ತುಂಗಭದ್ರಾ ಜಲಾಶಯದ ಮೊದಲ ಕ್ರಸ್ಟ್ ಗೇಟ್ ಅಳವಡಿಕೆ ಯಶಸ್ವಿ: ಅದರ ಭಾರ, ಅಗಲ-ಉದ್ದ ಎಷ್ಟು ಗೊತ್ತಾ?
ತುಂಗಭದ್ರಾ ಜಲಾಶಯದ ಬಹುನಿರೀಕ್ಷಿತ ಗೇಟ್ ಬದಲಾವಣೆ ಕಾರ್ಯ ಆರಂಭವಾಗಿದೆ. ಕಳೆದ ವರ್ಷ ಗೇಟ್ ಕೊಚ್ಚಿ ಹೋಗಿ ರೈತರಲ್ಲಿ ಆತಂಕ ಸೃಷ್ಟಿಯಾಗಿತ್ತು. 54 ಕೋಟಿ ರೂ ವೆಚ್ಚದಲ್ಲಿ 33 ಗೇಟ್ಗಳ ಬದಲಾವಣೆಗೆ ಮುಂದಾದ ಸರ್ಕಾರ, ಇದೀಗ 18ನೇ ಗೇಟ್ ಯಶಸ್ವಿಯಾಗಿ ಅಳವಡಿಸಲಾಗಿದೆ. ಮೇ ಅಂತ್ಯದೊಳಗೆ ಸಂಪೂರ್ಣ ಕೆಲಸ ಮುಗಿಯುವ ನಿರೀಕ್ಷೆ ಇದೆ.

ಕೊಪ್ಪಳ, ಜನವರಿ 11: ತುಂಗಭದ್ರಾ ಜಲಾಶಯ (Tungabhadra Dam) ನಾಲ್ಕು ಜಿಲ್ಲೆಯ ಜೀವನಾಡಿ. ಈ ಜಲಾಶಯ ನಂಬಿ ನಾಲ್ಕು ಜಿಲ್ಲೆಯ ರೈತರು ಬದಕು ಕಟ್ಟಿಕೊಂಡಿದ್ದಾರೆ. ಆದರೆ ಕಳೆದ ವರ್ಷ ಜಲಾಶಯದ ಕ್ರಸ್ಟ್ ಗೇಟ್ (crest gate) ಕೊಚ್ಚಿ ಹೋಗುವ ಮೂಲಕ ರೈತರಲ್ಲಿ ದೊಡ್ಡ ಆತಂಕ ಎದುರಾಗಿತ್ತು. ಸರ್ಕಾರ ಜಲಾಶಯದ 33 ಗೇಟ್ ಬದಲಾವಣೆಗೆ ಮುಂದಾಗಿತ್ತು. ಸುಮಾರು 54 ಕೋಟಿ ರೂ ವೆಚ್ಚದಲ್ಲಿ ಸರ್ಕಾರ ಗೇಟ್ಗಳ ಬದಲಾವಣೆಗೆ ಮುಂದಾಗಿದೆ. ಗುತ್ತಿಗೆ ಪಡೆದ ಟೆಂಡರ್ ಕಂಪನಿ ಇದೀಗ ರೈತರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಅದೇನೆಂದರೆ 33 ಗೇಟ್ಗಳ ಪೈಕಿ ಜಲಾಶಯದ ಒಂದು ಗೇಟ್ ಅಳವಡಿಕೆ ಕಾರ್ಯ ಯಶಸ್ವಿಯಾಗಿದೆ. ಆ ಮೂಲಕ ರೈತರು ಸಂತಸ ಪಟ್ಟಿದ್ದಾರೆ.
ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಜಲಾಶಯ ನಾಲ್ಕು ಜಿಲ್ಲೆಯ ಜೀವನಾಡಿ. ಕೊಪ್ಪಳ, ಬಳ್ಳಾರಿ, ರಾಯಚೂರು ಹಾಗೂ ವಿಜಯನಗರ ಜಿಲ್ಲೆಯ ರೈತರು ಈ ಜಲಾಶಯ ನಂಬಿ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುತ್ತಾರೆ. ಆದರೆ ಕಳೆದ ವರ್ಷ ಅಗಸ್ಟ್ನಲ್ಲಿ ಜಲಾಶಯದ ಕ್ರಸ್ಟ್ ಗೇಟ್ 19 ಕೊಚ್ಚಿಕೊಂಡು ಹೋಗಿ ದೊಡ್ಡ ಆತಂಕ ಸೃಷ್ಟಿ ಮಾಡಿತ್ತು. ಅಲ್ಲದೆ ಜಲಾಶಯದ ಏಳು ಗೇಟ್ ಡ್ಯಾಮೇಜ್ ಆಗಿದ್ದವು. ಇದನ್ನು ಅರಿತ ಸರ್ಕಾರ ಜಲಾಶಯದ 33 ಗೇಟ್ಗಳ ಬದಲಾವಣೆಗೆ ಮುಂದಾಗಿತ್ತು.
