ಪ್ರತಿಯೊಬ್ಬರೂ ರಾಮಾಯಣದ ಈ ಬೋಧನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು
ರಾಮಾಯಣ ಹಿಂದೂಗಳ ಪವಿತ್ರ ಗ್ರಂಥಗಳಲ್ಲಿ ಒಂದಾಗಿದೆ. ಈ ಪವಿತ್ರ ಗ್ರಂಥದಿಂದ ಮನುಷ್ಯ ತಿಳಿಯಬೇಕಾದ, ಕಲಿಯಬೇಕಾದ, ಪಾಲಿಸಬೇಕಾದ ಅಂಶಗಳು ಬಹಳಷ್ಟಿವೆ. ಹೌದು ರಾಮಾಯಣ ಹಲವು ಜೀವನ ಪಾಠವನ್ನು ಕಲಿಸಿಕೊಡುತ್ತದೆ. ಅದೇ ರೀತಿ ನೀವು ರಾಮಾಯಣದ ಈ ಕೆಲವೊಂದು ನೀತಿ ಪಾಠಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಯಶಸ್ಸಿನತ್ತ ಸಾಗಿ.

ರಾಮಾಯಣವು (Ramayana) ಹಿಂದೂಗಳ ಪ್ರಮುಖ ಗ್ರಂಥವಾಗಿದೆ. ರಾಮಾಯಣವನ್ನು ಓದುವುದರಿಂದ, ಶ್ಲೋಕಗಳನ್ನು ಕೇಳುವುದರಿಂದ ಕಷ್ಟಗಳು ನಿವಾರಣೆಯಾಗುತ್ತದೆ, ಜೀವನದಲ್ಲಿ ನೆಮ್ಮದಿ ನೆಲೆಸುತ್ತದೆ ಎಂದು ಹೇಳುತ್ತಾರೆ. ಅಷ್ಟೇ ಅಲ್ಲದೆ ರಾಮಾಯಣವನ್ನು ವಾಚನ ಮಾಡುವುದರಿಂದ ಜೀವನದಲ್ಲಿ ಸಕಲ ಪಾಪಗಳಿಂದ ಮುಕ್ತಿ ಹೊಂದಬಹುದು ಎಂಬ ನಂಬಿಕೆ ಇದೆ. ಇಷ್ಟು ಮಾತ್ರವಲ್ಲದೆ ಈ ಪೂಜ್ಯನೀಯ ಗ್ರಂಥ ಹಲವು ಜೀವನ ಪಾಠಗಳನ್ನು ಸಹ ಕಲಿಸಿಕೊಡುತ್ತದೆ. ಹೀಗೆ ರಾಮಾಯಣದ ಕೆಲವೊಂದು ನೀತಿ ಪಾಠಗಳನ್ನು (moral lesson) ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಯಶಸ್ಸಿನತ್ತ ಹೆಜ್ಜೆಯಿಡಿ.
ನೀವು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ರಾಮಾಯಣದ ನೀತಿ ಪಾಠ:
ಕರ್ತವ್ಯ ಮೊದಲು: ರಾಮನು ತನ್ನ ತಂದೆಯ ಮಾತನ್ನು ಪೂರೈಸಲು ಅರಮನೆ ಮತ್ತು ಎಲ್ಲಾ ಸೌಕರ್ಯಗಳನ್ನು ಬಿಟ್ಟು ಕಾಡಿಗೆ ಹೋದನು. ಹೀಗೆ ನೀವು ಕೂಡಾ ನಿಮ್ಮ ಕರ್ತವ್ಯಕ್ಕೆ ಗೌರವ, ಆದ್ಯತೆಯನ್ನು ನೀಡಬೇಕು. ಆಗ ಯಶಸ್ಸು ನಿಮ್ಮದಾಗುತ್ತದೆ.
ಸತ್ಯ: ಭಗವಾನ್ ರಾಮ, ಸೀತೆ ಮತ್ತು ಲಕ್ಷ್ಮಣರು ಪ್ರತಿಯೊಂದು ಹೆಜ್ಜೆಯಲ್ಲೂ ಸತ್ಯವನ್ನು ಎತ್ತಿಹಿಡಿದರು. ಹೀಗೆ ಸತ್ಯದ ದಾರಿಯಲ್ಲಿ ಬದುಕುವುದರಿಂದ ವ್ಯಕ್ತಿತ್ವ ನಿರ್ಮಾಣವಾಗುತ್ತದೆ ಮತ್ತು ಜೀವನದಲ್ಲಿ ಗೌರವ ಮತ್ತು ಶಾಂತಿ ಸಿಗುತ್ತದೆ ಎಂದು ರಾಮಾಯಣ ತೋರಿಸುತ್ತದೆ.
