ಧರ್ಮ ಸಂಕಟ ಎದುರಾಗುತ್ತಿದ್ದಂತೆಯೇ ರಾಯರೆಡ್ಡಿ ಟೆಂಪಲ್ ರನ್, ಹಿಂದೂಗಳಿಗೊಂದು ಸವಾಲ್
ಎಲ್ಲಾ ಧರ್ಮಗಳಿಗಿಂತ ಇಸ್ಲಾಂ ಧರ್ಮ ಶ್ರೇಷ್ಠ. ನಾನು ಮಠ ಮಾನ್ಯಗಳಿಗೆ ಹೋಗಲ್ಲ ಎಂಬ ಸಚಿವ ಬಸವರಾಜ್ ರಾಯರೆಡ್ಡಿ ಹೇಳಿಕೆ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಬಿಜೆಪಿ ಹಾಗೂ ಹಿಂದೂ ಸಂಘಟನೆಗಳು ರಾಯರೆಡ್ಡಿ ಹೇಳಿಕೆಗೆ ಟೀಕೆ, ವ್ಯಂಗ್ಯವಾಡುತ್ತಿವೆ. ಇದು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಬಸವರಾಜ್ ರಾಯರೆಡ್ಡಿ ಟೆಂಪಲ್ ರನ್ ನಡೆಸಿದ್ದಾರೆ.

ಕೊಪ್ಪಳ, (ಆಗಸ್ಟ್ 31): ಎಲ್ಲಾ ಧರ್ಮಗಳಿಗಿಂತ ಇಸ್ಲಾಂ ಧರ್ಮ ಶ್ರೇಷ್ಠ ಎಂಬ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ (Basavarj Rayreddy) ಅವರು ಟೆಂಪಲ್ ರನ್ ನಡೆಸಿದ್ದಾರೆ. ಕೊಪ್ಪಳ ಜಿಲ್ಲೆಯ ಯಲಬುರ್ಗಾದ (Yalaburga) ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅಲ್ಲದೇ ಬೋದೂರ್ ಗ್ರಾಮದಲ್ಲಿರೋ ಮದ್ದಾನೇಶ್ವರ ಮಠಕ್ಕೆ ಭೇಟಿ ನೀಡಿ ಸ್ವಾಮಿಜಿಗಳ ಆಶೀವಾರ್ದ ಪಡೆದುಕೊಂಡಿದ್ದಾರೆ. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನನ್ನ ಜೊತೆ ಹಿಂದೂ ಧರ್ಮದವರು ಚರ್ಚೆ ಮಾಡಲಿ ನೋಡೋಣ. ಹಿಂದೂ ಧರ್ಮದ ಸ್ಥಾಪಕರು ಯಾರು ಅಂತಾ ಹೇಳಲಿ ನೋಡೋಣ ಎಂದು ಸವಾಲು ಹಾಕಿದ್ದಾರೆ.
ನಾನೇ ಒಂದು ಧರ್ಮ ಸ್ಥಾಪಿಸುತ್ತೇನೆ ಎಂದ ರಾಯರೆಡ್ಡಿ
ತಮ್ಮ ಹೇಳಿಕೆ ವಿವಾದಕ್ಕೆ ಆಸ್ಪದ ನೀಡುತ್ತಿದ್ದಂತೆ ನಾನೇ ಒಂದು ಧರ್ಮ ಸ್ಥಾಪಿಸುತ್ತೇನೆ.ಒಳ್ಳೆ ವಿಚಾರ ಇಟ್ಕೊಂಡು ಹೊಸ ಧರ್ಮ ಏಕೆ ಸ್ಥಾಪನೆ ಮಾಡಬಾರದು ಎಂದು ಪ್ರಶ್ನಿಸಿದ ರಾಯರೆಡ್ಡಿ, ಯಾವುದೇ ಧರ್ಮ ಕೆಟ್ಟದ್ದು ಎಂದು ನಾನು ಹೇಳಿಲ್ಲ. ಎಲ್ಲಾ ಧರ್ಮದ ಸ್ಥಳಗಳಿಗೂ ಅಧ್ಯಯನ ಮಾಡಲು ಹೋಗಿದ್ದೇನೆ. ಮೆಕ್ಕಾಗೆ ಹೋಗಬೇಕು ಅಂದಿದ್ದೆ, ಆದ್ರೆ ಆಗಲ್ಲ ಅಂತಾ ಹೇಳಿದ್ದು. ಅಲ್ಲಿಗೆ ಹೋಗಲು ಮತಾಂತರ ಆಗ್ಬೇಕು, ನಾನು ಮತಾಂತರ ಆಗಲ್ಲ. ನಾನು ಎಲ್ಲ ಧರ್ಮದ ಸಾರಾಂಶ ಓದಿದ್ದೇನೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.