ಇದನ್ನೂ ಓದಿ: ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ: ಹೇಗೆ ನಡೆದಿದೆ ನೋಡಿ
ಸದ್ಯ 54 ಕೋಟಿ ರೂ ವೆಚ್ಚದಲ್ಲಿ ಗೇಟ್ ನಿರ್ಮಾಣಕ್ಕೆ ಗುಜರಾತ್ ಮೂಲದ ಕಂಪನಿಗೆ ಸರ್ಕಾರ ಟೆಂಡರ್ ನೀಡಿತ್ತು. ಇದೀಗ ಜಲಾಶಯದ ಕ್ರಸ್ಟ್ ಗೇಟ್ಗಳ ಬದಲಾವಣೆ ಕಾರ್ಯ ಆರಂಭವಾಗಿದೆ. ಕಳೆದ ತಿಂಗಳು ಜಲಾಶಯಕ್ಕೆ ಹೊಸ ಗೇಟ್ ಅಳವಡಿಕೆ ಕಾರ್ಯ ಶುರುಮಾಡಲಾಗಿತ್ತು. ಮೊದಲ ಹಂತವಾಗಿ ಜಲಾಶಯದ ಕ್ರಸ್ಟ್ ಗೇಟ್ 18ನ್ನು ಹೊಸದಾಗಿ ಅಳವಡಿಕೆ ಮಾಡಲಾಗಿದೆ. 33 ಗೇಟ್ಗಳ ಪೈಕಿ ಒಂದು ಹಳೆ ಗೇಟ್ನ್ನು ಸಂಪೂರ್ಣ ತೆಗೆದು ಹೊಸ ಗೇಟ್ ಅಳವಡಿಕೆ ಮಾಡಲಾಗಿದೆ. ಸುಮಾರು 10 ದಿನದಲ್ಲಿ ಈ ಗೇಟ್ ಅಳವಡಿಕೆ ಮಾಡಲಾಗಿದ್ದು, ತಜ್ಞರ ಪರಿಶೀಲನೆ ಬಾಕಿಯಿದೆ. ಹೊಸ ಗೇಟ್ ಸುಮಾರು 49 ಟನ್ ಇದೆ. ಹಳೆ ಗೇಟ್ 48.5 ಟನ್ ಇತ್ತು. ಸುಮಾರು 500 ಕೆಜಿ ತೂಕ ಹೆಚ್ಚಾಗಿದೆ. 20 ಪುಟ್ ಎತ್ತರ, 60 ಮೀಟರ್ ಅಗಲ ಇರುವ ಗೇಟ್ ಸಂಪೂರ್ಣ ಹೊಸದಾಗಿ ಅಳವಡಿಕೆ ಮಾಡಲಾಗಿದೆ.
ಮೇ ಅಂತ್ಯದೊಳಗೆ ಕೆಲಸ ಪೂರ್ಣ ಎಂದ ಸಚಿವ ಶಿವರಾಜ್ ತಂಗಡಗಿ
ಇನ್ನು ಡಿಸೆಂಬರ್ ಕೊನೆಯ ವಾರದಿಂದ ಗೇಟ್ ಬದಲಾವಣೆ ಕಾರ್ಯಕ್ಕೆ ಗುತ್ತಿಗೆ ಪಡೆದ ಕಂಪನಿ ಮುಂದಾಗಿದೆ. ಈಗಾಗಲೇ ಜಲಾಶಯದ ನಾಲ್ಕು ಗೇಟ್ಗಳನ್ನ ಸಂಪೂರ್ಣವಾಗಿ ತೆಗೆಯಲಾಗಿದೆ. ಇನ್ನು ಗೇಟ್ ಬದಲಾವಣೆ ವಿಚಾರ ತಿಳಿದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಇಂದು ಜಲಾಶಯಕ್ಕೆ ಭೇಟಿ ನೀಡಿದರು. ಜಲಾಶಯದಲ್ಲಿ ಗುತ್ತಿಗೆ ಪಡೆದ ಅಧಿಕಾರಿಗಳಿಂದ ಗೇಟ್ ಬದಲಾವಣೆ ಕುರಿತು ಮಾಹಿತಿ ಪಡೆದುಕೊಂಡರು. ಈ ವೇಳೆ ಮಾತನಾಡಿದ ಅವರು, ಮೇ ಅಂತ್ಯದೊಳಗೆ ಕೆಲಸ ಮುಗಿಯತ್ತೆ ಎಂದರು.
ಇದನ್ನೂ ಓದಿ: ನವೆಂಬರ್ನಿಂದ ತುಂಗಭದ್ರಾ ಡ್ಯಾಂ ಗೇಟ್ ಬದಲಾವಣೆ ಕಾರ್ಯ: ಈ ವರ್ಷ ಒಂದೇ ಬೆಳೆಗೆ ನೀರು, ಆತಂಕದಲ್ಲಿ ರೈತರು
ಒಟ್ಟಾರೆ ಜಲಾಶಯದ ಕ್ರಸ್ಟ್ ಗೇಟ್ 18 ಅಳವಡಿಕೆ ಯಶಸ್ವಿಯಾಗಿದೆ. 10 ದಿನದಲ್ಲಿ ಗೇಟ್ ಅಳವಡಿಕೆ ಮಾಡಲಾಗಿದ್ದು, ಇನ್ನು 32 ಗೇಟ್ ಅಳವಡಿಕೆ ಕೆಲಸ ಆಗಬೇಕಿದೆ. ವಿಜಯನಗರ, ಗದಗ ಜಿಲ್ಲೆಯಲ್ಲಿ ಗೇಟ್ ಅಳಡವಿಕೆ ಕೆಲಸ ನಡೆಯುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:12 pm, Sun, 11 January 26