ಭೂ ವಿವಾದ ಬಗೆಹರಿಸಿಕೊಡಿ: ಪ್ರಧಾನಿ ಮೋದಿ ಭೇಟಿ ಮಾಡಿ ಸಿಬಿಐ ತನಿಖೆಗೆ ಸ್ಕೂಲ್ಮೇಟ್ ಮನವಿ
ದಶಕಗಳಷ್ಟು ಹಳೆಯದಾದ ಭೂ ವಿವಾದದಲ್ಲಿ ಮಧ್ಯ ಪ್ರವೇಶಿಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಶಾಲಾ ಸಹಪಾಠಿ ಮನವಿ ಮಾಡಿದ್ದಾರೆ. ಸ್ಥಳೀಯ ಆಡಳಿತ, ಪೊಲೀಸ್ ಠಾಣೆ ಮೆಟ್ಟಿಲೇರಿದರೂ ಪ್ರಯೋಜನವಾಗಿಲ್ಲ. ಅಂತಿಮವಾಗಿ ಬಾಲ್ಯದ ಸ್ನೇಹಿತ ಪ್ರಧಾನಿ ನರೇಂದ್ರ ಮೋದಿಯವರ ಮೊರೆ ಹೋಗಿದ್ದು, ಪ್ರಕರಣ ತನಿಖೆಯನ್ನು ಸಿಬಿಐಗೆ ನೀಡುವಂತೆ ಕೋರಿದ್ದಾರೆ. ಹಾಗಾದ್ರೆ, ಏನಿದು ಪ್ರಕರಣ? ಯಾರು ಈ ಬಾಲ್ಯದ ಸ್ನೇಹಿತ ಎನ್ನುವ ವಿವರ ಇಲ್ಲಿದೆ.

ನವದೆಹಲಿ, ಸೆಪ್ಟೆಂಬರ್ 13): ಭೂ ವಿವಾದಕ್ಕೆ ಸಂಬಂಧಿಸಿದಂತೆ 81 ವರ್ಷದ ವ್ಯಕ್ತಿಯೊಬ್ಬರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ,ಸಿಬಿಐ ತನಿಖೆಗೆ ಮನವಿ ಮಾಡಿದ್ದಾರೆ. ಪ್ರಧಾನಿಯನ್ನು ಭೇಟಿಯಾದ ವ್ಯಕ್ತಿ ಬೇರೆ ಯಾರು ಅಲ್ಲ, ನರೇಂದ್ರ ಮೋದಿ ಅವರ ಬಾಲ್ಯದ ಸ್ನೇಹಿತ ಅಸ್ಗರಲಿ ವೋಹ್ರಾ. ವೊಹ್ರಾ ಮತ್ತು ಪ್ರಧಾನಿ ಮೋದಿ ಗುಜರಾತ್ನ ವಡ್ನಗರದಲ್ಲಿರುವ ಬಿಎನ್ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದರು. ಹೀಗಾಗಿ ಮುಂಬೈನ ಭಯಂದರ್ ಪೂರ್ವದಲ್ಲಿ ದಶಕಗಳಷ್ಟು ಹಳೆಯದಾದ ಭೂ ವಿವಾದವೊಂದರಲ್ಲಿ ಮಧ್ಯಪ್ರವೇಶಿಸುವಂತೆ ಮೋದಿಯವರನ್ನು ಭೇಟಿಯಾಗಿ ಗಮನಸೆಳೆದಿದ್ದಾರೆ.
ಏನಿದು ಮೋದಿ ಬಾಲ್ಯ ಸ್ನೇಹಿತನ ವಿವಾದ?
