ಇದು ಬಾಗಿಲು ಮುಚ್ಚದ ಸರ್ಕಾರಿ ಶಾಲೆ, ಅಧ್ಯಾಪಕರಿಗೆ ಶಿಫ್ಟ್ನಲ್ಲಿ ಕೆಲಸ! SSLC ಫಲಿತಾಂಶ ಹೆಚ್ಚಿಸಲು ವಿನೂತನ ಪ್ರಯೋಗ
ಯಾದಗಿರಿಯ ಕಕ್ಕೇರ ಸರ್ಕಾರಿ ಪ್ರೌಢಶಾಲೆಯು ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗಾಗಿ ದಿನದ 24 ಗಂಟೆಯೂ ತೆರೆದಿರುತ್ತದೆ! ಮೊಬೈಲ್ ಗೀಳಿನಿಂದ ಹೊರತಂದು ಉತ್ತಮ ಫಲಿತಾಂಶಕ್ಕಾಗಿ ಶಿಕ್ಷಕರು ಹಗಲು ರಾತ್ರಿ ಬೋಧನೆ ಮಾಡುತ್ತಿದ್ದಾರೆ. ಇದರಿಂದ ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಯ ಫಲಿತಾಂಶ ಸುಧಾರಣೆಗೆ ಸಹಕಾರಿಯಾಗುವ ನಿರೀಕ್ಷೆ ಇದೆ. ಶಿಕ್ಷಕರ ಈ ವಿನೂತನ ಪ್ರಯತ್ನಕ್ಕೆ ಇಲಾಖೆಯ ಅಧಿಕಾರಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಯಾದಗಿರಿ, ಫೆಬ್ರವರಿ 6: ಎಸ್ಎಸ್ಎಲ್ಸಿ (SSLC) ಪರೀಕ್ಷೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳನ್ನು ಓದಿನೆಡೆಗೆ ಆಕರ್ಷಿಸುವ ನಿಟ್ಟಿನಲ್ಲಿ ಯಾದಗಿರಿ (Yadgir) ಜಿಲ್ಲೆಯ ಸುರಪುರ ತಾಲೂಕಿನ ಕಕ್ಕೇರ ಪಟ್ಟಣದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರು ವಿನೂತನ ಹೆಜ್ಜೆಯನ್ನಿಟ್ಟಿದ್ದಾರೆ. ಟಿವಿ ಮತ್ತು ಮೊಬೈಲ್ನ ಗೀಳಿಗೆ ಬಿದ್ದಿರುವ ವಿದ್ಯಾರ್ಥಿಗಳನ್ನು ಓದಿನ ಕಡೆ ಸೆಳೆಯುವುದು ಕಷ್ಟಕರವಾಗಿರುವ ಇಂದಿನ ದಿನಗಳಲ್ಲಿ, ಈ ಶಾಲೆಯ ಶಿಕ್ಷಕರು ದಿನಪೂರ್ತಿ ಶಾಲೆಯನ್ನು ತೆರೆದು, ಪಾಳಿಗಳಲ್ಲಿ ಬೋಧಿಸುತ್ತಿದ್ದಾರೆ! ಈ ವಿಶೇಷ ಯೋಜನೆಯನ್ನು ‘ಬಾಗಿಲು ಮುಚ್ಚದ ಸರ್ಕಾರಿ ಶಾಲೆ’ ಎಂದು ಕರೆಯಲಾಗುತ್ತಿದೆ.
