದಲ್ಲಿ ಪ್ರತ್ಯೇಕ ರಕ್ತ ಪರೀಕ್ಷಾ ಘಟಕಗಳಿರುತ್ತವೆ. ಆದರೆ ಇಲ್ಲಿನ ಸಿಬ್ಬಂದಿಗಳು ರಾತ್ರಿ ಪಾಳಯದಲ್ಲಿ ಹೀಗೆ ಪ್ರಾಣಿಗಳ ರಕ್ತ ತಂದು ಪರೀಕ್ಷೆ ನಡೆಸಿರುವ ಮೂಲಕ ಅಕ್ರಮ ಎಸಗಿದ್ದಾರೆ.
ಇನ್ನು ಆರೋಪ ಹೊತ್ತಿರುವ ರಾಘವೇಂದ್ರ ಅವರನ್ನು ಮಾತನಾಡಿಸಿದಾಗ ಕೆಲವೊಂದು ವರದಿಗಳನ್ನು ಪಡೆದಿದ್ದೇನೆ. ಆದರೆ ಇಲ್ಲಿ ರಕ್ತ ಪರೀಕ್ಷೆ ಮಾಡಿಲ್ಲ. ಬದಲಾಗಿ ಇಲ್ಲಿನ ಕೆಲವು ಸಿಬ್ಬಂದಿ ಒಳಜಗಳದಿಂದ ನನ್ನ ಮೇಲೆ ಆರೋಪ ಮಾಡಲಾಗಿದೆ. ತನ್ನನ್ನು ಕೆಲಸದಿಂದ ತೆಗೆದುಹಾಕಲು ಇಂಥ ಆರೋಪ ಮಾಡಿದ್ದಾರೆ ಎಂದು ತಮ್ಮ ಮೇಲಿನ ಆರೋಪವನ್ನ ತಳ್ಳಿ ಹಾಕಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:16 pm, Tue, 14 April 26