ಭಯಂದರ್ ಪೂರ್ವದ ನವ್ಘರ್ನಲ್ಲಿರುವ ಸುಮಾರು 2,810 ಚದರ ಮೀಟರ್ಗಳಷ್ಟು ಭೂಮಿಗೆ ಸಂಬಂಧಿಸಿದ ವಿವಾದ ಇದಾಗಿದೆ. 1989ರಲ್ಲಿ ನೋಂದಾಯಿತ ಒಪ್ಪಂದದ ಮೂಲಕ ಆ ಆಸ್ತಿಯನ್ನು ಖರೀದಿಸಿದ್ದಾಗಿ ಅವರು ತಿಳಿಸಿದ್ದಾರೆ. ನಂತರದ ದಿನಗಳಲ್ಲಿ, ಅಂದರೆ 2011ರಲ್ಲಿ, ಈ ಆಸ್ತಿಯನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಆರೋಪಿಸಿದ್ದಾರೆ. ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ನಕಲಿ ಮಾಡಲಾಗಿದೆ. ಈ ಬೆಳವಣಿಗೆಗಳ ಬಗ್ಗೆ ಮೂಲ ಮಾಲೀಕರಿಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಈ ಸಂಬಂಧ ಹಲವು ವರ್ಷಗಳಿಂದ ವಿವಿಧ ಸರ್ಕಾರಿ ಸಂಸ್ಥೆಗಳು ಮತ್ತು ಪೊಲೀಸ್ ಇಲಾಖೆಯ ಮೂಲಕ ಸತತವಾಗಿ ಹೋರಾಟ ನಡೆಸಿದರೂ ಪ್ರಯೋಜನವಾಗಿಲ್ಲ. ಹೀಗಾಗಿ ಅಂತಿಮವಾಗಿ ಬಾಲ್ಯದ ಗೆಳೆಯ ಪ್ರಧಾನಿ ನರೇಂದ್ರ ಮೋದಿ ಮೊರೆ ಹೋಗಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿ ಸಾರ್ವಜನಿಕ ಸೇವೆಗೆ 25ರ ಮೈಲಿಗಲ್ಲು: ಸೆ.17 ರಿಂದ ಅ.17ರವರೆಗೆ ‘ಸೇವಾ ಸಂಕಲ್ಪ’ ಅಭಿಯಾನ
ಸಿಬಿಐ ತನಿಖೆಗೆ ಮನವಿ
ಸೆಪ್ಟೆಂಬರ್ 8ರಂದು ಪ್ರಧಾನಿಯನ್ನು ಭೇಟಿ ಮಾಡಿದ್ದ ಅವರು, ಮಹಾರಾಷ್ಟ್ರದ ಮುಂಬೈಯ ಭಯಂದರ್ ಈಸ್ಟ್ನಲ್ಲಿರುವ ದಶಕಗಳಷ್ಟು ಹಳೆಯದಾದ ಭೂ ವಿವಾದದ ಕುರಿತು ಸಿಬಿಐ ತನಿಖೆಗೆ ವಿನಂತಿಸಿದ್ದಾರೆ. ವರದಿಗಳ ಪ್ರಕಾರ, ವೊಹ್ರಾ ಮತ್ತು ಪ್ರಧಾನಿ ಮೋದಿ ಗುಜರಾತ್ನ ವಡ್ನಗರದಲ್ಲಿರುವ ಬಿಎನ್ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದರು. ಪ್ರಧಾನಿಯೊಂದಿಗಿನ ಭೇಟಿಯ ಸಮಯದಲ್ಲಿ ಮಧ್ಯ ಪ್ರವೇಶಿಸುವಂತೆ ಕೋರಿದ ವೊಹ್ರಾ, ತಾವು ಈ ಭೂ ವಿವಾದಕ್ಕೆ ಸಂಬಂಧಿಸಿದಂತೆ ಹಲವು ವರ್ಷಗಳಿಂದ ವಿವಿಧ ಸರ್ಕಾರಿ ಸಂಸ್ಥೆಗಳು ಮತ್ತು ಪೊಲೀಸ್ ಇಲಾಖೆಯ ಮೂಲಕ ಸತತವಾಗಿ ಹೋರಾಟ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ಮೋದಿ ಭೇಟಿಯಾಗುತ್ತಿದ್ದಂತೆಯೇ ಎಚ್ಚೆತ್ತ ಸ್ಥಳೀಯ ಆಡಳಿತ
ಯಾವಾಗ ವೊಹ್ರಾ, ಪ್ರಧಾನಿ ಮೋದಿಯನ್ನು ಭೇಟಿಯಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಪುರಸಭೆ ಆಡಳಿತ, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಇದೇ ಸೆಪ್ಟೆಂಬರ್ 16ರಂದು ಈ ಕುರಿತು ವಿಚಾರಣೆಗೆ ದಿನಾಂಕ ನಿಗದಿ ಮಾಡಿದೆ. ‘ಸೆವೆನ್ ಇಲೆವೆನ್ ಕನ್ಸ್ಟ್ರಕ್ಷನ್ಸ್’ ಮತ್ತು ‘ಸ್ವಯಂ ಬಿಲ್ಡರ್ಸ್’ನ ಪ್ರತಿನಿಧಿಗಳು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ ಎಂದು ಸ್ವತಃ ವೊಹ್ರಾ ಮಾಹಿತಿ ಹಂಚಿಕೊಂಡಿದ್ದಾರೆ.