ಯಾದಗಿರಿ ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಯಾಗಿದ್ದು, ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಯಾವಾಗಲೂ ಪಟ್ಟಿಯಲ್ಲಿ ಕೆಳಗಿರುತ್ತದೆ. ಈ ಹಣೆಪಟ್ಟಿಯನ್ನು ಕಳಚಲು ನಿರಂತರ ಪ್ರಯತ್ನಗಳು ನಡೆಯುತ್ತಿದ್ದು, ಅದಕ್ಕೆ ಪೂರಕವಾಗಿ ಈ ನೂತನ ಕಾರ್ಯಕ್ರಮ ಸಹಕಾರಿಯಾಗಿದೆ. ಶಾಲೆಯು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ಶಿಸ್ತು ಮತ್ತು ಪಠ್ಯಕ್ರಮದ ಸಂಪೂರ್ಣ ಕಲಿಕೆಯನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ. ಈ ವ್ಯವಸ್ಥೆಯಿಂದ ವಿದ್ಯಾರ್ಥಿಗಳು ತಾವು ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸಾಮಾನ್ಯವಾಗಿ ಶಾಲೆಗಳು ಬೆಳಗ್ಗೆ 9.30ಕ್ಕೆ ಆರಂಭವಾಗಿ ಸಂಜೆ 4ಕ್ಕೆ ಮುಕ್ತಾಯಗೊಂಡರೆ, ಕಕ್ಕೇರ ಸರ್ಕಾರಿ ಪ್ರೌಢಶಾಲೆಯಲ್ಲಿ ಬೆಳಗ್ಗೆ, ಮಧ್ಯಾಹ್ನ, ಸಂಜೆ ಮಾತ್ರವಲ್ಲದೆ ರಾತ್ರಿ ವೇಳೆಯೂ ಪಾಠ ಬೋಧನೆ ನಡೆಯುತ್ತದೆ. ಅಂದರೆ, ದಿನದ 24 ಗಂಟೆಯೂ ಶಾಲೆಯ ಬಾಗಿಲು ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗಾಗಿ ತೆರೆದಿರುತ್ತದೆ. 8 ರಿಂದ 10ನೇ ತರಗತಿಯವರೆಗೆ 550ಕ್ಕೂ ಹೆಚ್ಚು ಮಕ್ಕಳು ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಅದರಲ್ಲಿ 129 ಮಕ್ಕಳು 10ನೇ ತರಗತಿಯ ವಿದ್ಯಾರ್ಥಿಗಳಾಗಿದ್ದಾರೆ.
ರಾತ್ರಿ ಶಾಲೆಯಲ್ಲೇ ಉಳಿಯುತ್ತಾರೆ ಹುಡುಗರು
ಬೆಳಗ್ಗೆ 6 ಗಂಟೆಗೆ ಗ್ರೂಪ್ ಸ್ಟಡಿ ಮೂಲಕ ಶಾಲೆಯಲ್ಲಿ ಅಧ್ಯಯನ ಆರಂಭವಾಗುತ್ತದೆ. ಹೆಣ್ಣುಮಕ್ಕಳು ಸಂಜೆ 6ರವರೆಗೆ ಶಾಲೆಯಲ್ಲಿ ಅಧ್ಯಯನ ಮಾಡಿ ಮನೆಗೆ ತೆರಳಿದರೆ, 74 ಗಂಡುಮಕ್ಕಳಿಗೆ ರಾತ್ರಿ 11ರ ತನಕ ಪಾಠ ಮುಂದುವರೆಯುತ್ತದೆ. ರಾತ್ರಿ ಶಾಲೆಯಲ್ಲಿ ಉಳಿಯುವ ಈ ವಿದ್ಯಾರ್ಥಿಗಳನ್ನು ಬೆಳಗ್ಗೆ 5 ಗಂಟೆಗೆ ಎಬ್ಬಿಸಿ ಮತ್ತೆ ಓದಿಸುವ ವ್ಯವಸ್ಥೆ ಮಾಡಲಾಗಿದೆ. ಕನ್ನಡಕ್ಕೆ 7 ರಿಂದ 8 ಗಂಟೆ, ಇಂಗ್ಲಿಷ್ಗೆ 8 ರಿಂದ 9 ಗಂಟೆ, ಗಣಿತಕ್ಕೆ 9 ರಿಂದ 10.30 ಗಂಟೆ ಹಾಗೂ ಬೆಳಗ್ಗೆ 5 ಗಂಟೆಗೆ ವಿಜ್ಞಾನ ವಿಷಯಗಳಿಗೆ ಪಾಠ ಮಾಡಲಾಗುತ್ತದೆ.
ಕಕ್ಕೇರ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಿಗೆ ಇದೆ ಶಿಫ್ಟ್!
ಶಿಕ್ಷಕರು ಪಾಳಿ ಪ್ರಕಾರ ರಾತ್ರಿ ಶಿಫ್ಟ್ಗಳಲ್ಲಿಯೂ ಹಾಜರಿರುತ್ತಾರೆ. ಕಳೆದ ಒಂದು ವಾರದಿಂದ ಈ ವಿನೂತನ ಶೈಕ್ಷಣಿಕ ನೆರವು ಮಕ್ಕಳಿಗಾಗಿ ಲಭ್ಯವಿದ್ದು, ಶಿಕ್ಷಕರ ಈ ಕಾರ್ಯಕ್ಕೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶಿಕ್ಷಕರ ಈ ಪ್ರಯತ್ನದಿಂದ ಶಾಲೆಯ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಮಹತ್ವದ ಸುಧಾರಣೆ ಕಂಡುಬರಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.