ಕೆಟ್ಟದ್ದು ಎಂದಿಗೂ ಗೆಲ್ಲುವುದಿಲ್ಲ: ರಾವಣನಿಗೆ ಶಕ್ತಿ ಮತ್ತು ಜ್ಞಾನವಿತ್ತು ಆದರೆ ಮೌಲ್ಯಗಳಿರಲಿಲ್ಲ. ಮತ್ತು ಅವನ ದುರಹಂಕಾರದಿಂದ ಆತನ ಪತನವಾಯಿತು. ಅದೇ ರೀತಿ ಯಶಸ್ಸಿಗಾಗಿ ಅಡ್ಡದಾರಿಯನ್ನು ಹಿಡಿಯಬಾರದು, ಇದು ಯಾವತ್ತೂ ಶಾಶ್ವತವಲ್ಲ ಎಂಬುದನ್ನು ರಾಮಾಯಣದಿಂದ ಕಲಿಯಬಹುದು.
ಸಂಬಂಧಗಳು ಮತ್ತು ನಂಬಿಕೆಯ ಮಹತ್ವ: ರಾಮಾಯಣದ ಮೂಲಕ ನೀವು ಸಂಬಂಧ ಮತ್ತು ನಂಬಿಕೆಯ ಮಹತ್ತರ ಪಾಠವನ್ನು ಕಲಿಯಬಹುದು. ಈ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಜೀವನದಲ್ಲಿ ನೀವು ಯಶಸ್ಸನ್ನು ಸಾಧಿಸಬಹುದು.
ಇದನ್ನೂ ಓದಿ: ಭಗವದ್ಗೀತೆಯ ಈ ಪಾಠಗಳು ಸಂಬಂಧವನ್ನು ಬಲಪಡಿಸಲು ಸಹಕಾರಿ
ಘನತೆ ಮತ್ತು ಶಿಸ್ತು: ಶ್ರೀರಾಮನ ವ್ಯಕ್ತಿತ್ವವು ಘನತೆ ಮತ್ತು ಶಿಸ್ತಿನಿಂದ ತುಂಬಿತ್ತು. ಶ್ರೀರಾಮ ತನ್ನ ಜೀವನದ ಪ್ರತಿಯೊಂದು ಜವಾಬ್ದಾರಿಯನ್ನು ಮಿತಿಯೊಳಗೆ ಇಟ್ಟುಕೊಂಡು ಚೆನ್ನಾಗಿ ಪೂರೈಸಿದನು. ಮಿತಿ ಮತ್ತು ಶಿಸ್ತಿನೊಳಗೆ ಇದ್ದರೆ ನಾವು ಒಳ್ಳೆಯ ವ್ಯಕ್ತಿಯಾಗಬಹುದು ಎಂಬುದನ್ನು ರಾಮಾಯಣದಿಂದ ಕಲಿಯಬಹುದು.
ದಯೆ ಮತ್ತು ಪ್ರೀತಿ: ಶ್ರೀರಾಮನು ಶಾಂತ ಸ್ವಭಾವದವನಾಗಿದ್ದನು. ಪ್ರತಿಯೊಬ್ಬರ ಮೇಲೂ ಅವನಿಗೆ ಕರುಣೆ ಇತ್ತು. ಅವನು ಪ್ರತಿಯೊಂದು ಜವಾಬ್ದಾರಿಗಳನ್ನು ಪ್ರೀತಿ ಮತ್ತು ಕರುಣೆಯಿಂದ ಪೂರೈಸಿದನು. ಹೀಗೆ ನೀವು ಕೂಡ ಜೀವನದಲ್ಲಿ ಪ್ರೀತಿ ಮತ್ತು ದಯೆಯ ಗುಣವನ್ನು ಬೆಳೆಸಿಕೊಳ್ಳಬೇಕು. ಹೀಗೆ ಒಟ್ಟಾರೆಯಾಗಿ ರಾಮಾಯಣ ಮಾನವೀಯ ಗುಣಗಳನ್ನು ಅಳವಡಿಸಿಕೊಳ್ಳಲು ನಮಗೆ ಸ್ಫೂರ್ತಿ ನೀಡುತ್ತದೆ. ಈ ಗುಣಗಳನ್ನು ಅಳವಡಿಸಿಕೊಳ್ಳುವ ಮೂಲಕ ನಾವು ಸಂತೋಷ ಮತ್ತು ತೃಪ್ತಿಕರ ಜೀವನವನ್ನು ನಡೆಸಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