ಇದನ್ನು ಓದಿ: ಬೇರೆ ಎಲ್ಲಾ ಧರ್ಮಗಳಿಗಿಂತಲೂ ಇಸ್ಲಾಂ ಧರ್ಮ ಶ್ರೇಷ್ಠ: ಹಜ್ ಯಾತ್ರೆಗೆ ಹೋಗುವ ಆಸೆ ಬಿಚ್ಚಿಟ್ಟ ರಾಯರೆಡ್ಡಿ
ಹಿಂದೂ ಧರ್ಮದವರು ಚರ್ಚೆ ಮಾಡಲಿ ನೋಡೋಣ
ನನ್ನ ಜೊತೆ ಹಿಂದೂ ಧರ್ಮದವರು ಚರ್ಚೆ ಮಾಡಲಿ ನೋಡೋಣ. ಹಿಂದೂ ಧರ್ಮದ ಸ್ಥಾಪಕರು ಯಾರು ಅಂತಾ ಹೇಳಲಿ ನೋಡೋಣ. ನಾನು ಶರಣ ತತ್ವಗಳನ್ನು ಒಪ್ಪಿಕೊಂಡವನು. ನಾನು ಯಾವುದೇ ಧರ್ಮ, ಹಿಂದೂ ಧರ್ಮ ಕೆಟ್ಟದ್ದು ಅಂತ ಹೇಳಿಲ್ಲ.ನಾನು ಮಠ ಮಾನ್ಯ ಮಂದಿರಗಳಿಗೆ ಸುಮ್ ಸುಮ್ಮನೇ ಹೋಗುವುದಿಲ್ಲ. ನಾಳೆ ನನ್ನ ಹೆಂಡತಿ ಮಕ್ಕಳ ಸಲುವಾಗಿ ದೇವಸ್ಥಾನಕ್ಕೆ ಹೋಗುತ್ತೇನೆ. ಸುತ್ತೂರು ಮಠ, ಚಾಮುಂಡಿ ದೇವಸ್ಥಾನಕ್ಕೆ ಹೋಗುತ್ತೇನೆ. ನಾನೇ ಯಾಕೆ ಒಂದು ಧರ್ಮ ಮಾಡಬಾರದೆಂದು ಯೋಚಿಸುತ್ತಿದ್ದೇನೆ. ಎಲ್ಲವನ್ನೂ ಸೇರಿಸಿ ಒಂದು ಒಳ್ಳೆಯ ಧರ್ಮ ಯಾಕೆ ಮಾಡಬಾರದು? ಯಾವುದೇ ಧರ್ಮ ಆಚರಣೆ ಮಾಡಲಿ, ನನ್ನ ವಿರೋಧ ಇಲ್ಲ ಎಂದರು.
ಯಾವುದೇ ಧರ್ಮಕ್ಕೆ ಮತಾಂತರ ಆಗುವುದಿಲ್ಲ
ಇಸ್ಲಾಮಿಗೆ ಮತಾಂತರ ಆಗುವುದಿಲ್ಲ, ಕ್ರಿಶ್ಚಿಯನ್ಗೆ ಮತಾಂತರ ಆಗುವುದಿಲ್ಲ. ನಾನು ಎಲ್ಲಾ ಧರ್ಮಗಳನ್ನು ಫಾಲೋ ಮಾಡ್ತೀನಿ , ಎಲ್ಲಾ ಧರ್ಮಗಳು ಶ್ರೇಷ್ಠ ಅಂತ ಹೇಳಿದ್ದೀನಿ ವಚನದ ಮೂಲಕ ಎಲ್ಲಾ ಧರ್ಮ ಶ್ರೇಷ್ಠ . ಹಿಂದು ಧರ್ಮ ಕೆಟ್ಟದ್ದಂತೂ ನಾನು ಹೇಳಿಲ್ಲ. ನನಗೆ ಎಲ್ಲಾ ಧರ್ಮಗಳ ಬಗ್ಗೆ ಗೌರವ ಇದೆ. ಬಹಳ ಜನ ಧರ್ಮಗಳನ್ನು ಆರಂಭ ಮಾಡಿದ್ದಾರೆ. ಶತಶತಮಾನಗಳಿಂದ ಧರ್ಮ ಆರಂಭ ಮಾಡಿದ್ದಾರೆ. ನಾನು ಎಲ್ಲರನ್ನು ಒಗ್ಗೂಡಿಸಿ ಧರ್ಮ ಆರಂಭ ಮಾಡಬೇಕಂತ ಹೇಳಿದ್ದೇನೆ. ಇವತ್ತು ದೇವಸ್ಥಾನಕ್ಕೂ ಕೂಡ ಹೋಗಿದ್ದೇನೆ ಮಠಮಾನ್ಯಗಳಿಗೆ ನಾನು ಸುಮ್ಮನೆ ಹೋಗಲ್ಲ. ನನ್ನ ಸ್ವಾರ್ಥಕ್ಕೆ ನಾನು ದೇವಸ್ಥಾನಕ್ಕೆ ಹೋಗಲ್ಲ. ಧಾರ್ಮಿಕ ನಂಬಿಕೆ ನನ್ನ ಮನಸ್ಸು ಸ್ವಚ್ಛ ಇದ್ರೆ ಸಾಕು ಎಂದು ಹೇಳಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:01 pm, Mon, 31 August 26




